Home / ಕವನ / ಕವಿತೆ / ಹಸು-ಕರು

ಹಸು-ಕರು

ಹಸುವಿನ ಹೆಸರು ಯಶೋದಾ
ಅದರ ಬಣ್ಣ ಊದಾ
ಅದೊಂದು ಕರುವನು ಈದ
ಸಂಗತಿಯೇನು ಪ್ರಮಾದ?
ಅದರಿಂದೆನಗೀ ಕವಿತೆಯ ಬಾಧ
ಪ್ರಾಸವ ಬರೆವ ವಿನೋದ.

ನಾನದಕಿತ್ತುದು ನೂರು ರುಪಾಯಿ
ಮಧ್ಯಸ್ಥಿಕೆಗಿರೆ ರಂಗಾಬೋಯಿ
ನೆರೆಮನೆಯೊಳಗಿದಕಾಯಿತು ಸಾಲ
ಬಿತ್ತರಿಸಿತೆಮ್ಮ ಮಮತೆಯ ಜಾಲ
ಇಂತು ಯಶೋದೆಯ ಬಾಳಿನ ಮೇಲೆ
ಪ್ರಕೃತಿಯ ಮತ್ತೂಂದಾವರಣದವೊಲೆ.
ಇದಕ್ಕೂ ಚೆಂದದ ಹಸುವಿನ್ನುಂಟೆ
ಇದರ ಸುಗುಣಗಳು ನಾಲ್ಕೆ ಎಂಟೆ
ಗಿಡ್ಡವಾಗಿಹುದು ಕರೆಯುವ ಜಾತಿ
ಸೌಮ್ಯವಾದ ಬಲು ಅಂದದ ಮೂತಿ
ನಮ್ಮ ಪಾಲಿಗಿದುವೇ ಸುರಧೇನು
ಎರಡೇ ದಿನ ಈನುವುದಿನ್ನೇನು
ಇಂತೀ ಪರಿಯೊಳು ನಡೆದಿರೆ ಮಾತು
ಪ್ರಸೂತಿವೇದನೆ ಯಶೋದೆಗಾಯ್ತು
ನಿಲ್ಲದೆ ಮಲಗದೆ ಬೇನೆಯ ತಿನುತ
ನೀರವವಾಗಿಯೆ ಬಾಧೆಯ ಪಡುತ-
ನಾನೊಪ್ಪುವೆ ಈ ನೀರವ ಭಾವ
ನನ್ನಚ್ಚರಿಸಿತು ಒಂದರೆ ಜಾವ
ಬೆದೆಗಾಲದ ಹಮ್ಮೈಸಿಕೆಯೊಳಗೆ
ಪೆರ್ಭಯದಂಬಾ ಸಂರುತಿಯೊಳಗೆ
ತನ್ನ ಹೊರಗಿರುವ ಜೀವದ ನೆರವ
ಆತ್ಮಸ್ವಾಸ್ಥ್ಯಕೆ ಯಾಚಿಸುತ್ತಿರುವ
ಪರಿಯಿಲ್ಲೀ ದಿನ ನಮ್ಮೀ ಪಶುವಿಗೆ
ತನ್ನ ಪ್ರಕೃತಿಯೆ ತನಗಾಗಿರೆ ಹಗೆ
ತಿತಿಕ್ಷೆಯೇ ಗತಿ ಬೇರಿನ್ನಿಲ್ಲ
ಎಂದರಿಯಿತೊ ಇದು ಯಾವನು ಬಲ್ಲ-
ಅಂತೂ ನೋವನು ಮೌನದಿ ಸಹಿಸಿ
ಈ ಮೌನದೊಳೆನ್ನಚ್ಚರಿಗೊಳಿಸಿ
ಯಶೋದೆ ಈದಿತು ಹೋರಿಕರುವನು
ತಾಯ ಗರ್ಭದಿಂ ಹೊರಟ ಶಿಶುವನು
ಸ್ವಾಗತಿಸಿರೆ ನಾವಮೃತದಾಸೆಯಿಂ
ಹಸು ಸುತನಂ ನೆಕ್ಕಿತು ಅಕ್ಕರೆಯಿಂ.

