Home / ಕವನ / ಕವಿತೆ / ದೆವ್ವದ ಕೋರ್ಟಿನಲ್ಲಿ

ದೆವ್ವದ ಕೋರ್ಟಿನಲ್ಲಿ

ರಾತ್ರಿಯೂಟ ಮುಗಿಸಿ ಎಲೆಯಡಿಕೆ ಮೆಲ್ಲುತ್ತ
ಸುದ್ದಿ ಪತ್ರಿಕೆ ವಿವರ ಓದುತ್ತ ಕೂತಿದ್ದೆ,
ಅರ್ಧ ಮುಗಿಸಿಟ್ಟಿದ್ದ ಖುರಾನು ಮೇಜಿನ ಮೇಲೆ,
ನಾನೊಬ್ಬನೇ ಇಲ್ಲ ರೂಮಲ್ಲಿ ಇನ್ಯಾರೋ
ಇದ್ದಾರೆ ಅನ್ನಿಸಿತು.
ನೆರಳು ನೆರಳಾಗಿ ಎದುರಿದ್ದ ಕುರ್ಚಿಯ ಮೇಲೆ
ಯಾರೋ ಕೂತಂತಿತ್ತು; ದಿಟ್ಟಿಸಿ ನೋಡಿದರೆ
ಮತ್ತೆ ಅದೆ ಹಳೆ ಭೂತ !

“ಭೂತ ಬಂದದ್ದು ಸಹ ಕಾಣುತ್ತಿಲ್ಲ ಅಲ್ಲವಾ ?
ಏನು ಅಂಥಾ ಓದು ?” -ಸಲಿಗೆ ಬೆಳೆಸಿತು ಭೂತ.
“ನಿನ್ನ ವಿಷಯಗಳೇ,
ವರ್ತಮಾನ ಪತ್ರಿಕೆಯ ತುಂಬ ಭೂತದ ಸುದ್ದಿ” ಅಂದೆ
“ಓಹೋ ಅಡಿಗ !
ನಮ್ಮ ಉಚ್ಚಾಟನೆಗೆ ಕರೆಕೊಟ್ಟ ವೈದಿಕ!
ಇರಲಿ ಏನದು ಸುದ್ದಿ” ಎಂದಿತು.

“ಬಾಬರಿ ಮಸೀದಿಯನ್ನು ನೆಲಸಮ ಮಾಡಿದ್ದಾರೆ,
ಗುಡಿ ನಿಲ್ಲಿಸಿದ್ದಾರೆ.
ಎಲ್ಲ ಕಡೆ ಕೊಲೆ ಇರಿತ
ಆಯ್ತು ದೇಶದ ಕಥೆ” ಕಂಠ ಕಟ್ಟಿತು ನನಗೆ.

“ಏನು ಮನುಷ್ಯರಪ್ಪ,
ನಾಯಿ ಬೆಕ್ಕುಗಳಂತೆ ಕಚ್ಚಾಡುತ್ತೀರಿ !
ಜುಟ್ಟು ನಾಮ ವಿಭೂತಿ ಜನಿವಾರ ಶಿವದಾರ
ಎಲ್ಲ ಕಡೆ ಇದರದೇ ಹಾವಳಿಯಾಗಿ ಹೋಯ್ತು.”

“ನೀ ಹೇಳುವುದು ನಿಜವೆ” ನಾನೆಂದೆ ಕುಗ್ಗುತ್ತ.
“ಏನು ಮತಾಂಧತೆ, ಎಂಥ ನಾಚಿಕೆಗೇಡು,
ಭೂತ ಕೂಡ ನಮ್ಮ ಬೈಯುವಂತಾಗಿದೆ.

