Home / ಕವನ / ಕವಿತೆ / ಹಸು-ಕರು

ಹಸು-ಕರು

ಹಸುವಿನ ಹೆಸರು ಯಶೋದಾ
ಅದರ ಬಣ್ಣ ಊದಾ
ಅದೊಂದು ಕರುವನು ಈದ
ಸಂಗತಿಯೇನು ಪ್ರಮಾದ?
ಅದರಿಂದೆನಗೀ ಕವಿತೆಯ ಬಾಧ
ಪ್ರಾಸವ ಬರೆವ ವಿನೋದ.

ನಾನದಕಿತ್ತುದು ನೂರು ರುಪಾಯಿ
ಮಧ್ಯಸ್ಥಿಕೆಗಿರೆ ರಂಗಾಬೋಯಿ
ನೆರೆಮನೆಯೊಳಗಿದಕಾಯಿತು ಸಾಲ
ಬಿತ್ತರಿಸಿತೆಮ್ಮ ಮಮತೆಯ ಜಾಲ
ಇಂತು ಯಶೋದೆಯ ಬಾಳಿನ ಮೇಲೆ
ಪ್ರಕೃತಿಯ ಮತ್ತೂಂದಾವರಣದವೊಲೆ.
ಇದಕ್ಕೂ ಚೆಂದದ ಹಸುವಿನ್ನುಂಟೆ
ಇದರ ಸುಗುಣಗಳು ನಾಲ್ಕೆ ಎಂಟೆ
ಗಿಡ್ಡವಾಗಿಹುದು ಕರೆಯುವ ಜಾತಿ
ಸೌಮ್ಯವಾದ ಬಲು ಅಂದದ ಮೂತಿ
ನಮ್ಮ ಪಾಲಿಗಿದುವೇ ಸುರಧೇನು
ಎರಡೇ ದಿನ ಈನುವುದಿನ್ನೇನು
ಇಂತೀ ಪರಿಯೊಳು ನಡೆದಿರೆ ಮಾತು
ಪ್ರಸೂತಿವೇದನೆ ಯಶೋದೆಗಾಯ್ತು
ನಿಲ್ಲದೆ ಮಲಗದೆ ಬೇನೆಯ ತಿನುತ
ನೀರವವಾಗಿಯೆ ಬಾಧೆಯ ಪಡುತ-
ನಾನೊಪ್ಪುವೆ ಈ ನೀರವ ಭಾವ
ನನ್ನಚ್ಚರಿಸಿತು ಒಂದರೆ ಜಾವ
ಬೆದೆಗಾಲದ ಹಮ್ಮೈಸಿಕೆಯೊಳಗೆ
ಪೆರ್ಭಯದಂಬಾ ಸಂರುತಿಯೊಳಗೆ
ತನ್ನ ಹೊರಗಿರುವ ಜೀವದ ನೆರವ
ಆತ್ಮಸ್ವಾಸ್ಥ್ಯಕೆ ಯಾಚಿಸುತ್ತಿರುವ
ಪರಿಯಿಲ್ಲೀ ದಿನ ನಮ್ಮೀ ಪಶುವಿಗೆ
ತನ್ನ ಪ್ರಕೃತಿಯೆ ತನಗಾಗಿರೆ ಹಗೆ
ತಿತಿಕ್ಷೆಯೇ ಗತಿ ಬೇರಿನ್ನಿಲ್ಲ
ಎಂದರಿಯಿತೊ ಇದು ಯಾವನು ಬಲ್ಲ-
ಅಂತೂ ನೋವನು ಮೌನದಿ ಸಹಿಸಿ
ಈ ಮೌನದೊಳೆನ್ನಚ್ಚರಿಗೊಳಿಸಿ
ಯಶೋದೆ ಈದಿತು ಹೋರಿಕರುವನು
ತಾಯ ಗರ್ಭದಿಂ ಹೊರಟ ಶಿಶುವನು
ಸ್ವಾಗತಿಸಿರೆ ನಾವಮೃತದಾಸೆಯಿಂ
ಹಸು ಸುತನಂ ನೆಕ್ಕಿತು ಅಕ್ಕರೆಯಿಂ.