ಎಳೆಯರು ಕರೆದರು ಗೋಪೀನಾಥ
ಹೊಸಬನಿವನು ಆದೊಡೆ ನಿರ್ಭೀತ
ರೋದನವಿಲ್ಲದೆ ಜಗಕ್ಕೆ ಬಂದ
ಎರಡೇ ಚಣದೊಳು ಸ್ವತಂತ್ರ ನಿಂದ
ಕೆಚ್ಚಲಿನೊಳು ತನ್ನ ನ್ನವ ಕಂಡ
ಅಧಿಪತಿಯಂದದಿ ತಾನದನುಂಡ.
ಈತನ ಮೈಯೇನಚ್ಚರಿಮಾಟ
ಈತನ ಬಗೆ ಏ ಮಾಯೆಯ ಹೂಟ
ಅಗೊ ಅಗೊ ನನ್ನೆಡೆ ಕೊಂಕಿನ ನೋಟವ-
ನಿಡುತಿಹನಬ್ಬ ನೋಡಿವನಾಟವ
ಗರ್ಭದಿ ನಿನ್ನಾಲಿಯ ಸಮೆವಂದು
ನೋಟವದಾವುದ ಬಯಸಿದೆ ಬಂಧು
ಆ ಕತ್ತಲೆಯೊಳು ಏ ಬೆಳಕನ್ನ
ಹಾರೈಸಿದ್ದೆಯೊ ನೀ ಬಹ ಮುನ್ನ
ಈ ಜಗವಚ್ಚರಿಯಲ್ಲವೆ ನಿನಗೆ
ಇಲ್ಲಿ ಕಾಂಬೆಯಾ ನೀ ಬಗೆದ ಬಗೆ?
ನೀನೀ ತೆರದೊಳು ನೋಡುವ ರೀತಿ
ಕಿವಿಯನು ನಿಮಿರಿಸುತಾಲಿಪ ರೀತಿ
ಕರಣದ ತುದಿ ವಿಷಯದ ತುದಿ ಸೇರಿ
ಏನೋ ಶಕ್ತಿಗೆ ಸಮಯುತ ದಾರಿ
ಏನೋ ಬೆಳಕಿನ ಹರಿವನು ತೋರಿ
ಮನದೊಳು ನವತೇಜದ ಕಳೆಬೀರಿ
ಹೊಸತೊಂದಿರವಿನ ಪರಿಯಂ ಸಾರಿ
ಹೊಸ ತೆರದೊಳು ಭವಜಲಧಿಯ ವಾರಿ
ತೆರೆಯಿಡುತಿಹ ರೀತಿಯ ತೋರುತಿದೆ
ನಿನ್ನೀ ಲೀಲೆಗೆ ನಿರ್ವ್ಯಾಜಂ ಎದೆ
ಒಲಿದಿಹುದೈ ಮುದವಾನುತಲೀಗ
ಎಲ್ಲರಿಗೂ ಮುದ್ದಾದೆಯೊ ಬೇಗ.
ಅತ್ತಣಿನಿತ್ತಡೆ ಬಂದಿರುವಣ್ಣ
ನಿನ್ನಿರವನು ಇಹ ಕವಿಯುವ ಮುನ್ನ
ಪೇಳೈ ಆವನು ನಮ್ಮಿಬ್ಬರನೂ
ನಮ್ಮ ನಂಟಿನ ಇವರೆಲ್ಲರನ್ನೂ
ಈ ತರ ತಡಿಕೆಯ ಪಂದ್ಯದೊಳೋಡಿಸಿ
ಓಡಿಸಿ ಆಡಿಸಿ ಕಾಡಿಸಿ ಬಾಡಿಸಿ
ಪಣವೇನಂ ಗೆಲೆ ಬಯಸಿಹನಯ್ಯ?
ಇದರೊಳು, ದಿಟ, ನಿನಗೌದಾಸೀನ್ಯ
ಈ ಓಟವು ನಿನಗಿನ್ನೂ ಲೀಲೆ
ನನ್ನ ದಣಿವಿನನುಭೂತಿಯ ಕೇಳೆ.
ಚಿಣ್ಣಾ, ತೋಳ್ತೆಕ್ಕೆಗೆ ಬಾರಣ್ಣಾ
ನಿನ್ನಾಲಿಂಗನವೆನಿತಿನಿದಣ್ಣಾ
ಹೊಸಮೈಕೂದಲ ನಸುಬಿಸಿಯಿಂಪು
ಹೊಸ ಬಾಳಿನ ಸಂಸರ್ಗದ ಸೊಂಪು
ಗಂಗಾಸ್ನಾನದ ಶುಚಿಯಾಯ್ತಣ್ಣ
ದೇವರ ಮುಟ್ಟಿದ ಪೆರಿಯಾಯ್ತಣ್ಣ-
ಬೆಚ್ಚು ವೆ ಏಕೀ ಸ್ಪರ್ಶಕೆ ಕರುವೇ
ಈ ಮುದ್ದಿಗೆ ಈ ಒದೆತವು ತರವೇ?
ಚಿಮ್ಮುವೆ ಹಮ್ಮೈಸುವ ತಾಯೆಡೆಗೆ
ಗರ್ಭದ ತಡೆಯಿರಿ ಮಮತೆಯ ತಡೆಗೆ
ಅಂಬಾ ಎನ್ನುವೆ ನೀ ಮರುನುಡಿಗೆ
ಆಹ್ಹಾ ನೀ ನಡೆದಾಡುವ ಬೆಡಗೇ!

