೧
ಬಳಿಯ ಮರದ ತಲದಿ ನೀಲ ಕಾಯ ಕೃಷ್ಣನು
ಕೊಳಲ ಕರದಿ ಪಿಡಿದು ನಿಂತು ಸುತ್ತ ನೋಳ್ಪನು
ಪಶ್ಚಿಮದ ದಿಗ೦ತದಲ್ಲಿ,
ರವಿಯು ಕಡಲ ನೀರಿನಲ್ಲಿ
ತನ್ನ ನೆಳಲನಿಣಿಕೆ ನೋಡಿ ಇಳಿಯುತಿದ್ದನು
೨
ರವಿಯು, ತನ್ನ ಶುದ್ಧ ವಾದ ಮಿಸುನಿ ಬಣ್ಣದ
ಕದಿರಿನಿಂದ ಹರಿಯ ಮೈಯೊಳಿರುವ ವಸನದ
ಪೊಳೆವ ಪೀತ ವರ್ಣವನ್ನು
ಹೆಚ್ಚು ಬೆಳಗಿಸುತಲಿ. ಇನ್ನು
ಸರಿಯುತಿದ್ದನಾಗ ತಾಳಿಯಧಿಕ ರಾಗವ
೩
ಕೊಳಲ ಕೃಷ್ಣನಿನಿಸು ಹೊತ್ತು ಹೊಳೆವ ಸೂರ್ಯನ
ಚೆಲುವ ನೋಡಿ, ಮುದವ ತಾಳಿ, ‘ತನ್ನ ಕೊಳಲಿನ
ದನಿಯ ಕೇಳಿ ದೂರದಲ್ಲಿ
ಗುಡ್ಡ-ಬೆಟ್ಟ ತಪ್ಪಲಲ್ಲಿ
ಮೇಯುತಿರುವ ದನಗಳೆಲ್ಲ ಬರಲಿ’ ಎನ್ನುತ,-
೪
ನೆನೆದು ತನ್ನ ಮುರಲಿಯನ್ನು ತುಟಿಯೊಳಿರಿಸುತ,
ಬಾಜಿಸಿದನು. ಒಡನೆ ಕರುವ ಕರೆದು ಕೂಡುತ.
ತುರುಗಳೆಲ್ಲ ಸರಿದು ಬ೦ದು,
ಹರಿಯ ಬಳಸಿ ನೆರೆದುವ೦ದು;
ಗಾನ ಸುಧೆಯ ಸವಿದು, ಶಾಂತಿಸುಖವನಾ೦ತವು
೫
ಪ್ರಕೃತಿ ದೇವಿ ಮೋನದಿಂದ ಕೊಳಲ ಸರವನು
ಆಲಿಸುತ್ತಲಿದ್ದಳಂದು ತಾಳಿಯೊಲವನು
ನಾವು ಕೂಡ ಕೃಷ್ಣನೊರೆದ
‘ಗೀತೆ’ ಯನ್ನು ಕೇಳಿ ಸೊಗದ
ನೆಲೆಯನರಿತು ನಿತ್ಯ ತೃಪ್ತರಾಗಿ ಬಾಳುವ!
*****
೧೯೩೫








