Home / ಕವನ / ಕವಿತೆ / ಕೃಷ್ಣಾಕುಮಾರಿಯ ಆತ್ಮಹತ್ಯೆ

ಕೃಷ್ಣಾಕುಮಾರಿಯ ಆತ್ಮಹತ್ಯೆ

(ಸೂ: ಜೋದಪುರ ಮತ್ತು ಜಯಪುರ ರಾಜವಂಶಗಳು ಕೃಷ್ಣಾಕುಮಾರಿಯ ಪಾಣಿಗ್ರಹಣ ನಿಮಿತ್ತ ಹೊಡೆದಾಡುವುದು.  ಅವಳ ತಂದೆ, ಭೀಸಿಂಹನ ದೆಸೆಯಿಂದ ಕೃಷ್ಣಾಕುಮಾರಿಯು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು)

ಪೇರಾನೆಗಳೆರಡರ ಕಡು ಕಲಹಕೆ ಮರಿಮಿಗವೆ?
ರಣಹದ್ದುಗಳೊಡೆದಾಟಕೆ ಶುಕಶಿಶುವಿನ ಬಲಿಯೆ?
ಎಳೆಕುವರಿಯು ಎಳೆ ಹರೆಯವು ತಂದೆ ತಾಯಿಗಳವಳ
ನಡುಕೆರೆಯಿಂ ಬರಲಾರದೆ ಬಿಟ್ಟಂತೆಯೆ:- ಅಲ್ಲಾ?
ಸುಖಸೋಗಿನಯೆಡೆಗಿಂತೀ ಬಾಧಕವದು ಆಗೆ
ಚೆಲು ಬಾನನು ಕಾರ್ಮೋಡವದಾವರಿಸಿದ ತೆರನೆ.  ||೧||

ಸಾರಸ್ವತ ಸಮತೆಯು ಈ ಜನತೆಯು ಎಡೆಯೆಲ್ಲಿ?
ಸಹಕಾರದ ಒಲದ್ಮೊಲೆಯು ಕಟುಹೃದಯದೊಳೆಲ್ಲಿ?
ಶ್ರುತಿಶಾಸ್ತ್ರವು ಆಗಮಗಳು ನಡೆವುದೆ ಇದರೆಡೆಗೆ-
ಅಕೊ ನೋಡೆ, ಘಾತುಕತನ ಬೀಡೊಳು ಸುಖವುಂಟೆ?
ವಿಧಿಪೊರೆದೊಡೆ ಬಾಳ್ಸವಿಯದು! ಬಾನ್ಮಂಡಲದಲ್ಲಿ
ಹಾರಾಡುವ ಖಗರಾಶಿಗೆ ಕಂಠಕತನವೆಲ್ಲಿ?  ||೨||

‘ಎಲೆ ರಮಣಿಯೆ, ಏನಿಂತಿದು? ಹೇ ಕುವರಿಯೆ ಕೇಳು-
ವಿಷಪಾನವೆ ಈ ಜನ್ಮಕೆ! ಇಂತಿರ್ಪುದೆ ಬಾಳೂ!!
ನೆಲೆಯಿಲ್ಲವೆ ನಿಯಮಿಲ್ಲವೆ; ನೀತಿಯು ಮೋಹಾಂಧ
ಯಶಃಕಂಠಕರಾಗಿ ಎಸಗಿದ ಕಲಹವೆನಿತೊಂದಂದ!
ಹಾಕುವರಿಯೆ!  ಕರುಳೆನ್ನಯ ಪಿತನಿನ್ನಯ ಎಂತು,
ತಡೆವುದೊ ಇದ!  ಎಂತಿರ್ಪುದೊ ನಿಯತಿಯ ಈ  ತಂತು  ||೩||

ಇಂತೆನ್ನಲು ಥಟ್ಟನೆಮನ ನೆಟ್ಟನೆ ತನುವಿರಿಸಿ
ಅರಳಿದ ನಸುನಗೆಯನು ಬಾಲೆಯು ಅಲ್ಲಿ ಸಲಿಸಿ.
ಇಬ್ಬನಿಯಿಂ ಸಮವರಳುತ ನಸುಚೆಲ್ವನು ಬೀರಿ
ತೋಷವನೆಮಗೀವಂತೆಯೆ ಕೃಷ್ಣಳ ಮುಖ ಬೀರಿ
ಬೇಸರದಾ ಕಡು ಬೇಗೆಯೊಳಿರಿತಾ ಸ್ತ್ರೀವೃಂದ-
ವನು ತಣಿಸುತ ರಾಜಸ್ಥಾನಕೆ ಮುದತೋರಿದಳಂದ!  ||೪||

