ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ
ಆದರೂ ಬಾಳಿನೊಂದು ಹಾಳೆಯಲಿ
ಚಿತ್ತಾರ ಬರೆಯ ಬಯಸಿದೆ.
ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ
ಕುಸುರಿ ಕೆಲಸದ ಚತುರತೆಯಿಲ್
ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ.
ಆದರೂ ಆಸೆ –
ಬಾಳ ಕೊನೆಯ ಸಂಪುಟದ ಒಂದು ಹಾಳೆಯಲಿ
ಜೀವನ ಚಿತ್ತಾರ ಬರೆಯುವಾಸೆ.
ಯಾವ ಚಿತ್ತಾರ ಬರೆಯಲಿ?

ಪ್ರೀತಿ, ಪ್ರೇಮ, ಪ್ರಣಯ?
ಇಲ್ಲ, ಎಲ್ಲರೂ ಬರೆಯುತ್ತಾರೆ ಅದನ್ನು?!
ಆದರೆ ಯಾರಿಗೂ ಅರ್ಥವಾಗದ
ಬಣ್ಣ ಬಣ್ಣದ ಗೋಜಲದು.

ಸಾವು, ನೋವು, ಆಗಲಿಕೆ, ದುಃಖ?
ಇಲ್ಲ. ಇದು ಎಲ್ಲರ ಬಾಳಲ್ಲೂ
ಬರೆಯಲಾಗುವ ಕರಿಬಣ್ಣದ ಚಿತ್ರಗಳು
ಅದರಲ್ಲೇನಿದೆ ವಿಶೇಷ?

ಸತ್ಯ, ನ್ಯಾಯ, ನೀತಿ, ಧರ್ಮ?
ಇಲ್ಲ. ಇದಕ್ಕೆಲ್ಲ ಈಗ ಅರ್ಥವೇ ಇಲ್ಲ.
ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ?
ಇಲ್ಲ. ಈಗ ಎಲ್ಲೆಲ್ಲೂ ಅದೇ ಚಿತ್ರ.

ಮತ್ತಾವ ಚಿತ್ತಾರ ಬರೆಯಲಿ?
ಭವಿಷ್ಯದ ಚಿತ್ರ ಅದಾಗಬೇಕು
ಜೀವನ ಪ್ರೀತಿ ಅಲ್ಲಿರಬೇಕು
ರೇಖೆಗಳ ಸಿಕ್ಕುಗಳಿಲ್ಲದ, ಬಣ್ಣಗಳ ಗೊಂದಲಗಳಿರದ
ನನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು
ನೋಡಿ ಅರ್ಥಮಾಡಿಕೊಳ್ಳಲಾಗುವ
ಯಾರಕಾಲಕ್ಕೂ ಮುಂದುವರಿಸಲಾಗುವ
ಚಿತ್ತಾರ ಅದಾಗಬೇಕು.

ವಿಶ್ವ ಪ್ರೇಮದ ಚಿತ್ರ,
ಪರಿಸರಮಾಲಿನ್ಯವಿರದ ಚಿತ್ರ
ತಂಪು ಗಾಳಿಯ ಸ್ಪರ್ಶಕೆ
ಮರಗಿಡಗಳು ತೊನೆದಾಡುವ ಚಿತ್ರ
ಹೂಗಳು ನಲಿದಾಡುವ ಚಿತ್ರ
ಜಾತಿ ಮತ ಭೇದ ಭಾವಗಳಿಲ್ಲದೆ
ಎಲ್ಲರೊಂದಾಗಿ ನಲಿಯುವ ಚಿತ್ರ
ಮಕ್ಕಳ ಮುಖ ತುಂಬ ನಗುಚೆಲ್ಲುವ ಚಿತ್ರ
ಅವರಿಗಿಷ್ಟವಾದ ಗೆರೆ ಎಳೆದು ಬಣ್ಣ ತುಂಬಿದರೂ
ಹಾಳಾಗದ ಚಿತ್ರ ಅದಾಗಬೇಕು.

ನಾ ಬರೆವ ಚಿತ್ರ ಜೀವಂತಿಕೆಯ ಪುಟಿಸುವ
ಜೀವನದ ಮುಂದುವರಿಕೆಯ ಚಿತ್ರವಾಗಬೇಕು,
ಮನಕ್ಕೆ ತಂಪು ನೀಡುವ ಚಿತ್ತಾರವಾಗಬೇಕು
ಎಂದು ಬಯಸುತ –
ಯಾವ ಮುಖವಾಡಗಳಿಲ್ಲದೆ ನಾನೇ ನಾನಾಗಿ ನಿಂತು
ನನ್ನ ಬಯಕೆಯ ಚಿತ್ತಾರ ಬರೆಯಲು
ರೇಖೆಗಳ ಬಣ್ಣಗಳ ಹುಡುಕತೊಡಗಿದೆ.
ರೇಖೆಗಳು ಬಣ್ಣಗಳು ಕೈಗೆ ಸಿಗಲಿಲ್ಲ;
ಬರೆಯ ಬೇಕೆಂದು ಬಯಸಿ ರೂಪಿಸಿದ ಚಿತ್ರ
ಹಾಳೆಯಲಿ ಮೂಡಿ ಬರಲೇ ಇಲ್ಲ.
ಹಾಳೆ ಖಾಲಿಯಾಗಿಯೇ ಉಳಿಯಿತು!
ಇನ್ನೊಬ್ಬ ಚಿತ್ರಕನ ಕಾಯುತ್ತಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನಿಂದ ದೂರವಾಗಲು ಮಾಡು ಏನೆಲ್ಲ
Next post ಎರಡು ಸೇರೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…