Home / ಕವನ / ಕವಿತೆ / ಬಂತಿದೋ ಸಂಕ್ರಾಂತಿ

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ
ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ
ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು
ಉದ್ದುದ್ದ ಕೋಲು ಚೆಲ್ಲುತ ಬರುವ
ಸಂಕ್ರಾಂತಿ ಕಾಲ-

ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು
ಹೊರಬಾಗಿಲು ಕಟ್ಟೆಗೆ ಬಂದು ಕೂಡುವ
ಊರುಗೋಲು ಹಿಡಿದ ಅಜ್ಜನ ಬೊಚ್ಚುನಗು;
ಮೊಮ್ಮಕ್ಕಳ ಕೈ ಹಿಡಿದು ಹಿತ್ತಲಂಗಳದ
ಬಳ್ಳಿಕಾಯಿ ಹರಿವ, ಉಡಿಯೊಳಗೆ ಮೊಮ್ಮಕ್ಕಳನು
ಆಡಿಸುತ ಚಿತ್ತಾರದ ಕೌದಿ ಹೊಲೆಯುವ
ಬೆಚ್ಚನೆಯ ನಗುವಿನ ಅಜ್ಜಿ;
ಒಲೆಯ ಮುಂದೆ ಕುಳಿತು ಪ್ರೀತಿ ಪ್ರೇಮದ
ಮುಗುಳು ನಗೆಯ ಕುಸುರೆಳ್ಳಿಗೆ
ಮತ್ತೆ ಮತ್ತೆ ಮುಳ್ಳೆಬ್ಬಿಸಿ ತುಟಿಗೊತ್ತಿಕೊಳ್ಳುವ
ಹದಿಹರೆಯದ ಸಂಭ್ರಮದ ತುಂಟು ಹುಡುಗಿಯರು –

ಹಳ್ಳ ಹೊಳೆಗಳ ಬೆಚ್ಚನೆಯ ನೀರಿನಲಿ ಮಿಂದೆದ್ದು
ಮಡಿಯುಟ್ಟು ಸುಗ್ಗಿಯ ಹೊಸ ಫಸಲು ಪೂಜಿಸುವ ಕಾಲ
ಹಬ್ಬ ಹಬ್ಬಗಳ ನೆಪಮಾಡಿ ಉಂಡುಟ್ಟು
ಸಿಹಿ ತಿಂದು ನಕ್ಕು ನಲಿದು ಆಕಾಶದಂಗಳಕೆ
ಪತಂಗ ಹಾರಿಸುವ ಗೂಡು ಹಕ್ಕಿಗಳ ಸ್ವಚ್ಛಂದದ ಕಾಲ-

ಗುಲಾಲು ಮೆತ್ತಿ ರಿಬ್ಬನ್‌ ಕಟ್ಟಿ ಎತ್ತುಗಳ ಸಿಂಗರಿಸಿ
ಕೆಂಡ ಹಾಯಿಸುವ ಚಕ್ಕಡಿ ಓಡಿಸುವ ಮೋಜಿನ ಕಾಲ
ಪಾಪ ಕರ್‍ಮಗಳ ಪ್ರಾಯಶ್ಚಿತಕೆ
ನಿಗಿನಿಗಿ ಕೆಂಡಹಾಯುವ ಪರ್‍ವಕಾಲ

ವರುಷ ವರುಷ ಸಾವಿರ ವರುಷಗಳ
ಪುರಾಣ ಇತಿಹಾಸಗಳ ಕಥೆ ಹೊತ್ತು
ರಥವೇರಿ ಬರುವ ಸೂರ್‍ಯ
ಸುಸ್ತಾಗದೆ ಸಿಟ್ಟಾಗದೆ ಮತ್ತೆ ಮತ್ತೆ
ಜಾಗತೀಕರಣದ ಸಂತೆ ಪೇಟೆಯ
ಗಂಟು ಕಟ್ಟಿಕೊಳ್ಳುತ ಭವಿಷ್ಯಕೆ ಬಿಚ್ಚಲು
ಒಮ್ಮೆ ಉತ್ತರಾಯಣ ಒಮ್ಮೆ ದಕ್ಷಿಣಾಯಣದ
ಕಾಲಚಿತ್ರ ಬಿಡಿಸುತ ಅವನೂ ನಿರಮ್ಮಳವಾಗುವ ಕಾಲ
ಇದು ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆಯ
ಮಾತನಾಡುವ ಸಂಕ್ರಾಂತಿ ಕಾಲ
ಇದು ಸಂಕ್ರಾಂತಿ ಕಾಲ-
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...