Home / ಕವನ / ಕವಿತೆ / ಪ್ರಕೃತಿ

ಪ್ರಕೃತಿ

ಕಾಲರಾಯನ ಗರ್ಭದಿಂದ
ಸೀಳಿ ಬಂದೆನು ದೇಹದೊಡನೆ
ವೇಳೆ ಮುಗಿದರೆ ನಿಲ್ಲಲಾರೆನು
ತಾಳು ನಿನ್ನನ್ನು ನುತಿಪೆನು

ನನ್ನ ಹಿಂದಿನ ಸುಕೃತ ಫಲವೊ
ನಿನ್ನ ಕರುಣದ ಸಿದ್ಧಿಬಲವೊ
ಮಾನ್ಯ ಗುರು ಸರ್ವೇಶನೊಲವಿಂ
ಮಾನವತ್ವವ ಪಡೆದೆನು

ಮಾರುಹೋದೆನು ಜಗವ ನೋಡಿ
ಸೂರೆಗೊಂಡೆನು ಸುಧೆಯನಿಲ್ಲಿ
ಯಾರು ಅರಿಯದ ನಿನ್ನ ಕೃತಿಗಿದೊ
ಸರ್ವಶಕ್ತನೆ ಮಣಿವೆನು

ನಿತ್ಯವೆಂಬಾ ಜ್ಞಾನದೊಡನೆ
ಸತ್ಯವೆಂಬಾ ಸೊಡರ ಹೊತ್ತು
ನೂತ್ನ ನೂತನವಾಗಿ ಇಲ್ಲಿ
ಓಡುತಿರುವಳು ಪ್ರಕೃತಿಯು

ಯುಗ ಯುಗಂಗಳ ಸವರಿ ಬಂದು
ಬಗೆ ಬಗೆಯ ಸುದ್ದಿಗಳ ತಂದು
ಸಿಗದೆ ಯಾರನು ಲೆಕ್ಕಿಸದೆ ತಾ-
ನೋಡುತಿರುವಳು ಪ್ರಕೃತಿಯು

ಮಳೆಯ ರೂಪವನೊಮ್ಮೆ ತಾಳಿ
ಬೆಳೆಯ ಗುಣವನು ಒಮ್ಮೆ ತಾಳಿ
ಇಳೆಯ ಜೀವರನೆಲ್ಲ ಸಲಹುತ
ಓಡುತಿರುವಳು ಪ್ರಕೃತಿಯು

ಹರಿವ ಝರಿಗಳ ಮಾಲೆ ಧರಿಸಿ
ಧರೆಯ ತರುಗಳ ಪುಷ್ಪ ಮುಡಿದು
ಗಿರಿಯ ಧ್ವಜಗಳನೆತ್ತಿ ಹಿಡಿದು
ಓಡುತಿರುವಳು ಪ್ರಕೃತಿಯು

ಚೆನ್ನೆ ಚೆಲುವೆಯು ಜಗವ ಬೆಳಗಿ
ತನ್ನ ಬಾಹುಗಳೊಳಗೆ ಅಪ್ಪಿ
‘ಬನ್ನಿರೋ ನನ್ನೊಡನೆ’ ಎಂದು
ಓಡುತಿರುವಳು ಪ್ರಕೃತಿಯು

ಸ್ವರ್ಗ ನರಕವನಿಲ್ಲೆ ಸೃಜಿಸಿ
ಆರ್ಘವೆನಿಸುವ ಋತುವ ನಿಲಿಸಿ
ದಿಗ್ಗಜಂಗಳನೆಲ್ಲ ಬಳಸಿ
ಓಡುತಿರುವಳು ಪ್ರಕೃತಿಯು

ಸ್ನಿಗ್ಧಮಯದಾ ಒಡಲಿನೊಳಗೆ
ಪ್ರಾಜ್ಞರನು ಆದರದಿ ಹೊತ್ತು
ಸಗ್ಗದೂಟವ ಜಗಕೆ ಉಣಿಸುತ
ಓಡುತಿರುವಳು ಪ್ರಕೃತಿಯು

ಲಗ್ಗೆ ಎಬ್ಬಿಸುತೊಮ್ಮೆ ಕುಣಿದು
ನುಗ್ಗಿ ಜಯಿಸುತಲೊಮ್ಮೆ ನಲಿದು
ಅಗ್ನಿಜ್ವಾಲೆಯನೊಮ್ಮೆ ಉಗಿದು
ಓಡುತಿರುವಳು ಪ್ರಕೃತಿಯು

ಸಾರಸುಗುಣೆ ಸರ್ವಶಕ್ತ
ಧೀರೆ ಬಹು ಲಾವಣ್ಯಪೂತೆ
ಕಾರಣಾನ್ವಿತೆ ಅಂತ್ಯರಹಿತೆ
ಓಡುತಿರುವಳು ನಿರುತವು

ದೇವ ನಿನ್ನಯ ಸೃಷ್ಟಿಯೊಳಗೆ
ಆವ ಭಾಗವ ತಿಳಿಯಲಳವು
ಕೋವಿದನೆ ಈ ಪ್ರಕೃತಿ ಮಾತೆಗೆ
ಜನಕಜೆಯು ಕರ ಮುಗಿವಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...