Home / ಕವನ / ಕವಿತೆ / ಢಂಬ ಬದುಕಿನ ತುಂಬಾ

ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ
ಹೊಂದಿಕೊಳ್ಳುವಂತಿದ್ದರೆ
ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ
ಮಲ್ಲಿಗೆಯ ಮಂಪರೇ
ನೆಲಮುಗಿಲ ಹಬ್ಬಿನಿಂತಿದ್ದರೆ,
ಹೀಗೆಲ್ಲ ಆಗುವಂತಿದ್ದರೆ,

ಕನಸುಗಳ ಜೀವ ಚಿಗುತುಕೊಳ್ಳುವುದೇ
ಹಾಗೆ
ಗಾಜು ಗುಜ್ಜಿನ ಬೆಳಕಿಗಿಂತ
ಹನಿ ಬಿಂದು ಮಣ್ಣಿನೆಲದ
ಕಣಕಣ ವ್ಯಾಮೋಹಿಸಿಬಿಡುತ್ತದೆ.
ದಿನಕಳೆದಂತೆಲ್ಲಾ ಬೆಳಕು ಹಿಗ್ಗುತ್ತಲೇ
ಬಯಲ ಬಿದಿರು ಬಿಮ್ಮನೆ
ಆಗಸಕ್ಕೆ ಏಣಿಯಾಗುತ್ತದೆ.
ಆಶೆ ಸ್ಥಾವರದ ದಿಕ್ಕಿನೆಡೆಗೆ ಸಣ್ಣ ನೋಟ
ಚಿಮುಕಿಸಿದರೂ ಸಾಕು
ತುಂಡು ತುಂಡು ನಕ್ಷತ್ರಗಳು
ಫಳ್ಳನೆ ಹೊಳೆದಂತಾಗುವುದು. ಆ
ನಕ್ಷತ್ರಗಳೇ ನಾವಾಗುವಂತಿದ್ದರೆ,

ಢಂಬ ಬದುಕಿನ ತುಂಬಾ
ಚಕಮಕಿ ಚೆಲ್ಲಿ ಬಿದ್ದರೂ ಜೀವ ತಹತಹ
ಅದೇಕೋ ನಿಲ್ಲುವುದೇ ಇಲ್ಲ
ನಾದದ ತಂಬೂರಿ ಮೀಟಿದಂತೆಲ್ಲಾ
ದಣಿವು ದುಮ್ಮಾನ ಬದಿಗೊತ್ತಿ
ಮಿಡುಕುವ ಮನಗಳು
ಉಕ್ಕಿದ ತೆನೆಗಳ ಬಳುಕಾಟಕ್ಕೆ
ಹೊಸೆದುಕೊಂಡರೆ
ಉದ್ದಕ್ಕೂ ಹಾಸಿ ಬೀಸುವ
ಮಲಯಪರ್ವತದ
ಕುಳಿರ್‍ಗಾಳಿ ಎದೆಯನ್ನೆ ಪುಷ್ಪವಾಗಿಸುತ್ತದೆ.
ಪುಷ್ಪವೇ ನಾವಾಗುವಂತಿದ್ದರೆ,

ನಾಳೆ ಬೀಳುವ ಎಲೆಗೂ ಗಾಳಿ
ಕುಲುಕಿಸಿ ಮೋಡಿ, ಮಗುವಿನ
ಕಿಲಕಿಲ ನಗು ಬೊಚ್ಚು ಬಾಯಿಯಲ್ಲೂ
ಮುದ್ದಾದ ಮಲ್ಲಿಗೆಯನ್ನೆ ಅರಳಿಸಿಬಿಡುತ್ತದೆ.
ಹಸಿರ ಕನಸೇ ಹಾಗೆ
ಕದಪು ಕೆಂದಾವರೆಯಾಗಿ ವಿನ್ಯಾಸಗೊಳ್ಳುತ್ತದೆ
ಮಣ್ಣೊಳಗೆ ಹೂಳಿದರೂ ಬೀಜ
ಚಿಗುರಾಗಿ ಹೊರಗಿಣುಕಿತು.
ಹೊಲದ ಅಂಚಿಗೆ ಅರೆಬರೆಯ ಬದುವು
ಇದ್ದರೂ ಅಂತರ್‍ಗತ ಜಿನುಗು
ಉಕ್ಕಿಸಿ ಬಿಡುತ್ತದೆ ಹಸಿರು
ನಾವೇ ಹಸಿರಾಗುವಂತಿದ್ದರೆ

ಪುಣ್ಯಕೋಟಿಯ ಕೆಚ್ಚಲು ಹಿಗ್ಗಿದಷ್ಟೂ
ಕರುವಷ್ಟೇ ಅಲ್ಲ,
ಕಾಳಿಂಗನ ಕರೆಮೊಗೆಯೂ ಹೀರಿ ಉಕ್ಕಿತು
ಪ್ರೀತಿ ಹೊಳೆವ ತಾರೆ ಹೂ ಹಸಿರು,
ಉಸಿರು ಬಸಿರು
ಪ್ರೀತಿಗೆ ಬೆತ್ತಲಾಗದಿದ್ದರೆ
ಬೆತ್ತಲೆ ಪದವೇ ಬಯಲಲ್ಲಿ ನಿಂತಿತು
ಬಯಲೇ ನಾವಾಗುವಂತಿದ್ದರೆ,
ನಾವೇ ಬಯಲಾದರೆ… ಬೆಳಕಾಗುವಂತಿದ್ದರೆ…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...