Home / ಕವನ / ಕವಿತೆ / ಈ ಸಲದ ಯುಗಾದಿ

ಈ ಸಲದ ಯುಗಾದಿ

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ
ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ
ಹೊರಟು ಹೋಯಿತು ನೆಲವನ್ನು ತೊಯ್ಯದೆ

ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು
ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ
ಮಾಡೋಣವೆಂದು ಕುಳಿತರೆ ಸಾಕು ಆಕ್ರಮಿಸುತ್ತವೆ

ಸೊಳ್ಳೆಗಳು! ಈ ಯುಗದ ಆದಿಯಲ್ಲಿ ನೀನು,
ಕೊನೆಯಲ್ಲಿ ನಾವು ಎಂದು ಹಾಡುತ್ತವೆ. ಹೆದರಲಾರೆ
ಕೊಂಡು ತಂದಿರುವೆ ಹೊಸತೊಂದು ಸೊಳ್ಳೆ ಪರದೆ

ಕಳೆದ ಯುಗಾದಿಯಂತಲ್ಲ ಈ ಯುಗಾದಿಯೆಂಬು-
ದೀ ಕ್ರಿಮಿಕೀಟಗಳಿಗೇನು ಗೊತ್ತು? ಕಳೆದ ಯುಗಾದಿಗೆ
ಗಸಗಸೆ ಪಾಯಸ, ಸೀಕರಣೆ, ಹೊಸ ಬಟ್ಟೆ ಬರೆ

ಸಿನೆಮ, ಸ್ತ್ರೀಸಂಗ, ಬಹಳ ಮಜವಿತ್ತು ನಿಜ; ಈ ಬಾರಿ
ಇವೊಂದೂ ಇಲ್ಲ. ನೆನಪುಗಳಷ್ಟೆ ಇವೆ. ಕಾರಣ
ವಾಸ್ತವಕ್ಕಿಂತ ಅದರ ನೆನಪೇ ಹೆಚ್ಚು ಸವಿಯೆಂದು

ಸವಿಯುವೆನು ಗಾಳಿಯನು, ಗಾಳಿಯಲಿ ತೇಲಿ ಬರುವ
ನೆರೆಮನೆಯ ಸುಂದರಿಯ ಅಡುಗೆಯ ಸುವಾಸವನು!
ಈ ಸಲದ ಯುಗಾದಿಗೆ ಗ್ರೀಕರ ನಾಟಕಗಳು

ಅಯನೆಸ್ಕೊ ಕಥೆಗಳು, ಅನಂತಮೂರ್ತಿಯ ‘ಅವಸ್ಥೆ’
ಸಾಕಲ್ಲ ಒಬ್ಬ ಲೇಖಕನಿಗಿನ್ನೇನು ಬೇಕು?
ಅಲ್ಲದೆ ನನ್ನದೂ ಕೆಲವು ತುಣುಕುಗಳಿವೆ ಬಿಡಿಯಾಗಿ

ಗಾಳಿಯಲ್ಲಿ ಹಾರಿಹೋಗದಂತೆ ಹರಿದ್ವಾರದಿಂದ ತರಿಸಿದ
ಕಲ್ಲೊಂದನಿರಿಸಿರುವೆ. ಎಷ್ಟೋ ಸಾವಿರ ವರುಷ
ಗಂಗೆಯಲಿ ಮೈ ತೊಳೆದು ನುಣುಪಾದ ದುಂಡುಕಲ್ಲು

ಕುಳಿತಿದೆ ನಿಜಕ್ಕೂ ನನ್ನ ಮನಸ್ಸಾಕ್ಷಿಯ ಮೇಲೆ
ನನ್ನ ವಾಗರ್ಥಗಳ ಪಾಪವನ್ನು ತನ್ನೊಳಗೆ ಹೀರುತ್ತ
ನಿಮಿಷ ನಿಮಿಷವೂ ಅದರ ಭಾರ ಹೆಚ್ಚುತ್ತ
****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...