Home / ಕವನ / ಕವಿತೆ / ಬಂತಿದೋ ಸಂಕ್ರಾಂತಿ

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ
ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ
ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು
ಉದ್ದುದ್ದ ಕೋಲು ಚೆಲ್ಲುತ ಬರುವ
ಸಂಕ್ರಾಂತಿ ಕಾಲ-

ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು
ಹೊರಬಾಗಿಲು ಕಟ್ಟೆಗೆ ಬಂದು ಕೂಡುವ
ಊರುಗೋಲು ಹಿಡಿದ ಅಜ್ಜನ ಬೊಚ್ಚುನಗು;
ಮೊಮ್ಮಕ್ಕಳ ಕೈ ಹಿಡಿದು ಹಿತ್ತಲಂಗಳದ
ಬಳ್ಳಿಕಾಯಿ ಹರಿವ, ಉಡಿಯೊಳಗೆ ಮೊಮ್ಮಕ್ಕಳನು
ಆಡಿಸುತ ಚಿತ್ತಾರದ ಕೌದಿ ಹೊಲೆಯುವ
ಬೆಚ್ಚನೆಯ ನಗುವಿನ ಅಜ್ಜಿ;
ಒಲೆಯ ಮುಂದೆ ಕುಳಿತು ಪ್ರೀತಿ ಪ್ರೇಮದ
ಮುಗುಳು ನಗೆಯ ಕುಸುರೆಳ್ಳಿಗೆ
ಮತ್ತೆ ಮತ್ತೆ ಮುಳ್ಳೆಬ್ಬಿಸಿ ತುಟಿಗೊತ್ತಿಕೊಳ್ಳುವ
ಹದಿಹರೆಯದ ಸಂಭ್ರಮದ ತುಂಟು ಹುಡುಗಿಯರು –

ಹಳ್ಳ ಹೊಳೆಗಳ ಬೆಚ್ಚನೆಯ ನೀರಿನಲಿ ಮಿಂದೆದ್ದು
ಮಡಿಯುಟ್ಟು ಸುಗ್ಗಿಯ ಹೊಸ ಫಸಲು ಪೂಜಿಸುವ ಕಾಲ
ಹಬ್ಬ ಹಬ್ಬಗಳ ನೆಪಮಾಡಿ ಉಂಡುಟ್ಟು
ಸಿಹಿ ತಿಂದು ನಕ್ಕು ನಲಿದು ಆಕಾಶದಂಗಳಕೆ
ಪತಂಗ ಹಾರಿಸುವ ಗೂಡು ಹಕ್ಕಿಗಳ ಸ್ವಚ್ಛಂದದ ಕಾಲ-

ಗುಲಾಲು ಮೆತ್ತಿ ರಿಬ್ಬನ್‌ ಕಟ್ಟಿ ಎತ್ತುಗಳ ಸಿಂಗರಿಸಿ
ಕೆಂಡ ಹಾಯಿಸುವ ಚಕ್ಕಡಿ ಓಡಿಸುವ ಮೋಜಿನ ಕಾಲ
ಪಾಪ ಕರ್‍ಮಗಳ ಪ್ರಾಯಶ್ಚಿತಕೆ
ನಿಗಿನಿಗಿ ಕೆಂಡಹಾಯುವ ಪರ್‍ವಕಾಲ

ವರುಷ ವರುಷ ಸಾವಿರ ವರುಷಗಳ
ಪುರಾಣ ಇತಿಹಾಸಗಳ ಕಥೆ ಹೊತ್ತು
ರಥವೇರಿ ಬರುವ ಸೂರ್‍ಯ
ಸುಸ್ತಾಗದೆ ಸಿಟ್ಟಾಗದೆ ಮತ್ತೆ ಮತ್ತೆ
ಜಾಗತೀಕರಣದ ಸಂತೆ ಪೇಟೆಯ
ಗಂಟು ಕಟ್ಟಿಕೊಳ್ಳುತ ಭವಿಷ್ಯಕೆ ಬಿಚ್ಚಲು
ಒಮ್ಮೆ ಉತ್ತರಾಯಣ ಒಮ್ಮೆ ದಕ್ಷಿಣಾಯಣದ
ಕಾಲಚಿತ್ರ ಬಿಡಿಸುತ ಅವನೂ ನಿರಮ್ಮಳವಾಗುವ ಕಾಲ
ಇದು ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆಯ
ಮಾತನಾಡುವ ಸಂಕ್ರಾಂತಿ ಕಾಲ
ಇದು ಸಂಕ್ರಾಂತಿ ಕಾಲ-
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...