Home / ಕವನ / ಕವಿತೆ / ಕನಸು

ಕನಸು

ಅಪ್ಸರೆಯರೊಡನೆ ಚಂದ್ರಲೋಕದಲ್ಲಿ ತಿರುಗಾಡಿ
ಆನಂದಿಸುವ ಕನಸನ್ನು
ಚಿರುಗುಮೀಸೆಯ ಹುಡುಗ ಕಾಣದಿದ್ದರೆ,

ಒಂದು ಮನೆ, ಒಂದು ಆಸರೆಯ ಮರ, ಬಳ್ಳಿಗೆ ಹೂವು ಹಣ್ಣು,
ತನ್ನ ಅಂಗಳದ ರಂಗೋಲಿ, ತನ್ನ ಸರದಾರನೊಡನೆ ಬದುಕಿನ
ಹೋಲಿರಂಗು,
ಇವನೆಲ್ಲ ಮೊಗ್ಗು ಹುಡುಗಿ ಕನಸದಿದ್ದರೆ,

ಕೂಸಿನ ಹಾಲು ನಗು, ಜೇನು ತೊದಲು,
ಅವ್ವು-ಅಮ್ಮಿ ಇವನೆಲ್ಲ
ಗರ್ಭಿಣಿಯು ಕನಸು ಕಾಣದಿದ್ದರೆ,

ತನ್ನ ಮಗನ ನಿಲುವಂಗಿ-ಡಿಗ್ರಿ, ಆಫೀಸರ್ ಗಿರಿ
ಅವನ ಸೂಟು-ನೋಟು
ಇವನ್ನು ತನ್ನ ಮೀಸೆ ತಿರುವಿನಲ್ಲಿ ಬೀಗಿ ತಂದೆಯು ಕಲ್ಪಿಸದಿದ್ದರೆ,

ತನ್ನ ಮಗನ ಹೆಂಡತಿ ತನ್ನನೋಲೈಸಿ ಸೇವೆ ಮಾಡಿ,
ಬಯ್ದರೂ-ತಿವಿದರೂ ತಲೆ‌ಎತ್ತದೆ ಬಾಗಿ ನಡಕೊಳ್ಳುವ
ಅತ್ತೆತನವ ತಾಯಿ ತನ್ನ ಮಗುವಿನ ಮುಂದೆ ಊಹಿಸಿ ಉಬ್ಬದಿದ್ದರೆ,

ಇಷ್ಟೆಲ್ಲ ಆಗಿ ತನ್ನ ಒಣಕೈಯಲ್ಲಿ
ಒಂದು ಹಸುಗೂಸು ತನ್ನಂತೆ ಬೊಚ್ಚು ಬಾಯಿ ತೆರೆದು
ಹಾಲುಗುಳುತ್ತ ಜಾಜಾ ಜೀಜೀ ಎಂಬುದನ್ನು
ಮೊಮ್ಮಗನ ಪಡೆಯದ ಅತ್ತೆ ಆಶಿಸದಿದ್ದರೆ,

ಕೂಸಾಗಿ-ಬೆಳೆದು-ನಂತರ
ಜೋಡಿ ಪಾರಿವಾಳಗಳಂತೆ ಒಂದು ಪುಟ್ಟ ಹೆಣ್ಣಿನೊಡನೆ ತನ್ನ
ಮುಂದೆ ಹಸೆಮೇಲೆ ಕುಳಿತಿರುವುದನ್ನು
ಮುದುಕಿ ತನ್ನ ಮಬ್ಬುಗಣ್ಣಿನಿದಿರು ಕಟ್ಟಿಕೊಳ್ಳದಿದ್ದರೆ

ಮನುಜರೆಲ್ಲ ತಮಗಿರುವುದಕ್ಕಿಂತ
ಇನ್ನು ಹೆಚ್ಚು ಹೆಚ್ಚು ಸುಖಗಳಿಗಾಗಿ ಹಂಬಲಿಸಿ-ಕನಸಿ-ನನಸದಿದ್ದರೆ
ಈ ಬದುಕಿನಲ್ಲಿ ಬಾಳಬೇಕು ಎಂಬಂಥಾದ್ದು ಏನಿದ್ದಿತು
ಇಲ್ಲ-ಬದುಕನ್ನು ನಡೆಸುವುದೇ ಕನಸು
ನಾಳಿನ ಸವಿಗನಸು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...