Home / ಕವನ / ಕವಿತೆ / ಕೃಷ್ಣಾಕುಮಾರಿಯ ಆತ್ಮಹತ್ಯೆ

ಕೃಷ್ಣಾಕುಮಾರಿಯ ಆತ್ಮಹತ್ಯೆ

(ಸೂ: ಜೋದಪುರ ಮತ್ತು ಜಯಪುರ ರಾಜವಂಶಗಳು ಕೃಷ್ಣಾಕುಮಾರಿಯ ಪಾಣಿಗ್ರಹಣ ನಿಮಿತ್ತ ಹೊಡೆದಾಡುವುದು.  ಅವಳ ತಂದೆ, ಭೀಸಿಂಹನ ದೆಸೆಯಿಂದ ಕೃಷ್ಣಾಕುಮಾರಿಯು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುವುದು)

ಪೇರಾನೆಗಳೆರಡರ ಕಡು ಕಲಹಕೆ ಮರಿಮಿಗವೆ?
ರಣಹದ್ದುಗಳೊಡೆದಾಟಕೆ ಶುಕಶಿಶುವಿನ ಬಲಿಯೆ?
ಎಳೆಕುವರಿಯು ಎಳೆ ಹರೆಯವು ತಂದೆ ತಾಯಿಗಳವಳ
ನಡುಕೆರೆಯಿಂ ಬರಲಾರದೆ ಬಿಟ್ಟಂತೆಯೆ:- ಅಲ್ಲಾ?
ಸುಖಸೋಗಿನಯೆಡೆಗಿಂತೀ ಬಾಧಕವದು ಆಗೆ
ಚೆಲು ಬಾನನು ಕಾರ್ಮೋಡವದಾವರಿಸಿದ ತೆರನೆ.  ||೧||

ಸಾರಸ್ವತ ಸಮತೆಯು ಈ ಜನತೆಯು ಎಡೆಯೆಲ್ಲಿ?
ಸಹಕಾರದ ಒಲದ್ಮೊಲೆಯು ಕಟುಹೃದಯದೊಳೆಲ್ಲಿ?
ಶ್ರುತಿಶಾಸ್ತ್ರವು ಆಗಮಗಳು ನಡೆವುದೆ ಇದರೆಡೆಗೆ-
ಅಕೊ ನೋಡೆ, ಘಾತುಕತನ ಬೀಡೊಳು ಸುಖವುಂಟೆ?
ವಿಧಿಪೊರೆದೊಡೆ ಬಾಳ್ಸವಿಯದು! ಬಾನ್ಮಂಡಲದಲ್ಲಿ
ಹಾರಾಡುವ ಖಗರಾಶಿಗೆ ಕಂಠಕತನವೆಲ್ಲಿ?  ||೨||

‘ಎಲೆ ರಮಣಿಯೆ, ಏನಿಂತಿದು? ಹೇ ಕುವರಿಯೆ ಕೇಳು-
ವಿಷಪಾನವೆ ಈ ಜನ್ಮಕೆ! ಇಂತಿರ್ಪುದೆ ಬಾಳೂ!!
ನೆಲೆಯಿಲ್ಲವೆ ನಿಯಮಿಲ್ಲವೆ; ನೀತಿಯು ಮೋಹಾಂಧ
ಯಶಃಕಂಠಕರಾಗಿ ಎಸಗಿದ ಕಲಹವೆನಿತೊಂದಂದ!
ಹಾಕುವರಿಯೆ!  ಕರುಳೆನ್ನಯ ಪಿತನಿನ್ನಯ ಎಂತು,
ತಡೆವುದೊ ಇದ!  ಎಂತಿರ್ಪುದೊ ನಿಯತಿಯ ಈ  ತಂತು  ||೩||

ಇಂತೆನ್ನಲು ಥಟ್ಟನೆಮನ ನೆಟ್ಟನೆ ತನುವಿರಿಸಿ
ಅರಳಿದ ನಸುನಗೆಯನು ಬಾಲೆಯು ಅಲ್ಲಿ ಸಲಿಸಿ.
ಇಬ್ಬನಿಯಿಂ ಸಮವರಳುತ ನಸುಚೆಲ್ವನು ಬೀರಿ
ತೋಷವನೆಮಗೀವಂತೆಯೆ ಕೃಷ್ಣಳ ಮುಖ ಬೀರಿ
ಬೇಸರದಾ ಕಡು ಬೇಗೆಯೊಳಿರಿತಾ ಸ್ತ್ರೀವೃಂದ-
ವನು ತಣಿಸುತ ರಾಜಸ್ಥಾನಕೆ ಮುದತೋರಿದಳಂದ!  ||೪||

