Home / ಕವನ / ಕವಿತೆ / ಬಾಯ ಬಂಧಿಸಿದ ಬಸವ

ಬಾಯ ಬಂಧಿಸಿದ ಬಸವ

(ಒಂದು ರೂಪಕ ಕಥನ)

ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು,
ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು.
ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ
ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ!

ಹುರುಳಿ ಹೆಸರು ಅಲಸಂದೆಯವರೆಗಳ ಬಳ್ಳಿಯು ಬಿತ್ತರಿಸಿ,
ಧರಣಿಯು ಧರಿಸಿದ ಹಸಿರುಡಿಗೆಯ ತೆರ ತೋರಿತು ಕಂಗೊಳಿಸಿ,
ಕರಿಯ ಕುಪ್ಪಸಕೆ ಹಸಿರು ನವಿರೆಳೆಯ ಸುಳಿವು-ಮೊಗ್ಗೆ ತಗೆದು,
ಧರಿಸಿದ ಪರಿಯಲಿ ಎರೆಯ ನೆಲದ ಹತ್ತಿಯ ಬೆಳೆ ಮಿರುಗಿದುದು.

ಕಿರುಮುತ್ತುಗಳೊಳು ಸಮೆದ ಪೆಂಡೆಯದ ದಂಡೆಯ ತೆರದಿಂದೆ
ಹುರಿನವಣೆಯ ತೆನೆಗಳು ತೊನೆದಾಡುತ ಮೆರೆದುವಂದದಿಂದೆ.
ಜೋಳದ ಬೆಳೆಯನು ಕೊಯಿದೊಟ್ಟಿದ ಗೂಡುಗಳೋರಣದಿಂದೆ
ತೋರಿದುವಾ ಭೂರಮಣಿಯ ಧಾನ್ಯಾಗಾರದಂದದಿಂದೆ.

ಇಂತಿದನೆಲ್ಲವ ನೋಡುತ ನಡೆದಿರೆ, ಬಾಯಿಜಾಳಿಗೆಯಲಿ
ಬಾಯನು ಬಿಗಿದಾ ಹೋರಿಯೊಂದು ನಿಂದಿಹುದಾ ಹೊಲದಲ್ಲಿ.
ಸುತ್ತಲೆಲ್ಲವೂ ಕತ್ತಲಿಸಿರೆ ಬೆಳೆ, ಅದನು ನೋಡದಿಹುದು;
ಕುದಿ ಸಿಲುಕಿದವೊಲು ಕಂಬನಿಗಳ ಸುರಿಸುತ ತಾನಿಹುದು

ಮರುಕ ಮೂಡೆ ನಾನದರ ಬಳಿಗೆ ನಡೆತಂದು ವಿಚಾರಿಸಿದೆ :
ಹಿರಿಯ ಹೋರಿ ನೀನೇತಕೆ ಅಳುತಿಹೆ ? ಹೇಳೆನ್ನಯ ಮುಂದೆ
ಇನಿತು ಕೇಳಲಾ ಬಸವನು ಬಿಸಿಯುಸಿರನ್ನು ಬಿಡುತಲಂದು,
ಬಿತ್ತರಿಸಿತು ತನ್ನಯ ಬನ್ನದ ಕತೆಯನು ಬಗೆಯೊಳು ಬೆಂದು:

‘ಏನು ಹೇಳುವುದು ನನ್ನ ಬವಣೆಯನು ದೀನಜೀವಿ ನಾನು,
ಮಾನವರೆನ್ನನು ಕಾಡುವ ರೀತಿಯನ್ನು ಬಣ್ಣಿಸುವೆನು?
ಸಕಲ ಜೀವಿಗಳ ಸಲಹಲು ದೇವನು ನೆಲವನು ನಿಲಿಸಿಹನು;
ವಿಕಲಮತಿಯ ಮನುಜರು ತಮ್ಮೊಬ್ಬರದೆಂದು ತಿಳಿವರಿದನು.

