Home / ಕವನ / ಕವಿತೆ / ಪ್ರಕೃತಿ

ಪ್ರಕೃತಿ

ಕಾಲರಾಯನ ಗರ್ಭದಿಂದ
ಸೀಳಿ ಬಂದೆನು ದೇಹದೊಡನೆ
ವೇಳೆ ಮುಗಿದರೆ ನಿಲ್ಲಲಾರೆನು
ತಾಳು ನಿನ್ನನ್ನು ನುತಿಪೆನು

ನನ್ನ ಹಿಂದಿನ ಸುಕೃತ ಫಲವೊ
ನಿನ್ನ ಕರುಣದ ಸಿದ್ಧಿಬಲವೊ
ಮಾನ್ಯ ಗುರು ಸರ್ವೇಶನೊಲವಿಂ
ಮಾನವತ್ವವ ಪಡೆದೆನು

ಮಾರುಹೋದೆನು ಜಗವ ನೋಡಿ
ಸೂರೆಗೊಂಡೆನು ಸುಧೆಯನಿಲ್ಲಿ
ಯಾರು ಅರಿಯದ ನಿನ್ನ ಕೃತಿಗಿದೊ
ಸರ್ವಶಕ್ತನೆ ಮಣಿವೆನು

ನಿತ್ಯವೆಂಬಾ ಜ್ಞಾನದೊಡನೆ
ಸತ್ಯವೆಂಬಾ ಸೊಡರ ಹೊತ್ತು
ನೂತ್ನ ನೂತನವಾಗಿ ಇಲ್ಲಿ
ಓಡುತಿರುವಳು ಪ್ರಕೃತಿಯು

ಯುಗ ಯುಗಂಗಳ ಸವರಿ ಬಂದು
ಬಗೆ ಬಗೆಯ ಸುದ್ದಿಗಳ ತಂದು
ಸಿಗದೆ ಯಾರನು ಲೆಕ್ಕಿಸದೆ ತಾ-
ನೋಡುತಿರುವಳು ಪ್ರಕೃತಿಯು

ಮಳೆಯ ರೂಪವನೊಮ್ಮೆ ತಾಳಿ
ಬೆಳೆಯ ಗುಣವನು ಒಮ್ಮೆ ತಾಳಿ
ಇಳೆಯ ಜೀವರನೆಲ್ಲ ಸಲಹುತ
ಓಡುತಿರುವಳು ಪ್ರಕೃತಿಯು

ಹರಿವ ಝರಿಗಳ ಮಾಲೆ ಧರಿಸಿ
ಧರೆಯ ತರುಗಳ ಪುಷ್ಪ ಮುಡಿದು
ಗಿರಿಯ ಧ್ವಜಗಳನೆತ್ತಿ ಹಿಡಿದು
ಓಡುತಿರುವಳು ಪ್ರಕೃತಿಯು

ಚೆನ್ನೆ ಚೆಲುವೆಯು ಜಗವ ಬೆಳಗಿ
ತನ್ನ ಬಾಹುಗಳೊಳಗೆ ಅಪ್ಪಿ
‘ಬನ್ನಿರೋ ನನ್ನೊಡನೆ’ ಎಂದು
ಓಡುತಿರುವಳು ಪ್ರಕೃತಿಯು

ಸ್ವರ್ಗ ನರಕವನಿಲ್ಲೆ ಸೃಜಿಸಿ
ಆರ್ಘವೆನಿಸುವ ಋತುವ ನಿಲಿಸಿ
ದಿಗ್ಗಜಂಗಳನೆಲ್ಲ ಬಳಸಿ
ಓಡುತಿರುವಳು ಪ್ರಕೃತಿಯು

ಸ್ನಿಗ್ಧಮಯದಾ ಒಡಲಿನೊಳಗೆ
ಪ್ರಾಜ್ಞರನು ಆದರದಿ ಹೊತ್ತು
ಸಗ್ಗದೂಟವ ಜಗಕೆ ಉಣಿಸುತ
ಓಡುತಿರುವಳು ಪ್ರಕೃತಿಯು

ಲಗ್ಗೆ ಎಬ್ಬಿಸುತೊಮ್ಮೆ ಕುಣಿದು
ನುಗ್ಗಿ ಜಯಿಸುತಲೊಮ್ಮೆ ನಲಿದು
ಅಗ್ನಿಜ್ವಾಲೆಯನೊಮ್ಮೆ ಉಗಿದು
ಓಡುತಿರುವಳು ಪ್ರಕೃತಿಯು

ಸಾರಸುಗುಣೆ ಸರ್ವಶಕ್ತ
ಧೀರೆ ಬಹು ಲಾವಣ್ಯಪೂತೆ
ಕಾರಣಾನ್ವಿತೆ ಅಂತ್ಯರಹಿತೆ
ಓಡುತಿರುವಳು ನಿರುತವು

ದೇವ ನಿನ್ನಯ ಸೃಷ್ಟಿಯೊಳಗೆ
ಆವ ಭಾಗವ ತಿಳಿಯಲಳವು
ಕೋವಿದನೆ ಈ ಪ್ರಕೃತಿ ಮಾತೆಗೆ
ಜನಕಜೆಯು ಕರ ಮುಗಿವಳು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...