Home / ಕಥೆ / ಜನಪದ / ಕಥೆಯದೇ ಕಥೆ

ಕಥೆಯದೇ ಕಥೆ

ಅಳಿಯ ಇದ್ದನು. ಹಾಡಬಂದರೂ ಹಾಡು ಹೇಳುತ್ತಿದ್ದಿಲ್ಲ ; ಕಥೆ ಬಂದರೂ ಕಥೆ ಹೇಳುತ್ತಿದ್ದಿಲ್ಲ. “ಏನು ಬಂದು ಏನುಕಂಡೆವು. ಇವನೇನು ಒಂದು ಹಾಡು ಹೇಳಲಿಲ್ಲ ; ಕಥೆ ಹೇಳಲಿಲ್ಲ. ಇವನನ್ನು ಹೇಗಾದರೂ ಮಾಡಿ ಕೊಲ್ಲಬೇಕು” ಎಂದು ಕಥೆ ಹಂಚಿಕೆ ಹಾಕಿತು.

“ಮುಂಜಾನೆ ಎದ್ದಕೂಡಲೇ ಜೋಡು ಮೆಡುತ್ತಾನೆ. ಆವಾಗ ಅವನಿಗೆ ಚೇಳು ಆಗಿ ಕಡೆಯಬೇಕು. ಹೆಂಡತಿಯನ್ನು ಕರೆಯಲಿಕ್ಕೆ ಹೋಗುತ್ತಾನೆ- ಆವಾಗ ಅಗಸೆ ಅವನ ತಲೆಯಮೇಲೆ ಬೀಳುವಂತೆ ಮಾಡಬೇಕು” ಹೀಗೆನ್ನುವ ಕಥೆಯ ಮಾತನ್ನು ಆಳುಮಗ ಕೇಳಿರುತ್ತಾನೆ.

“ಎವ್ವಾ ಎವ್ವಾ, ನಾನೂ ಹೇಣತೀಗಿ ಕರಕೊಂಡು ಬರ್ತೀನಿ” ಎಂದು ಅವ್ವನಿಗೆ ಕೇಳಿ, ಆಕೆಯ ಅಪ್ಪಣೆ ಪಡೆಯುತ್ತಾನೆ, ಆ ಅಳಿಯ.

ಆವಾಗ ಆಳುಮಗ ಅನ್ನುತ್ತಾನೆ – “ನಾನು ಬರ್ತೀನಿ. ನಿನ್ನೊಡನೆ ಧಣೀ” “ಯಾತಕ್ಕ ಬರತೀಯೋ ಎತ್ತು ದನ ನೋಡಕೋತ ಇರು” ಎಂದರೂ ಕೇಳುವದಿಲ್ಲ. ಕುದುರೆಯ ಮೇಲೆ ಜೀನು ಬಿಗಿದು ಸಜ್ಜುಗೊಳಿಸುತ್ತಾನೆ. ಧಣಿಯು ಮುಂಜಾನೆ ಎದ್ದು ಜೋಡು ಮೆಡುವಷ್ಟರಲ್ಲಿ ಆಳು ಜೋಡಿನಲ್ಲಿರುವ ಚೇಳನ್ನು ನೋಡಿ ಅದನ್ನು ಕಡಿದು ಕಿಸೆಯಲ್ಲಿ ಹಾಕಿಕೊಂಡುಬಿಟ್ಟನು.

ಊರುಬಿಟ್ಟು ಹೊರಬೀಳುವಾಗ ಆಳು ಸುತ್ತು ಸುತ್ತು ದಾರಿಯಲ್ಲಿ ಕರಕೊಂಡು ಹೊರಟನು. ಅಗಸೆಯ ಎರಡೂ ದಾರಿ ಬಿಟ್ಟು, ಮೂರನೇ ಅಡ್ಡದಾರಿ ಹಿಡಿದು ಊರ ದಾಟಲಿಕ್ಕೆ ಅನುವು ಮಾಡಿಕೊಟ್ಟನು.

ಇಷ್ಟೆಲ್ಲ ಪಾರು ಆಗಿ ಅತ್ತೆಮಾವನ ಊರು ತಲುಪುತ್ತಾರೆ. ಅಲ್ಲಿ ಕೈಕಾಲು ತೊಳೆಯಲಿಕ್ಕೆ ಮನೆಯವರು ನೀರು ಕೊಟ್ಟರು; ಉಣಬಡಿಸಿದರು. ಬಹಳ ದಿನಗಳ ಮೇಲೆ ಬಂದವನೆಂದು ತಿಳಿದು ಹಾಸಿಗೆ ಮಾಡಿಕೊಟ್ಟು, ಅಳಿಯನಿಗೆ ಮಲಗಲು ಹೇಳಿದರು. ಪ್ರವಾಸದಿಂದ ದಣಿದ ಅಳಿಯ ಮಲಗಿಬಿಟ್ಟನು. ಹೆಂಡತಿಯ ನಡತೆ ಸರಿಯಾಗಿರಲಿಲ್ಲ. ಗಂಡನು ಮಲಗಿದ್ದನ್ನು ನೋಡಿದ ಕೂಡಲೇ, ದಿನಾಲು ಹೋಗುವಂತೆ ಮನೆಬಿಟ್ಟು ಹೊರಗೆ ಹೊರಟಳು. ಅವಳ ಹಿಂದಿನಿಂದ ಆಳುಮಗನೂ ಸಾಗಿದನು, ಆಕೆಗೆ ಗೊತ್ತಾಗದಂತೆ.

