ಒಪ್ಪಿಕೊ ಪರಾಭವ!

ಮಾತಲ್ಲ ಮಂತ್ರ, ಅರ್ಥದಾಚೆಗೆ ಮಾತ
ಹಾರಿಸಿಬಿಡುವ ತಂತ್ರ; ಕತ್ತಿಗೆ ಗಂಟು ಬಿದ್ದ
ಅರ್ಥದ ಕಣ್ಣಿ ಕಳಚಿ ಅಂತರಿಕ್ಷಕ್ಕೆ ಜಿಗಿದು
ನಕ್ಷತ್ರವಾಯಿತು ಶಬ್ಧ.
ನಾದಲಯಗಳ ಜೋಡು ಸಾರೋಟು ಹತ್ತಿ
ರೂಪಕದ ಮೆರವಣಿಗೆ ಬರವಣಿಗೆ;
ಬಡ ಪದವ ಕವಿತೆ ಮಾಡುವ ಅತಾರ್ಕಿಕ ಹೆಣಿಗೆ ಯಕ್ಷಿಣಿಗೆ.
ಲೋಟದಲ್ಲಿದೆ ಹೌದೆ ನೀರು ? ತಟ್ಟೆಯ ಮುಚ್ಚಿ
ಮತ್ತೆ ತೆಗೆದರೆ ಬಿಯರು!
ಆಟಕ್ಕೆ ಮಾತನ್ನು ಹೂಡಿ ಎಸೆದನೊ ದಾಳ
ಕೇಳುಕೇಳಿದ ಗರ,
ನಾಲ್ಕೇ ಜಿಗಿತ ಕಾಯಿ ಹಣ್ಣಾಗಿ ಬಿಡುವ ವರ.
ಖಿಯಾಲಿ ಹತ್ತಿತೊ ಹರಟೆ ಕಣ್ಣೆದುರೆ ಒಣಗೊರಟೆ
ಕುಡಿಯೊಡೆದು ಸಸಿಯಾಗಿ ಗಿಡವಾಗಿ ಮರವಾಗಿ
ಚಿಗುರಿ ಹೂತುಂಬಿ ಹರೆಯಾಡಿ ಹಬ್ಬುವ ನೆರಳು!

ಸಾಧನಕೇರಿಯಲ್ಲಿ ಸಿದ್ಧಿಗೇರಿದ ಜೋಗಿ
ಖಾಲಿ ಜೇಬಿನ ಆರ್ಥಶ್ರೀಮಂತ; ಹೋಗಂತ
ಹೇಳಿದನೊ ಹೋಗಿ, ಬಾ ಎಂದನೋ ತಲೆಬಾಗಿ
ಠಣ್ಣೆಂದು ಕುಣಿಕುಣಿದು ಶಬ್ಧವರಹದ ಸಾಲು
ಹೇಗೆ ಬರುವುವು ನೋಡಿ! ಅರ್ಥ ಆತ್ತಿರಲಿ ಬಿಡಿ
ಅನರ್ಥ ಅಪಾರ್ಥಗಳ ಗಲ್ಲಿ ಪಡಖಾನೆಯಲಿ
ಕುಡಿದು ಮತ್ತೇರಿ
ದನಿಯೆತ್ತಿ ಹಾಡಿ ಪದ ಬಾರಿಸಿವೆ ಜಯಭೇರಿ

ಕುಡುಗೋಲ ಹಿಡಿದ ಏ ಉನ್ಮತ್ತ ಕರಿಯ !
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು, ಕೈಯೆತ್ತಿ ಹಣೆಗಿಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
****

