ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ
ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ
ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ
ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧||

ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ
ಹನಿಹನಿ ಸುರಿಸುತ್ತ ಹಸರಿಸು ಬಾರೆ
ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ
ಜೀವಾನ ಉಳಿಸಾಕೆ ಮೇಲಿಂದ ಬಾರೆ  ||೨||

ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ
ಕಾದೀನಿ ನಿನಗಾಗಿ ಕುಂತುಗೊ ಬಾರೆ
ಸಭೆ ತುಂಬಿ ಕಾದೈತೆ ಕಣ್ಕಣ್ಣು ಬಿಡತೈತೆ
ಹಡದೀಯ ಹಾಸ್ಯೈತೆ ನಡಕೊಂತ ಬಾರೆ  ||೩||

ಎದೆಯೆಂಬ ನೆಲದಾಗೆ ಗಿಡಮರ ನರನರಾ
ಒಣಗ್ಯಾವೆ ಹಿಡಿದಾವೆ ಒಳಗೆಲ್ಲೋ ಜೀವಾ
ಈ ನೆಲಾ ಬಾಯ್ಬಿಟ್ಟು ಬಿರುಕೀನ ಮಕವಿಟ್ಟು
ನೀರೆ ಬಾರೇ ಬಾರೆ ಕೂಗ್ಯೈತೆ ಜೀವಾ  ||೪||

ಎದೆಯೆಂಬ ಗುಡಿಯಾಕೆ ಬಣಬಣ ಬರಿಗಂಟೆ
ಉರದೈತೆ ಇರುಳೆಲ್ಲಾ ದೀಪಾಧೂಪಾ
ಗರ್ಭಾಗುಡಿಯಾಗೆ ನೀ ಮನಿದೇವ್ತೆ ಇರದಾಗ
ಯಾರೀಗೆ ಈ ಗುಡಿ ಈಪೂಜಿ ಪಾಪಾ ||೫||

ಎದೆಯೆಂಬ ಪಂಜರದೊಳಗೊಂದು ಗಿಣಿರಾಮಾ
ಸಂಗಾತಿ ಬೇಕಂತಾ ಕರದೈತೆ ಬಾರೆ
ಹಣ್ಣನ್ನ ತಿನವಲ್ದು ಕಣ್ಣನ್ನ ಮುಚುವಲ್ದು
ಸೆಳ್ಳನ್ನೆ ಕುಕತೈತೆ ಅರಗಿಣಿ ಬಾರೆ  ||೬||

ಎದೆಯೆಂಬ ಬಾವ್ಯಾಗೆ ಬರಿತಳ ಕಂಡೈತೆ
ಬರಿಕೊಡ ಜೋತಾಡಿ ನೇತಾಡುತಾವೆ
ಬಾವೇನು ಜೀವಿಲ್ದ ಹೆಣಬಾಯಿಯಾಗ್ಯೈತೆ
ಅಂತಾರಾಗಂಗೀಬಾ ತುಳುಕಲಿ ಒಲವೇ ||೭||

ಎದೆಯೆಂಬ ಗಿಡದಾಗೆ ಎಲಿಯಿಲ್ಲ ಚಿಗುರಿಲ್ಲ
ಬರಲಾಗಿ ನಿಂತೈತೆ ರಸವಿಲ್ದ ಜೀವಾ
ಹಸಿರಿನ ಸೀರ್ಯುಟ್ಟು ಹೂಮುಡಿದು ಕಾಯಾಗಿ
ಹಣ್ಣಾಗಿ ಗಿಡತುಂಬು ಬಾರೆನ್ನ ಸತುವಾ  ||೮||

ಎದೆಯೆಂಬ ಹೊನ್ನಾಡು ರತ್ನ ಮುತ್ತಿನ ನಾಡು
ಹಾಳಾಗಿ ಹಂಪ್ಯಾಗಿ ಕೂಗ್ಯಾವೆ ಗೂಗಿ
ನಿನ್ನ ಗೆಜ್ಜಿ ಪಾದ ಸೋಕಿದರೆ ಈ ಕೊಂಪಿ
ನಂದಾನವಾದೀತು ಕೋಗಿಲೆ ಕೂಗಿ  ||೯||

ಎದೆಯೆಂಬ ಈ ಮನಿ ಕಸಕಾಗಿ ತೌರ್ಮನಿ
ಧೂಳು ದುಮ್ಮು ಮೂಲಿಮೂಲಿಗೆಲ್ಲ
ವಾರಣ ಸಾರಣಿ ಮಾಡಿ ಈ ಮನಿಯಾಗೆ
ಹಣತೆಯ ಹಚ್ಚು ಬಾ ಕಳೆಯಲಿ ಕತ್ಲಾ  ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಲಹೆ
Next post ನಗೆ ಡಂಗುರ – ೪೩

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…