ಎಳೆಯರು ಕರೆದರು ಗೋಪೀನಾಥ
ಹೊಸಬನಿವನು ಆದೊಡೆ ನಿರ್ಭೀತ
ರೋದನವಿಲ್ಲದೆ ಜಗಕ್ಕೆ ಬಂದ
ಎರಡೇ ಚಣದೊಳು ಸ್ವತಂತ್ರ ನಿಂದ
ಕೆಚ್ಚಲಿನೊಳು ತನ್ನ ನ್ನವ ಕಂಡ
ಅಧಿಪತಿಯಂದದಿ ತಾನದನುಂಡ.
ಈತನ ಮೈಯೇನಚ್ಚರಿಮಾಟ
ಈತನ ಬಗೆ ಏ ಮಾಯೆಯ ಹೂಟ
ಅಗೊ ಅಗೊ ನನ್ನೆಡೆ ಕೊಂಕಿನ ನೋಟವ-
ನಿಡುತಿಹನಬ್ಬ ನೋಡಿವನಾಟವ
ಗರ್ಭದಿ ನಿನ್ನಾಲಿಯ ಸಮೆವಂದು
ನೋಟವದಾವುದ ಬಯಸಿದೆ ಬಂಧು
ಆ ಕತ್ತಲೆಯೊಳು ಏ ಬೆಳಕನ್ನ
ಹಾರೈಸಿದ್ದೆಯೊ ನೀ ಬಹ ಮುನ್ನ
ಈ ಜಗವಚ್ಚರಿಯಲ್ಲವೆ ನಿನಗೆ
ಇಲ್ಲಿ ಕಾಂಬೆಯಾ ನೀ ಬಗೆದ ಬಗೆ?
ನೀನೀ ತೆರದೊಳು ನೋಡುವ ರೀತಿ
ಕಿವಿಯನು ನಿಮಿರಿಸುತಾಲಿಪ ರೀತಿ
ಕರಣದ ತುದಿ ವಿಷಯದ ತುದಿ ಸೇರಿ
ಏನೋ ಶಕ್ತಿಗೆ ಸಮಯುತ ದಾರಿ
ಏನೋ ಬೆಳಕಿನ ಹರಿವನು ತೋರಿ
ಮನದೊಳು ನವತೇಜದ ಕಳೆಬೀರಿ
ಹೊಸತೊಂದಿರವಿನ ಪರಿಯಂ ಸಾರಿ
ಹೊಸ ತೆರದೊಳು ಭವಜಲಧಿಯ ವಾರಿ
ತೆರೆಯಿಡುತಿಹ ರೀತಿಯ ತೋರುತಿದೆ
ನಿನ್ನೀ ಲೀಲೆಗೆ ನಿರ್ವ್ಯಾಜಂ ಎದೆ
ಒಲಿದಿಹುದೈ ಮುದವಾನುತಲೀಗ
ಎಲ್ಲರಿಗೂ ಮುದ್ದಾದೆಯೊ ಬೇಗ.
ಅತ್ತಣಿನಿತ್ತಡೆ ಬಂದಿರುವಣ್ಣ
ನಿನ್ನಿರವನು ಇಹ ಕವಿಯುವ ಮುನ್ನ
ಪೇಳೈ ಆವನು ನಮ್ಮಿಬ್ಬರನೂ
ನಮ್ಮ ನಂಟಿನ ಇವರೆಲ್ಲರನ್ನೂ
ಈ ತರ ತಡಿಕೆಯ ಪಂದ್ಯದೊಳೋಡಿಸಿ
ಓಡಿಸಿ ಆಡಿಸಿ ಕಾಡಿಸಿ ಬಾಡಿಸಿ
ಪಣವೇನಂ ಗೆಲೆ ಬಯಸಿಹನಯ್ಯ?
ಇದರೊಳು, ದಿಟ, ನಿನಗೌದಾಸೀನ್ಯ
ಈ ಓಟವು ನಿನಗಿನ್ನೂ ಲೀಲೆ
ನನ್ನ ದಣಿವಿನನುಭೂತಿಯ ಕೇಳೆ.
ಚಿಣ್ಣಾ, ತೋಳ್ತೆಕ್ಕೆಗೆ ಬಾರಣ್ಣಾ
ನಿನ್ನಾಲಿಂಗನವೆನಿತಿನಿದಣ್ಣಾ
ಹೊಸಮೈಕೂದಲ ನಸುಬಿಸಿಯಿಂಪು
ಹೊಸ ಬಾಳಿನ ಸಂಸರ್ಗದ ಸೊಂಪು
ಗಂಗಾಸ್ನಾನದ ಶುಚಿಯಾಯ್ತಣ್ಣ
ದೇವರ ಮುಟ್ಟಿದ ಪೆರಿಯಾಯ್ತಣ್ಣ-
ಬೆಚ್ಚು ವೆ ಏಕೀ ಸ್ಪರ್ಶಕೆ ಕರುವೇ
ಈ ಮುದ್ದಿಗೆ ಈ ಒದೆತವು ತರವೇ?
ಚಿಮ್ಮುವೆ ಹಮ್ಮೈಸುವ ತಾಯೆಡೆಗೆ
ಗರ್ಭದ ತಡೆಯಿರಿ ಮಮತೆಯ ತಡೆಗೆ
ಅಂಬಾ ಎನ್ನುವೆ ನೀ ಮರುನುಡಿಗೆ
ಆಹ್ಹಾ ನೀ ನಡೆದಾಡುವ ಬೆಡಗೇ!

