Home / ಕವನ / ಕವಿತೆ / ಮಹಾಕವಿ ಕುಮಾರವ್ಯಾಸನಿಗೆ

ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ
ದೀ ಮಹಾಕೃತಿಯಿಂದೊಲವು ಮಿಗೆ
ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ|
ಕೌಮುದಿಯೊಲೀ ಕನ್ನಡದೊಳಾ
ಸೀಮಮೆನೆ ನೆಲಸಿಹುದಿದಂ ನೆಗ
ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧||

ಮೊದಲ ಮಗನಾ ಶುಕನು ಭಾಗವ
ತದ ಪುರಾಣದೊಳದ್ದಿ ಕುರುಕುಲ
ಕದನದೀ ಕಥೆಯೊರೆದನಿಲ್ಲಕಟೆಂದು ಮನಮರುಗಿ|
ಪದೆಯಲನ್ಯ ಕುಮಾರನನು ವೇ
ದದ ಮಹಾಮುನಿ ಕನ್ನಡದ ಶಾ
ರದೆಯೆ ಕನ್ನಡವಕ್ಕಿಯೊಲು ಬೆಸಲಾದಳಲೆ ನಿನ್ನ? ||೨||

‘ಅಂದು ಕಂಡುದ ಕಾಣಿಸಿದೆ, ಬಳಿ
ಸಂದ ಕಬ್ಬಿಗರವರ ದೇಸಿಯ
ಚಂದದಿಂ ಕೇಳಿಸಿದರಲ್ಲದೆ ಕಾಣಿಸಿದರುಂಟೆ?’|
ಎಂದು ಲೋಕಕೆ ಭಾರತವ ಕಂ
ಡಂದದಿಂ ಕಾಣಿಸಲು ನಿನಗಣು
ಗಿಂದ ಸಂಜಯಗಿತ್ತ ದೃಷ್ಟಿಯ ನೀಡಿದನೆ ಮುನಿಪ? ||೩||

ಈಕ್ಷಿಸದೆ ಭಕ್ತಿಪ್ರಭೆಯ ವಿರ
ಜಾಕ್ಷಿಯಿಂ ೧ಕ್ರತುಪುರದೊಡೆಯನನ
ಧೋಕ್ಷಜನ ನೀ ವಿಶ್ವಕವಿಗವಗೆಂತು ಲಿಪಿಗಾರ?|
ಅಕ್ಷಯಂ ತವ ಕಂರಮದು! ವ್ಯಾ
ಚಕ್ಷಣಮಿದಾತನದೊ? ನಿನ್ನದೊ?
ಸಾಕ್ಷಿಯೆಮಗಿದು ವೀರನಾರಾಯಣನ ದರುಶನದ! ||೪||

ನಿನ್ನ ಹಿಂಗಬ್ಬಿಗರಿಗೂಡಿದ
ಕನ್ನಡದ ನುಡಿವೆಣ್ಣ ಮೊಲೆ ನಿನ
ಗಿನ್ನು ಸಾಲದೆನುತ್ತ ವಿಧಿ ಮುಂಬಗೆದು ನಿನ್ನುದಯಂ|
ಚನ್ನೆಯಿವಳಿಗೆ ಮೂರನೆಯ ಮೊಲೆ
ಯನ್ನವಾಯಿಸಲದರಿನೊದವಿದ
ಬಿನ್ನಣಮಿದೇಂ ನಿನ್ನ ನುಡಿಯ ನವೀನ ನಿವಡಿಕೆಗೆ? ||೫||

ಕಾವ್ಯಮಿದೊ ಜೀವಂತರಾ ಕೌ
ರವ್ಯರನುಗಂತವ್ಯಮಿದೊ? ಸು
ಶ್ರಾವ್ಯ ಪುಣ್ಯ ಚರಿತ್ರೆಯಿದೊ ಭಾರತದ ಯಾತ್ರೆಯಿದೊ? |
ಭವ್ಯರಿವರಾರಲ್ಲ? ಬಹುಮಂ
ತವ್ಯರಿವರೊಡನೆಮಗೆ ಕೆಳೆ ಕ
ರ್ತವ್ಯಮೆನಿಸುವುದವರವರ ಬಾಂಧವ್ಯಕೆದೆಸಿಲುಕಿ ||೬||