‘ಹೇ ತಾಯೇ, ಎನ್ಜನನಿಯೆ ಭಾಗ್ಯದ ವರಮಾತೆ,
ಶೋಕಿಪೆಯ?  ಇದರೊಳು ಏನೀಪರಿಯಾ ಕೊರತೆ?
ಮೋಹಾಂಧದ ಬೀಡೊಳು ಚಲಿಸಲು ಬಿಡುವೆಲ್ಲಿ?
ಮಾತ್ಸರ್ಯದ ಗನಿಯಿಂ ಪೊರಮಡುವಾ ತೆರವೆಲ್ಲಿ
ಅನಿವಾರ್ಯವಾದೀ ಪರಿ ಕಾಟವ ಬಿಡಲೆಸಗೆ-
ವಿಷಸೇವಿಪೆ-ಚಿರಶಾಂತಿಯ ಲೋಕದಿ ನಾನೊರಗೆ.  ||೫||

‘ವಂದಿಪೆ ನಾಂ ಈಶನಿಗೂ ಮಾತಾಪಿತರರಿಗೂ!
ವಂದಿಪೆನಿನ್ನೊಮ್ಮೆಯು ನಾ ಸಖಲಾಪ್ತ ಜನಕೂ!!
ಪೋಷಿಸುತಾ ಪಾಲಿಸುತಾ ತಿನ್ನಿಸುತಾ ಎನ್ನ,
ನೋಡಿದಕೂ ಆದರ್ಶದ ಪ್ರೀತಿಯು ಬಿಡದನ್ನ.
ಇಂದಿನ ದಿನ ಈ ನಿಮಿಷಕೆ ತನುವಿದನೆನಗಿತ್ತ
ಹಿರಿಯರನಾ ವಂದಿಪೆನೋ ಇನ್ ತೆರಳುವೆನತ್ತ!!  ||೬||

‘ಸೇವಿಪೆನೀ ಪಾನಕವನು ದೇಶದ ಸುಖಕಾಗಿ-
ಸೇವಿಪೆನೋ ಎನ್ನಡೆದಾ ಜನಕನ ಸುಖಕಾಗಿ-
ಸೇವಿಪೆನಾ ಅಳಿಮನದಾ ದುರ್ಜನರೆದೆಗಾಗಿ-
ಸೇವಿಪೆನೆಂದಳು ಶಾಂತಿಯ ತಾಣದ ವಶಕಾಗಿ-
ಎನ್ನುತ ತಾಯ್ ತಾಂದೆಗೆ ಪ್ರದಕ್ಷಿಣೆಯನು ಮಾಡಿ
ವಂದಿಸಿ ಬಳಿಸೇರಿದ ಜನಸ್ತೋಮಕೆ ಸುತೆನೋಡಿ!  ||೭||

ಕುಡಿದಳು ಹಾ! ಸಾಯ್ವಳೆ ವಿಷ ಸೇವಿಸೆ ಆ ಬಾಲೆ?
ಭೋದಿಪ ತನ್‌ತಾಯಿಗೆ ಹಿತವಾಕ್ಯವನಂತುಸುರೆ!
ಋಣಿಯಾದೆನು ಹೇ ಪಿತನೇ, ಸಾಕಿದೆ ನೀ ವರೆಗೆ
ಮೀಸಲು ಈ ಮರಣದ ಪರಿ! ತಿಳಿದೂ ಹಾ ಕೊರಗೆ?
ಈ ವಿಶ್ವದ ಯಾವೆಡೆಯೊ ನಮ್ಮೆಲ್ಲರ ಸ್ಥಾನ
ನಾವ್ ಕೊರಗುತ ಮತಿಹೀನರಂತಾಗ್ವುದೆ ದುಮ್ಮಾನ!  ||೮||

ಎನ್ನಲು, ಅದೊ ಬಂದಿತು ಗರಳವ ತುಂಬಿಸಿ ಕುಡಿಯೆ,
ಕೊಟ್ಟರು ನೋಡಲ್ಲಿಯೆ ಕೆಡಹಲು ತರುಣಿಯ-ವಿಧಿಯೆ!
ಮುಖಕಾಂತಿಯು ತನುಶೋಭೆಯು ಹೃತ್ಪಠದಾ ಸ್ಥೈರ್ಯ
ಉತ್ಸಾಹವು-ಬೆಡಗೆನಿಸಿತು ಜನವೃಂದಕೆ ಸುತೆಯಾ!
ಕುಡಿದಳು ನೋಡೊಮ್ಮೆಗೆ ಜುಮ್ಮೆನ್ನಿಸುತ ಕ್ಷಣದಿ
ಸಖಲರ ಹಾಹಾಕಾರವು ಕೇಳಿಸಿದವು ನಿಜದಿ  ||೯||

ತರುಲತೆಗಳು ಅಲ್ಲಾಡಿತೆ ಉದ್ಯಾನದಿ ಅಂದು?
ಖಗಮಿಗಗಳೂ ಕುಣಿದಾಡಿತೆ ಸಂತಸದಲಿ ತಿಂದು?
ಜ್ವಲಿಸಿತೆ ರವಿ ಕಿರಣವು ಸಹ-ಕಳೆಗೆಟ್ಟಾ ದಿನವು;
ಪಡುವಣ ತನಿಮಾರುತವದು ಸೋಕಿತೆ ನೋಡಿದುವೂ?
ದಿವಸದ ಗತಿಗಳನರಿಯದೆ ಸೋಜಿಗವದು ಎಲ್ಲ;
ದುಃಖಾಂಬುಧಿಯೊಳು ಈಜುತ ಕಳೆದರು ದಿನವೆಲ್ಲಾ!  ||೧೦||

