ಬಾಯ ಬಂಧಿಸಿದ ಬಸವ

(ಒಂದು ರೂಪಕ ಕಥನ)

ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು,
ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು.
ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ
ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ!

ಹುರುಳಿ ಹೆಸರು ಅಲಸಂದೆಯವರೆಗಳ ಬಳ್ಳಿಯು ಬಿತ್ತರಿಸಿ,
ಧರಣಿಯು ಧರಿಸಿದ ಹಸಿರುಡಿಗೆಯ ತೆರ ತೋರಿತು ಕಂಗೊಳಿಸಿ,
ಕರಿಯ ಕುಪ್ಪಸಕೆ ಹಸಿರು ನವಿರೆಳೆಯ ಸುಳಿವು-ಮೊಗ್ಗೆ ತಗೆದು,
ಧರಿಸಿದ ಪರಿಯಲಿ ಎರೆಯ ನೆಲದ ಹತ್ತಿಯ ಬೆಳೆ ಮಿರುಗಿದುದು.

ಕಿರುಮುತ್ತುಗಳೊಳು ಸಮೆದ ಪೆಂಡೆಯದ ದಂಡೆಯ ತೆರದಿಂದೆ
ಹುರಿನವಣೆಯ ತೆನೆಗಳು ತೊನೆದಾಡುತ ಮೆರೆದುವಂದದಿಂದೆ.
ಜೋಳದ ಬೆಳೆಯನು ಕೊಯಿದೊಟ್ಟಿದ ಗೂಡುಗಳೋರಣದಿಂದೆ
ತೋರಿದುವಾ ಭೂರಮಣಿಯ ಧಾನ್ಯಾಗಾರದಂದದಿಂದೆ.

ಇಂತಿದನೆಲ್ಲವ ನೋಡುತ ನಡೆದಿರೆ, ಬಾಯಿಜಾಳಿಗೆಯಲಿ
ಬಾಯನು ಬಿಗಿದಾ ಹೋರಿಯೊಂದು ನಿಂದಿಹುದಾ ಹೊಲದಲ್ಲಿ.
ಸುತ್ತಲೆಲ್ಲವೂ ಕತ್ತಲಿಸಿರೆ ಬೆಳೆ, ಅದನು ನೋಡದಿಹುದು;
ಕುದಿ ಸಿಲುಕಿದವೊಲು ಕಂಬನಿಗಳ ಸುರಿಸುತ ತಾನಿಹುದು

ಮರುಕ ಮೂಡೆ ನಾನದರ ಬಳಿಗೆ ನಡೆತಂದು ವಿಚಾರಿಸಿದೆ :
ಹಿರಿಯ ಹೋರಿ ನೀನೇತಕೆ ಅಳುತಿಹೆ ? ಹೇಳೆನ್ನಯ ಮುಂದೆ
ಇನಿತು ಕೇಳಲಾ ಬಸವನು ಬಿಸಿಯುಸಿರನ್ನು ಬಿಡುತಲಂದು,
ಬಿತ್ತರಿಸಿತು ತನ್ನಯ ಬನ್ನದ ಕತೆಯನು ಬಗೆಯೊಳು ಬೆಂದು:

‘ಏನು ಹೇಳುವುದು ನನ್ನ ಬವಣೆಯನು ದೀನಜೀವಿ ನಾನು,
ಮಾನವರೆನ್ನನು ಕಾಡುವ ರೀತಿಯನ್ನು ಬಣ್ಣಿಸುವೆನು?
ಸಕಲ ಜೀವಿಗಳ ಸಲಹಲು ದೇವನು ನೆಲವನು ನಿಲಿಸಿಹನು;
ವಿಕಲಮತಿಯ ಮನುಜರು ತಮ್ಮೊಬ್ಬರದೆಂದು ತಿಳಿವರಿದನು.

