Home / ಕವನ / ಕವಿತೆ / ಕೆಂಪು ದೀಪದ ಕೆಳಗೆ

ಕೆಂಪು ದೀಪದ ಕೆಳಗೆ

ಹಾಡು ೧ : ಯಾರು ಹಚ್ಚಿದರಣ್ಣ
ಕೆಂಪಾನೆ ದೀಪಾವ
ಯಾರು ಮಾಡಿದರಣ್ಣ
ಬಾಳನ್ನು ರಕ್ತಾವ ||

ನಗುವ ಹೂಗಳನೆಲ್ಲ
ಕಾಲಲ್ಲಿ ತುಳಿದು
ಸುಂದರ ಕನಸುಗಳ
ಬೆಂಕೀಗೆ ಸುರಿದು ||

ಮೆರೆಯುವ ಜನರ
ಗಮ್ಮತ್ತು ಕಾಣಿರಿ
ಬಲಿಯಾದ ಹೆಣ್ಣೀನ
ಬದುಕನ್ನು ನೋಡಿರಿ ||

ಹಾಡು ೨ : ಯಾರು ಹೇಳಿದಯ್ಯಾ
ಇದೆನೆಲ್ಲ ಮಾಡೆಂದು ||

ನಿನ್ನೆಂಡತಿ ಮನೆಯಲ್ಲಿ
ಪತಿಯ ಕನವರಿಕೆಯಲಿ
ನೀನೊ ಇಲ್ಲಿ ಅಬ್ಬಬ್ಬಾ
ಪರ ಹೆಣ್ಣ ತೆಕ್ಕೆಯಲಿ ||

ಏಕೆ ಇಂಥ ದಾಹ
ಕಡಿಮೆಯಾದರೂ ಏನು
ಹೆಂಡತಿ ಬಾಳಿಸದೆ ನೀನು
ಇವೆಲ್ಲಾ ಸರಿಯೇನು ||

ಪರಹೆಣ್ಣ ಕೂಡುವಾಗ
ನೆನಪಿರಲಿ ನಿನ್ನ ಮಗಳೂ
ಇಂಥ ಸ್ಥಿತಿಗೆ ಅವಳನ್ನು
ತಂದವನು ನೀನಲ್ಲವೇನು ||

ಹಾಡು ೩ : ದುಡ್ಡು ಕೊಟ್ಟು ಹೆಣ್ಣನ್ನು
ಮಜಾ ಮಾಡೊ ಅಣ್ಣರಿರಾ
ನಿಮಗೇಕೆ ಸೆಂಟಿಮೆಂಟು
ಮನಸೆಲ್ಲಾ ಕಾಂಕ್ರೀಟು ||

ಒಂದು ಹೆಣ್ಣು ಸಾಲದಲ್ಲ
ಎಷ್ಟಾದರೂ ಪರವಾಗಿಲ್ಲ
ಬೇಕು ಕೈ ಕಾಲಿಗೆಲ್ಲ
ಕೈಲಾಗದಿದ್ರು ಪರವಾಗಿಲ್ಲ ||

ಮನೆ ಬೀದಿ ಊರಲೆಲ್ಲ
ಮರ್ಯಾದೆಸ್ಥರು ಬರೇ
ಊರ ಹೊರಗೆ ಬಂದರಂದ್ರೆ
ಕಚ್ಚೆ ಕಿತ್ತು ಎಸೆದರಲ್ಲಾ ||

ಹಾಡು ೪ : ತಪ್ಪು ಯಾರದು ಇಲ್ಲಿ
ಹೇಳಣ್ಣ ಹೇಳೊ
ಒಪ್ಪಿತವೆಲ್ಲವು ಹಣಕೆ
ಕೇಳಣ್ಣ ಕೇಳೊ ||

ಹಿಡಿಗೂಳಿಗಾಗಿ ಬೆತ್ತಲಾಗರು
ಮುಡಿ ಹೂವಾಗಿ ಅರಳುವರು
ಬಡತನವೊಂದೆ ಮೂಲವಲ್ಲ
ನಾನಾ ತರದ ಸಿಕ್ಕುಗಳಲ್ಲ ||

ಆಹಾ ಜಾರಿಸಿ ನಲಿದರು
ಅಯ್ಯೊ ಜಾರಿ ನರಳಿದರು
ಜಾರಲೆಂದು ಬಂದವರಿಗೆ
ಜಾರುಗುಪ್ಪೆಗಳ್ಯಾರಣ್ಣ ||

ಹಾಡು ೫ : ಹೆಣ್ಣ ಬಯಸಿ ಹೋಗಿ
ನಲಿಯುವ ಅಣ್ಣರಿರಾ
ಒಮ್ಮೆ ಚಿಂತನೆ ಮಾಡಿ
ಬೇಕೆ ನಿಮಗೀ ಮೋಡಿ ||

ತಾಯಿ ತಂಗಿ ಅಕ್ಕ ಅಮ್ಮ
ಈ ಪದಗಳ ಅರ್ಥವೇನು
ಹೇಳಿರಣ್ಣಾ ಹೇಳಿರೊ
ಇದೆಲ್ಲ ನಿಜದ ಬದುಕೇನು ||

ಹಣದ ಎಣಿಕೆಯಲ್ಲಿ
ಸೆರಗ ಸರಿಸಿ ನಲಿಯೋರೆ
ನಿಮ್ಮದೆಂಥ ಬಾಳು
ನೋಡಿ ಹೆಣ್ಣಿನ ಗೋಳು ||

ಹಾಡು ೬ : ಎಂದಿಗೆ ಕೊನೆಯಣ್ಣ
ಬಟ್ಟೆ ಸುಲಿಗೆಗೆ ಅಣ್ಣಾ ||

ಹೆಣ್ಣಿಂದ ಹುಟ್ಟಿ ನೀನು
ಮುಟ್ಟುವೆ ಏನನ್ನ
ಮುಚ್ಚಿ ಇಂಥ ಬಾಳನ್ನ
ಗಳಿಸಿದೆ ಏನನ್ನ ||

ಮಗಳು ತಾಯಿ ತಂಗಿ
ಹೆಂಡತಿ ಎಂದರೇನರ್ಥ
ಬಾಳಿಸದೆ ಹೆಣ್ಣ ಬಾಳು
ಆಯಿತಲ್ಲ ವ್ಯರ್ಥ ||

*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...