ಇಂತೀಪರಿಯೊಳು ಕರುವನು ಮುದ್ದಿಸಿ
ಈ ಅರ್ತಿಯೊಳೆನ್ನೊಳಗಂ ಶುದ್ದಿಸಿ
ಹಮ್ಮೈಸುವ ತಾಯ್ನುಡಿಯಂ ಕೇಳಿ
ಅಂಬಾ ಎನ್ನುವ ಕರುವಂ ಕೇಳಿ
ಇಂತೆರಡಿರವಿನ ಬಗೆತುದಿಯಿಂದ
ವಿದ್ಯುತ್ಕಣ ಸಿಡಿದಾಡುವ ಚೆಂದ
ವಾತ್ಸಲ್ಯಂ ಪರಿದಾಡುವ ಬಗೆಗೆ
ಸೋಜಿಗಗೊಳ್ಳುತೆ ಯಶೋದೆಯೆಡೆಗೆ
ನಮ್ಮಿ ಗೋಪೀನಾಥನ ಬಿಟ್ಟು
ಅಂದಿನಚ್ಚರಿಗೆ ಈ ನುಡಿಗಟ್ಟು
ನನ್ನೊಳು ವೇದನೆಗೊಳ್ಳಲು ಇಂತು
ಬರೆದೆನು-ಈ ಕತೆ ಮುಗಿಯಿತು ಅಂತು.

ಇದನೋದಲು ನಾ ಮುತ್ತಣ್ಣನಿಗೆ,
“ಗದ್ಯವೊ ಪದ್ಯವೊ ಏನಿದರ ಬಗೆ
ನಿನ್ನದು, ಬಿಡು, ಬಲು ಅಂತರ್‌ದೃಷ್ಟಿ
ಸೃಷ್ಟಿಯೊಳಗೆ ನೀ ವಿಚಿತ್ರಸೃಷ್ಟಿ
ಹಸು ಕರುವೀದರೆ ಅಚ್ಚರಿಯೇಕೆ?
ಹೊಸತನುಭವ ನಿನಗಾದೊಡೆ ಜೋಕೆ
ಹೆಜ್ಜೆ ಹೆಜ್ಜೆಗೂ ಬೆರಗೆನಬೇಡ
ನಿನಗೇ ಬೆರಗೆಂಬರು ಜನ ನೋಡ”
ಎನುತೀ ಪರಿ ದಟ್ಟಿಸಿ ನಗೆಯಾಡಿ
ತುಸ ಚಿಂತಿಸಿ ಬಳಿಕೆನ್ನನು ನೋಡಿ
“ದಿಟ, ಸೋಜಿಗವೀ ಪಂದ್ಯದ ಓಟ
ನಮಗಿಂತಾಯಿತು ದೇವರ ಕಾಟ.
ಈ ಬಾಳ ಮುಂದೆ ಮತ್ತಾವ ತಡಿಕೆಯೋ
ಏ ಜನ್ಮವೊ ಮೇಣೇನು ದುಡಿಕೆಯೋ
ನಮಗೀ ಬಾಳಿನೊಳೇನು ರುಚಿಸದೋ
ಆ ಬಾಳೇ ಮುಂದಕ ನಮಗಹುದೊ?
ಎಲ್ಲಾ ಜನ್ಮದ ರುಚಿಗಳನುಂಡು
ಸಿಹಿ ಕಹಿ ಎನ್ನದ ಹದವನು ಕಂಡು
ಥೂ ಛೀ ಸೈ ಎಂಬುದ ಬಿಡುವರೆಗೂ
ತಡಿಕೆಯ ಓಟವೆ ನನಗೂ ನಿನಗೂ.
ನಿ‌ರ್‌ವೈರಾಗ್ಯಗೆ ಮುಕ್ತಿಯೆ? ಭ್ರಾಂತಿ.
ಸಮತೆಗೆ ಸಲ್ಲದಗೆಲ್ಲಿಯ ಶಾಂತಿ?”
ಎನ್ನುತ ತತ್ತ್ವವನೊರೆದನು ನನಗೆ
ಇಲ್ಲಿಗೆ ಮುಗಿಯಿತು ಈ ಬರೆವಣಿಗೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...