ನಭದಲ್ಲಿ ಬೇರು, ನೆಲದಲ್ಲಿ ಅರಳಿರುವ ಫಲ
ಜ್ವಲಿಸುವ ಆತ್ಮ ತೊಟ್ಟ ಹಿಡಿಮೂಳೆಗಳ ಚೀಲ
ಮೈಯ ಮುಚ್ಚದ ಅರಿವೆ, ಬೋಳುತಲೆ, ಪಾದುಕೆ
ಬಡಪಾಯಿ ರೈತನೆ, ಮಹಿಮಾವಂತ ಋಷಿಯೆ?
ಎರಡೂ ಕೂಡಿ ಮೊಳೆತ ಲೋಕಾಲೋಕ ಕಸಿಯೆ
ಒಮ್ಮೊಮ್ಮೆ ಕೂತನೋ ಚಂಡಿ ಉಪವಾಸ ಹಿಡಿದು
ಮಿಲಿಯಗಟ್ಟಲೆ ಜನ ಇಡಿಕಿರಿದ ಭೂಖಂಡ
ಕಾಯುತ್ತದೆ ಕಳವಳಿಸಿ ತುದಿಗಾಲಿನಲ್ಲಿ ನಿಂತು,
ಬೇಡುತ್ತದೆ ಕೈಮುಗಿದು ಉಪವಾಸ ನಿಲ್ಲಿಸು ಎಂದು.
ಅಲ್ಲಾಡದ ಕಲ್ಲುಜೀವ, ಕಟ್ಟಿಟ್ಟ ಬಿರುಗಾಳಿ
ನಿಜನಡತೆ; ಆದರೂ ಕಂಪನಿ ನಾಟಕದ ಶೈಲಿ!
ತಿಳಿಯದು ಹಡಗಿಗೆ ತನ್ನ ತೇಲಿಸಿ ಮುಂದೊಯ್ಯುವ
ಕಡಲಿನ ನಿಗೂಢ ಜಾಲ, ಮಣ್ಣುಮಂತ್ರದ ಮೇಳ.
ಗೀತೆಯ ಹಾಲು ಹೀರಿ ಗಟ್ಟಿ ಮುಟ್ಟಾದ ಮುದುಕ
ವಾಸ್ತವದ ಬಟ್ಟಲಲ್ಲಿ ಚರಿತ್ರೆ ಪುರಾಣಗಳ
ಕಲೆಸಿ ಉಂಡ ಆಧುನಿಕ.
ಮುಟ್ಟುವಂತಿಲ್ಲ ಹಿಮಾಲಯಕ್ಕಿಂತ ಎತ್ತರ
ಬಿತ್ತದಲ್ಲಿ ಅಡಗಿರುವ ಅರಳಿಯ ವಿಸ್ತಾರ
ಮಡಿಲೊಳಗೆ ಏಳು ಬಣ್ಣಗಳ ಬಚ್ಚಿಟ್ಟ ಬೆಳಕು;
ರಾಜಕಾರಣದ ಸುಡುಗಾಡಿನಲ್ಲೂ
ಸತ್ಯಬ್ರಹ್ಮನ ಧ್ಯಾನ, ಎಲ್ಲವನ್ನೂ ಆತ್ಮದೊರೆಗೆ ಹಚ್ಚುವ ಮಾನ
ಕೊಲ್ಲುವ ಸಿಡಿಗುಂಡೂ ಹೊರಗೆ ತಂದದ್ದು ಅಮರ
‘ಹೇ ರಾಮ ರಾಮ’

ಕುಡುಗೋಲ ಹಿಡಿದ ಏ ಉನ್ಮತ್ತ ಕರಿಯ !
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು ಪಾದುಕೆ ಮೇಲೆ ಹಣೆಯಿಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
* * * *