ಉತ್ತು ನೆಲವ ನಾ ಬಿತ್ತುವೆ; ಕಸ-ಕಳೆ ಕಿತ್ತು ಬೆಳೆಗಳನ್ನು
ನಿತ್ಯದಿ ಸಲಹುತ ಹೊತ್ತಿಗೆ ಹೊಸ ಹೊಸ ತುತ್ತ ನೊದವಿಸುವೆನು.
ಹವಳದಂತೆ ಹಸನಾದ ಗೋದಿಗಳು ಹವಣದ ಕಡಲೆಗಳು.
ನವಣೆ-ರಾಗಿಗಳು ಮುತ್ತಿನ ತೆರದಲಿ ಮಿನುಗುವ ಜೋಳಗಳು!

ಮಲ್ಲಿಗೆ ಮೊಗ್ಗೆಯ ಪೋಲ್ವ ಕುಸಿಬೆ, ಮೆಲ್ಲುವ ನೆಲಗಡಲೆಗಳು
ಎಲ್ಲವು ನನ್ನಯ ದುಡಿಮೆಯಿಂದಲೇ ಮನುಜಗೆ ದೊರೆಯುವವು.
ಹಿರಿಹಿರಿಗಾಳನು ಹರುಷದಲೊಯ್ಯುತೆ ಹೊರೆಯುವರೊಡಲನ್ನು,
ತವುಡು ಸಿವುಡು ಕಸಗಾಳು, ಹೊಟ್ಟ ನೆನಗೀವರು ಕೆಟ್ಟುದನು.

ಮಿದುವಾಸಿಗೆ ಬಗೆಬಗೆಯ ಬೆಲೆಯ ಬಟ್ಟೆಗಳನ್ನು ನಿರ್‍ಮಿಸುವ
ಹದದ ಹತ್ತಿಯನ್ನು ಒದವಿಸಿ ಸಂತತವೀಯುವ ಸಮ್ಮುದವ.
ಪರಿಪರಿ ಪಯಿರು-ಬೆಳೆಗಳಿಂದಲಿ ನೆಲಸಿರಿಯನು ಸಿಂಗರಿಸಿ,
ನಿರುತವು ಸಂತಸವೀಯುವೆ ಸರ್ವಜನಂಗಳ ಮನರಮಿಸಿ.

ನನ್ನ ನೆರವಿನೊಳೆ ಮಣ್ಣು ಕಲ್ಲು-ಮರ-ಮಟ್ಟುಗಳನು ತರುತ
ಚೆನ್ನು ಚೆನ್ನು ಮನೆಯನ್ನು ಮಾಡಿ ವಾಸಿಸುವರು ಸುಖಪಡುತ.
ನೀರುಣಿಸಲಾ ತೋಟಕೆ ನೀರಿನ ಮೊಟ್ಟೆಯನೆಳೆಯುವೆನು;
ಭಾರವ ಹೊರುತಲಿ ಎಲ್ಲ ಧಾನ್ಯಗಳ ಮನೆಗೊಯಿದೀಯುವೆನು.

ಇಂತು ಮನುಜರಿಗೆ ಸೌಖ್ಯದ ಸಾಧನೆ ನಿಂತು ಒದವಿಸಿದರೂ
ಸಂತತವೂ ನನ್ನಯ ಸುಖ ನೋಡದೆ ಪೀಡೆಯ ಕೊಡುತಿಹರು.
ಸದಾಕಾಲ ನನ್ನನೆ ದುಡಿಸುತೆ ಇಂತಹ ಬೆಳೆ ಪಡೆಯುವರು;
ಇದೋ ನೋಡು, ಈ ಬಗೆ ಬಾಯ್‌ಬಿಗಿಯುತ ನನಗೇ ತಿನಗೊಡರು.

