Home / ಕವನ / ಕವಿತೆ / ನಾನು

ನಾನು

ಒಂದು ದಿನ ಬೆಳಿಗ್ಗೆ ನಾನು ಕಾಣೆಯಾದೆ
ಎಷ್ಟು ಹುಡುಕಿದರೂ ಸಿಕ್ಕಲಿಲ್ಲ
ಕಂಗಾಲಾಗಿ ಪತ್ರಿಕೆಯಲ್ಲಿ ಪ್ರಕಟಣೆ ಕೊಟ್ಟೆ
“ನಾನು ಕಾಣೆಯಾಗಿದ್ದೇನೆ ಓ ನಾನೇ
ನೀನಿಲ್ಲದೇ ನಾನು ಇರಲಾರೆ ಅದಕ್ಕಾಗಿ
ಬೇಗನೇ ಬಾ”

ನಾನು ಸಿಗಲಿಲ್ಲ
ಮನೆಯಲ್ಲಷ್ಟೇ ಹುಡುಕಿದ್ದನಷ್ಟೆ
ಬೇರೆ ಕಡೆಗೂ ಹುಡುಕೋಣ ಹುಡುಕಿದರೆ
ನಾನು ಸಿಕ್ಕಬಹುದು ಎಂದು ಹುಡುಕಿದೆ
ಜೂನು ತಿಂಗಳ ಮಳೆಯೂ ರಣರಣ ಹಗಲು
ನಾನು ಆಲೆ-ಅಲೆದಾಡಿದೆ ನನ್ನನ್ನು ಸಿಗಲು

ಕಾಲೇಜು ಲೈಬ್ರರಿಯ ಪುಸ್ತಕದಲ್ಲಿ ಎಲ್ಲಾದರೂ
ನಾನು ಬಿದ್ದಿರಬಹುದೇ?
ಅಥವ ಯಾರಾದರೂ ನನ್ನ ಕದ್ದಿರಬಹುದೇ ?
ಇಲ್ಲ-ಹೀಗೂ ಇದ್ದಿರಬಹುದೇ ?
ಒಂದು ದಿನ ಮಳೆಯಲ್ಲಿ ತೋಯುತ್ತ ಬಂದಾಗ
ಜಾರಿ ಹೋಗಿರಬಹುದೇ ?
ಕಿಸೆಯೊಳಗೆ ಐಡೆಂಟಿಟೀ ಕಾರ್ಡು
ಅಲ್ಲಾದರೂ ನಾನು ಸಿಕ್ಕಬಹುದೇ ?

ಹ್ಞಾಂ-
ಅಂದಂತೆ
ಯಾವಾಗಲಾದರೂ ಈ ಮನೆಯಲ್ಲಿ ನಾನು ಇದ್ದೆನೇ
ಇದ್ದದ್ದು ಹೋದದ್ದೆಲ್ಲಿಗೆ ? ಹೋದದ್ದು ಬಂದೀತು ಯಾವಾಗ ?
ಓ ನಾನೇ ನಾನೇ ನನ್ನ ಜೀನೇ
ನೀನು ಸತ್ತೇ ಹೋದೆಯೇನೇ
ಶಂಕರಾಚಾರ್ಯರಿಗೆ ನಾನು ಯಾರು ಎಂಬುದು ಪ್ರಶ್ನೆ

ನಾನು ಶಂಕೆಯಾಚಾಯ೯
ನನಗೋ-ನಾನು ಎಲ್ಲಿದ್ದೇನೆ
ಎಂಬ ಹುಡುಕಾಟ
ಈ ಹುಡುಕಾಟವೆಲ್ಲ ಹುಡುಗಾಟವಾದೀತೇ ?
ಅಯ್ಯೋ-ನಾನು ಸಿಕ್ಕದೇ ಹೋದರೆ
ನಾನು ಹೇಗೆ ಉಳಿದೇನು ?