ಚಂದಿಯುಟ್ಟಿರುವ ಮಗು, ಮಲಮೂತ್ರ ಸುರಿವ ಮೈ
ತುಂಡುಬೆರಳಿನ ಕುಷ್ಠಕಾಯ; ಮಗುವನ್ನು
ಎತ್ತಿ ಎದೆಗಪ್ಪಿ ಉಪಚರಿಸಿ ಉಸಿರೂದಿ
ಮತ್ತೆ ಬದುಕಿಗೆ ಕಳಿಸಿಕೊಡುವ ಕೌಶಲ್ಯ,
ಸೀರೆಯುಟ್ಟಿದೆ ಕರುಣೆ ಬರೆದ ಕವಿತೆ.
ಯೌವನದ ದಿನದಲ್ಲಿ ತನ್ನ ಸೈನ್ಯ ಸಮೇತ
ಯುದ್ಧಕ್ಕೆ ಬಂದ ಮಾರ
ಮುಗ್ಗರಿಸಿ ಬಿದ್ದ ಇವಳ ಮನೆ ಹೊಸ್ತಿಲಿನ ಮೇಲೆ
ತುಂಡಾಗಿ ಹೋಯಿತು ಬಿಲ್ಲದಾರ,
ಕ್ರಿಸ್ತನೆದೆಗೇರಿತು ಈ ರತ್ನಹಾರ.

ಕರ್ತವ್ಯ ಕರುಣೆ ವಾತ್ಸಲ್ಯಗಳ ಗಾಯತ್ರಿ
ಸದಾ ಗಂಭೀರೆ
ಆಗೀಗ ನಕ್ಕರೀ ಧೀರೆ
ಆಕಾಶದಲ್ಲಿ ಫಕ್ಕನೆ ಹಾರಿ ಹೋಗುವುದು ಬಿಳಿಹಕ್ಕಿ ಹಿಂಡು
ಮಲ್ಲಿಗೆಯ ವನದಲ್ಲಿ ಸಿಳ್ಳು ಹಾಕುತ್ತ
ಎಲೆ ನಡುವೆ ಹಾಯುವುದು ತಂಗಾಳಿ ದಂಡು.
ಗದ್ದಲದ ನಡುವಿದ್ದೂ ಸುದ್ದಿ ಬೇಡದ ಸೇವೆ
ಬಂಧಿಸುವ ಕರ್ಮವೇ ಯೋಗವಾಗುವ ಪೂಜೆ,
ಗಂಡಿನ ಹಂಗೇ ಇರದೆ ಕೋಟಿ ಕೋಟಿ ಜನಕ್ಕೆ
ತಾಯಾದ ಭಾಗ್ಯ; ಮನುಕುಲದ ಆರೋಗ್ಯ.
ಎಲ್ಲಿ ಹುಟ್ಟಿದ ಹೆಣ್ಣು ಎಂದು ಜಾತಕ ಕುರಿತು
ಸೊಲ್ಲೆತ್ತಲಿಲ್ಲ ಯಾರೂ
ಜ್ವಲಂತ ಭಕ್ತಿ ಶ್ರದ್ಧೆ ಪ್ರೀತಿ ಪಥದಲ್ಲಿ
ಸಾಗಿ ಬಂದರೆ ತೇರು ಬಾಗದಿರುವವರಾರು ?
ಮಣ್ಣಗೂಡಿಂದ ಹರಿವ ಅನಂತ ಕರುಣೆಯ ತೊರೆಯ
ಬೆರಗಾಗಿ ನೋಡುತಿದೆ ಚುಕ್ಕಿಗಳ ಮೇಳ
ಲೋಕ ಹಾಡುತ್ತಿರುವ ಕರ್ಮಯೋಗಕ್ಕೆ
ಅಲೌಕಿಕದ ತಾಳ.

ಕಂಡುಗೋಲ ಹಿಡಿದ ಏ ಉನ್ಮತ್ತ ಕರಿಯ!
ಏನು ಕೆಲಸವೊ ಇಲ್ಲಿ ನಿನಗೆ ?
ಕುಡುಗೋಲ ಕೆಳಗಿಟ್ಟು, ಮಿಂದು ಮೈ ಮಡಿಯುಟ್ಟು
ಸಲ್ಲಿಸು ನಮಸ್ಕಾರ, ಒಪ್ಪಿಕೊ ಪರಾಭವ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗತ್ತು
Next post ಒಂದು ಹಣತೆ ಸಾಕು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…