Home / ಕವನ / ಕವಿತೆ / ಜೀವನ ಚಿತ್ತಾರ

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ
ಆದರೂ ಬಾಳಿನೊಂದು ಹಾಳೆಯಲಿ
ಚಿತ್ತಾರ ಬರೆಯ ಬಯಸಿದೆ.
ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ
ಕುಸುರಿ ಕೆಲಸದ ಚತುರತೆಯಿಲ್
ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ.
ಆದರೂ ಆಸೆ –
ಬಾಳ ಕೊನೆಯ ಸಂಪುಟದ ಒಂದು ಹಾಳೆಯಲಿ
ಜೀವನ ಚಿತ್ತಾರ ಬರೆಯುವಾಸೆ.
ಯಾವ ಚಿತ್ತಾರ ಬರೆಯಲಿ?

ಪ್ರೀತಿ, ಪ್ರೇಮ, ಪ್ರಣಯ?
ಇಲ್ಲ, ಎಲ್ಲರೂ ಬರೆಯುತ್ತಾರೆ ಅದನ್ನು?!
ಆದರೆ ಯಾರಿಗೂ ಅರ್ಥವಾಗದ
ಬಣ್ಣ ಬಣ್ಣದ ಗೋಜಲದು.

ಸಾವು, ನೋವು, ಆಗಲಿಕೆ, ದುಃಖ?
ಇಲ್ಲ. ಇದು ಎಲ್ಲರ ಬಾಳಲ್ಲೂ
ಬರೆಯಲಾಗುವ ಕರಿಬಣ್ಣದ ಚಿತ್ರಗಳು
ಅದರಲ್ಲೇನಿದೆ ವಿಶೇಷ?

ಸತ್ಯ, ನ್ಯಾಯ, ನೀತಿ, ಧರ್ಮ?
ಇಲ್ಲ. ಇದಕ್ಕೆಲ್ಲ ಈಗ ಅರ್ಥವೇ ಇಲ್ಲ.
ಕ್ರೌರ್ಯ, ಕೊಲೆ, ಸುಲಿಗೆ, ಅತ್ಯಾಚಾರ?
ಇಲ್ಲ. ಈಗ ಎಲ್ಲೆಲ್ಲೂ ಅದೇ ಚಿತ್ರ.

ಮತ್ತಾವ ಚಿತ್ತಾರ ಬರೆಯಲಿ?
ಭವಿಷ್ಯದ ಚಿತ್ರ ಅದಾಗಬೇಕು
ಜೀವನ ಪ್ರೀತಿ ಅಲ್ಲಿರಬೇಕು
ರೇಖೆಗಳ ಸಿಕ್ಕುಗಳಿಲ್ಲದ, ಬಣ್ಣಗಳ ಗೊಂದಲಗಳಿರದ
ನನ್ನ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು
ನೋಡಿ ಅರ್ಥಮಾಡಿಕೊಳ್ಳಲಾಗುವ
ಯಾರಕಾಲಕ್ಕೂ ಮುಂದುವರಿಸಲಾಗುವ
ಚಿತ್ತಾರ ಅದಾಗಬೇಕು.

ವಿಶ್ವ ಪ್ರೇಮದ ಚಿತ್ರ,
ಪರಿಸರಮಾಲಿನ್ಯವಿರದ ಚಿತ್ರ
ತಂಪು ಗಾಳಿಯ ಸ್ಪರ್ಶಕೆ
ಮರಗಿಡಗಳು ತೊನೆದಾಡುವ ಚಿತ್ರ
ಹೂಗಳು ನಲಿದಾಡುವ ಚಿತ್ರ
ಜಾತಿ ಮತ ಭೇದ ಭಾವಗಳಿಲ್ಲದೆ
ಎಲ್ಲರೊಂದಾಗಿ ನಲಿಯುವ ಚಿತ್ರ
ಮಕ್ಕಳ ಮುಖ ತುಂಬ ನಗುಚೆಲ್ಲುವ ಚಿತ್ರ
ಅವರಿಗಿಷ್ಟವಾದ ಗೆರೆ ಎಳೆದು ಬಣ್ಣ ತುಂಬಿದರೂ
ಹಾಳಾಗದ ಚಿತ್ರ ಅದಾಗಬೇಕು.

ನಾ ಬರೆವ ಚಿತ್ರ ಜೀವಂತಿಕೆಯ ಪುಟಿಸುವ
ಜೀವನದ ಮುಂದುವರಿಕೆಯ ಚಿತ್ರವಾಗಬೇಕು,
ಮನಕ್ಕೆ ತಂಪು ನೀಡುವ ಚಿತ್ತಾರವಾಗಬೇಕು
ಎಂದು ಬಯಸುತ –
ಯಾವ ಮುಖವಾಡಗಳಿಲ್ಲದೆ ನಾನೇ ನಾನಾಗಿ ನಿಂತು
ನನ್ನ ಬಯಕೆಯ ಚಿತ್ತಾರ ಬರೆಯಲು
ರೇಖೆಗಳ ಬಣ್ಣಗಳ ಹುಡುಕತೊಡಗಿದೆ.
ರೇಖೆಗಳು ಬಣ್ಣಗಳು ಕೈಗೆ ಸಿಗಲಿಲ್ಲ;
ಬರೆಯ ಬೇಕೆಂದು ಬಯಸಿ ರೂಪಿಸಿದ ಚಿತ್ರ
ಹಾಳೆಯಲಿ ಮೂಡಿ ಬರಲೇ ಇಲ್ಲ.
ಹಾಳೆ ಖಾಲಿಯಾಗಿಯೇ ಉಳಿಯಿತು!
ಇನ್ನೊಬ್ಬ ಚಿತ್ರಕನ ಕಾಯುತ್ತಾ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...