Home / ಕವನ / ಕವಿತೆ / ಗುಡಿಯಾ

ಗುಡಿಯಾ

ಗುಡಿಯಾ ಆಟದ ಗೊಂಬೆಯಲ್ಲ
ರಕ್ತ ಮಾಂಸ ತುಂಬಿದ ಜೀವಂತ ಗೊಂಬೆ
ದುಃಖಕ್ಕೊಂದೇ ಹಕ್ಕು ಪಡೆದವಳು ಗುಡಿಯಾ
ನೋವಿನ ಕಡಲು ಒಡಲಲಿಟ್ಟುಕೊಂಡು
ನಾಪತ್ತೆಯಾದ ಪತಿ ಮರಳಿ ಬರುವ
ಹಾದಿ ಕಾಯ್ದಳು ದೀರ್‍ಘ ಕಾಲದ ತನಕ
ಕನಸು ಹುಸಿಹೋಯ್ತು ರೆಪ್ಪೆ ಭಾರವಾಯ್ತು.
ಹನಿಹನಿ ಉದುರಿಸಿ ಕಣ್ಣ ಕಿಂಡಿ ಬರಿದಾಯ್ತು
ಕೊನೆಗೆ ವಿದಾ ಹೇಳಿ ಮನದ ಕದವಿಟ್ಟುಕೊಂಡಳು.
ಮೌನ ಕಡಲಿಗೆ ಮರುಮಾತಿಲ್ಲದೆ ಶರಣಾದಳು
ಈಜಿದಳು ಭಯಂಕರ ಅಲೆಗಳಿಗೆ ಎದುರಾಗಿ
ನಕ್ಕಿದ್ದೇಷ್ಟೋ! ಬಿಕ್ಕಿದ್ದೆಷ್ಟೋ! ವಿರಹ
ಹಾಡಿದ್ದೇಷ್ಟೋ ಹಲುಬಿದ್ದೇಷ್ಟೋ ಗೀತೆ.

ಹರಿಯರಾಣತಿಯಂತೆ ಮರುಮದುವೆಯಾದಳು
ವಿಧಿಗೆ ತಲೆಬಾಗಿದಳು ಪುಟ್ಟ ಗುಡಿಯಾ
ಹೊತ್ತುನಿಂತಳು ಇವನ ಫಲಭಾರ
ಹೊಸ ಬದುಕಿನ ಬಾಗಿಲಲ್ಲಿ ಗಸ್ತುನಿಂತಳು.
ಮರಳಿ ಬಂದಿದ್ದ ಮೊದಲ ಪತಿ ಆರೀಫ್
ಮೈ ಮನಗಳಲ್ಲಿ ತೌಫಿಕನ ಬೆಳಕಿನ ಚುಳಕ
ವಿಧಿಯಾಟಕ್ಕೆ ಬೇಸ್ತು ಬಿದ್ದಳು ಗುಡಿಯಾ
ಸಂಕೀರ್‍ಣ ಬದುಕಿಗೆ ಎರವಾದಳು.

ಮೂಡಿದ ಮಿಡಿಗೆ ಅಗಲಿಕೆಯ ಭಯವೆ?
ಜೇನ ಸುರಿಯುವ ಬೊಚ್ಚು ಬಾಯಿಯ ಕೂಸು
ಹೆತ್ತಮ್ಮನ ಗುರುತಿಸಿ ಕೇಕೆ ಹಾಕುವ ಮುನ್ನ
ಒದ್ದು ಅಮ್ಮನ ಎದೆ ಹಾಲು ಹೆಕ್ಕುವ ಮುನ್ನ
ಜಮಾತಿನ ತೀರ್‍ಮಾನ ಹೊರಬಿತ್ತು
“ಕರುಳ ಬಳ್ಳಿಯನ್ನು ಇವನಿಗೊಪ್ಪಿಸಿ
ಮರಳಿ ಹೋಗಬೇಕು ಅವನಲ್ಲಿಗೆ”
ತೀರ್‍ಮಾನ ಕೇಳಿದ ಮೀನಾರಿನ ಮೈಕು
ಅಲ್ಲಾಹು ಎಂದು ಮೌನವಾಯಿತು.

ಭೂಮಿ ಎದೆ ಬರಿಯುವಂತೆ ರೊದಿಸಿದ
ಗುಡಿಯಾಳ ಆರ್‍ತ ಬಿಕ್ಕುಗಳ ಶಬ್ದ
ತಟ್ಟಲಿಲ್ಲವೆ ಜಮಾತಿನ ಹೃದಯಕೆ?
ಭೂಮಿ-ಆಗಸಕೆ, ತಾಯಿ ಮಗುವಿಗೆ
ಹಾಕಬಹುದೇ ಬಹಿಷ್ಕಾರ?
ಕಂಪಿಸಿದ ಗುಬ್ಬಿ ಹೃದಯ ಹಾಲಹಲ
ಕ್ರೌಂಚ ಪಕ್ಷಿಯ ಮೌನ ರೋದನ
ತಟ್ಟಲಾರದೇ ಜಮಾತಿನ ಕಟ್ಟೆಗೆ?

ಹೆಣ್ಣಿನ ಮಾತೃತ್ವ ಆಟದ ವಸ್ತುವೇನೆ?
ನಿಷೇಧದ ಬೇಲಿಗಳ ಕಿತ್ತೆಸೆದು
ಸೊಕ್ಕಿದ ಕೊಕ್ಕುಗಳ ಕತ್ತರಿಸಿ
ಶಕ್ತಿ ಒಗ್ಗೂಡಿಸಿ ಹೊರಗೆ ಬಾ ಗುಡಿಯಾ
ಬದುಕು ಮಾಧ್ಯಮದ ವಿಷಯವಲ್ಲ
ಚಪ್ಪರಿಸುವ ಸುದ್ದಿಯಲ್ಲ.
ಎದ್ದು ಹೇಳುಬಾ ನಿನ್ನದೇ ನಿರ್‍ಧಾರ.
ಕಿಕ್ಕಿರಿದ ಜಮಾತಿನ ಮಧ್ಯೆ
ಸಿಕ್ಕಲಾರರೇ ಒಬ್ಬರಾದರೂ ಸಂತರು
ನಿನ್ನ ನೋವ ಕರಗಿಸಿ
ಸಂತೈಸುವ ಪೈಗಂಬರರು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...