ರವಿಯ ಸಪ್ತಾಶ್ವಗಳ ಸಪ್ತ
ಚ್ಛವಿಯ ಸೇರುವೆ ಬಿಳಿಗಲೆತು ಲೋ
ಕವನು ಧವಳಿಸುವಂತೆ, ಕವನದಿ ನಿನ್ನ ಸವನಿಸಿದ |
ನವರಸದ ಸಂಯುಕ್ತಿಯದೊ ಮಾ
ಧವನ ನವವಿಧ ಭಕ್ತಿಯದೊ ಮನ
ದೆವೆದೆರಸಿ ಪುಳುಕಿಸುತಿದೆ ಸುಧಾಂಬುಧಿಯ ಮಧುರಿಮೆಗೆ! ||೭||

ಪ್ರಕಟಿಸಿದೆ ನೀನೈಹಿಕಾಮು
ಷ್ಮಿಕದ ನಡು ಪರುರವಿಸಿದೊಖ್ಖಾ
ಣಿಕೆಯ ಸೇತುವೊಲಿದರ ನುಡಿಗಟ್ಟಿನ ಸಗಾಢಿಕೆಯ |
ಅಕುಟಿಲದ ಸೊಬಗೆಮಗೆ ಬಗೆಗಾ
ಣಿಕೆಯ ಪಯಣದಿ ಸಂದಿಸುವ ನ
ನ್ನಿಕೆಯಿವರುಹವೆ ಸತ್ಯಸೌಂದರ್ಯಗಳನನ್ಯತೆಯ? ||೮||

ನಿಡುಗತೆಯೊ ಬಾನೆಡೆಯೊ? ಬೆಡಗಿನ
ನುಡಿಯ ಠೀವಿಯೊ ಗುಡುಗೊ ? ಬಣ್ಣದ
ಮಿಡುಕೊ ಮಿಸುಕುವ ಮಿಂಚೊ? ಕವಿತಾರಸವೊ ತನಿಮಳೆಯೊ? |
ತಡಿಯ ಹರಿವರ್ಥ ಪ್ರವಾಹವೊ?
ಮಡಲ್ವ ನಿರತೆಯೊ ಹಸುರ ನೆರತೆಯೊ?
ನಡೆನಲಿವ ಮನ್ಮನವೊ ಸೋಗೆಯೊ ನಿನ್ನ ಕಾವ್ಯದಲಿ? ||೯||

ಹೊತ್ತಿಸುತ ಸುರಿಮುಗಿಲ ಹಗಲಲಿ
ಬತ್ತಿಯೆಯ್ದರ ಸೊಡರ, ಸಯ್ಪೆದೆ
ಯೊತ್ತ ಕೇಳುತ ಲೇಸ ಸಂಚಿಸೆ ನೆರೆದರಿಗೆ ನಿನ್ನ |
ಹೊತ್ತಗೆಯ ಹಾಡುವಿನಮರ್ಥವ
ಬಿತ್ತರಿಸುವಿನಮಳ್ತಿಯಲಿ ಕಿವಿ
ಯಿತ್ತು ಕೇಳ್ದುದನೆನಗೆ ಕೇಳಿಪುದಿನ್ನೆಳೆಯ ನೆನವು! ||೧೦||

ಪಂಪನಲಿ ಬನವಾಸಿದೇಶದ
ಸೊಂಪ, ರನ್ನನೊಳಾ ಚಳುಕ್ಯರ
ಲಂಪ, ಲಕ್ಷ್ಮ್ಮೀಶನಲಿ ಪಂಪೆಯನಾಳ್ದವರ ಪೆಂಪ |
ಆಂಪಡೇನಿನ್ನಖಿಲ ಕನ್ನಡ
ದಿಂಪು ನಿನ್ನ ಈ ಭಾರತಿದಿ ಮೆ
ಯ್ಯಂ ಪಡೆವೊಲೇಂ ನೆಳಲನಿಕ್ಕಿತೆ ಬೇರೆ ಭಾರತದಿ? ||೧೧||

