Home / ಕವನ / ಕವಿತೆ / ಎದೆಯೆಂಬ

ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ
ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ
ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ
ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧||

ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ
ಹನಿಹನಿ ಸುರಿಸುತ್ತ ಹಸರಿಸು ಬಾರೆ
ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ
ಜೀವಾನ ಉಳಿಸಾಕೆ ಮೇಲಿಂದ ಬಾರೆ  ||೨||

ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ
ಕಾದೀನಿ ನಿನಗಾಗಿ ಕುಂತುಗೊ ಬಾರೆ
ಸಭೆ ತುಂಬಿ ಕಾದೈತೆ ಕಣ್ಕಣ್ಣು ಬಿಡತೈತೆ
ಹಡದೀಯ ಹಾಸ್ಯೈತೆ ನಡಕೊಂತ ಬಾರೆ  ||೩||

ಎದೆಯೆಂಬ ನೆಲದಾಗೆ ಗಿಡಮರ ನರನರಾ
ಒಣಗ್ಯಾವೆ ಹಿಡಿದಾವೆ ಒಳಗೆಲ್ಲೋ ಜೀವಾ
ಈ ನೆಲಾ ಬಾಯ್ಬಿಟ್ಟು ಬಿರುಕೀನ ಮಕವಿಟ್ಟು
ನೀರೆ ಬಾರೇ ಬಾರೆ ಕೂಗ್ಯೈತೆ ಜೀವಾ  ||೪||

ಎದೆಯೆಂಬ ಗುಡಿಯಾಕೆ ಬಣಬಣ ಬರಿಗಂಟೆ
ಉರದೈತೆ ಇರುಳೆಲ್ಲಾ ದೀಪಾಧೂಪಾ
ಗರ್ಭಾಗುಡಿಯಾಗೆ ನೀ ಮನಿದೇವ್ತೆ ಇರದಾಗ
ಯಾರೀಗೆ ಈ ಗುಡಿ ಈಪೂಜಿ ಪಾಪಾ ||೫||

ಎದೆಯೆಂಬ ಪಂಜರದೊಳಗೊಂದು ಗಿಣಿರಾಮಾ
ಸಂಗಾತಿ ಬೇಕಂತಾ ಕರದೈತೆ ಬಾರೆ
ಹಣ್ಣನ್ನ ತಿನವಲ್ದು ಕಣ್ಣನ್ನ ಮುಚುವಲ್ದು
ಸೆಳ್ಳನ್ನೆ ಕುಕತೈತೆ ಅರಗಿಣಿ ಬಾರೆ  ||೬||

ಎದೆಯೆಂಬ ಬಾವ್ಯಾಗೆ ಬರಿತಳ ಕಂಡೈತೆ
ಬರಿಕೊಡ ಜೋತಾಡಿ ನೇತಾಡುತಾವೆ
ಬಾವೇನು ಜೀವಿಲ್ದ ಹೆಣಬಾಯಿಯಾಗ್ಯೈತೆ
ಅಂತಾರಾಗಂಗೀಬಾ ತುಳುಕಲಿ ಒಲವೇ ||೭||

ಎದೆಯೆಂಬ ಗಿಡದಾಗೆ ಎಲಿಯಿಲ್ಲ ಚಿಗುರಿಲ್ಲ
ಬರಲಾಗಿ ನಿಂತೈತೆ ರಸವಿಲ್ದ ಜೀವಾ
ಹಸಿರಿನ ಸೀರ್ಯುಟ್ಟು ಹೂಮುಡಿದು ಕಾಯಾಗಿ
ಹಣ್ಣಾಗಿ ಗಿಡತುಂಬು ಬಾರೆನ್ನ ಸತುವಾ  ||೮||

ಎದೆಯೆಂಬ ಹೊನ್ನಾಡು ರತ್ನ ಮುತ್ತಿನ ನಾಡು
ಹಾಳಾಗಿ ಹಂಪ್ಯಾಗಿ ಕೂಗ್ಯಾವೆ ಗೂಗಿ
ನಿನ್ನ ಗೆಜ್ಜಿ ಪಾದ ಸೋಕಿದರೆ ಈ ಕೊಂಪಿ
ನಂದಾನವಾದೀತು ಕೋಗಿಲೆ ಕೂಗಿ  ||೯||

ಎದೆಯೆಂಬ ಈ ಮನಿ ಕಸಕಾಗಿ ತೌರ್ಮನಿ
ಧೂಳು ದುಮ್ಮು ಮೂಲಿಮೂಲಿಗೆಲ್ಲ
ವಾರಣ ಸಾರಣಿ ಮಾಡಿ ಈ ಮನಿಯಾಗೆ
ಹಣತೆಯ ಹಚ್ಚು ಬಾ ಕಳೆಯಲಿ ಕತ್ಲಾ  ||೧೦||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...