ವಚನ ವಿಚಾರ – ಹುಡುಕಾಟ

ವಚನ ವಿಚಾರ – ಹುಡುಕಾಟ

ಅರಸಿ ಅರಸಿ ಹಾ ಹಾ ಎನುತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು

ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನದಲ್ಲೂ ಬರಬಹುದಾದಂಥವು ಅನ್ನಿಸುತ್ತದೆ. ಗುಹೇಶ್ವರ ಅನ್ನುವುದರ ಬದಲಾಗಿ ಚನ್ನಮಲ್ಲಿಕಾರ್ಜುನ ಎಂದಿದ್ದರೆ ಅವಳ ವಚನವಲ್ಲ ಅನ್ನುವ ಧೈರ್ಯ ಯಾರಿಗೆ ಬಂದೀತು! ಹಾಗೆಂದರೆ ವಚನಗಳನ್ನು ಓದಿ ನಾವು ಕಲ್ಪಿಸಿಕೊಂಡ ಅಲ್ಲಮನ ಮಾತಿನ ರೀತಿಯದಲ್ಲ ಅನ್ನಿಸುತ್ತದೆ ಎಂದಷ್ಟೆ ಅರ್ಥ. ವಚನ ರಚನೆಯಾಗಿ ಮುನ್ನೂರು ವರ್ಷಗಳ ನಂತರದ ಹಸ್ತಪ್ರತಿಗಳಲ್ಲಿ ಸಿಗುವ ವಚನಗಳಲ್ಲಿ ಅಂಕಿತ ಬದಲಾಗಿಲ್ಲವೆಂದು ಹೇಳುವುದು ಹೇಗೆ! ಇದು ಇಂಥವರ ವಚನ ಅನ್ನುವುದು ಒಂದು ರೂಢಿಯಷ್ಟೆ, ಇನ್ನೇನೂ ಅಲ್ಲ. ವಚನಗಳು ಮನುಷ್ಯ ಮನಸ್ಸಿನ ಸಾಧ್ಯತೆಗಳ ಭಾಷಿಕ ರೂಪಗಳು. ಯಾರಾದರೂ ಹೇಳಿರಬೇಕಲ್ಲ ಅನ್ನುವುದಕ್ಕೆ ವಚನಕ್ಕೆ ಒಬ್ಬೊಬ್ಬ ವಚನಕಾರರನ್ನು ಕಲ್ಪಿಸಿಕೊಂಡು ಇವರ, ಅವರ ವಚನ ಎಂದು ವಾಗ್ವಾದ ಮಾಡುತ್ತಾ ವಚನಗಳನ್ನು ಮರೆತಿದ್ದೇವೆ.

ಇರಲಿ. ಮೇಲು ಮೇಲಿನ ತೋರಿಕೆಯನ್ನು ಮರೆತರೂ ಕೊನೆಯ ಸಾಲು ಕೂಡ ಅಕ್ಕ-ಅಲ್ಲಮ ಇವರಿಗೆ ಸಮಾನವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಣ್ಣಮೊದಲಿನಲ್ಲಿ ಇರುವವನ್ನು, (ಮತ್ತೆ ಯಾರು, ನೋಡುತ್ತಿರುವವನೇ ಅಲ್ಲವೆ!) ಹೊರಗೆ ಹುಡುಕಿ, ಹಾಗೆ ಹುಡುಕಿ ದಣಿದೆ ಅನ್ನುತ್ತಿದೆ ಈ ಸಾಲು. ದಣಿದ ಪರಿಯನ್ನು ಮೊದಲೆರಡು ಸಾಲುಗಳು ಹೇಳುತ್ತಿವೆ.

ತಾನು ಹುಡುಕುತ್ತಿರುವುದು ತನ್ನೊಳಗೇ ಇರುವುದನ್ನು ಅನ್ನುವ ನಿಲುವು ಅಕ್ಕನದೂ ಹೌದು. ಆದ್ದರಿಂದಲೇ `ನೀನೇಕೆ ಮುಖದೋರೆ’ ಎಂದು ಅಕ್ಕ ಕೂಡ ಅಲವತ್ತುಕೊಳ್ಳುವುದುಂಟು. ಬರಿಯ ಅಕ್ಕ ಅಲ್ಲಮ ಮಾತ್ರವಲ್ಲ ನಾವು ಕೂಡ ನಮ್ಮೊಳಗೆ ಬಿಂಬಿತವಾದದ್ದನ್ನೆ ಹೊರಗೆ ಕಾಣಲು ಯತ್ನಿಸುತ್ತ ದಣಿಯುವವರಲ್ಲವೇ? ಹಾಗಾಗಿ ಇಂಥ ವಚನಗಳು ನಮ್ಮ ಮಾತುಗಳೂ ಆಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡೊಂಬರಾಟ!
Next post ಅಂಗಳಕ್ಕೊಂದು ಚಿತ್ತಾರ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…