ಉತ್ಪಾತವಿದಿಂತಾದರು ಉತ್ತೇಜಿತ ಕಾರ್ಯ
ಕೊನೆಗೊಂಡಿತೆ?  ಕೃಷ್ಣಳು ಅದೊ-ನೆಟ್ಟನೆ ಇರೆ-ಶೌರ್ಯ!
ಕ್ಷುದ್ರಾತ್ಮರಲ್ಲಿಂದಲೆ ಅಗಲರು ನೋಡಂತೂ,
ಕುಸುಂಬ’ದಾ ಮೂಲಿಕೆರಸ ಸೇವಿಸೆ ಕೊಡಲನಿತು!
ಒಂದನೆಯೇ ಎರಡನೆಯೇ ಮಗುದೊಮ್ಮೆಗೆ ಎಂದೇ
ನೋಡಲು ಕಡು ಸಾಹಸದಿ ಮಾಡಿತ್ತರು ವಧೆಗೆಂದೆ.  ||೧೧||

ಸೆರಗೊಡ್ಡುತ ಕಾಲೂರುತ ನೆಲಕುರುಳುತ ತಾಯಿ,
ಬೇಡಿದರೂ ಬೇಡೆಂದರು ಕಡೆಗಾಲವು ಸ್ಥಾಯಿ!
ಕಲ್ಮನವದು ಕರಗುವುದೆ?  ಕುಮಾರಿಯು ಮನದಿ
ದೆಸೆಹತ್ತಕೆ, ದೇವತೆ, ಜನಸ್ತೋಮಕೆ ಒಂದಾಗಿ
ವಂದಿಸುತಾ, ಮಾತೆಯ ಆರೋದನವ ತಣಿಸಿ
ವಿನಯದಿ ತಲೆಬಾಗಿಸಿ ಕುಡಿದಳೂ ವಿಷವನು ಮುದದಿ!  ||೧೨||

ಕಣ್ಮುಚ್ಚಿತು, ಅಸುರರ ನಡುವಿರ್ದೀ ಸುಕುಮಾರಿ
ಅಗೊ ಹೋಯಿತು!  ನಾಡಗಲುತ ಸ್ತ್ರೀಮಣಿ ಎಳನಾರಿ!!
ಘೋರಾಂಧತೆ ರಾಜಸ್ಥಾನಕೆ!-ಕವಿಯಿತು ನಿಸ್ತೇಜ,
ರತ್ನವದಾ ಮಣ್ಣೊಕ್ಕಿತು-ನೆಲೆಸಲು ಸರಿ ಸಹಜ!
ಕಾಮಾದಿಗಳೀಜಗವನು ಸುಡುವುದು ನೋಡಿನಿತು,
ಏನ್ ಪೊಂದಿದರೀ ಕಾರ್ಯದೆ ಮೇಲಾಡುತಲಿಂತು?  ||೧೩||

ತಾ ಸಾಯೇ ಜನಕೋಟಿಗೆ ಚಿರಸುಖವಿದೆಯೆನಿಸಿ
ಆನಂದದಿ ಪ್ರಫುಲ್ಲಿತ ವದನದಿ ವಿಷಹೀರಿ;
ನೆನೆದಳು ಸುತೆಕೃಷ್ಣಳು ಆ ನಾರೀ ಮಣಿಗಳನು,
ನೆನೆದಳು ರಾಜಸ್ಥಾನಕೆ ಯಶಃಕಾಯರಾದರನೂ;
ಪದ್ಮಿನಿಯೂ ಸಂಜೋಗಿನಿ ಪನ್ನೆಯು ಮೊದಲಾದ
ಕರ್ಮದೇವಿ ತ್ಯಾಗಿ ಜನನಿಗಳಾನಂದದಿ ನೋಡ.  ||೧೪||

ಕಳೆಯಿತು ದಿನ ಕಳೆದಂತೆಯೆ ನೆನಪೊಂದನು ಉಳಿಸಿ
ಆ ಬಾಲೆಯ ದಿವ್ಯಾತ್ಮ ಸ್ವರ್ಗಲೋಕದಲುಳಿಸಿ,
ಜೀವವನಾ ತ್ಯಾಗದ ಆ ಸ್ಫಟಿಕದ ಎಡೆ ತೋರಿ,
ಸುಖಸಂಪದ ಇಹಜೀವನ ಬಯಕೆಯ ನೆಲೆ ಮೀರಿ;
ನಡೆದಳು ಆ ಸ್ಥಾನದೆ ಬಹು ಧವಳ ಪ್ರಭೆಯಾಗಿ,
ಮಿನುಗುತ ಪ್ರಕಾಶಿಸಿ ಮನಮೋಹಿಸಿ ಮಂಗಳಾಂಗಿ.  ||೧೫||
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...