Home / ಕವನ / ಕವಿತೆ / ಮಿಲೆ ಸುರ್ ಮೇರಾ ತುಮ್ಹಾರಾ

ಮಿಲೆ ಸುರ್ ಮೇರಾ ತುಮ್ಹಾರಾ

ಗಾನ ಗಂಧರ್‍ವ ಸೃಷ್ಟಿಸಿದ
ಸಂಗೀತ ಲೋಕದಲ್ಲಿ ಎದ್ದೆದ್ದು
ಬಡಿದ ಘನ ಗಂಭೀರ
ಸಮುದ್ರದಲೆಗಳು ಸ್ಥಬ್ಧವಾಗಿವೆ.

ಮಿಲೆ ಸುರ್ ಮೇರ್ ತುಮ್ಹಾರಾ
ತೊ ಸುರ್ ಬನೇ ಹಮಾರಾ
ಭಾರತವನ್ನೊಂದುಗೂಡಿಸಿದ ತತ್ವ
ಎಂತಹ ಮೋಡಿ ಆ ಗಾರುಡಿಗನದು?

ರೋಣದ ನೆಲದಲ್ಲಿ ಹುಟ್ಟಿದ
ಭಾರತ ರತ್ನದ ಧ್ವನಿಗೆ
ಬೇರೆ ಸರಿಸಾಟಿ ಬೇಕೆ?
ತನ್ನ ಧ್ವನಿಗೆ ತಾನೇ ಒಡೆಯ.

ನಾದ ದೇವತೆಯನು ನಂಬಿ
ಭಾಗ್ಯದ ಲಕ್ಷ್ಮೀಯನ್ನು ಕರೆದು
ಲೀನವಾದ ನಾದ ಬ್ರಹ್ಮ
ದೇಶದಲಿ ಆತ್ಮಸಾಕ್ಷಿ ಬಿಂಬಿಸಿದ
ತಕರಾರಿಲ್ಲದ ಸೌಜನ್ಯವಂತ ಸಂತ.

ಸುಡುಬಿಸಿಲಲಿ ಬರಿಗಾಲಿನ
ನಡಿಗೆ, ಗುರುಮನೆಗೆ ನೀರುಹೊತ್ತು
ಸಂಗೀತ ಕಲಿತ ಆ ಭೀಮ
ಶರೀರ ವೃದ್ಧವಾದರೇನಂತೆ
ಗಾಯಕನಿಗೆ ವೃದ್ಧಾಪ್ಯವಿಲ್ಲ.

ಬಡಕಲು ಶರೀರದ ಭೀಮ
ನಾದಬ್ರಹ್ಮನ ಕಿರುಣಾ ಘರಾಣಾ
ಭಾವಕ್ಕೆ ದನಿ ತುಂಬಿದ ಅಮರ ಕಾವ್ಯ
ಪರವಶಗೊಳಿಸಿದ ಬಂದಿಶ್ ಮಾಂತ್ರಿಕ.

ನಾದದಲಿ ಭೀಷ್ಮ ಪಿತಾಮಹ
ಸಂಗೀತ ಲೋಕದ ತಾನಸೇನ
ಭೈರವಿ ಹಾಡಿ ಬದುಕಿಗೆ ವಿದಾಯ
ಹೃದಯದಲಿ ನೆಲೆ ನಿಂತವನು
ಗಡಿಗಳ ಸಿಮೋಲ್ಲಂಘನ.

ಮರೆಯದ ಮಾಣಿಕ್ಯದ ಕಣ್ಮರೆ
ನಾದ ಲೋಕವೊಂದರ ಯುಗಾಂತ್ಯ
ಮಾಧುಟ್ಯ ಸೂರ್‍ಯನ ಅಂತ್ಯ
ಸಾಧನೆಗೆ ಸೀಮೆಗಳ ನಿರ್‍ಬಂಧವಿಲ್ಲ
ಗಾಯನಶಾಶ್ವತ, ದೇಹ ನಶ್ಚರ.

ಮೌನವಾಗಿ ಲೀನವಾಗಿದೆ
ಹಿಮಾಲಯದ ಮೇರು ಶಿಖರ.
ಸೂರ್‍ಯ ಅಸ್ತಂಗತನಾದ ಸುದ್ದಿ ಕೇಳಿ
ಅಲ್ಲಾಡದೇ ನಿಂತಿವೆ ನೋಡು
ಗಿರಿ, ಶಿಖರ, ಗಾಳಿ, ನದಿ, ಲೋಕ
ಸಾವು ನಿಶ್ಚಿತ, ಧ್ವನಿ ಅಮರ.
*****
(ಭೀಮ್‌ ಸೇನ್ ಜೋಶಿಯವರು ನಿಧನರಾದ ಸಂದರ್‍ಭ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...