೧
ಸತ್ಯ ಪೂರ್ಣ ಜ್ಯೋತಿ ಬೀರುವ
ಬೆಳಕಿನಲಿ ಮು೦ದರಿಯುವ,
ನಿತ್ಯ-ನಿರ್ಮಲ ಯೋಗಿ, ಸತ್ಯಾಗ್ರಹಿ
‘ಮಹಾತ್ಮ’ಗೆ ವಂದನಂ
೨
ತಾನು ನಡೆಯುವ ನಡತೆಯಿಂದಲೆ
ಸರಳ ಜೀವನ ಸಾರವ
ಮಾನವರಿಗೊರೆಯಿಸುವ ‘ಮೋಹನ-
ದಾಸ’ಗಿಂದೀ ವಂದನಂ
೩
ತ್ಯಾಗಪೂರ್ವಕವಾದ ಯೋಗದಿ
ವಿಶ್ವ ಶಾಂತಿಯನೊದವಿಸಿ,
ಚಾಗದಲಿ ಭೋಗವನು ಕಂಡಿಹ
‘ಕರಮಚ೦ದ’ಗೆ ವಂದನಂ
೪
ಶಾಶ್ವತ ಪ್ರೇಮಮಯ ಪಥದಲಿ
ಧರ್ಮವನು ಮುನ್ನಡೆಯಿಸಿ,
ವಿಶ್ವ ಸಮತೆಯ ಸಾರಿ ತೋರುವ
‘ಗಾಂಧಿ’ಗಾಗೀ ವಂದನಂ
೫
ಶ್ರೀ ಮಹಾತ್ಮಾ ಗಾಂಧಿಯೀ ನವ
ಯುಗ ವಿಭೂತಿ ವಿರಾಗಿಯು!
ನೇಮ-ನಿಷ್ಟೆಯ, ಶಾಂತಿ-ದಾಂತಿಯ
ಸತ್ಯ-ಸತ್ವದ ಯೋಗಿಯು!!
೬
ಇವನ ಬೋಧಾಮೃತವನೀಂಟುತ
ತಣಿದ ಮಾನವ ಮಂಡಲಿ
ಭುವನ ಮಾನಿತವಾದ ಸತ್ಯ-
ಪ್ರೇಮ ಕಾಂಕ್ಷಿಪುದೊಲವಿಲಿ.
೭
ತನ್ನ ಮೋಹನ-ಅಮೃತಮಯ ವಾ-
ಣಿಯಲಿ ಜನರನು ಬೋಧಿಸಿ,
ಸನ್ನು ತವದಾಗಿದೆ. ರಾಷ್ಟ್ರದ
ಸೇವೆ ಮಾಡಿಪನೊಲಿಯಿಸಿ!
೮
ಲೋಕ ಕಲ್ಯಾಣವ ಮಹತ್ವೇ-
ಚ್ಛೆಯಲಿ ಸತ್ಯಾಗ್ರಹವನು
ಸಕಲ ಮಾನವ ಮನದಿ ಬಿಂಬಿಸಿ,
ಉದ್ಧರಿಸಲುಜ್ಜುಗಿಪನು.
೯
ಕರ್ಮಯೋಗಿಯ ಕಾರ್ಯದಲ್ಲಿ ಸಹ-
ಕರಿಸಿ ಸೇನೆಯನೆಸಗುವ!
ಧರ್ಮ ಮಾರ್ಗ ಧ್ವಜವ ಪ್ರೇಮಾ-
ಕಾಶದಲಿ ಮೇಲೆತ್ತುವ!!
*****
೧೯೩೪
ಮಹಾತ್ಮಾ ಗಾಂಧಿಯವನರು ಮಂಗಳೂರಿಗೆ ಬಂದಿದ್ದಾಗ ಬರೆದುದು.

















