Home / ಕವನ / ಕವಿತೆ / ಅರಿವು

ಅರಿವು

ಬೆದೆ ಹತ್ತಿದ ಎದೆ ಹಾಡಿದಾಗ
ಸದೆ ಬಡಿಯುವ ಸಿಂಹಾಸನವೇ
ಸಾವ ಸಂಭ್ರಮದಲ್ಲಿ ನೋವು
ನಿವಾರಿಸುವ ಜೋಳವಾಳಿಯೇ.

ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ
ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ
ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್
ದರ್‍ಶನ ವಿರಾಟಪರ್‍ವದ ಅಜ್ಞಾತ ಅಳಿಯುತ್ತಿದೆ.

ನಂಬಿಕೆ ನಿಷ್ಠೆಯ ಜಡಕಾಡು
ಋಣದ ಒಣಹವೆಯಲ್ಲಿ ಹದ್ದು-
ಬಸ್ತಾಗಿ ಹಸ್ತಿನಾವತಿಯ ಹರಕೆ ಹೊತ್ತು
ಅಲೆಮಾರಿಯಾದದ್ದು ಹನ್ನೆರಡಕ್ಕೇ ಸಾಕು;
ಅಜ್ಞಾತವಾಸದ ಹುತ್ತ ವಾಲ್ಮೀಕಿಯಾಗಬೇಕು.
ಮತ್ತದೇ ರಾಮಾಯಣ!
ಅಲೆಮಾರಿ ಅರಿವಿಗೆ ಹದಿನಾಲ್ಕರ ಹರೆಯ!

ಹೆಪ್ಪುಗಟ್ಟುತ್ತ ಬಂದ ಗಡಿಯಾರ
ಹನ್ನೆರಡು ಹೊಡೆದಾಗ ಕಾಲ ಕಡೆದ ಮೊಸರಲ್ಲಿ
ಹೊರಬಂದ ಬಸವಾದಿ ಅಸಂಖ್ಯಾತ ಅರಿವು-
ಅಸ್ಪೃಶ್ಯರ ಹಟ್ಟಿಯಿಂದ
ಮಹಿಳೆಯ ಮುಟ್ಟಿನಿಂದ
ದೋಣಿಯ ಹುಟ್ಟಿನಿಂದ
ಕಟ್ಟೊಡೆದು ಬಂದ ನಿಟ್ಟುಸಿರು
ನಲಿವಾಯಿತು ಅದು ನಿಲುವಾಯಿತು.

ಹನ್ನೆರಡಕ್ಕೆ ಎರಡು ಸೇರಿ ಹದಿನಾಲ್ಕು ತುಂಬಿದಾಗ
ಆಸ್ಥಾನ ದೂರ ಅಲೆಮಾರಿ ಅರಿವು
ಹರಿದಾಸ ತೇರಾಯಿತು ಊರೆಲ್ಲ ಹರಿದಾಡಿತು.

ಮಹಾಭಾರತದ ಹನ್ನೆರಡಾಗಲಿ
ರಾಮಾಯಣದ ಹದಿನಾಲ್ಕಾಗಲಿ
ಅಲೆಮಾರಿ ಅನುಭವಕ್ಕೆ ಅರಮನೆಯಿಲ್ಲ
ಅರಿವಿಗೆ ಆಸ್ಥಾನವಿಲ್ಲ.

ಪುರಾಣದ ಸ್ಥಿತಿಯಾಗಿ ಇತಿಹಾಸದ ಗತಿಯಾಗಿ
ಗತಿ ಸ್ಥಿತಿಯ ಸ್ಥಿತ್ಯಂತರದಲ್ಲೇ
ಮುಷ್ಟಿಗೆ ಸಿಕ್ಕದ ಸೃಷ್ಟಿಯಾಗಿ
ವಚನವಾಗಿ ದಾಸರ ಪದವಾಗಿ
ಗುಡಿಸಲ ಗೋಳಾಗಿ ನೇಗಿಲ ನೋವಾಗಿ
ಪದವಿಟ್ಟಳುಪದೊಂದಗ್ಗಳಿಕೆಯಾಗ ಹೊರಟರೂ
ಮಸಿ ಅಳಿಸುವ ರಬ್ಬರು ಉತ್ಪಾದನೆಯಾಗುತ್ತದೆ
ಮತ್ತೆ ಮತ್ತೆ ಅಕ್ಷರ ಆಕಾರ ತಳೆಯುತ್ತದೆ.

ಇದು ಇಂದು ನೆನ್ನೆಯದಲ್ಲ
ಕಾಲ ಸಾಯುವುದಿಲ್ಲ
ಹದಿನಾಲ್ಕಕ್ಕೆ ಹಿಂದೆ ಹನ್ನೆರಡು
ಹನ್ನೆರಡಕ್ಕೆ ಹಿಂದೆ ಹತ್ತು ಇರುತ್ತದೆ
ಚರಿತ್ರೆಯ ಸರಪಳಿ ಬೆಳೆಯುತ್ತದೆ.

ಹತ್ತರ ಪಂಪ ಪೊರೆ ಬಿಡುತ್ತ ಬಂದದ್ದು
ಒತ್ತೆಯಿಟ್ಟ ಉಸಿರು ಉತ್ತರ ಹುಡುಕ ತೊಡಗಿದ್ದು
ಸುಳಿವು ಸಿಕ್ಕಿದ ಸಿಂಹಾಸನ ಗಡಗಡ ನಡುಗಿದ್ದು
ಪಂಡಿತರಿಗೆ ಪಡಿತರ ಹಂಚಿ ಪಟ್ಟಾಗಿ ಕೂತದ್ದು
ಪಟ್ಟದ ಕೆಳಗೆ ಚಟ್ಟದ ಚರಿತ್ರೆ
ನಿಲ್ಲದೆ ನಿರ್‍ಮಾಣವಾಗುತ್ತ ಬಂದದ್ದು-

ಎಲ್ಲಾ ಗೊತ್ತಾಗುತ್ತಿದೆ ಸಿಂಹಾಸನವೇ
ನಿನಗೆ ಹೊತ್ತಾಗುತ್ತಿದೆ ಜೋಳವಾಳಿಯೇ

ಈಗ-
ನನ್ನ ಕಿವಿ ನನ್ನದು
ನನ್ನ ನುಡಿ ನನ್ನದು
ನನ್ನ ಚರ್‍ಮ ನನ್ನದು
ನನ್ನ ಮೂಗು ನನ್ನದು
ನನ್ನ ಕಣ್ಣು ನನ್ನದು
ಕಡೆಗೆ-
ಈ ಮಣ್ಣು ನನ್ನದು.

ಯಾಕೆಂದರೆ-
ನೋಟ ನುಡಿಗಳ ಮೇಲೆ
ಸ್ಪರ್‍ಶ ಸಂವೇದನೆಯ ಮೇಲೆ
ಶಬ್ದ ಸ್ಪಂದನದ ಮೇಲೆ
ವಾಸನೆ ವಿವೇಚನೆಯ ಮೇಲೆ

ಗುಲಾಮ ಗೀರುಗಳು ಈಗ ಮಾಯುತ್ತಿವೆ
ವರ್‍ತಮಾನದ ಅರ್‍ಥ ಹುಡುಕುತ್ತಿವೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...