Home / ಕವನ / ಕವಿತೆ / ಉದ್ಧಾರ

ಉದ್ಧಾರ

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು?
ಯಾವ ಓದಿನಿಂದಿವನು ವಾದಾತೀತನಾದಾನು?
ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು?
ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು?
ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು?
ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತು?
ಯಾವ ದುಡಿತದಿಂದ ಇವನ ದುಗುಡ ದೂರಾದೀತು?
ಯಾವ ಏಕಾಂತದಲ್ಲಿ ಇವನ ಮಂಗ ಸಂಗ ಕಳೆದೀತು?
ಯಾವ ಎಳೆಯಿಂದ ಇವನ ಹಗ್ಗ ಬಿಗಿಯಾದೀತು?
ಯಾವ ಕಳೆಯಿಂದ ಇವನ ಮರ ಅಮರವಾದೀತು?
ಯಾವ ಬೆಳೆಯಿಂದ ಇವನ ಮನೆ ತುಂಬೀತು?
ಯಾವ ಕರ್ಮದಿಂದ ಇವನ ಧರ್ಮ ರೂಪು ತೋರೀತು?
ಯಾವ ಮರ್ಮದಿಂದ ಇವನ ಮಾನ ಉಳಿದೀತು?
ಯಾವ ಗುರುವಿನಿಂದ ಇವನ ಗೌರವ ಮೆರೆದೀತು?
ಯಾವ ಕೈಯಿಂದ ಇವನ ಕಾಲು ನಡೆದಾವು?
ಯಾವ ಬೆಂಕಿಯಲ್ಲಿ ಇವನ ಕಾವು ಕುದಿದು ಪಕ್ವವಾದೀತು?
ಯಾವ ಬೇವಿಂದ ಇವನ ಬದುಕು ಸಮರಸವಾದೀತು?
ಯಾವ ವಿಷದಿಂದ ಇವನ ವಿಷಯ ತೀರೀತು?
ಯಾವ ಚಿಕ್ಕೆಯಿಂದ ಇವನ ಚೊಕ್ಕತನ ಮಿನುಗೀತು?
ಯಾವ ಬಿಕ್ಕೆಯಿಂದ ಇವನ ಜೋಳಿಗೆ ತುಂಬೀತು?
ಯಾವ ಹಂಗಿನಿಂದ ಇವನ ಹಗರಣ ಹಗುರಾದೀತು?
ಯಾವ ಪರೀಕ್ಷೆಯಲ್ಲಿ ಇವನ ಪರುಷ ದೊರೆತೀತು?
ಯಾವ ಹೊತ್ತಿಗೆಯಲ್ಲಿ ಇವನ ಗೊತ್ತುಗುರಿ ಸಿಕ್ಕೀತು?
ಯಾವ ಹೂವಿಂದ ಇವನ ಹೃದಯವರಳೀತು?
ಯಾವ ಭಾವದಿಂದ ಇವನ ಬೇರು ಬಲಿತೀತು?
ಯಾವ ಸೂಜಿಯಿಂದ ಇವನ ಗುಳ್ಳೆ ಒಡೆದೀತು?
ಯಾವ ಸಂದಿನಿಂದ ಇವನ ಬಂಧಿತ ಸತ್ವ ಚಿಮ್ಮೀತು?
ಯಾವ ಅನ್ನ ನೀರಿನಿಂದ ಇವನ ಒಡಲುರಿಯಾರೀತು?
ಯಾವ ಚುಚ್ಚಿನಿಂದ ಇವನ ರೊಚ್ಚು ಉರಿದೆದ್ದೀತು?
ಯಾವ ಶಸ್ತ್ರದಿಂದ ಇವನ ಸಂಶಯ ಛಿನ್ನವಾದೀತು?
ಯಾವ ಶಾಸ್ತ್ರದಿಂದ ಇವನ ಸ್ತರವು ವಿಸ್ತಾರವಾದೀತು?

ಇವನೊಳಗು ಮೊಳೆತು ಮೊಳಗದೆ
ತಿಳಿದು ತೊಳಗದೆ
ಗುಟ್ಟು ಗಟ್ಟಿಗೊಳ್ಳದೆ
ಇವನ ಯಾರುದ್ಧರಿಸಬೇಕು?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...