Home / ಲೇಖನ / ಇತರೆ / ಊಟ-ಉಪಚಾರ

ಊಟ-ಉಪಚಾರ

ಊಟಕ್ಕೆ ಕುಳಿತಾಗ ಮಾತಾಡಬೇಕೋ ಮಾತಾಡಬಾರದೊ ಎಂಬ ವಿಷಯದ ಮೇಲೆ ಸದಾ ಭಿನ್ನಾಭಿಪ್ರಾಯವಿದೆ. ವಿಶೇಷತಃ ಹಕೀಮರೂ ವೈದ್ಯರೂ ಊಟಕ್ಕೆ ಕುಳಿತಾಗ ಮಾತಾಡಬಾರದೆಂದು ಅಭಿಪ್ರಾಯಪಡುತ್ತಿದ್ದರೆ, ಡಾಕ್ಟರ ಜನರು ಮಾತಾಡಬೇಕೆಂದು ಹೇಳುತ್ತಾರೆ. ನನ್ನ ಅಭಿಪ್ರಾಯ ಎಂದರೆ ಮಾತಾಡುವಾಗ ಊಟ ಮಾಡಬಾರದು !  ಊಟ ಮಾಡುವಾಗ ಮಾತಾಡಬಾರದೆಂದು ಹಕೀಮರೂ ಉಪದೇಶ ಮಾಡುತ್ತಾರಷ್ಟೇ, ಅವರೇ ಎರಡನೆಯವರ ಮನೆಗೆ ಊಟಕ್ಕೆ ಹೋದಾಗ ಅವರ ಊಟ ಮತ್ತು ಮಾತು ಎರಡೂ ಒಂದೇ ಸವನೆ ಸರಿಸಮಾನ ವೇಗದಿಂದ ನಡೆಯುತ್ತವೆ!
  * * * *
ಊಟ ಮಾಡುವಾಗ ಮಾತನಾಡಲೇಬೇಕೆಂದು ನೈಸರ್ಗಿಕ ತತ್ವವಿದ್ದದ್ದಾದರೆ, ಮಾತಾಡುವದಕ್ಕಾಗಿ ಬೇರೊಂದು ಇಂದ್ರಿಯವನ್ನು ಬಾಯಿಯ ಜೊತೆಗೆ ದೇವರು ನಿರ್ಮಿಸುತ್ತಿದ್ದನೆಂಬದು ಸ್ಪಷ್ಟವಾದ ಮಾತು. ಆದರೆ ಹಾಗೆ ಮಾಡದೆ, ಎರಡರ ಸಲುವಾಗಿ ಒಂದೇ ಇಂದ್ರಿಯವನ್ನು ಹುಟ್ಟಿಸಿದ್ದರಿಂದ ಕೇವಲ ಒಂದು ವೇಳೆಯಲ್ಲಿ ಬಾಯಿಯನ್ನು ಒಂದೇ ಕೆಲಸಕ್ಕೆ ಉಪಯೋಗಿಸತಕ್ಕದ್ದು. ಸದಾ ವಟವಟ ಮಾತಾಡುವವರು ಊಟಕ್ಕೆ ಕುಳಿತಾಗ ಅಷ್ಟೇ ಏಕೆ? ನಿದ್ರೆಯಲ್ಲಿ ಸಹ ಬಡಬಡಿಸುವರು !
  * * * *
ಸ್ತ್ರೀಯರಲ್ಲಿ ವಿಶೇಷವಾಗಿ ಮಾತಾಡುವ ಚಟವು ಕಂಡುಬರುತ್ತದೆ. ಹೆಚ್ಚಾಗಿ ಮುದುಕಿಯರಲ್ಲಿ ಯಾರೂ ಮಾತಾಡಲಿಕ್ಕೆ ಸಿಗದಿದ್ದರೆ, ಕಡೆಗೆ ತಮ್ಮಷ್ಟಕ್ಕೆ ತಾವೇ ಗುಣಗುಟ್ಟು ಕೂಡ್ರುವರು.