ಉತ್ತು ನೆಲವ ನಾ ಬಿತ್ತುವೆ; ಕಸ-ಕಳೆ ಕಿತ್ತು ಬೆಳೆಗಳನ್ನು
ನಿತ್ಯದಿ ಸಲಹುತ ಹೊತ್ತಿಗೆ ಹೊಸ ಹೊಸ ತುತ್ತ ನೊದವಿಸುವೆನು.
ಹವಳದಂತೆ ಹಸನಾದ ಗೋದಿಗಳು ಹವಣದ ಕಡಲೆಗಳು.
ನವಣೆ-ರಾಗಿಗಳು ಮುತ್ತಿನ ತೆರದಲಿ ಮಿನುಗುವ ಜೋಳಗಳು!

ಮಲ್ಲಿಗೆ ಮೊಗ್ಗೆಯ ಪೋಲ್ವ ಕುಸಿಬೆ, ಮೆಲ್ಲುವ ನೆಲಗಡಲೆಗಳು
ಎಲ್ಲವು ನನ್ನಯ ದುಡಿಮೆಯಿಂದಲೇ ಮನುಜಗೆ ದೊರೆಯುವವು.
ಹಿರಿಹಿರಿಗಾಳನು ಹರುಷದಲೊಯ್ಯುತೆ ಹೊರೆಯುವರೊಡಲನ್ನು,
ತವುಡು ಸಿವುಡು ಕಸಗಾಳು, ಹೊಟ್ಟ ನೆನಗೀವರು ಕೆಟ್ಟುದನು.

ಮಿದುವಾಸಿಗೆ ಬಗೆಬಗೆಯ ಬೆಲೆಯ ಬಟ್ಟೆಗಳನ್ನು ನಿರ್‍ಮಿಸುವ
ಹದದ ಹತ್ತಿಯನ್ನು ಒದವಿಸಿ ಸಂತತವೀಯುವ ಸಮ್ಮುದವ.
ಪರಿಪರಿ ಪಯಿರು-ಬೆಳೆಗಳಿಂದಲಿ ನೆಲಸಿರಿಯನು ಸಿಂಗರಿಸಿ,
ನಿರುತವು ಸಂತಸವೀಯುವೆ ಸರ್ವಜನಂಗಳ ಮನರಮಿಸಿ.

ನನ್ನ ನೆರವಿನೊಳೆ ಮಣ್ಣು ಕಲ್ಲು-ಮರ-ಮಟ್ಟುಗಳನು ತರುತ
ಚೆನ್ನು ಚೆನ್ನು ಮನೆಯನ್ನು ಮಾಡಿ ವಾಸಿಸುವರು ಸುಖಪಡುತ.
ನೀರುಣಿಸಲಾ ತೋಟಕೆ ನೀರಿನ ಮೊಟ್ಟೆಯನೆಳೆಯುವೆನು;
ಭಾರವ ಹೊರುತಲಿ ಎಲ್ಲ ಧಾನ್ಯಗಳ ಮನೆಗೊಯಿದೀಯುವೆನು.

ಇಂತು ಮನುಜರಿಗೆ ಸೌಖ್ಯದ ಸಾಧನೆ ನಿಂತು ಒದವಿಸಿದರೂ
ಸಂತತವೂ ನನ್ನಯ ಸುಖ ನೋಡದೆ ಪೀಡೆಯ ಕೊಡುತಿಹರು.
ಸದಾಕಾಲ ನನ್ನನೆ ದುಡಿಸುತೆ ಇಂತಹ ಬೆಳೆ ಪಡೆಯುವರು;
ಇದೋ ನೋಡು, ಈ ಬಗೆ ಬಾಯ್‌ಬಿಗಿಯುತ ನನಗೇ ತಿನಗೊಡರು.

