ಪ್ರೀತಿಯ ಕಿಟಿ,
ನಾವಂದುಕೊಂಡಂತೆ ಡಸೆಲ್ ತುಂಬಾ ಒಳ್ಳೆಯ ಮನುಷ್ಯ. ನನ್ನ ಸಣ್ಣ ಕೋಣೆಯನ್ನು ಶೇರ್ ಮಾಡಲು ಅವರಿಗೆ ತೊಂದರೆ ಇರಲಿಲ್ಲ.
ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ವಸ್ತುಗಳನ್ನು ಅಪರಿಚಿತನೊಡನೆ ಶೇರ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಆದರೆ ಒಂದೊಳ್ಳೆಯ ಕೆಲಸಕ್ಕೆ ಕೆಲವೊಮ್ಮೆ ತ್ಯಾಗ ಮಾಡಬೇಕಾಗುವುದು. ಹಾಗಾಗಿ ಒಳ್ಳೆಯ ಮನಸ್ಸಿನಿಂದ ನನ್ನ ಸಣ್ಣ ಸಹಾಯವನ್ನು ಮಾಡುವೆ. ನಾವು ಇನ್ನೊಬ್ಬರನ್ನು ಸಲುಹಬೇಕಾದ ಸಮಯದಲ್ಲಿ ಎದುರಾಗುವ ಸಂಗತಿಗಳು ಅಂತಹ ಮಹತ್ವದ್ದಾಗಲಾರವು ಎನ್ನುವ ಡ್ಯಾಡಿಯ ಮಾತು ನೂರಕ್ಕೆ ನೂರು ಸತ್ಯ.
ಇದ್ದ ಮೊದಲ ದಿನವೇ ಡಸೆಲ್ ನನಗೆ ಎಲ್ಲ ವಿಚಾರಗಳ ಕುರಿತು ಪ್ರಶ್ನಿಸತೊಡಗಿದರು. ಇದ್ದಿಲು ಮಾಡುವ ಹೆಂಗಸು ಬರುವುದೆಷ್ಟು ಹೊತ್ತಿಗೆ? ಬಾತರೂಮನ್ನು ಎಷ್ಟು ಹೊತ್ತಿಗೆ ಬಳಸಿದರೆ ಉತ್ತಮ? ಯಾವಾಗ ನಾವು ಶೌಚದ ಕೋಣೆ ಬಳಸಬಹುದು? ನಿನಗೆ ನಗು ಬರಬಹುದು. ಆದರೆ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಇವು ಸರಳ ಸಂಗತಿಗಳು ಎನ್ನಿಸಲಾರವು. ದಿನದ ಹೊತ್ತಲ್ಲಿ ನಾವು ಸಣ್ಣ ಸದ್ದು ಕೂಡಾ ಮಾಡುವಂತಿಲ್ಲ. ಅದು ಕೆಳಗಿನ ಕೋಣೆಗಳಿಗೆ ಕೇಳಿದರೆ, ಮತ್ತು ಒಂದಾನು ವೇಳೆ ಅಲ್ಲಿ ಇದ್ದಿಲು ಮಾಡುವ ಹೆಂಗಸಿನಂತೆ ಕೆಲಸ ಮಾಡುವ ಹೊರ ಅಪರಿಚಿತ ಜನರಿದ್ದರೆ,-ನಾವು ತುಂಬಾ ಕಾಳಜಿಯಿಂದ ಇರಬೇಕಾಗಿದೆ. ನಾನಿದನ್ನೆಲ್ಲಾ ಡಸೆಲ್ಗೆ ವಿವರಿಸಿದೆ. ಆದರೆ ಒಂದು ಸಂಗತಿ ನನಗೆ ಆಶ್ಚರ್ಯವೆನ್ನಿಸಿತು. ಆತ ಹೇಳಿದ್ದನ್ನು ಬಹುಬೇಗ ಅರ್ಥೈಸಿಕೊಳ್ಳಲಾರರು. ಪ್ರತಿಯೊಂದು ಸಂಗತಿಯನ್ನು ಎರಡೆರಡು ಬಾರಿ ಕೇಳುತ್ತಾರೆ. ಮತ್ತು ಅದನ್ನು ನೆನಪಿಟ್ಟುಕೊಳ್ಳಲು ಅವರಿಗೆ ಆಗದು. ಬಹುಶಃ ದಿನ ಕಳೆದಂತೆ ಇದು ಕಡಿಮೆ ಆಗಬಹುದು. ಏಕಾಏಕಿ ಉಂಟಾದ ಈ ಬದಲಾವಣೆಗಳಿಂದ ಅವರು ಕಂಗೆಟ್ಟಿರಲೂಬಹುದು.
