Home / ಕವನ / ಕವಿತೆ / ನಾನು

ನಾನು

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ
ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ
“ನಾನು ಕಾಣೆಯಾಗಿದ್ದೇನೆ ಓ ನಾನೇ
ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ
ಬೇಗನೇ ಬಾ”

ನಾನು ಸಿಗಲಿಲ್ಲ
ಮನೆಯಲ್ಲಷ್ಟೇ ಹುಡುಕಿದ್ದನಷ್ಟೆ
ಬೇರೆ ಕಡೆಗೂ ಹುಡುಕೋಣ ಹುಡುಕಿದರೆ
ನಾನು ಸಿಕ್ಕಬಹುದು ಎಂದು ಹುಡುಕಿದೆ
ಜೂನು ತಿಂಗಳ ಮಳೆಯೂ ರಣರಣ ಹಗಲು
ನಾನು ಆಲೆ-ಅಲೆದಾಡಿದೆ ನನ್ನನ್ನು ಸಿಗಲು

ಕಾಲೇಜು ಲೈಬ್ರರಿಯ ಪುಸ್ತಕದಲ್ಲಿ ಎಲ್ಲಾದರೂ
ನಾನು ಬಿದ್ದಿರಬಹುದೇ?
ಅಥವ ಯಾರಾದರೂ ನನ್ನ ಕದ್ದಿರಬಹುದೇ ?
ಇಲ್ಲ-ಹೀಗೂ ಇದ್ದಿರಬಹುದೇ ?
ಒಂದು ದಿನ ಮಳೆಯಲ್ಲಿ ತೋಯುತ್ತ ಬಂದಾಗ
ಜಾರಿ ಹೋಗಿರಬಹುದೇ ?
ಕಿಸೆಯೊಳಗೆ ಐಡೆಂಟಿಟೀ ಕಾರ್ಡು
ಅಲ್ಲಾದರೂ ನಾನು ಸಿಕ್ಕಬಹುದೇ ?

ಹ್ಞಾಂ-
ಅಂದಂತೆ
ಯಾವಾಗಲಾದರೂ ಈ ಮನೆಯಲ್ಲಿ ನಾನು ಇದ್ದೆನೇ
ಇದ್ದದ್ದು ಹೋದದ್ದೆಲ್ಲಿಗೆ ? ಹೋದದ್ದು ಬಂದೀತು ಯಾವಾಗ ?
ಓ ನಾನೇ ನಾನೇ ನನ್ನ ಜೀನೇ
ನೀನು ಸತ್ತೇ ಹೋದೆಯೇನೇ
ಶಂಕರಾಚಾರ್ಯರಿಗೆ ನಾನು ಯಾರು ಎಂಬುದು ಪ್ರಶ್ನೆ

ನಾನು ಶಂಕೆಯಾಚಾಯ೯
ನನಗೋ-ನಾನು ಎಲ್ಲಿದ್ದೇನೆ
ಎಂಬ ಹುಡುಕಾಟ
ಈ ಹುಡುಕಾಟವೆಲ್ಲ ಹುಡುಗಾಟವಾದೀತೇ ?
ಅಯ್ಯೋ-ನಾನು ಸಿಕ್ಕದೇ ಹೋದರೆ
ನಾನು ಹೇಗೆ ಉಳಿದೇನು ?

ಇಷ್ಟಾದರೂ ನನ್ನ ಹುಡುಕಿ ಫಲವೇನು ?
ನಾನು ಇದ್ದರೂ ಇರದೆ
ಇದ್ದರೂ ಬಿದ್ದರೂ
ಬೇರೆ ಯಾರೂ ನನ್ನ ಹುಡುಕಾಡಲೊಲ್ಲರು
ಹಾಗೆಂದು ನನಗೆ ನಾನು ಬೇಡವೇ
ಏನಿದು ಅನರ್ಥ ?

ಕನ್ನಡಿಯ ಎದುರುಗಡೆ ನಾನಿಲ್ಲ
ಅಂಗಿ ಪ್ಯಾಂಟಿನ ಒಳಗೆ ನಾನಿಲ್ಲ
ಸಭೆಯೊಳಗೆ ನಿಂತವನು ನಾನಲ್ಲ
ಈ ಪದ್ಯ ಬರೆದವನೂ ನಾನಲ್ಲ
ನಾನು ಉಂಟು ನಾನು ಇಲ್ಲ
ನಾನು ಕಾಣೆ ನಾನು ಹುಡುಕುವವ
ನನ್ನನ್ನ ನಾನೇ ಹುಡುಕಿ
ನಾನು ಸಿಗಲಿಲ್ಲ
ಎಂದರೆ ಸರಿ ಅಲ್ಲ
ಅಂದರೂ ಸಿಗದೆ ಇದ್ದದ್ದು ಸುಳ್ಳಲ್ಲ

ಈ ಮಣ್ಣಿನಾಳ ಪಾತಾಳದೊಳಗಡೆಗೆ
ನಾನು ಹೂತಿರಬಹುದೇ
ಇರಲಾರೆ-ಇರಲಾರೆ
ನಿನ್ನೆ ಕಂಡಿದ್ದ ಆ ಸುಮದ ನಗೆಯರಳಲ್ಲಿ
ನಾನು ಚೆಲ್ಲಿ ಹೋಗಿರಬಹುದೇ ?
ಇರಲಾರೆ-ಇರಲಾರೆ
ದೇವರೆದರುಗಡೆ ಕಣ್ಮುಚ್ಚಿ ಕುಳಿತಾಗ
ಹರಿದ ಭಕ್ತಿಯ ಕಡಲ
ನೀರಾಗಿ ಸಾಯುಜ್ಯ ಹೊಂದಿರಲುಬಹುದೇ ?
ಇರಲಾರೆ-ಇರಲಾರೆ
ಹಾಗಿದ್ದಲ್ಲಿ
ನಾನೆಂದೂ ತಿರುಗಿ ಬರಲಾರೆ

ಒಂದು ದಿನ ನಡುರಾತ್ರಿ
ಹೆಂಡತಿ ಮಕ್ಕಳು ರಾಜ್ಯ
ಎಲ್ಲವನ್ನೂ ತೊರೆದು
ಬುದ್ಧ ಓಡಿದ ಹಾಗೆ
ನನ್ನೊಳಗಿನಿಂದ ಈ ನಾನು ಓಡಿರಬಹುದೇ ?
ಒಂದು ಹುಣ್ಣಿಮೆ ರಾತ್ರಿ
ಕಾವಿ ಬಟ್ಟೆಯನುಟ್ಟು
ನಾನು ನನ್ನೊಳಗಡೆಗೆ ಹಿಂತಿರುಗಬಹುದೇ ?

ಹೌದಲ್ಲ
ನನ್ನದಾಗಿದ್ದಲ್ಲಿ ನನಗೆ ಸಿಗಲೇಬೇಕು
ಆದರೂ ಅಲ್ಲಿಯವರೆಗೆ ಹುಡುಕಾಡಬೇಕು
ಹುಡುಕೀ ಹುಡುಕೀ ನಾನು
ನನ್ನನ್ನು ಪಡೆದು
ನನ್ನಲ್ಲಿ ನನ್ನನ್ನು ನನ್ನ ಜಾಗದ ಮೇಲೆ
ಕೂರಿಸಿದರೆ ಮಾತ್ರ ಉಳಿದೀತು
ನನ್ನ ನನ್ನತನ
ಇಲ್ಲ-ಇದೇ ಸಣ್ಣತನ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...