ಎಲ್ಲ ಧರ್ಮಗಳನ್ನು ಬಾಚಿ ತಬ್ಬಿದ ದೇಶ,
ಇಂಥ ಧರ್ಮದ್ರೋಹ ಹಿಂದುವಿನ ನೆಲದಲ್ಲಿ
ಎಂದೂ ಆದದ್ದಿಲ್ಲ.
ಲೋಕದೆದುರೆ ಘೋರ ಅಪರಾಧಿ ನಾವೀಗ
ಎಷ್ಟು ಹಳೆಯ ಮಸೀದಿ.
ಬಿದ್ದ ಸದ್ದಿಗೆ ಒಳಗೇ ಧಸಕ್ಕೆಂದಿತು ಎದೆ” ಅಂದೆ.

“ಅನ್ನದೆ ಇರುತ್ತದೆಯೆ?
ನನಗೆ ಮಾತ್ರವೆ ಗೊತ್ತು ನಿನ್ನ ಎದೆಯುರಿ ತಾಪ”-
ದನಿಗೂಡಿಸಿತು ಭೂತ.

“ಎರಡು ದಿನ ಕಳೆದರೂ ಏನೋ ಸಂಕಟ ಒಳಗೆ,
ದೇಶವನ್ನೇ ಬಿಟ್ಟು ಓಡಿಹೋಗಲೆ ಎಂಬ
ಕೆಟ್ಟ ಕಸಿವಿಸಿ ಉರಿ,
ಬಾಬರಿ ಮಸೀದಿ ಮತ್ತೆ ಕಟ್ಟುವುದೆ ಆದಲ್ಲಿ
ತಲೆ ಮೇಲೆ ಇಟ್ಟಿಗೆಯ ಹೊತ್ತು ಸಾಗಿಸುತ್ತೇನೆ –
ಸೀದಾ ಅಯೋಧ್ಯೆಗೇ !
ಅಲ್ಲಿಯ ತನಕ ನನಗೆ ಎಲ್ಲಿ ನೆಮ್ಮದಿ?” ಎಂದೆ

“ಮುಚ್ಚೋ ಮಗನೆ ನಿನ್ನ ಕಳ್ಳ ಅಭಿನಯ ಸಾಕು”
ಕೂಗಿ ಗದರಿತು ಭೂತ.
“ನಿನ್ನ ಕರುಳಿನ ತನಕ ಎಲ್ಲ ಕಾಣುತ್ತದೆ.
ನಟಿಸುತ್ತೀಯ ಭಡವ ?
ಒಳಗೆ ಭಜರಂಗದಳ, ಹೊರಗೆ ತಿಳಿನೀರ ಕೊಳ!
ಇಲ್ಲಿಂದಲೇ ಅವತ್ತು ಕಲ್ಲು ಬೀಸಿದ್ದು ನನಗೆ
ಗೊತ್ತಿಲ್ಲ ಅಂತಲಾ ?”

“ನಿಲ್ಲಿಸು ತಲೆ ಹರಟೆ” ಅರಚಿ ತೋಳೇರಿಸಿದೆ.
ನನ್ನ ಮನೆಯಲ್ಲಿ ಕೂತು ನನಗೇ ಅನ್ನುವ ಕೊಬ್ಬ?
ನಾನು ಸೆಕ್ಯುಲರ್ ಗೊತ್ತ ?”

“ಆಹಾ, ಸೆಕ್ಯುಲರ್ ಇವನು !
ಸೂಡೋ ಸೆಕ್ಯುಲರ್, ಧಡ್ಡ!
ನೀನು ನಾಸ್ತಿಕ ತಿಳೀತಾ ?
ಧರ್ಮಿಷ್ಠರಿಗೆ ಮಾತ್ರ ದುಃಖವಾಗುವ ವಿಷಯ
ಮಸೀದಿ ಬಿದ್ದದ್ದು,
ನಿನ್ನಂಥವರಿಗಲ್ಲ,
ಫೋಸು ಹಾಕುತ್ತೀಯಾ ?”

