Home / ಕವನ / ಕವಿತೆ / ಬಂತಿದೋ ಸಂಕ್ರಾಂತಿ

ಬಂತಿದೋ ಸಂಕ್ರಾಂತಿ

ಇದು ಉತ್ತರಾಯಣದ ಪುಣ್ಯಕಾಲ
ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ
ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು
ಉದ್ದುದ್ದ ಕೋಲು ಚೆಲ್ಲುತ ಬರುವ
ಸಂಕ್ರಾಂತಿ ಕಾಲ-

ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು
ಹೊರಬಾಗಿಲು ಕಟ್ಟೆಗೆ ಬಂದು ಕೂಡುವ
ಊರುಗೋಲು ಹಿಡಿದ ಅಜ್ಜನ ಬೊಚ್ಚುನಗು;
ಮೊಮ್ಮಕ್ಕಳ ಕೈ ಹಿಡಿದು ಹಿತ್ತಲಂಗಳದ
ಬಳ್ಳಿಕಾಯಿ ಹರಿವ, ಉಡಿಯೊಳಗೆ ಮೊಮ್ಮಕ್ಕಳನು
ಆಡಿಸುತ ಚಿತ್ತಾರದ ಕೌದಿ ಹೊಲೆಯುವ
ಬೆಚ್ಚನೆಯ ನಗುವಿನ ಅಜ್ಜಿ;
ಒಲೆಯ ಮುಂದೆ ಕುಳಿತು ಪ್ರೀತಿ ಪ್ರೇಮದ
ಮುಗುಳು ನಗೆಯ ಕುಸುರೆಳ್ಳಿಗೆ
ಮತ್ತೆ ಮತ್ತೆ ಮುಳ್ಳೆಬ್ಬಿಸಿ ತುಟಿಗೊತ್ತಿಕೊಳ್ಳುವ
ಹದಿಹರೆಯದ ಸಂಭ್ರಮದ ತುಂಟು ಹುಡುಗಿಯರು –

ಹಳ್ಳ ಹೊಳೆಗಳ ಬೆಚ್ಚನೆಯ ನೀರಿನಲಿ ಮಿಂದೆದ್ದು
ಮಡಿಯುಟ್ಟು ಸುಗ್ಗಿಯ ಹೊಸ ಫಸಲು ಪೂಜಿಸುವ ಕಾಲ
ಹಬ್ಬ ಹಬ್ಬಗಳ ನೆಪಮಾಡಿ ಉಂಡುಟ್ಟು
ಸಿಹಿ ತಿಂದು ನಕ್ಕು ನಲಿದು ಆಕಾಶದಂಗಳಕೆ
ಪತಂಗ ಹಾರಿಸುವ ಗೂಡು ಹಕ್ಕಿಗಳ ಸ್ವಚ್ಛಂದದ ಕಾಲ-

ಗುಲಾಲು ಮೆತ್ತಿ ರಿಬ್ಬನ್‌ ಕಟ್ಟಿ ಎತ್ತುಗಳ ಸಿಂಗರಿಸಿ
ಕೆಂಡ ಹಾಯಿಸುವ ಚಕ್ಕಡಿ ಓಡಿಸುವ ಮೋಜಿನ ಕಾಲ
ಪಾಪ ಕರ್‍ಮಗಳ ಪ್ರಾಯಶ್ಚಿತಕೆ
ನಿಗಿನಿಗಿ ಕೆಂಡಹಾಯುವ ಪರ್‍ವಕಾಲ

ವರುಷ ವರುಷ ಸಾವಿರ ವರುಷಗಳ
ಪುರಾಣ ಇತಿಹಾಸಗಳ ಕಥೆ ಹೊತ್ತು
ರಥವೇರಿ ಬರುವ ಸೂರ್‍ಯ
ಸುಸ್ತಾಗದೆ ಸಿಟ್ಟಾಗದೆ ಮತ್ತೆ ಮತ್ತೆ
ಜಾಗತೀಕರಣದ ಸಂತೆ ಪೇಟೆಯ
ಗಂಟು ಕಟ್ಟಿಕೊಳ್ಳುತ ಭವಿಷ್ಯಕೆ ಬಿಚ್ಚಲು
ಒಮ್ಮೆ ಉತ್ತರಾಯಣ ಒಮ್ಮೆ ದಕ್ಷಿಣಾಯಣದ
ಕಾಲಚಿತ್ರ ಬಿಡಿಸುತ ಅವನೂ ನಿರಮ್ಮಳವಾಗುವ ಕಾಲ
ಇದು ಎಳ್ಳು ಬೆಲ್ಲವ ತಿಂದು ಒಳ್ಳೊಳ್ಳೆಯ
ಮಾತನಾಡುವ ಸಂಕ್ರಾಂತಿ ಕಾಲ
ಇದು ಸಂಕ್ರಾಂತಿ ಕಾಲ-
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...