Home / ಕವನ / ಕವಿತೆ / ಈ ಸಲದ ಯುಗಾದಿ

ಈ ಸಲದ ಯುಗಾದಿ

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ
ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ
ಹೊರಟು ಹೋಯಿತು ನೆಲವನ್ನು ತೊಯ್ಯದೆ

ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು
ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ
ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ

ಸೊಳ್ಳೆಗಳು! ಈ ಯುಗದ ಆದಿಯಲ್ಲಿ ನೀನು,
ಕೊನೆಯಲ್ಲಿ ನಾವು ಎಂದು ಹಾಡುತ್ತವೆ. ಹೆದರಲಾರೆ
ಕೊಂಡು ತಂದಿರುವೆ ಹೊಸತೊಂದು ಸೊಳ್ಳೆ ಪರದೆ

ಕಳೆದ ಯುಗಾದಿಯಂತಲ್ಲ ಈ ಯುಗಾದಿಯೆಂಬು-
ದೀ ಕ್ರಿಮಿಕೀಟಗಳಿಗೇನು ಗೊತ್ತು? ಕಳೆದ ಯುಗಾದಿಗೆ
ಗಸಗಸೆ ಪಾಯಸ, ಸೀಕರಣೆ, ಹೊಸ ಬಟ್ಟೆ ಬರೆ

ಸಿನೆಮ, ಸ್ತ್ರೀಸಂಗ, ಬಹಳ ಮಜವಿತ್ತು ನಿಜ; ಈ ಬಾರಿ
ಇವೊಂದೂ ಇಲ್ಲ. ನೆನಪುಗಳಷ್ಟೆ ಇವೆ. ಕಾರಣ
ವಾಸ್ತವಕ್ಕಿಂತ ಅದರ ನೆನಪೇ ಹೆಚ್ಚು ಸವಿಯೆಂದು

ಸವಿಯುವೆನು ಗಾಳಿಯನು, ಗಾಳಿಯಲಿ ತೇಲಿ ಬರುವ
ನೆರೆಮನೆಯ ಸುಂದರಿಯ ಅಡುಗೆಯ ಸುವಾಸವನು!
ಈ ಸಲದ ಯುಗಾದಿಗೆ ಗ್ರೀಕರ ನಾಟಕಗಳು

ಅಯನೆಸ್ಕೊ ಕಥೆಗಳು, ಅನಂತಮೂರ್ತಿಯ ‘ಅವಸ್ಥೆ’
ಸಾಕಲ್ಲ ಒಬ್ಬ ಲೇಖಕನಿಗಿನ್ನೇನು ಬೇಕು?
ಅಲ್ಲದೆ ನನ್ನದೂ ಕೆಲವು ತುಣುಕುಗಳಿವೆ ಬಿಡಿಯಾಗಿ

ಗಾಳಿಯಲ್ಲಿ ಹಾರಿಹೋಗದಂತೆ ಹರಿದ್ವಾರದಿಂದ ತರಿಸಿದ
ಕಲ್ಲೊಂದನಿರಿಸಿರುವೆ. ಎಷ್ಟೋ ಸಾವಿರ ವರುಷ
ಗಂಗೆಯಲಿ ಮೈ ತೊಳೆದು ನುಣುಪಾದ ದುಂಡುಕಲ್ಲು

ಕುಳಿತಿದೆ ನಿಜಕ್ಕೂ ನನ್ನ ಮನಸ್ಸಾಕ್ಷಿಯ ಮೇಲೆ
ನನ್ನ ವಾಗರ್ಥಗಳ ಪಾಪವನ್ನು ತನ್ನೊಳಗೆ ಹೀರುತ್ತ
ನಿಮಿಷ ನಿಮಿಷವೂ ಅದರ ಭಾರ ಹೆಚ್ಚುತ್ತ
****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...