Home / ಕವನ / ಕೋಲಾಟ / ಸುಗ್ಗಿ ಪದ – ಜಾಗಡಿ ಪದ

ಸುಗ್ಗಿ ಪದ – ಜಾಗಡಿ ಪದ

ಅತಾಳ ಪಾತಾಳ ಸಾತಾಳ ರಸತಾಳ
ಭೂತಾಳದೊಳಗೊಂದು ಶಶಿ ಹುಟ್ಟಿ ಕೋಲೇ || ೧ ||

ಭೂತಾಳದೊಳಗೊಂದು ಶಶಿ ಹುಟ್ಟಿ
ಪಾತಾಳಕೆ ಬೇರೂ ಜಿಗಿದಾವೂ ಕೋಲೇ || ೨ ||

ಪಾತಾಳಕೆ ಬೇರೂ ಜಿಗಿದಾವಾ ಶಶಿಯಲ್ಲಿ
ಆಕಾಶಕೆ ಸೈವಾಗಿ ನೆಗುದಾವೇ ಕೋಲೇ || ೩ ||

ಆಕಾಶಕೆ ಸೈವಾಗಿ ನೆಗುದೀತಾ ಶಶೀ
ವೃಕ್ಷವೆಂಬ ಹೆಸರೂ ಬಂದೀತು ಕೋಲೇ || ೪ ||

ವೃಕ್ಷವೆಂಬ ಹೆಸರೂ ಬಂದೀತಾ ಶಶೀಗೇ
ಕಾಯಿ ಹಣ್ಣಾಗಿ ಬೆಳುಗೀತು ಕೋಲೇ || ೫ ||

ಕಾಯಿ ಹಣ್ಣಾಗಿ ಬೆಳುಗಿತಾ ವೃಕ್ಷಕ್ಕೆ
ನೂರ್ವೊಂದು ಕಪಿಗಳು ಯೆರುಗಾವೆ ಕೋಲೇ || ೬ ||

ನೂರ್ವೊಂದು ಕಪಿಗಳು ಯೆರುಗಾವಾ ವೃಕ್ಷಕ್ಕೆ
ಭೂಮೀಗ್ವೊಂದು ಹೆಗಲೂ ಯೆರುಗಾವೆ ಕೋಲೇ || ೭ ||

ಭೂಮೀಗ್ವೊಂದು ಹೆಗಲೂ ಯೆರುಗಾವಾ ವೃಕ್ಷಕ್ಕೆ
ಆಚೇರಿ ತಿಮ್ಮಣ್ಣ ಕಡುತಂದಾ ಕೋಲೇ || ೮ ||

ಆಚೇರಿ ತಿಮ್ಮಣ್ಣ ಕಡುತಂದಾ ಹೆಗಲಾ
ಗುಡುಗಾರ ಬೊಮ್ಮಣ್ಣ ಪಡತಿಕೆತ್ತಿದ ಕೋಲೇ || ೯ ||

ಪಡತಿಕೆತ್ತಿ ಬೆಳಗಿಟ್ಟ ಕೋಲಿಗೆ
ಹೊನೆ ಮಾಣ ದೇವ್ರ ಮುಂದೆ ಮಡುಗಿದರು ಕೋಲೇ || ೧೦ ||

ಹೊನೆ ಮಾಣ ದೇವ್ರ ಮುಂದೆ ಮಡಗೀದಾ ಕೋಲಿಗೆ
ಗಂದಾ ಹೂವನ್ನೆ ಪೂಸಿದರು ಕೋಲೇ || ೧೧ ||

ಗಂದಾ ಹೂವನ್ನೆ ಪೂಸಿದಾ ಕೋಲಿಗೆ
ಹಣ್ಣುವೀಳ್ಯಾವಾ ಇಟ್ಟಿದರು ಕೋಲೇ || ೧೨ ||

ಹಣ್ಣುವೀಳ್ಯಾವಾ ಇಟ್ಟಿದಾ ಕೋಲಿಗೆ
ಕಾಯೊಡದಿ ಕಯ್ಯಾ ಮುಗಿದಾರೂ ಕೋಲೇ || ೧೩ ||

ಕಾಯೊಡದಿ ಕಯ್ಯಾ ಮುಗಿದಾರಾ ಕೋಲಿಗೆ
ಮಂಗಳಾರತಿಯಾ ಬೆಳಗಿದರು ಕೋಲೇ || ೧೪ ||

ಮಲವಯ್ಯನೆಂಬವ ಮಾದೊಡ್ ಶೂರ
ಮಲವಯ್ಯನೆಂಬವ ಮಾದೊಡ್ ಶೂರನು ಕೋಲೇ || ೧೫ ||

ಉಟ್ಟಾ ಮೈಲಿಗೆಯಾ ತೆಗೆಯನು ತೊಳೆಯಾನು ಮಲವಯ್ಯ