ಸಕ್ಕದದ ಭಾರತದಿ ಕೊಳುಗುಳ
ದೆಕ್ಕತುಳದೊಳೆ ಭೇರಿ ಮೊಳಗುವೊ
ಡಕ್ಕಜವಿದೇಂ ನಿನ್ನ ಕಬ್ಬದಿ ತುದಿಮೊದಲ್ವರೆಗೆ |
ಧಕ್ಕಡದ ಕನ್ನಡದ ರವಣೆಯೊ?
ಸೊಕ್ಕು ಭಟರುರವಣೆಯ ಢವಣೆಯೊ?
ಮಿಕ್ಕ ಕವಿಗಳ ಕುಣಿಸಿ ನಗುವೀ ಹೊಸ ಬಜಾವಣೆಯೊ? ||೧೨||

ಕನ್ನಡದ ನುಡಿದೇಗುಲದಿ ಸಂ
ಪನ್ನಮಿಹ ಶ್ರೀಕೃಷ್ಣಮೂರುತಿ
ಯನ್ನಿರೀಕ್ಷಿಸುವೊಡನೆ ಲಕ್ಷ್ಮೀಶನದು ನಿನ್ನದಿವು |
ನನ್ನ ಕಣ್ಮನದಿಂದ ಭಕ್ತಿಯ
ಜಾನ್ನವಿಯ ಸರಿವರಿಸಲಿವರೊಳ
ಗಿನ್ನರಿಯೆ ಮಿಗಿಲಾತನೆರಕವೊ ನಿನ್ನ ಕೆತ್ತಿಗೆಯೊ? ||೧೩||

ಕುರುಪತಿಯ ಮರಣಾಂತ ಛಲದಲಿ
ಮರುಳನಹ ಕವಿ ರನ್ನನವನಲಿ
ಮರಸಿದೊಲು ತನ್ನಯ ಕಥಾನಾಯಕನನನಿಲಜನ |
ಇರದೆ ಕರ್ಣನ ಜೋಳವಾಳಿಯೊ
ನಿರತಿಶಯ ಚಾಗವೊ ಮನಂಬುಗೆ,
ಮರೆತಡೇಂ ನೀ ನರನನಂದಂದಿನನ ತನಯನಲಿ? ||೧೪||

ಕಾಳುಗೆಡೆವರೆ ನಿನ್ನ ಕೃಷ್ಣೆಯ
ನೇಳಿಸದೆ ಗಂಡುಡುಗಿದಾ ಗಂ
ಡಾಳುಗಳ ತೆರಪುಂಟೆ ಧರುಮದ ಬಾಳ್ಗೆ? ಕುರುಕುಲದ |
ಕಾಳರಾತ್ರಿಯೆ ? ಇರುಳಿನಲ್ಲದೆ
ನಾಳೆ ಮೂಡಿತೆ? ಶಿಖಿಜೆ ಗಡ ಪಾಂ
ಚಾಳಿ ಗಿರಿಜೆಯೊಲರ್ಧನಾರಿ ರಣಾಗ್ರ ಸಹಕಾರಿ! ||೧೫॥

ಸಹಜವೇನ್ನುಡಿದಡೆ ತುರಾರಿಸಿ
ಯಹಿತರಾ ಕೌರವರು ನಿನಗೆಂ
ದಹಹ ಧರ್ಮದ ಪಕ್ಷಪಾತವನಾವ ಗುಣಿಯೊಲ್ಲ? |
ಕಹುಕಿಗಳ ಕೌಳಿಕವ ಹಳಿದೊಡೆ,
ಸಹಸದಲಿ ಪಗೆಯುಂಟೆ? ಬೇವಿನ
ಕಹಿಯ ಕಯ್ಪೆನೆ ಗುಣಕೆ ಕಯ್ಪೆಯೆ ? ಗುಣಕೆ ಮಚ್ಚರವೆ? ||೧೬||