‘ಹೇ ತಾಯೇ, ಎನ್ಜನನಿಯೆ ಭಾಗ್ಯದ ವರಮಾತೆ,
ಶೋಕಿಪೆಯ?  ಇದರೊಳು ಏನೀಪರಿಯಾ ಕೊರತೆ?
ಮೋಹಾಂಧದ ಬೀಡೊಳು ಚಲಿಸಲು ಬಿಡುವೆಲ್ಲಿ?
ಮಾತ್ಸರ್ಯದ ಗನಿಯಿಂ ಪೊರಮಡುವಾ ತೆರವೆಲ್ಲಿ
ಅನಿವಾರ್ಯವಾದೀ ಪರಿ ಕಾಟವ ಬಿಡಲೆಸಗೆ-
ವಿಷಸೇವಿಪೆ-ಚಿರಶಾಂತಿಯ ಲೋಕದಿ ನಾನೊರಗೆ.  ||೫||

‘ವಂದಿಪೆ ನಾಂ ಈಶನಿಗೂ ಮಾತಾಪಿತರರಿಗೂ!
ವಂದಿಪೆನಿನ್ನೊಮ್ಮೆಯು ನಾ ಸಖಲಾಪ್ತ ಜನಕೂ!!
ಪೋಷಿಸುತಾ ಪಾಲಿಸುತಾ ತಿನ್ನಿಸುತಾ ಎನ್ನ,
ನೋಡಿದಕೂ ಆದರ್ಶದ ಪ್ರೀತಿಯು ಬಿಡದನ್ನ.
ಇಂದಿನ ದಿನ ಈ ನಿಮಿಷಕೆ ತನುವಿದನೆನಗಿತ್ತ
ಹಿರಿಯರನಾ ವಂದಿಪೆನೋ ಇನ್ ತೆರಳುವೆನತ್ತ!!  ||೬||

‘ಸೇವಿಪೆನೀ ಪಾನಕವನು ದೇಶದ ಸುಖಕಾಗಿ-
ಸೇವಿಪೆನೋ ಎನ್ನಡೆದಾ ಜನಕನ ಸುಖಕಾಗಿ-
ಸೇವಿಪೆನಾ ಅಳಿಮನದಾ ದುರ್ಜನರೆದೆಗಾಗಿ-
ಸೇವಿಪೆನೆಂದಳು ಶಾಂತಿಯ ತಾಣದ ವಶಕಾಗಿ-
ಎನ್ನುತ ತಾಯ್ ತಾಂದೆಗೆ ಪ್ರದಕ್ಷಿಣೆಯನು ಮಾಡಿ
ವಂದಿಸಿ ಬಳಿಸೇರಿದ ಜನಸ್ತೋಮಕೆ ಸುತೆನೋಡಿ!  ||೭||

ಕುಡಿದಳು ಹಾ! ಸಾಯ್ವಳೆ ವಿಷ ಸೇವಿಸೆ ಆ ಬಾಲೆ?
ಭೋದಿಪ ತನ್‌ತಾಯಿಗೆ ಹಿತವಾಕ್ಯವನಂತುಸುರೆ!
ಋಣಿಯಾದೆನು ಹೇ ಪಿತನೇ, ಸಾಕಿದೆ ನೀ ವರೆಗೆ
ಮೀಸಲು ಈ ಮರಣದ ಪರಿ! ತಿಳಿದೂ ಹಾ ಕೊರಗೆ?
ಈ ವಿಶ್ವದ ಯಾವೆಡೆಯೊ ನಮ್ಮೆಲ್ಲರ ಸ್ಥಾನ
ನಾವ್ ಕೊರಗುತ ಮತಿಹೀನರಂತಾಗ್ವುದೆ ದುಮ್ಮಾನ!  ||೮||

ಎನ್ನಲು, ಅದೊ ಬಂದಿತು ಗರಳವ ತುಂಬಿಸಿ ಕುಡಿಯೆ,
ಕೊಟ್ಟರು ನೋಡಲ್ಲಿಯೆ ಕೆಡಹಲು ತರುಣಿಯ-ವಿಧಿಯೆ!
ಮುಖಕಾಂತಿಯು ತನುಶೋಭೆಯು ಹೃತ್ಪಠದಾ ಸ್ಥೈರ್ಯ
ಉತ್ಸಾಹವು-ಬೆಡಗೆನಿಸಿತು ಜನವೃಂದಕೆ ಸುತೆಯಾ!
ಕುಡಿದಳು ನೋಡೊಮ್ಮೆಗೆ ಜುಮ್ಮೆನ್ನಿಸುತ ಕ್ಷಣದಿ
ಸಖಲರ ಹಾಹಾಕಾರವು ಕೇಳಿಸಿದವು ನಿಜದಿ  ||೯||

ತರುಲತೆಗಳು ಅಲ್ಲಾಡಿತೆ ಉದ್ಯಾನದಿ ಅಂದು?
ಖಗಮಿಗಗಳೂ ಕುಣಿದಾಡಿತೆ ಸಂತಸದಲಿ ತಿಂದು?
ಜ್ವಲಿಸಿತೆ ರವಿ ಕಿರಣವು ಸಹ-ಕಳೆಗೆಟ್ಟಾ ದಿನವು;
ಪಡುವಣ ತನಿಮಾರುತವದು ಸೋಕಿತೆ ನೋಡಿದುವೂ?
ದಿವಸದ ಗತಿಗಳನರಿಯದೆ ಸೋಜಿಗವದು ಎಲ್ಲ;
ದುಃಖಾಂಬುಧಿಯೊಳು ಈಜುತ ಕಳೆದರು ದಿನವೆಲ್ಲಾ!  ||೧೦||