ಹೀಗೆಲ್ಲ ಇದ್ದು, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಬಹಳ ಸಮಯದಿಂದ ದೂರವಿರುವ ಅದೆಷ್ಟೋ ಹೊರ ಜಗತ್ತಿನ ಸಂಗತಿಗಳ ಕುರಿತು ಡಸೆಲ್ ನಮಗೆ ತಿಳಿಸಿದರು. ಲೆಕ್ಕವಿಲ್ಲದಷ್ಟು ಸ್ನೇಹಿತರು, ಪರಿಚಯಸ್ಥರು ದುರಾದೃಷ್ಟಕ್ಕೆ ಬಲಿಯಾಗಿದ್ದಾರೆ. ಪ್ರತಿದಿನ ಸಂಜೆಯಾಗುತ್ತಲೇ ಹಸಿರು ಮತ್ತು ಬೂದುಬಣ್ಣದ ಸೇನಾ ವಾಹನದ ಚಕ್ರಗಳು ಸುತ್ತ ಉರುಳುತ್ತಲೇ ಇರುತ್ತವೆ. ಜರ್ಮನ್ನ್ರ ಪ್ರತಿಮನೆಯ ಮುಂದೆ ಆ ಮನೆಯೊಳಗೆ ಯಾರಾದರೂ ಯಹೂದಿಗಳು ಇರುವರೇ ಎಂದು ವಿಚಾರಿಸಲು ಸುತ್ತುವರೆಯುತ್ತಾರೆ. ಹಾಗೇನಾದರೂ ಸಿಕ್ಕರೆ ಇಡೀ ಕುಟುಂಬವನ್ನು ಒಂದೇ ಸಲಕ್ಕೆ ಎಳದೊಯ್ಯಲಾಗುತ್ತದೆ. ಒಂದೊಮ್ಮೆ ಸಿಗದಿದ್ದಾಗ ಮುಂದಿನ ಮನೆಯನ್ನು ಗುರಿಯಾಗಿಸಿಕೊಳ್ಳುತ್ತಾರೆ. ಅದಕ್ಕೆ ಗುಟ್ಟಾಗಿ ಬದುಕದಿದ್ದರೆ ಯಾರೂ ತಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಯಹೂದಿಗಳ ಪಟ್ಟಿ ಹಿಡಿದು ಈ ಜರ್ಮನ್ನ್ರು ಹೀಗೆ ಸುತ್ತು ಹಾಕುತ್ತಲೇ ಇರುತ್ತಾರೆ. ಎಲ್ಲಾದರೂ ಒಳ್ಳೆಯ ಬಲಿ ಇದೆಯೆಂದಾದರೆ ಇವರು ಅಲ್ಲಿ ಜಮಾಯಿಸುತ್ತಾರೆ. ಕೆಲವೊಮ್ಮೆ ಯಹೂದಿಗಳಿಂದ ತಲೆಗೊಂದಿಷ್ಟು ಹಣ ವಸೂಲಿ ಮಾಡಿ ಬಿಡಲಾಗುತ್ತದೆ. ಇದೊಂದು ರೀತಿ ಹಿಂದೆಲ್ಲಾ ಜೀತದಾಳುಗಳನ್ನು ಬೇಟೆಯಾಡುತ್ತಿದ್ದ ರೀತಿಯಂತೆ ಕಾಣುತ್ತಿದೆ. ಇದು ತಮಾಷೆಯಲ್ಲ! ಬದಲಿಗೆ ಬಹುದೊಡ್ಡ ದುರಂತ. ಅದೆಷ್ಟೋ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ, ಕತ್ತಲಾವರಿಸುತ್ತಿದ್ದಂತೆ, ಮುಗ್ಧ, ಅಮಾಯಕ ಯಹೂದಿ ಜನರುಗಳು ಅಳುವ ಮಕ್ಕಳ ಸಮೇತ ದಾರಿಯುದ್ದಕ್ಕೂ ಬಡಿಸಿಕೊಳ್ಳುತ್ತ, ತಿವಿಸಿಕೊಳ್ಳುತ್ತ, ಇನ್ನೇನು ಬಿದ್ದರೆ ಏಳಲು ಸಾಧ್ಯವಿಲ್ಲ ಎನ್ನುವವರೆಗೂ ನೋಯುತ್ತ ಸರತಿಸಾಲುಗಳಲ್ಲಿ ಸಾಗುವ ದೃಶ್ಯವನ್ನು ನಾನು ಕಂಡಿದ್ದೇನೆ. ಜರ್ಮನ್ನ್ರು ಯಾರೊಬ್ಬರನ್ನೂ ಬಿಟ್ಟಿಲ್ಲ- ಮುದುಕರು, ಕಂದಮ್ಮಗಳು, ಬಸುರಿ ಹೆಣ್ಣುಗಳು, ರೋಗಿಷ್ಠರು, ಎಲ್ಲರೂ ಸಾವಿನ ಮೆರವಣಿಗೆಯಲ್ಲಿ ಜೊತೆಯಾಗಿದ್ದಾರೆ.
ನಾವೆಷ್ಟು ಅದೃಷ್ಟವಂತರು! ಯಾವ ತೊಂದರೆ ಇಲ್ಲದೇ ಹಾಯಾಗಿದ್ದೇವೆ. ನಾವು ಈ ದುಸ್ಥಿತಿಗಳಿಗೆ ಚಿಂತಿಸಬೇಕಾಗಿಲ್ಲ. ನಮ್ಮಿಂದ ಯಾವ ಕಾರಣಕ್ಕೂ ಸಹಾಯ ಮಾಡಲು ಆಗದಿರುವ ನಮ್ಮ ಹತ್ತಿರದವರ ಬಗ್ಗೆ ಅವರ ಸಂಕಟಗಳ ಬಗ್ಗೆ ಕೂಡಾ ಚಿಂತಿಸದೇ ಇರಬೇಕು.
ನನ್ನ ಆತ್ಮೀಯ ಗೆಳೆಯ ಗೆಳತಿಯರು ಕೊರೆವ ಚಳಿಯಲ್ಲಿ ಹೊರಗೆ ಗಟಾರುಗಳಲ್ಲಿ ತಳ್ಳಲ್ಪಡುತ್ತಾ, ನೂಕಲ್ಪಡುತ್ತಾ, ಇರುವಾಗ ನಾನೊಬ್ಬಳೆ ಇಲ್ಲಿ ನನ್ನ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿದಾಗಲೆಲ್ಲಾ ತಪ್ಪಿತಸ್ಥ ಮನೋಭಾವ ನನ್ನ ಕಾಡುತ್ತದೆ. ಈಗೀಗ ಈ ಭೂಮಿಯಲ್ಲಿ ಗಸ್ತು ತಿರುಗುತ್ತಿರುವ ಕ್ರೂರ ಪಾಪಿಗಳ ಕೈಗಳಿಗೆ ಸಿಕ್ಕು ನರಳುತ್ತಿರುವ ನನ್ನ ಸ್ನೇಹಿತರ ನೆನಪಾಗುತ್ತಲೇ ನಾನು ವಿಹ್ವಲಿತಳಾಗುತ್ತೇನೆ. ಮತ್ತು ಇವೆಲ್ಲ ಯಾಕೆಂದರೆ ಅವರೆಲ್ಲ ಯಹೂದಿಗಳು!
ನಿನ್ನ,
ಆನ್
*****