ಅರಿಯೆವಣಮಿನ್ನಕಟ ನಿನ್ನನು
ಕುರಿತ ಹದನವನೇಂ ವಶಿಷ್ಠನ
ಮರೆಯರುಂಧತಿಯಂತೆ ಕಾವ್ಯವೆ ನಿನ್ನ ಮರಸಿದುದೆ? |
ಕಿರಿದೆನದೆ ಕಂಡಗೆ ಚಿರಾಯುವ
ನೊರೆವರಂತೆಮಗವಟಯಿಸಿ ತವ
ಚರಿತವಂ ಪೊರೆಯಳೆ ಚರಿತ್ರವಿಧಾತ್ರಿ ಕನ್ನಡವ? ||೧೭||

ಯಾವ ರಾಯನ ನಾಡೊಳಿರ್ದೆಯೊ,
ಯಾವ ಕಾಲದಿ ಬಾಳಿದೆಯೊ, ಮ
ತ್ತಾವ ಕಾವ್ಯವ ರಚಿಸಿದೆಯೊ ನೀನೊಬ್ಬನದನರಿವೆ, |
ಏವರಂ ಭಾರತದ ಕೇಳಿಕೆ
ಯೇವರಂ ಕನ್ನಡದ ಬಾಳಿಕೆ
ಯಾವರಂ ನೀ ಬಾಳ್ದೆಯೆಂದಿದನೊಬ್ಬ ನೀನರಿಯೆ ||೧೮||

ಅರಸರೊಲಿದೇಂ ನಿನಗೆ ಕಾರ್ತ
ಸ್ವರದ ಕಂಕಣ ತೊಡಸಿದರೆ ನಾ
ನರಿಯೆ, ನಿನಗಿಂದೊಂದೆ ಸತ್ತಿಗೆಯಾಗಿ ಕನ್ನಡದ|
ಸರಸರಿದೊ ನಿನ್ನನು ಯಶೋವಿ
ಷ್ಟರದಿ ಕುಳ್ಳಿರಿಪಂದು ನಿನ್ನಡಿ
ಗೆರಗುತೀ ಹುಲು ಪದ್ಯದಂದುಗೆ ಚಾಚುತಿಂತೆರೆವೆ- ||೧೯||

ಬಚ್ಚಿದಳೆ ಕನ್ನಡದ ಭಾರತಿ?
ಮುಚ್ಚುವಳೆ ಮಧುಮಧುರ ಕಂಠವ
ನೆಚ್ಚರಿಸಳೇನಚ್ಚರಿಯ ಕನ್ನಡದ ಕಚ್ಛಪಿಯ? |
ಬೆಚ್ಚಿದಿಂತೆಮುಗಳಿಯದೆಮ ನ
ಮ್ಮಚ್ಚ ಕನ್ನಡವೆಂದು ನಚ್ಚಿಸ
ಲುಚ್ಚ ಕವಿಗಳ ತವರೊಳವತರಿಸಾತ್ಮದೀಧಿತಿಯ! ||೨೦||

ಮಂಗಳಂ ನಿನ್ನೊರೆದ ಕಬ್ಬಕೆ,
ಮಂಗಳಂ ಕಿವಿಮನದ ಹಬ್ಬಕೆ,
ಮಂಗಳಂ ಕನ್ನಡದ ಭಾಮಿನಿ ಮನದಿನಿಯ ನಿನಗೆ |
ಮಂಗಳಂ ನಿನ್ನಮರ ಮೂರ್ತಿಗೆ,
ಮಂಗಳಂ ನಿನ್ನಜರ ಕೀರ್ತಿಗೆ,
ಮಂಗಳಂ ನಿನಗೊಲಿದ ಗದುಗಿನ ವೀರ ನರಯಣಗೆ ||೨೧||
*****
೧ ಕ್ರತುಪುರ ಎಂದಕೆ ಧಾರವಾಡ ಜಿಲ್ಲೆಯಲ್ಲಿರುವ ಗದಗು.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...