Home / ಕವನ / ಕವಿತೆ / ಮಾಗುವುದೆಂದರೆ ಇದೇ ಇರಬೇಕು

ಮಾಗುವುದೆಂದರೆ ಇದೇ ಇರಬೇಕು

ರಣ ಬಿಸಿಲು ಕೊಡೆ ಹಿಡಿದಿದೆ
ನೆಲದ ಒಡಲಿಗೆ ಸಣ್ಣಗೆ ಬಿರುಕು
ಕದಲದ ಭಂಗಿ, ನೆಟ್ಟ ನೋಟ
ಏಕಸ್ಥ ಧ್ಯಾನ
ಕಲ್ಲಾಗಿ ಕೂತು ಕಾಲವಾಗುವ ಬಯಕೆ
ಕಾಯುವಿಕೆ ಎಂದರೆ ಇದೇ ಇರಬೇಕು.

ಒಡಲು ಬಯಸಿದ ಹಸಿವು
ಕಾಲಬುಡದಲಿ ಸಿಗುವುದೆಂದು
ಮೇಯುವುದು ಮರೆತು ಹೋದರೆ
ಬಂಜರಾದರೆ ಭೂಮಿ
ಅನಾಹತದ ತಹತಹಕೆ
ಅದುಮಿಕೊಳ್ಳುವುದು ಅದು ಹೇಗೆ?
ನೋಯುವುದೆಂದರೆ ಇದೇ ಇರಬೇಕು.

ತಳದ ಜಲ ಇಂಗುವವರೆಗೂ
ಚೈತ್ರದ ಹಾಸಿಗೆಗೆ ಚಿಗುರು ಮೂಡಿಸಿ
ಸಾಕ್ಷಾತ್ಕಾರದ ಸಂಗವೆಂದು
ಭಾವಪರದೆಗೆ ನಿರ್‍ಭಾವುಕತೆಯ ಬಣ್ಣ
ಬಳಿದು, ಜಗದ ಮೋಹ ಮೀರಿದೆನೆಂಬ
ಅಲೌಕಿಕದ ಭ್ರಮೆ ಹೊತ್ತ ನಿಲುವು
ಕೊರಗುವುದೆಂದರೆ ಇದೇ ಇರಬೇಕು

ಮಿತಿಗೊಪ್ಪದ ಮನವನ್ನು
ಸಂಸ್ಕಾರವೆಂಬ ಅತಿರೇಕದ ಆಯುಧ
ಕ್ಷಣಕ್ಷಣವೂ ಬಿಡದೆ
ಅಕ್ಕಿಯಾಗಿಸಲು ಕುದಿಸುವ ಭತ್ತ
ತಿಕ್ಕಿ ತೀಡಿ ಮನದ ಕುಲುಮೆಯಲಿ
ಕಾಯಲಿಟ್ಟ ಕಾಕಂಬಿಯ ರಸ
ಬೇಯುವುದೆಂದರೆ ಇದೇ ಇರಬೇಕು

ಬೆಂಕಿಯನ್ನು ಅಂಗೈಯಲ್ಲಿಟ್ಟುಕೊಂಡೆ
ಕಡಲ ಭೊರ್‍ಗರೆತಕ್ಕೆ ಕಿವುಡಾಗುತ್ತಲೇ
ನಮೆದು ಸಣ್ಣದಾಗುತ್ತಲೇ
ಮತ್ತೆ ಹೊಳಪಿನ ಚುಕ್ಕಿಯನ್ನು
ಹಣೆಯಲ್ಲಿ ಧರಿಸಿ ಸ್ಪಷ್ಟವಾಗುವುದು
ಮಾಗುವುದೆಂದರೆ ಇದೇ ಇರಬೇಕು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...