ಹೇಳಿದಂತೆ ಕೇಳಲು ಹೆಣೆವರು ಹದಿನೆಂಟು ಹೊಂಚುಗಳನು,
ಕೋಲುಬಾರು ಹಣೆಹಗ್ಗ ಗುದಿಗೆಯಾ ಮೂಗುದಾರಗಳನು
ಹೂಂಕರಿಸೆನ್ನಯ ಬಂಧುವರ್ಗಕೀಯಲು ಎಚ್ಚರಿಕೆಯನು-
ಆಂಕಿತವಿಲ್ಲವು ನನಗೆ; ನೋಡು ಬಿಗಿದಿರುವರು ಬಾಯನ್ನು.

ನನ್ನ ದುಡಿಮೆಯೊಳೆ ಸುಮ್ಮಾನವ ಪಡೆದೆನ್ನನು ಲೆಕ್ಕಿಸದೆ
ಬನ್ನವು ! ಗೋದಲೆಯೊಳಗೆ ಬಿಗಿಯುವರು ಕೊರಳುಗಣ್ಣಿಯಿಂದೆ
ಅನುಭವಿಸಲು ಸ್ವಾತಂತ್ರ್ಯವನಿಚ್ಛಿಸಿ, ಯೋಚಿಸಿ ಮನದೊಳಗೆ-
ಘನಗರ್ಜನೆಯಲಿ ಕೂಗುತ ನಾ ನಸು ಚರಿಸಲಡವಿಯೊಳಗೆ-

ದುರುಳ ಮನುಜನೀಕ್ಷಿಸಿ ಶಿಕ್ಷಿಸುವನು ಬಿಗಿದೆನ್ನನು ಕಟ್ಟಿ,
ಮರುಳನು ನಾನೀ ಧರೆಯೊಳು ಜನ್ಮಿಸಿ ಏನು ಸೌಖ್ಯ ಪಟ್ಟೆ ?
ಮಾನವರಿವರಲ್ಲವು ದಾನವರೇ! ಸತ್ಯವು ತಿಳಿ ನೀನು!
ಏನು ಮಾಡಲೀ ಕ್ರೂರರ ಬಲೆಯಿಂ ಜಾರಲುಪಾಯವನು ?

ನಂದಿವಾಹನಾ | ಚಂದ್ರಶೇಖರಾ | ವೃಂದಾರಕ ವಿನುತಾ |
ಬಂಧದಿಂದ ನಮ್ಮವರೆಲ್ಲರನೂ ತಾರಿಸೆನ್ನ ತಾತಾ !’
ಇಂತು ಬೆಸಸಿ ಬಿಸುಸುಯಿದು ವ್ಯಸನದಲಿ ಮಿಂದು ಗೊಂದೆ ತಾನು
ನಿಂತಿತು ಮುಗಿಲನು ನೋಡುತ ಸ್ಮರಿಸುತ ಪರಮೇಶ್ವರನನ್ನು

ಎತ್ತಿನ ಕುತ್ತದ ವೃತ್ತವನ್ನು ಕೇಳುತ್ತ ಚಿತ್ತದಲ್ಲಿ
ಒತ್ತರಿಸಿದ ವ್ಯಥೆಯನು ಹತ್ತಿಕ್ಕುತ ಮನೆಗೆ ಬಂದೆ ಮರಳಿ
ಎತ್ತಿನ ಕಧೆಗೀ ಭುವನದ ದೀನ-ದರಿದ್ರರ ಬಾಳ್ಗತೆಯು
ಸತ್ಯವು ಸಮವಿಹುದೆನ್ನುತ ಬಂದಿತು ಬಗೆಯೊಳು ಭಾವನೆಯು !

‘ಸರುವ ಜೀವಿಗಳಿಗೂ ಸ್ವಾತಂತ್ರ್ಯದ ಸುಖವನಿತ್ತು ನೀನು
ಪೊರೆಯೊ!’ ಎನುತ ಪರಮಾತ್ಮನ ಮನದೊಳಗಂದು ಧ್ಯಾನಿಸಿದನು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...