Home / ಕವನ / ಕವಿತೆ / ಎದೆಯೆಂಬ

ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ
ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ
ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ
ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧||

ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ
ಹನಿಹನಿ ಸುರಿಸುತ್ತ ಹಸರಿಸು ಬಾರೆ
ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ
ಜೀವಾನ ಉಳಿಸಾಕೆ ಮೇಲಿಂದ ಬಾರೆ  ||೨||

ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ
ಕಾದೀನಿ ನಿನಗಾಗಿ ಕುಂತುಗೊ ಬಾರೆ
ಸಭೆ ತುಂಬಿ ಕಾದೈತೆ ಕಣ್ಕಣ್ಣು ಬಿಡತೈತೆ
ಹಡದೀಯ ಹಾಸ್ಯೈತೆ ನಡಕೊಂತ ಬಾರೆ  ||೩||

ಎದೆಯೆಂಬ ನೆಲದಾಗೆ ಗಿಡಮರ ನರನರಾ
ಒಣಗ್ಯಾವೆ ಹಿಡಿದಾವೆ ಒಳಗೆಲ್ಲೋ ಜೀವಾ
ಈ ನೆಲಾ ಬಾಯ್ಬಿಟ್ಟು ಬಿರುಕೀನ ಮಕವಿಟ್ಟು
ನೀರೆ ಬಾರೇ ಬಾರೆ ಕೂಗ್ಯೈತೆ ಜೀವಾ  ||೪||

ಎದೆಯೆಂಬ ಗುಡಿಯಾಕೆ ಬಣಬಣ ಬರಿಗಂಟೆ
ಉರದೈತೆ ಇರುಳೆಲ್ಲಾ ದೀಪಾಧೂಪಾ
ಗರ್ಭಾಗುಡಿಯಾಗೆ ನೀ ಮನಿದೇವ್ತೆ ಇರದಾಗ
ಯಾರೀಗೆ ಈ ಗುಡಿ ಈಪೂಜಿ ಪಾಪಾ ||೫||

ಎದೆಯೆಂಬ ಪಂಜರದೊಳಗೊಂದು ಗಿಣಿರಾಮಾ
ಸಂಗಾತಿ ಬೇಕಂತಾ ಕರದೈತೆ ಬಾರೆ
ಹಣ್ಣನ್ನ ತಿನವಲ್ದು ಕಣ್ಣನ್ನ ಮುಚುವಲ್ದು
ಸೆಳ್ಳನ್ನೆ ಕುಕತೈತೆ ಅರಗಿಣಿ ಬಾರೆ  ||೬||

ಎದೆಯೆಂಬ ಬಾವ್ಯಾಗೆ ಬರಿತಳ ಕಂಡೈತೆ
ಬರಿಕೊಡ ಜೋತಾಡಿ ನೇತಾಡುತಾವೆ
ಬಾವೇನು ಜೀವಿಲ್ದ ಹೆಣಬಾಯಿಯಾಗ್ಯೈತೆ
ಅಂತಾರಾಗಂಗೀಬಾ ತುಳುಕಲಿ ಒಲವೇ ||೭||

ಎದೆಯೆಂಬ ಗಿಡದಾಗೆ ಎಲಿಯಿಲ್ಲ ಚಿಗುರಿಲ್ಲ
ಬರಲಾಗಿ ನಿಂತೈತೆ ರಸವಿಲ್ದ ಜೀವಾ
ಹಸಿರಿನ ಸೀರ್ಯುಟ್ಟು ಹೂಮುಡಿದು ಕಾಯಾಗಿ
ಹಣ್ಣಾಗಿ ಗಿಡತುಂಬು ಬಾರೆನ್ನ ಸತುವಾ  ||೮||

ಎದೆಯೆಂಬ ಹೊನ್ನಾಡು ರತ್ನ ಮುತ್ತಿನ ನಾಡು
ಹಾಳಾಗಿ ಹಂಪ್ಯಾಗಿ ಕೂಗ್ಯಾವೆ ಗೂಗಿ
ನಿನ್ನ ಗೆಜ್ಜಿ ಪಾದ ಸೋಕಿದರೆ ಈ ಕೊಂಪಿ
ನಂದಾನವಾದೀತು ಕೋಗಿಲೆ ಕೂಗಿ  ||೯||

ಎದೆಯೆಂಬ ಈ ಮನಿ ಕಸಕಾಗಿ ತೌರ್ಮನಿ
ಧೂಳು ದುಮ್ಮು ಮೂಲಿಮೂಲಿಗೆಲ್ಲ
ವಾರಣ ಸಾರಣಿ ಮಾಡಿ ಈ ಮನಿಯಾಗೆ
ಹಣತೆಯ ಹಚ್ಚು ಬಾ ಕಳೆಯಲಿ ಕತ್ಲಾ  ||೧೦||
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...