ಉತ್ಪಾತವಿದಿಂತಾದರು ಉತ್ತೇಜಿತ ಕಾರ್ಯ
ಕೊನೆಗೊಂಡಿತೆ?  ಕೃಷ್ಣಳು ಅದೊ-ನೆಟ್ಟನೆ ಇರೆ-ಶೌರ್ಯ!
ಕ್ಷುದ್ರಾತ್ಮರಲ್ಲಿಂದಲೆ ಅಗಲರು ನೋಡಂತೂ,
ಕುಸುಂಬ’ದಾ ಮೂಲಿಕೆರಸ ಸೇವಿಸೆ ಕೊಡಲನಿತು!
ಒಂದನೆಯೇ ಎರಡನೆಯೇ ಮಗುದೊಮ್ಮೆಗೆ ಎಂದೇ
ನೋಡಲು ಕಡು ಸಾಹಸದಿ ಮಾಡಿತ್ತರು ವಧೆಗೆಂದೆ.  ||೧೧||

ಸೆರಗೊಡ್ಡುತ ಕಾಲೂರುತ ನೆಲಕುರುಳುತ ತಾಯಿ,
ಬೇಡಿದರೂ ಬೇಡೆಂದರು ಕಡೆಗಾಲವು ಸ್ಥಾಯಿ!
ಕಲ್ಮನವದು ಕರಗುವುದೆ?  ಕುಮಾರಿಯು ಮನದಿ
ದೆಸೆಹತ್ತಕೆ, ದೇವತೆ, ಜನಸ್ತೋಮಕೆ ಒಂದಾಗಿ
ವಂದಿಸುತಾ, ಮಾತೆಯ ಆರೋದನವ ತಣಿಸಿ
ವಿನಯದಿ ತಲೆಬಾಗಿಸಿ ಕುಡಿದಳೂ ವಿಷವನು ಮುದದಿ!  ||೧೨||

ಕಣ್ಮುಚ್ಚಿತು, ಅಸುರರ ನಡುವಿರ್ದೀ ಸುಕುಮಾರಿ
ಅಗೊ ಹೋಯಿತು!  ನಾಡಗಲುತ ಸ್ತ್ರೀಮಣಿ ಎಳನಾರಿ!!
ಘೋರಾಂಧತೆ ರಾಜಸ್ಥಾನಕೆ!-ಕವಿಯಿತು ನಿಸ್ತೇಜ,
ರತ್ನವದಾ ಮಣ್ಣೊಕ್ಕಿತು-ನೆಲೆಸಲು ಸರಿ ಸಹಜ!
ಕಾಮಾದಿಗಳೀಜಗವನು ಸುಡುವುದು ನೋಡಿನಿತು,
ಏನ್ ಪೊಂದಿದರೀ ಕಾರ್ಯದೆ ಮೇಲಾಡುತಲಿಂತು?  ||೧೩||

ತಾ ಸಾಯೇ ಜನಕೋಟಿಗೆ ಚಿರಸುಖವಿದೆಯೆನಿಸಿ
ಆನಂದದಿ ಪ್ರಫುಲ್ಲಿತ ವದನದಿ ವಿಷಹೀರಿ;
ನೆನೆದಳು ಸುತೆಕೃಷ್ಣಳು ಆ ನಾರೀ ಮಣಿಗಳನು,
ನೆನೆದಳು ರಾಜಸ್ಥಾನಕೆ ಯಶಃಕಾಯರಾದರನೂ;
ಪದ್ಮಿನಿಯೂ ಸಂಜೋಗಿನಿ ಪನ್ನೆಯು ಮೊದಲಾದ
ಕರ್ಮದೇವಿ ತ್ಯಾಗಿ ಜನನಿಗಳಾನಂದದಿ ನೋಡ.  ||೧೪||

ಕಳೆಯಿತು ದಿನ ಕಳೆದಂತೆಯೆ ನೆನಪೊಂದನು ಉಳಿಸಿ
ಆ ಬಾಲೆಯ ದಿವ್ಯಾತ್ಮ ಸ್ವರ್ಗಲೋಕದಲುಳಿಸಿ,
ಜೀವವನಾ ತ್ಯಾಗದ ಆ ಸ್ಫಟಿಕದ ಎಡೆ ತೋರಿ,
ಸುಖಸಂಪದ ಇಹಜೀವನ ಬಯಕೆಯ ನೆಲೆ ಮೀರಿ;
ನಡೆದಳು ಆ ಸ್ಥಾನದೆ ಬಹು ಧವಳ ಪ್ರಭೆಯಾಗಿ,
ಮಿನುಗುತ ಪ್ರಕಾಶಿಸಿ ಮನಮೋಹಿಸಿ ಮಂಗಳಾಂಗಿ.  ||೧೫||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...