ವಚನ ವಿಚಾರ – ಹುಡುಕಾಟ

ವಚನ ವಿಚಾರ – ಹುಡುಕಾಟ

ಅರಸಿ ಅರಸಿ ಹಾ ಹಾ ಎನುತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು

ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನದಲ್ಲೂ ಬರಬಹುದಾದಂಥವು ಅನ್ನಿಸುತ್ತದೆ. ಗುಹೇಶ್ವರ ಅನ್ನುವುದರ ಬದಲಾಗಿ ಚನ್ನಮಲ್ಲಿಕಾರ್ಜುನ ಎಂದಿದ್ದರೆ ಅವಳ ವಚನವಲ್ಲ ಅನ್ನುವ ಧೈರ್ಯ ಯಾರಿಗೆ ಬಂದೀತು! ಹಾಗೆಂದರೆ ವಚನಗಳನ್ನು ಓದಿ ನಾವು ಕಲ್ಪಿಸಿಕೊಂಡ ಅಲ್ಲಮನ ಮಾತಿನ ರೀತಿಯದಲ್ಲ ಅನ್ನಿಸುತ್ತದೆ ಎಂದಷ್ಟೆ ಅರ್ಥ. ವಚನ ರಚನೆಯಾಗಿ ಮುನ್ನೂರು ವರ್ಷಗಳ ನಂತರದ ಹಸ್ತಪ್ರತಿಗಳಲ್ಲಿ ಸಿಗುವ ವಚನಗಳಲ್ಲಿ ಅಂಕಿತ ಬದಲಾಗಿಲ್ಲವೆಂದು ಹೇಳುವುದು ಹೇಗೆ! ಇದು ಇಂಥವರ ವಚನ ಅನ್ನುವುದು ಒಂದು ರೂಢಿಯಷ್ಟೆ, ಇನ್ನೇನೂ ಅಲ್ಲ. ವಚನಗಳು ಮನುಷ್ಯ ಮನಸ್ಸಿನ ಸಾಧ್ಯತೆಗಳ ಭಾಷಿಕ ರೂಪಗಳು. ಯಾರಾದರೂ ಹೇಳಿರಬೇಕಲ್ಲ ಅನ್ನುವುದಕ್ಕೆ ವಚನಕ್ಕೆ ಒಬ್ಬೊಬ್ಬ ವಚನಕಾರರನ್ನು ಕಲ್ಪಿಸಿಕೊಂಡು ಇವರ, ಅವರ ವಚನ ಎಂದು ವಾಗ್ವಾದ ಮಾಡುತ್ತಾ ವಚನಗಳನ್ನು ಮರೆತಿದ್ದೇವೆ.

ಇರಲಿ. ಮೇಲು ಮೇಲಿನ ತೋರಿಕೆಯನ್ನು ಮರೆತರೂ ಕೊನೆಯ ಸಾಲು ಕೂಡ ಅಕ್ಕ-ಅಲ್ಲಮ ಇವರಿಗೆ ಸಮಾನವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಣ್ಣಮೊದಲಿನಲ್ಲಿ ಇರುವವನ್ನು, (ಮತ್ತೆ ಯಾರು, ನೋಡುತ್ತಿರುವವನೇ ಅಲ್ಲವೆ!) ಹೊರಗೆ ಹುಡುಕಿ, ಹಾಗೆ ಹುಡುಕಿ ದಣಿದೆ ಅನ್ನುತ್ತಿದೆ ಈ ಸಾಲು. ದಣಿದ ಪರಿಯನ್ನು ಮೊದಲೆರಡು ಸಾಲುಗಳು ಹೇಳುತ್ತಿವೆ.

ತಾನು ಹುಡುಕುತ್ತಿರುವುದು ತನ್ನೊಳಗೇ ಇರುವುದನ್ನು ಅನ್ನುವ ನಿಲುವು ಅಕ್ಕನದೂ ಹೌದು. ಆದ್ದರಿಂದಲೇ `ನೀನೇಕೆ ಮುಖದೋರೆ’ ಎಂದು ಅಕ್ಕ ಕೂಡ ಅಲವತ್ತುಕೊಳ್ಳುವುದುಂಟು. ಬರಿಯ ಅಕ್ಕ ಅಲ್ಲಮ ಮಾತ್ರವಲ್ಲ ನಾವು ಕೂಡ ನಮ್ಮೊಳಗೆ ಬಿಂಬಿತವಾದದ್ದನ್ನೆ ಹೊರಗೆ ಕಾಣಲು ಯತ್ನಿಸುತ್ತ ದಣಿಯುವವರಲ್ಲವೇ? ಹಾಗಾಗಿ ಇಂಥ ವಚನಗಳು ನಮ್ಮ ಮಾತುಗಳೂ ಆಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡೊಂಬರಾಟ!
Next post ಅಂಗಳಕ್ಕೊಂದು ಚಿತ್ತಾರ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…