ಊಟಕ್ಕೆ ಕುಳಿತಾಗ ಮಾತಾಡಲು ಅಡ್ಡಿ ಇರದಿದ್ದರೆ ಒದರಲಿಕ್ಕೆ ಅಡ್ಡಿ ಇಲ್ಲ, ನಗಲಿಕ್ಕೆ ಅಡ್ಡಿ ಇಲ್ಲ. ಅಳಲಿಕ್ಕೆ ಅಡ್ಡಿ ಇಲ್ಲ. ಜಗಳಾಡಲಿಕ್ಕೆ ಅಡ್ಡಿ ಇಲ್ಲ. ಹೀಗೆ ಇದಕ್ಕೆ ಮಿತಿಯೇ ಇರದಂತೆ ಆಗುತ್ತದೆ. ಊಟಕ್ಕೆ ಕುಳಿತಾಗಿನ ಮುಖ್ಯ ಕೆಲಸವು ಊಟವು; ಮಾತಲ್ಲ. ಮಾತಿನ ಭರದಲ್ಲಿ ಊಟವನ್ನೇ ಮರೆತುಬಿಡುವ ಸಂಭವವು ಇರದಿದ್ದರೂ, ಅದೇನೂ ತೀರ ಅಸಂಭವವಲ್ಲ.
****
ಅಂಗಹೀನರ ದೈವ ತೆರೆದಂತಾಯಿತು. ಈಗ ಪಾಶ್ಚಾತ್ಯ ಸಂಶೋಧಕನೊಬ್ಬನು ಮೂಗು ಇಲ್ಲದವರಿಗೆ ಪ್ಲಾಸ್ಟರಿನ ಕೃತ್ರಿಮವಾದ ಮೂಗು ಹಚ್ಚುತ್ತಾನೆ. ಕಿವಿ ಹರಿದಿದ್ದರೆ ಅದನ್ನು ಜೋಡಿಸುತ್ತಾನೆ. ಕಣ್ಣುಗಳು ಕೆಟ್ಟರೆ ಕೃತ್ರಿಮ ಕಣ್ಣುಗಳನ್ನು ಕೂಡಿಸುತ್ತಾನೆ. ಒಮ್ಮೆ ಜೋಡಿಸಿ ಬಿಟ್ಟರೆ ನಿಜವಾದ ಇಂದ್ರಿಯಗಳಂತೆ ಕಾಣಿಸುತ್ತವೆ. ಹಲ್ಲು ಹಾಕಿಸಿದವರು ಪ್ರತಿ ದಿವಸ ಹಲ್ಲು ತೆಗೆದು ಸ್ವಚ್ಛ ಮಾಡುವಂತೆ ಪ್ಲಾಸ್ಟರ ಇಂದ್ರಿಯಗಳನ್ನು ತೆಗೆಯುವ ಅಗತ್ಯವಿಲ್ಲ. ತೊಳೆಯುವ ಅವಶ್ಯವಿಲ್ಲ. ಒಮ್ಮೆ ಜೋಡಿಸಿದರೆ ಆಯಿತು, ಕಡೆತನಕ ಉಳೆಯುವವು.
  * * * *
ಆದರೆ ನಿಜವಾದ ಇಂದ್ರಿಯಗಳಂತೆ ಕೃತ್ರಿಮ ಕಣ್ಣುಗಳಿಂದ ನೋಡಲಿಕ್ಕೆ ಬರುವದಿಲ್ಲ. ಕೃತ್ರಿಮ ಕಿವಿ-ಮೂಗುಗಳಿಂದ ಶ್ರವಣ- ಘಾಣಗಳ ವ್ಯಾಪಾರ ಸಾಗುವದಿಲ್ಲ. ಇದರ ಮುಖ್ಯ ಪರಿಣಾಮವೆಂದರೆ ಅಂಗಹೀನತೆಯಿಂದ ಉಂಟಾದ ಕುರೂಪವು ಹೋಗುವದು ನತ್ತು ಮಗಬೊಟ್ಟು ಇಡಬೇಕೆಂದು ಆಪೇಕ್ಷಿಸುವ ಮೂಗಿಲ್ಲದ ಸ್ತ್ರೀಗೆ ಆ ಆಭರಣಗಳನ್ನು ಧರಿಸಲು ಅನುಕೂಲವಾಗುವದು. ಕೆಲವು ಸ್ತ್ರೀಯರಿಗೆ ಮೂಗು ಅಷ್ಟೊಂದು ಬೇಕಿಲ್ಲ. ನತ್ತು ಮೂಗಬೊಟ್ಟು ಇಡಲಿಕ್ಕೆ ಬಂದರೆ ಸಾಕು !.
*****
Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...