Home / ಕವನ / ಕವಿತೆ / ಜೀವನ ಚಿತ್ತಾರ

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ
ಆದರೂ ಬಾಳಿನೊಂದು ಹಾಳೆಯಲಿ
ಚಿತ್ತಾರ ಬರೆಯ ಬಯಸಿದೆ.
ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ
ಕುಸುರಿ ಕೆಲಸದ ಚತುರತೆಯಿಲ್
ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ.
ಆದರೂ ಆಸೆ –
ಬಾಳ ಕೊನೆಯ ಸಂಪುಟದ ಒಂದು ಹಾಳೆಯಲಿ
ಜೀವನ ಚಿತ್ತಾರ ಬರೆಯುವಾಸೆ.
ಯಾವ ಚಿತ್ತಾರ ಬರೆಯಲಿ?

ಪ್ರೀತಿ, ಪ್ರೇಮ, ಪ್ರಣಯ?
ಇಲ್ಲ, ಎಲ್ಲರೂ ಬರೆಯುತ್ತಾರೆ ಅದನ್ನು?!
ಆದರೆ ಯಾರಿಗೂ ಅರ್ಥವಾಗದ
ಬಣ್ಣ ಬಣ್ಣದ ಗೋಜಲದು.

ಸಾವು, ನೋವು, ಆಗಲಿಕೆ, ದುಃಖ?
ಇಲ್ಲ. ಇದು ಎಲ್ಲರ ಬಾಳಲ್ಲೂ
ಬರೆಯಲಾಗುವ ಕರಿಬಣ್ಣದ ಚಿತ್ರಗಳು
ಅದರಲ್ಲೇನಿದೆ ವಿಶೇಷ?

ಸತ್ಯ, ನ್ಯಾಯ, ನೀತಿ, ಧರ್ಮ?
ಇಲ್ಲ. ಇದಕ್ಕೆಲ್ಲ ಈಗ ಅರ್ಥವೇ ಇಲ್ಲ.
ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ?
ಇಲ್ಲ. ಈಗ ಎಲ್ಲೆಲ್ಲೂ ಅದೇ ಚಿತ್ರ.

ಮತ್ತಾವ ಚಿತ್ತಾರ ಬರೆಯಲಿ?
ಭವಿಷ್ಯದ ಚಿತ್ರ ಅದಾಗಬೇಕು
ಜೀವನ ಪ್ರೀತಿ ಅಲ್ಲಿರಬೇಕು
ರೇಖೆಗಳ ಸಿಕ್ಕುಗಳಿಲ್ಲದ, ಬಣ್ಣಗಳ ಗೊಂದಲಗಳಿರದ
ನನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು
ನೋಡಿ ಅರ್ಥಮಾಡಿಕೊಳ್ಳಲಾಗುವ
ಯಾರಕಾಲಕ್ಕೂ ಮುಂದುವರಿಸಲಾಗುವ
ಚಿತ್ತಾರ ಅದಾಗಬೇಕು.

ವಿಶ್ವ ಪ್ರೇಮದ ಚಿತ್ರ,
ಪರಿಸರಮಾಲಿನ್ಯವಿರದ ಚಿತ್ರ
ತಂಪು ಗಾಳಿಯ ಸ್ಪರ್ಶಕೆ
ಮರಗಿಡಗಳು ತೊನೆದಾಡುವ ಚಿತ್ರ
ಹೂಗಳು ನಲಿದಾಡುವ ಚಿತ್ರ
ಜಾತಿ ಮತ ಭೇದ ಭಾವಗಳಿಲ್ಲದೆ
ಎಲ್ಲರೊಂದಾಗಿ ನಲಿಯುವ ಚಿತ್ರ
ಮಕ್ಕಳ ಮುಖ ತುಂಬ ನಗುಚೆಲ್ಲುವ ಚಿತ್ರ
ಅವರಿಗಿಷ್ಟವಾದ ಗೆರೆ ಎಳೆದು ಬಣ್ಣ ತುಂಬಿದರೂ
ಹಾಳಾಗದ ಚಿತ್ರ ಅದಾಗಬೇಕು.

ನಾ ಬರೆವ ಚಿತ್ರ ಜೀವಂತಿಕೆಯ ಪುಟಿಸುವ
ಜೀವನದ ಮುಂದುವರಿಕೆಯ ಚಿತ್ರವಾಗಬೇಕು,
ಮನಕ್ಕೆ ತಂಪು ನೀಡುವ ಚಿತ್ತಾರವಾಗಬೇಕು
ಎಂದು ಬಯಸುತ –
ಯಾವ ಮುಖವಾಡಗಳಿಲ್ಲದೆ ನಾನೇ ನಾನಾಗಿ ನಿಂತು
ನನ್ನ ಬಯಕೆಯ ಚಿತ್ತಾರ ಬರೆಯಲು
ರೇಖೆಗಳ ಬಣ್ಣಗಳ ಹುಡುಕತೊಡಗಿದೆ.
ರೇಖೆಗಳು ಬಣ್ಣಗಳು ಕೈಗೆ ಸಿಗಲಿಲ್ಲ;
ಬರೆಯ ಬೇಕೆಂದು ಬಯಸಿ ರೂಪಿಸಿದ ಚಿತ್ರ
ಹಾಳೆಯಲಿ ಮೂಡಿ ಬರಲೇ ಇಲ್ಲ.
ಹಾಳೆ ಖಾಲಿಯಾಗಿಯೇ ಉಳಿಯಿತು!
ಇನ್ನೊಬ್ಬ ಚಿತ್ರಕನ ಕಾಯುತ್ತಾ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