ಹೋಗುವಿಯೋ ನೀ ಹೋಗು – ಮತ್ತೆ
ನುಡಿಯದೆ ಇರುವುದೆ ಮುರಳಿ?
ಬಂದೇ ಬರುವೆ ಹೊರಳಿ-ನೀ
ಬಂದೇ ಬರುವೆ ಮರಳಿ.
ಅದ್ದುವಳಲ್ಲ ನನ್ನೀ ಬಾಳನು
ಸಲ್ಲದ ಕಣ್ಣೀರಲ್ಲಿ
ತೆರಳುವಳಲ್ಲ ದೀಪವ ನಂದಿಸಿ
ಜೀವನದುತ್ಸವದಲ್ಲಿ
ಏನೇ ಕಂಟಕ ಬಂದರು ಏನು
ಬೆಚ್ಚುವ ಜೀವವಿದಲ್ಲ
ಮುಚ್ಚಿಹೋದರೂ ಬಾಗಿಲು – ಅದನು
ತೆರೆಯದೆ ಉಳಿವವಳಲ್ಲ.
ದಿನ ದಿನ ನಿನ್ನ ಮನಸಿನ ಗಂಟನು
ಬಿಡಿಸುವೆ ಒಂದೊಂದಾಗಿ
ಮೆಲ್ಲಗೆ ಹೊದಿಸುವೆ ಸ್ನೇಹದ ಸೆರಗ
ತೋಳೊಳು ನಿನ್ನನು ತೂಗಿ
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.