Home / ಲೇಖನ / ಇತರೆ / ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ,

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು ಮೂಡಿಸುವಂತಹ ಉತ್ತಮ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಯೋಚನೆ ಮಾಡದೇ ಅಂಧರಾಗಿ ಮೂರ್‍ಖರ ಪೆಟ್ಟಿಗೆಯನ್ನು ನೀಡಿಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ದೂರದರ್‍ಶನ ಹಾವಳಿಯಿಂದ ಇಂದು ಮನೆಗಳಲ್ಲಿ ಆರೋಗ್ಯ ಪೂರ್‍ಣ ಮಾತುಕತೆ, ಚರ್‍ಚೆ, ನಗುಹರಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿವೆ. ಕಿರಿಯರಲ್ಲಿ ಬುದ್ಧಿ ಕೌಶಲ್ಯವನ್ನು ಹೆಚ್ಚಿಸುತ್ತಿದ್ದ ನಮ್ಮ ಅನೇಕ ಒಳಾಂಗಣ ಆಟಗಳಾದ ಚೌಕಾಬಾರ, ಪಗಡೆ, ಅಳುಗುಳಿ ಮನೆ, ಹುಲಿ ಕುರಿ, ಇತ್ಯಾದಿ ಆಟಗಳು ಎಂದೋ ಮೂಲೆ ಸೇರಿವೆ. ಇಂದಿನ ಪೀಳಿಗೆಯ ಮಕ್ಕಳು ಬಹುಶಃ ಈ ಆಟಗಳ ಹೆಸರನ್ನೂ ಕೇಳಲಿಲ್ಲವೇನೋ? ಜೊತೆಗೆ ದೂರದರ್‍ಶನ ಈ ಪೀಳಿಗೆಯವರಿಂದ ಅತ್ಯಂತ ಮಹತ್ವದ ಓದಿನ ಹವ್ಯಾಸವನ್ನೇ ನುಂಗಿಬಿಟ್ಟಿದೆ. ಅಗಾಧ ಸಾಹಿತ್ಯ ಭಂಡಾರವನ್ನು ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರ, ಓದುವವರು ಕಡಿಮೆಯಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಜನಪದರಿಂದ ಬಳುವಳಿ ಬಂದ ಒಗಟು, ಗಾದೆ, ನುಡಿಗಟ್ಟು, ಒಡಪಿನ ಹಾಡುಗಳು ಮಕ್ಕಳಿಗಿರಲಿ ದೊಡ್ಡವರಿಗೇ ಬೇಡವಾಗುತ್ತಿದೆ.

ಕ್ರೌರ್‍ಯ, ಹಿಂಸೆ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವ ಚಲನಚಿತ್ರ, ದೂರದರ್‍ಶನ ಧಾರಾವಾಹಿಗಳು ನೂರೆಂಟು ಚಾನೆಲ್ಗಳಲ್ಲಿ ಹರಿದು ಬರುವ ಹಾಡು ಕುಣಿತಗಳು ನಮ್ಮ ಸಂಸ್ಕೃತಿಯ ಔನ್ನತ್ಯವನ್ನು ಕ್ರಮೇಣ ನುಂಗಿಹಾಕುತ್ತಿವೆ. ಒಂದಾದ ನಂತರ ಒಂದು ಹರಿದು ಬರುವ ಧಾರಾವಾಹಿಗಳನ್ನು ನೋಡುತ್ತಾ ಅಮೂಲ್ಯ ಸಮಯ, ಕಲೆಗಾರಿಕೆ, ಹವ್ಯಾಸಗಳು, ಹೊಸದನ್ನು ಆವಿಷ್ಕರಿಸುವ ಮನೋಭಾವವನ್ನು ನಮ್ಮ ಪೀಳಿಗೆಯವರು ಕಳೆದುಕೊಳ್ಳುತ್ತಿರುವುದು ಅರಿವಿಗೆ ಬರುವುದು ಯಾವಾಗ ? ಧಾರಾವಾಹಿಗಳು ಬರುತ್ತಿರುವಾಗ ಮನೆಗೆ ಬಂದ ಅತಿಥಿ, ಸ್ನೇಹಿತರನ್ನು ಮಾತನಾಡಿಸುವ ತಾಳ್ಮೆ, ವ್ಯವಧಾನವೂ ಮನೆಯವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾಜಿಕ ಸಮ್ಮಿಲನದ ಮೂಲ ಕೊಂಡಿಯೂ ಈ ಮೂಲಕ ಕಳೆದುಕೊಳ್ಳುತ್ತಿರುವುದು ತಿಳಿಯುತ್ತದೆ. ದೂರದರ್‍ಶನದ ನಿರಂತರ ನೋಡುವಿಕೆಯಿಂದ ಇತ್ತೀಚಿನ ದಿನಗಳಲ್ಲಿ ನೇತ್ರ ಸಂಬಂಧಿ ರೋಗಗಳು ಹೆಚ್ಚಿರುವುದನ್ನು, ಅವರ ಮುಂದೆ ಕುಳಿತು ಏಕಾಗ್ರತೆಯಿಲ್ಲದೆ ಊಟ, ತಿಂಡಿ ಮಾಡುವುದರಿಂದ ಜೀರ್‍ಣ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಸಖಿ, ದೂರದರ್‍ಶನದ ಕಪಿಮುಷ್ಠಿಗೆ ಸಿಲುಕಿರುವ ನಮ್ಮ ಸಮುದಾಯ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾನಸಿಕ ದಾಸ್ಯಕ್ಕೆ ಒಳಗಾಗಿಬಿಟ್ಟಿದೆ. ಇಂದು ಕಣ್ಣಿಗೆ ಕಾಣದಂತಹ ಆದರೆ ನಾಳೆ ನಮ್ಮ ಸುಂದರ ಭವಿಷ್ಯವನ್ನು ಸದ್ದಿಲ್ಲದಂತೆ ನಿರ್‍ನಾಮ ಮಾಡಬಲ್ಲ ಶಕ್ತಿ ದೂರದರ್‍ಶನಕ್ಕಿದೆ. ಹಾಗೆಂದು ಅದರಲ್ಲಿ ಬರುತ್ತಿರುವ ಒಳಿತು, ಮಾಹಿತಿ, ತಿಳುವಳಿಕೆ, ಅವಶ್ಯವಿರುವಷ್ಟು ಆರೋಗ್ಯ ಪೂರ್‍ಣವಾದ ಮನರಂಜನೆಯನ್ನಷ್ಟೇ ತೆಗೆದುಕೊಂಡು ಮಿಕ್ಕಿದ್ದನ್ನು ಬಿಟ್ಟು ಬಿಡುವ ವಿವೇಚನೆ ನಮ್ಮಲ್ಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಸಖಿ, ಮೂರ್‍ಖರ ಪೆಟ್ಟಿಗೆಯನ್ನು ನೋಡುತ್ತಾ ಮೂರ್‍ಖರೂ ಆಗಬಹುದು, ಅದರಲ್ಲಿ ಬೇಕಷ್ಟನ್ನು ನೋಡಿ ಜಾಣರೂ ಆಗಬಹುದು. ಆಯ್ಕೆ ನಮ್ಮ ಮುಂದಿದೆ. ಮೂರ್‍ಖರಾಗದೇ ಉಳಿಯೋಣ ಆಲ್ಲವೇ ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...