ಇಷ್ಟಾದರೂ ನನ್ನ ಹುಡುಕಿ ಫಲವೇನು ?
ನಾನು ಇದ್ದರೂ ಇರದೆ
ಇದ್ದರೂ ಬಿದ್ದರೂ
ಬೇರೆ ಯಾರೂ ನನ್ನ ಹುಡುಕಾಡಲೊಲ್ಲರು
ಹಾಗೆಂದು ನನಗೆ ನಾನು ಬೇಡವೇ
ಏನಿದು ಅನರ್ಥ ?

ಕನ್ನಡಿಯ ಎದುರುಗಡೆ ನಾನಿಲ್ಲ
ಅಂಗಿ ಪ್ಯಾಂಟಿನ ಒಳಗೆ ನಾನಿಲ್ಲ
ಸಭೆಯೊಳಗೆ ನಿಂತವನು ನಾನಲ್ಲ
ಈ ಪದ್ಯ ಬರೆದವನೂ ನಾನಲ್ಲ
ನಾನು ಉಂಟು ನಾನು ಇಲ್ಲ
ನಾನು ಕಾಣೆ ನಾನು ಹುಡುಕುವವ
ನನ್ನನ್ನ ನಾನೇ ಹುಡುಕಿ
ನಾನು ಸಿಗಲಿಲ್ಲ
ಎಂದರೆ ಸರಿ ಅಲ್ಲ
ಅಂದರೂ ಸಿಗದೆ ಇದ್ದದ್ದು ಸುಳ್ಳಲ್ಲ

ಈ ಮಣ್ಣಿನಾಳ ಪಾತಾಳದೊಳಗಡೆಗೆ
ನಾನು ಹೂತಿರಬಹುದೇ
ಇರಲಾರೆ-ಇರಲಾರೆ
ನಿನ್ನೆ ಕಂಡಿದ್ದ ಆ ಸುಮದ ನಗೆಯರಳಲ್ಲಿ
ನಾನು ಚೆಲ್ಲಿ ಹೋಗಿರಬಹುದೇ ?
ಇರಲಾರೆ-ಇರಲಾರೆ
ದೇವರೆದರುಗಡೆ ಕಣ್ಮುಚ್ಚಿ ಕುಳಿತಾಗ
ಹರಿದ ಭಕ್ತಿಯ ಕಡಲ
ನೀರಾಗಿ ಸಾಯುಜ್ಯ ಹೊಂದಿರಲುಬಹುದೇ ?
ಇರಲಾರೆ-ಇರಲಾರೆ
ಹಾಗಿದ್ದಲ್ಲಿ
ನಾನೆಂದೂ ತಿರುಗಿ ಬರಲಾರೆ

ಒಂದು ದಿನ ನಡುರಾತ್ರಿ
ಹೆಂಡತಿ ಮಕ್ಕಳು ರಾಜ್ಯ
ಎಲ್ಲವನ್ನೂ ತೊರೆದು
ಬುದ್ಧ ಓಡಿದ ಹಾಗೆ
ನನ್ನೊಳಗಿನಿಂದ ಈ ನಾನು ಓಡಿರಬಹುದೇ ?
ಒಂದು ಹುಣ್ಣಿಮೆ ರಾತ್ರಿ
ಕಾವಿ ಬಟ್ಟೆಯನುಟ್ಟು
ನಾನು ನನ್ನೊಳಗಡೆಗೆ ಹಿಂತಿರುಗಬಹುದೇ ?

ಹೌದಲ್ಲ
ನನ್ನದಾಗಿದ್ದಲ್ಲಿ ನನಗೆ ಸಿಗಲೇಬೇಕು
ಆದರೂ ಅಲ್ಲಿಯವರೆಗೆ ಹುಡುಕಾಡಬೇಕು
ಹುಡುಕೀ ಹುಡುಕೀ ನಾನು
ನನ್ನನ್ನು ಪಡೆದು
ನನ್ನಲ್ಲಿ ನನ್ನನ್ನು ನನ್ನ ಜಾಗದ ಮೇಲೆ
ಕೂರಿಸಿದರೆ ಮಾತ್ರ ಉಳಿದೀತು
ನನ್ನ ನನ್ನತನ
ಇಲ್ಲ-ಇದೇ ಸಣ್ಣತನ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...