Home / ಕವನ / ಕವಿತೆ / ಢಂಬ ಬದುಕಿನ ತುಂಬಾ

ಢಂಬ ಬದುಕಿನ ತುಂಬಾ

ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ
ಹೊಂದಿಕೊಳ್ಳುವಂತಿದ್ದರೆ
ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ
ಮಲ್ಲಿಗೆಯ ಮಂಪರೇ
ನೆಲಮುಗಿಲ ಹಬ್ಬಿನಿಂತಿದ್ದರೆ,
ಹೀಗೆಲ್ಲ ಆಗುವಂತಿದ್ದರೆ,

ಕನಸುಗಳ ಜೀವ ಚಿಗುತುಕೊಳ್ಳುವುದೇ
ಹಾಗೆ
ಗಾಜು ಗುಜ್ಜಿನ ಬೆಳಕಿಗಿಂತ
ಹನಿ ಬಿಂದು ಮಣ್ಣಿನೆಲದ
ಕಣಕಣ ವ್ಯಾಮೋಹಿಸಿಬಿಡುತ್ತದೆ.
ದಿನಕಳೆದಂತೆಲ್ಲಾ ಬೆಳಕು ಹಿಗ್ಗುತ್ತಲೇ
ಬಯಲ ಬಿದಿರು ಬಿಮ್ಮನೆ
ಆಗಸಕ್ಕೆ ಏಣಿಯಾಗುತ್ತದೆ.
ಆಶೆ ಸ್ಥಾವರದ ದಿಕ್ಕಿನೆಡೆಗೆ ಸಣ್ಣ ನೋಟ
ಚಿಮುಕಿಸಿದರೂ ಸಾಕು
ತುಂಡು ತುಂಡು ನಕ್ಷತ್ರಗಳು
ಫಳ್ಳನೆ ಹೊಳೆದಂತಾಗುವುದು. ಆ
ನಕ್ಷತ್ರಗಳೇ ನಾವಾಗುವಂತಿದ್ದರೆ,

ಢಂಬ ಬದುಕಿನ ತುಂಬಾ
ಚಕಮಕಿ ಚೆಲ್ಲಿ ಬಿದ್ದರೂ ಜೀವ ತಹತಹ
ಅದೇಕೋ ನಿಲ್ಲುವುದೇ ಇಲ್ಲ
ನಾದದ ತಂಬೂರಿ ಮೀಟಿದಂತೆಲ್ಲಾ
ದಣಿವು ದುಮ್ಮಾನ ಬದಿಗೊತ್ತಿ
ಮಿಡುಕುವ ಮನಗಳು
ಉಕ್ಕಿದ ತೆನೆಗಳ ಬಳುಕಾಟಕ್ಕೆ
ಹೊಸೆದುಕೊಂಡರೆ
ಉದ್ದಕ್ಕೂ ಹಾಸಿ ಬೀಸುವ
ಮಲಯಪರ್ವತದ
ಕುಳಿರ್‍ಗಾಳಿ ಎದೆಯನ್ನೆ ಪುಷ್ಪವಾಗಿಸುತ್ತದೆ.
ಪುಷ್ಪವೇ ನಾವಾಗುವಂತಿದ್ದರೆ,

ನಾಳೆ ಬೀಳುವ ಎಲೆಗೂ ಗಾಳಿ
ಕುಲುಕಿಸಿ ಮೋಡಿ, ಮಗುವಿನ
ಕಿಲಕಿಲ ನಗು ಬೊಚ್ಚು ಬಾಯಿಯಲ್ಲೂ
ಮುದ್ದಾದ ಮಲ್ಲಿಗೆಯನ್ನೆ ಅರಳಿಸಿಬಿಡುತ್ತದೆ.
ಹಸಿರ ಕನಸೇ ಹಾಗೆ
ಕದಪು ಕೆಂದಾವರೆಯಾಗಿ ವಿನ್ಯಾಸಗೊಳ್ಳುತ್ತದೆ
ಮಣ್ಣೊಳಗೆ ಹೂಳಿದರೂ ಬೀಜ
ಚಿಗುರಾಗಿ ಹೊರಗಿಣುಕಿತು.
ಹೊಲದ ಅಂಚಿಗೆ ಅರೆಬರೆಯ ಬದುವು
ಇದ್ದರೂ ಅಂತರ್‍ಗತ ಜಿನುಗು
ಉಕ್ಕಿಸಿ ಬಿಡುತ್ತದೆ ಹಸಿರು
ನಾವೇ ಹಸಿರಾಗುವಂತಿದ್ದರೆ

ಪುಣ್ಯಕೋಟಿಯ ಕೆಚ್ಚಲು ಹಿಗ್ಗಿದಷ್ಟೂ
ಕರುವಷ್ಟೇ ಅಲ್ಲ,
ಕಾಳಿಂಗನ ಕರೆಮೊಗೆಯೂ ಹೀರಿ ಉಕ್ಕಿತು
ಪ್ರೀತಿ ಹೊಳೆವ ತಾರೆ ಹೂ ಹಸಿರು,
ಉಸಿರು ಬಸಿರು
ಪ್ರೀತಿಗೆ ಬೆತ್ತಲಾಗದಿದ್ದರೆ
ಬೆತ್ತಲೆ ಪದವೇ ಬಯಲಲ್ಲಿ ನಿಂತಿತು
ಬಯಲೇ ನಾವಾಗುವಂತಿದ್ದರೆ,
ನಾವೇ ಬಯಲಾದರೆ… ಬೆಳಕಾಗುವಂತಿದ್ದರೆ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...