“ನಾನು ನಾಸ್ತಿಕನ ?” ಮುಷ್ಟಿ ಬಿಗಿಯುತ್ತಿತ್ತು
“ಮತ್ತೇನು ? ಹಾಗಲ್ಲದಿದ್ದಲ್ಲಿ ಮನೆಯೊಳಗೆ
ಹೇಗೆ ಬರುತ್ತಿದ್ದೆ ನಾನು ?
ಮಾಸ್ತಿ ಮನೆಯೊಳಗೆ ಕಾಲಿಡಲೂ ಆಗದೆ ಹೋಯ್ತು
ಕಡೆದಿನದ ತನಕ”

“ನಾನು ಸೆಕ್ಯುಲರ್ ಅಲ್ಲ ಅನ್ನುತ್ತೀಯಲ್ಲ,
ನೀನು ಇರಬಹುದೆ ?” – ಚುಚ್ಚಿ ಕೇಳಿದೆ ನಾನು
“ಸಾರಿ ಅಂತನ್ನು, ನಾನು ಬರಿ ಭೂತ ನಿಮ್ಮಂತೆ
ಸೂಡೋ ಸೆಕ್ಯುಲರ್ ಆಲ್ಲ
ಈ ದೇಶದಲ್ಲಿ ಎಲ್ಲಿದ್ದಾನೆ ಸೆಕ್ಯುಲರ್ ?
ಒಳಗೆ ರಾಮನ ಭಜನೆ, ಸೀಕರಣೆ ಪಾನಕ
ಹೊರಗೆ ವೇದಿಕೆ ಮೇಲೆ ಮೊಸಳೆ ಕಣ್ಣೀರು.”

“ಬುದ್ಧಿಜೀವಿಗಳು?” – ಸವಾಲೆಸೆದು ಕೇಳಿದೆ
“ಬುದ್ಧಿ ಜೀವಿಯೆ ನೀನೂ –
ಕಂಡವರ ಬುದ್ಧಿತಿನ್ನುತ್ತಲೇ ಬೆಳೆದವರು
ನಿನ್ನಂತೆ ಉಳಿದವರೂ.
ವರ್ಚಸ್ಸು ಬೆಳೆಸಿಕೊಳ್ಳುವ ಕಳ್ಳ ನಾಟಕ ಇದು.
ಸುಗಮಗೀತೆಯ ರಚನೆ ಇದಕ್ಕಿಂತ ಮೇಲು”-
ತಾನೆ ಮನೆಯಜಮಾನ ಎನ್ನುವಂತೆ ಭೂತ
ಒರಟಾಗಿ ಗದರಿಸಿತು.

“ಮತ್ತೆ ಮಸೀದಿಯನ್ನು ಅಲ್ಲೇ ಕಟ್ಟಲಿ, ಅಂತ
ಪತ್ರಿಕಾ ಹೇಳಿಕೆ ಕೊಡುತ್ತೇನೆ ಗೂತ್ತ?”
ಬೀಗಿ ಹೇಳಿದೆ ನಾನು
“ಎಂಥ ಖದೀಮನೋ ನೀನು
ಕಟ್ಟಿರುವ ಗುಡಿಯನ್ನು ಯಾರು ಒಡೆದಾರು ?
ಎಲ್ಲ ಗೊತ್ತಿದೆ ನಿನಗೆ !
ನಿನ್ನ ಜೊತೆ ಮಾತು ಸಹ ಶುದ್ಧ ಹೇಸಿಗೆ
ಬರುತ್ತೇನೆ ನಾನಿನ್ನು.”

ಫಟ್ಟನೆ ಒಡೆದಂತಾಯ್ತು ಯಾವುದೋ ಬಲೂನು
ಕುರ್ಚಿ ತೂಗುತ್ತಿತ್ತು
ಹಗುರಾಗುತ್ತಿತ್ತು ಎದೆ
ಟೇಬಲ್ಲ ಮೇಲೆ ನಕ್ಕಿತು ಖುರಾನು.
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...