ಉಂಡಾ ಯಂಳ್ಳಕೆ ಅಂಜನು ಕೋಲೇ || ೧೬ ||

ಮಲವಯ್ಯಾ ನೆಂಬವ ಮರಕೆ ಹಬ್ಬಿದ ಬಳ್ಳೀ
ಎಂದೀಗೂ ಬಳ್ಳಿ ಹರಿಯಾವು ಕೋಲೇ || ೧೭ ||

ಇಂದೀಗಾ ಬಳ್ಳಿ ಹರಿಯಾವು ಹುಸಿಯಾವು
ಇಂದೀಗಾ ಮರನಾ ಬಿಡಲಾರೆ ಕೋಲೇ || ೧೮ ||

ಮಲವಯ್ಯ ಮಲಗೂವ ಮಂಚಾದ ಕೋಲಿಗೆ
ಜಂತಾದವೆಂಬೂ ಬೊಂಬೇಗಳು ಕೋಲೇ || ೧೯ ||

ಜಂತಾದವೆಂಬೂ ಬೊಂಬೇಗಳು ಮಂಚಕ್ಕೆ
ಇಂದಿಗಾ ಮರನಾ ಬಿಡಲಾರೆ ಕೋಲೇ || ೨೦ ||

ಕೋಲಣ್ಣ ಗಂಗೀಗೂ ಕೋಲಣ್ಣ ಗೌರಿಗೂ
ಕೋಲು ಕೋಲೇನಾ ಕೋಲೆನ್ನ ಕೋಲೇ || ೨೧ ||

ಕಾಲೂ ಬಾಲಾ ಚಂದಾ ಮೇಲೇ ಹೆಗಲೂ ಚಂದಾ
ಬಾಲದಲ್ಲೀ ಚಂದಾ ಬಸುವಯ್ಯಾ ಕೋಲೇ || ೨೨ ||

ಬಾಲದಲ್ಲಿ ಚಂದಾ ಬಸವಯ್ಯಾನಾ ಪಾದಕ್ಕೆ
ಹಣ್ಣುವೀಳ್ಯಾ ಇಟ್ಟು ಶರಣೆಂಬೆ ಕೋಲೇ || ೨೩ ||

ಹಣ್ಣುವೀಳ್ಯಾ ಇಟ್ಟು ಏನಂದಿ ಶರಣಂಬೇ
ನಾವ ಮಾಡುವಾ ಕಾರ್ಯ ಜೀಯ ಎಂದು ಕೋಲೇ || ೨೪ ||

ಕಾಲು ಬಾಲಾ ಚಂದಾ ಮೇಲೆ ಪಾವ್ಡಾ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ಯನ ಕೋಲೇ || ೨೫ ||

ಹಾಲಗಾಯೀ ವಡೂದೂ ಬಸವಯ್ಯನ ಪಾದಕ್ಕೆ
ಹಾಲಗಾಯೀ ವಡುದೂ ಶರಣಂಬೆ ಕೋಲೇ || ೨೬ ||

ಹಾಲಗಾಯೀ ವಡುದೂ ಏನಂದಿ ಶರಣಂಬೇ?
ನಾವ ಮಾಡೂವಾ ಕಾಯಕ ಜಂಬುವೆಂದೂ ಕೋಲೇ || ೨೭ ||

ಕಾಲೂ ಬಾಲಾ ಚಂದಾ ಮೇಲೇ ಶೊಂಬೂ ಚಂದಾ
ಬಾಲಾದಲ್ಲಿ ಚಂದಾ ಬಸುವಯ್ನ ಕೋಲೇ || ೨೮ ||

ಬಾಲಾದಲ್ಲಿ ಚಂದಾ ಬಸುವಯ್ನ ಪಾದಕ್ಕೆ
ಮಂಗಲಾರತಿಯಾ ಬೆಳಗಿರೇ ಕೋಲೇ || ೨೯ ||

ಮಂಗಲಾರತಿಯಾ ಬೆಳಗಿರೇ ಬಸುವಯ್ಯಗೇ
ನಾವು ಮಾಡುವಾ ಕಾರ್ಯಾ ಜಯವೆಂದೂ ಕೋಲೇ || ೩೦ ||
*****
ಹೇಳಿದವರು: ಶ್ರೀ ಮಂಜು ಬಡವ ನಾಯ್ಕ, ಹೊನ್ನಾಕುಳಿ, ೨೪/೧೦/೭೨

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...