Home / ಕವನ / ಕವಿತೆ / ನಾನು

ನಾನು

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ
ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ
“ನಾನು ಕಾಣೆಯಾಗಿದ್ದೇನೆ ಓ ನಾನೇ
ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ
ಬೇಗನೇ ಬಾ”

ನಾನು ಸಿಗಲಿಲ್ಲ
ಮನೆಯಲ್ಲಷ್ಟೇ ಹುಡುಕಿದ್ದನಷ್ಟೆ
ಬೇರೆ ಕಡೆಗೂ ಹುಡುಕೋಣ ಹುಡುಕಿದರೆ
ನಾನು ಸಿಕ್ಕಬಹುದು ಎಂದು ಹುಡುಕಿದೆ
ಜೂನು ತಿಂಗಳ ಮಳೆಯೂ ರಣರಣ ಹಗಲು
ನಾನು ಆಲೆ-ಅಲೆದಾಡಿದೆ ನನ್ನನ್ನು ಸಿಗಲು

ಕಾಲೇಜು ಲೈಬ್ರರಿಯ ಪುಸ್ತಕದಲ್ಲಿ ಎಲ್ಲಾದರೂ
ನಾನು ಬಿದ್ದಿರಬಹುದೇ?
ಅಥವ ಯಾರಾದರೂ ನನ್ನ ಕದ್ದಿರಬಹುದೇ ?
ಇಲ್ಲ-ಹೀಗೂ ಇದ್ದಿರಬಹುದೇ ?
ಒಂದು ದಿನ ಮಳೆಯಲ್ಲಿ ತೋಯುತ್ತ ಬಂದಾಗ
ಜಾರಿ ಹೋಗಿರಬಹುದೇ ?
ಕಿಸೆಯೊಳಗೆ ಐಡೆಂಟಿಟೀ ಕಾರ್ಡು
ಅಲ್ಲಾದರೂ ನಾನು ಸಿಕ್ಕಬಹುದೇ ?

ಹ್ಞಾಂ-
ಅಂದಂತೆ
ಯಾವಾಗಲಾದರೂ ಈ ಮನೆಯಲ್ಲಿ ನಾನು ಇದ್ದೆನೇ
ಇದ್ದದ್ದು ಹೋದದ್ದೆಲ್ಲಿಗೆ ? ಹೋದದ್ದು ಬಂದೀತು ಯಾವಾಗ ?
ಓ ನಾನೇ ನಾನೇ ನನ್ನ ಜೀನೇ
ನೀನು ಸತ್ತೇ ಹೋದೆಯೇನೇ
ಶಂಕರಾಚಾರ್ಯರಿಗೆ ನಾನು ಯಾರು ಎಂಬುದು ಪ್ರಶ್ನೆ

ನಾನು ಶಂಕೆಯಾಚಾಯ೯
ನನಗೋ-ನಾನು ಎಲ್ಲಿದ್ದೇನೆ
ಎಂಬ ಹುಡುಕಾಟ
ಈ ಹುಡುಕಾಟವೆಲ್ಲ ಹುಡುಗಾಟವಾದೀತೇ ?
ಅಯ್ಯೋ-ನಾನು ಸಿಕ್ಕದೇ ಹೋದರೆ
ನಾನು ಹೇಗೆ ಉಳಿದೇನು ?

ಇಷ್ಟಾದರೂ ನನ್ನ ಹುಡುಕಿ ಫಲವೇನು ?
ನಾನು ಇದ್ದರೂ ಇರದೆ
ಇದ್ದರೂ ಬಿದ್ದರೂ
ಬೇರೆ ಯಾರೂ ನನ್ನ ಹುಡುಕಾಡಲೊಲ್ಲರು
ಹಾಗೆಂದು ನನಗೆ ನಾನು ಬೇಡವೇ
ಏನಿದು ಅನರ್ಥ ?

ಕನ್ನಡಿಯ ಎದುರುಗಡೆ ನಾನಿಲ್ಲ
ಅಂಗಿ ಪ್ಯಾಂಟಿನ ಒಳಗೆ ನಾನಿಲ್ಲ
ಸಭೆಯೊಳಗೆ ನಿಂತವನು ನಾನಲ್ಲ
ಈ ಪದ್ಯ ಬರೆದವನೂ ನಾನಲ್ಲ
ನಾನು ಉಂಟು ನಾನು ಇಲ್ಲ
ನಾನು ಕಾಣೆ ನಾನು ಹುಡುಕುವವ
ನನ್ನನ್ನ ನಾನೇ ಹುಡುಕಿ
ನಾನು ಸಿಗಲಿಲ್ಲ
ಎಂದರೆ ಸರಿ ಅಲ್ಲ
ಅಂದರೂ ಸಿಗದೆ ಇದ್ದದ್ದು ಸುಳ್ಳಲ್ಲ

ಈ ಮಣ್ಣಿನಾಳ ಪಾತಾಳದೊಳಗಡೆಗೆ
ನಾನು ಹೂತಿರಬಹುದೇ
ಇರಲಾರೆ-ಇರಲಾರೆ
ನಿನ್ನೆ ಕಂಡಿದ್ದ ಆ ಸುಮದ ನಗೆಯರಳಲ್ಲಿ
ನಾನು ಚೆಲ್ಲಿ ಹೋಗಿರಬಹುದೇ ?
ಇರಲಾರೆ-ಇರಲಾರೆ
ದೇವರೆದರುಗಡೆ ಕಣ್ಮುಚ್ಚಿ ಕುಳಿತಾಗ
ಹರಿದ ಭಕ್ತಿಯ ಕಡಲ
ನೀರಾಗಿ ಸಾಯುಜ್ಯ ಹೊಂದಿರಲುಬಹುದೇ ?
ಇರಲಾರೆ-ಇರಲಾರೆ
ಹಾಗಿದ್ದಲ್ಲಿ
ನಾನೆಂದೂ ತಿರುಗಿ ಬರಲಾರೆ

ಒಂದು ದಿನ ನಡುರಾತ್ರಿ
ಹೆಂಡತಿ ಮಕ್ಕಳು ರಾಜ್ಯ
ಎಲ್ಲವನ್ನೂ ತೊರೆದು
ಬುದ್ಧ ಓಡಿದ ಹಾಗೆ
ನನ್ನೊಳಗಿನಿಂದ ಈ ನಾನು ಓಡಿರಬಹುದೇ ?
ಒಂದು ಹುಣ್ಣಿಮೆ ರಾತ್ರಿ
ಕಾವಿ ಬಟ್ಟೆಯನುಟ್ಟು
ನಾನು ನನ್ನೊಳಗಡೆಗೆ ಹಿಂತಿರುಗಬಹುದೇ ?

ಹೌದಲ್ಲ
ನನ್ನದಾಗಿದ್ದಲ್ಲಿ ನನಗೆ ಸಿಗಲೇಬೇಕು
ಆದರೂ ಅಲ್ಲಿಯವರೆಗೆ ಹುಡುಕಾಡಬೇಕು
ಹುಡುಕೀ ಹುಡುಕೀ ನಾನು
ನನ್ನನ್ನು ಪಡೆದು
ನನ್ನಲ್ಲಿ ನನ್ನನ್ನು ನನ್ನ ಜಾಗದ ಮೇಲೆ
ಕೂರಿಸಿದರೆ ಮಾತ್ರ ಉಳಿದೀತು
ನನ್ನ ನನ್ನತನ
ಇಲ್ಲ-ಇದೇ ಸಣ್ಣತನ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...