ಹೇಳಿದಂತೆ ಕೇಳಲು ಹೆಣೆವರು ಹದಿನೆಂಟು ಹೊಂಚುಗಳನು,
ಕೋಲುಬಾರು ಹಣೆಹಗ್ಗ ಗುದಿಗೆಯಾ ಮೂಗುದಾರಗಳನು
ಹೂಂಕರಿಸೆನ್ನಯ ಬಂಧುವರ್ಗಕೀಯಲು ಎಚ್ಚರಿಕೆಯನು-
ಆಂಕಿತವಿಲ್ಲವು ನನಗೆ; ನೋಡು ಬಿಗಿದಿರುವರು ಬಾಯನ್ನು.

ನನ್ನ ದುಡಿಮೆಯೊಳೆ ಸುಮ್ಮಾನವ ಪಡೆದೆನ್ನನು ಲೆಕ್ಕಿಸದೆ
ಬನ್ನವು ! ಗೋದಲೆಯೊಳಗೆ ಬಿಗಿಯುವರು ಕೊರಳುಗಣ್ಣಿಯಿಂದೆ
ಅನುಭವಿಸಲು ಸ್ವಾತಂತ್ರ್ಯವನಿಚ್ಛಿಸಿ, ಯೋಚಿಸಿ ಮನದೊಳಗೆ-
ಘನಗರ್ಜನೆಯಲಿ ಕೂಗುತ ನಾ ನಸು ಚರಿಸಲಡವಿಯೊಳಗೆ-

ದುರುಳ ಮನುಜನೀಕ್ಷಿಸಿ ಶಿಕ್ಷಿಸುವನು ಬಿಗಿದೆನ್ನನು ಕಟ್ಟಿ,
ಮರುಳನು ನಾನೀ ಧರೆಯೊಳು ಜನ್ಮಿಸಿ ಏನು ಸೌಖ್ಯ ಪಟ್ಟೆ ?
ಮಾನವರಿವರಲ್ಲವು ದಾನವರೇ! ಸತ್ಯವು ತಿಳಿ ನೀನು!
ಏನು ಮಾಡಲೀ ಕ್ರೂರರ ಬಲೆಯಿಂ ಜಾರಲುಪಾಯವನು ?

ನಂದಿವಾಹನಾ | ಚಂದ್ರಶೇಖರಾ | ವೃಂದಾರಕ ವಿನುತಾ |
ಬಂಧದಿಂದ ನಮ್ಮವರೆಲ್ಲರನೂ ತಾರಿಸೆನ್ನ ತಾತಾ !’
ಇಂತು ಬೆಸಸಿ ಬಿಸುಸುಯಿದು ವ್ಯಸನದಲಿ ಮಿಂದು ಗೊಂದೆ ತಾನು
ನಿಂತಿತು ಮುಗಿಲನು ನೋಡುತ ಸ್ಮರಿಸುತ ಪರಮೇಶ್ವರನನ್ನು

ಎತ್ತಿನ ಕುತ್ತದ ವೃತ್ತವನ್ನು ಕೇಳುತ್ತ ಚಿತ್ತದಲ್ಲಿ
ಒತ್ತರಿಸಿದ ವ್ಯಥೆಯನು ಹತ್ತಿಕ್ಕುತ ಮನೆಗೆ ಬಂದೆ ಮರಳಿ
ಎತ್ತಿನ ಕಧೆಗೀ ಭುವನದ ದೀನ-ದರಿದ್ರರ ಬಾಳ್ಗತೆಯು
ಸತ್ಯವು ಸಮವಿಹುದೆನ್ನುತ ಬಂದಿತು ಬಗೆಯೊಳು ಭಾವನೆಯು !

‘ಸರುವ ಜೀವಿಗಳಿಗೂ ಸ್ವಾತಂತ್ರ್ಯದ ಸುಖವನಿತ್ತು ನೀನು
ಪೊರೆಯೊ!’ ಎನುತ ಪರಮಾತ್ಮನ ಮನದೊಳಗಂದು ಧ್ಯಾನಿಸಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುವೇ ನಿನ್ನ ಪಾದ ಧೂಳಿನ
Next post ನಿರ್ವಸ್ತುಭಾವ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…