ಆಕೆ ನೇರವಾಗಿ ಫಕೀರನ ಮನೆಗೆ ಹೋದಳು; ಅವನನ್ನು ತೆಕ್ಕೆಹೊಡೆದಳು.

“ಇಷ್ಟೇಕೆ ತಡಮಾಡಿ ಬಂದಿ ? ಇಷ್ಟೇಕೆ ರಾತ್ರಿ ಮಾಡಿದಿ ?” ಎಂದು ಅವಳ ಮೂಗನ್ನೇ ಕೊಯ್ದು ಹಾಕಿದನು. ಆಕೆ ಅಳುತ್ತ ಕರೆಯುತ್ತ ಮನೆಯ ಕಡೆಗೆ ಹೊರಟಳು.

ಇನ್ನು ಗಂಡನ ಮನೆಗೆ ಯಾವ ಮುಖದಿಂದ ಹೋಗುವದು ?

“ಅವನೇ ಮೂಗು ಕೊಯ್ದನೆಂದು ಅಪವಾದ. ಹೊರಿಸಿದರಾಯಿತು. ತಾನೇ ಮೂಕಾಟಲೆ ಕರಕೊಂಡು ಹೋಗುತ್ತಾನೆ. ಮತ್ತು ಎಲ್ಲ ಸುರಳೀತ ನಡೀತದೆ” ಎಂದು ಲೆಕ್ಕ ಹಾಕಿದಳು. ಹಾಗೂ ಗಂಡನ ಮಗ್ಗುಲಲ್ಲಿ ಮಲಗಿಕೊಂಡಳು.

ಬೆಳಗಾಗುವ- ಮೊದಲೇ ಆಕೆಯೆದ್ದು “ನನ್ನ ಮೂಗು ಹೋಯಿತು” ಎಂದು ಬೊಬ್ಬೆ ಹೊಡೆದಳು. ಗಂಡನು ಗಾಬರಿಗೊಂಡು ಎದ್ದನು. ತಾಯಿತಂದೆ ಎಲ್ಲರೂ ಬಂದರು, “ಯಾಕೆ ಮಗಾ, ಏನಾಯ್ತು” ಎಂದು ಎಲ್ಲರೂ ಕೇಳುವವರೇ.

“ನನ್ನ ಗಂಡ ನನ್ನ ಮೂಗು ಕೊಯ್ದರೆಪ್ಪೋ” ಎಂದು ಗುಲ್ಲುಮಾಡಿದಳು.

ನೆರೆದ ಜನ ಅಳಿಯನಿಗೆ ಛೀ ಥೂ ಅಂದಿತು.

ಅಲ್ಲಿಯೇ ನಿಂತ ಆಳುಮಗ ಹೇಳಿದನು – “ನನ್ನ ಧೊರೀನೇ ಮೂಗು ಕೊಯ್ದಾನೆಂದರೆ ಅವನ ಕೈ ರಕ್ತ ಆಗಿರಬೇಕು. ಹಾಂಗ ಆಗಿಲ್ಲವಾದರೆ ಮತ್ತೆ ಯಾರಾದರೂ ಅವಳ ಮೂಗು ಕೊಯ್ದಿರಬೇಕು. ಫಕೀರ ಬಾವಾ ಸಾಹೇಬ ಅವಳ ಮೂಗು ಕೊಯ್ದಾನ.”

ಆಳು ಗಟ್ಟಿಸಿ ಹೇಳುವುದನ್ನು ಸುಳ್ಳು ಸತ್ಯ ನಿರ್ಣಯಿಸುವ ಸಲುವಾಗಿ ನೆರೆದವರೆಲ್ಲರೂ ಕಂದೀಲು ಹಿಡಕೊಂಡು ಫಕೀರನ ಮನೆಗೆ ಹೋದರು.

ಅಲ್ಲಿ ನೋಡಿದರೆ ಫಕೀರನ ಮನೆಯಲ್ಲಿ ರಕ್ತ ಬಿದ್ದಿರುತ್ತದೆ.

ಮಾವನನ್ನೂ ಮಾಲಕನ ಹೆಂಡತಿಯನ್ನೂ ಕಚೇರಿಗೆ ಕಳಿಸಲಾಯಿತು. ಆಳು ಮಗನು ಅಳಿಯನನ್ನು ಕರಕೊಂಡು ಮರಳಿ ತನ್ನೂರಿಗೆ ಹೋದನು.

ಕಲಿತ ಕಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಹೀಗೆ ಅಪವಾದ ಬರುತ್ತವೆ. ಅವು ಜನ್ಮಕ್ಕೇ ಮೂಲವಾಗುವವು. ಆದ್ದರಿಂದ ಬಂದಕಥೆ ಮಂದಿಗೆ ಹೇಳಬೇಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...