ಇಂತೀಪರಿಯೊಳು ಕರುವನು ಮುದ್ದಿಸಿ
ಈ ಅರ್ತಿಯೊಳೆನ್ನೊಳಗಂ ಶುದ್ದಿಸಿ
ಹಮ್ಮೈಸುವ ತಾಯ್ನುಡಿಯಂ ಕೇಳಿ
ಅಂಬಾ ಎನ್ನುವ ಕರುವಂ ಕೇಳಿ
ಇಂತೆರಡಿರವಿನ ಬಗೆತುದಿಯಿಂದ
ವಿದ್ಯುತ್ಕಣ ಸಿಡಿದಾಡುವ ಚೆಂದ
ವಾತ್ಸಲ್ಯಂ ಪರಿದಾಡುವ ಬಗೆಗೆ
ಸೋಜಿಗಗೊಳ್ಳುತೆ ಯಶೋದೆಯೆಡೆಗೆ
ನಮ್ಮಿ ಗೋಪೀನಾಥನ ಬಿಟ್ಟು
ಅಂದಿನಚ್ಚರಿಗೆ ಈ ನುಡಿಗಟ್ಟು
ನನ್ನೊಳು ವೇದನೆಗೊಳ್ಳಲು ಇಂತು
ಬರೆದೆನು-ಈ ಕತೆ ಮುಗಿಯಿತು ಅಂತು.

ಇದನೋದಲು ನಾ ಮುತ್ತಣ್ಣನಿಗೆ,
“ಗದ್ಯವೊ ಪದ್ಯವೊ ಏನಿದರ ಬಗೆ
ನಿನ್ನದು, ಬಿಡು, ಬಲು ಅಂತರ್‌ದೃಷ್ಟಿ
ಸೃಷ್ಟಿಯೊಳಗೆ ನೀ ವಿಚಿತ್ರಸೃಷ್ಟಿ
ಹಸು ಕರುವೀದರೆ ಅಚ್ಚರಿಯೇಕೆ?
ಹೊಸತನುಭವ ನಿನಗಾದೊಡೆ ಜೋಕೆ
ಹೆಜ್ಜೆ ಹೆಜ್ಜೆಗೂ ಬೆರಗೆನಬೇಡ
ನಿನಗೇ ಬೆರಗೆಂಬರು ಜನ ನೋಡ”
ಎನುತೀ ಪರಿ ದಟ್ಟಿಸಿ ನಗೆಯಾಡಿ
ತುಸ ಚಿಂತಿಸಿ ಬಳಿಕೆನ್ನನು ನೋಡಿ
“ದಿಟ, ಸೋಜಿಗವೀ ಪಂದ್ಯದ ಓಟ
ನಮಗಿಂತಾಯಿತು ದೇವರ ಕಾಟ.
ಈ ಬಾಳ ಮುಂದೆ ಮತ್ತಾವ ತಡಿಕೆಯೋ
ಏ ಜನ್ಮವೊ ಮೇಣೇನು ದುಡಿಕೆಯೋ
ನಮಗೀ ಬಾಳಿನೊಳೇನು ರುಚಿಸದೋ
ಆ ಬಾಳೇ ಮುಂದಕ ನಮಗಹುದೊ?
ಎಲ್ಲಾ ಜನ್ಮದ ರುಚಿಗಳನುಂಡು
ಸಿಹಿ ಕಹಿ ಎನ್ನದ ಹದವನು ಕಂಡು
ಥೂ ಛೀ ಸೈ ಎಂಬುದ ಬಿಡುವರೆಗೂ
ತಡಿಕೆಯ ಓಟವೆ ನನಗೂ ನಿನಗೂ.
ನಿ‌ರ್‌ವೈರಾಗ್ಯಗೆ ಮುಕ್ತಿಯೆ? ಭ್ರಾಂತಿ.
ಸಮತೆಗೆ ಸಲ್ಲದಗೆಲ್ಲಿಯ ಶಾಂತಿ?”
ಎನ್ನುತ ತತ್ತ್ವವನೊರೆದನು ನನಗೆ
ಇಲ್ಲಿಗೆ ಮುಗಿಯಿತು ಈ ಬರೆವಣಿಗೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...