Home / ಕವನ / ಕವಿತೆ / ಕೊರಗು

ಕೊರಗು

ಸತ್ತ ಕನಸನ್ನೆತ್ತಿ ಮತ್ತೆ ನೀರೆರೆದು
ಚಿಗುರಿಸಿದ ನೀರೆ ನೀನು ಯಾರೆ ?
ಮುಗಿಲಲ್ಲಿ ಅಲೆಸಿರುವ ಕೀಲುಕುದುರೆ, ನನ್ನ
ಅಮಲಿನಾಳದಲದ್ದಿದಂಥ ಮದಿರೆ.

ಉರಿವ ಬಿಸಿಲಿಗೆ ತಂಪುಗಾಳಿ ಸುಳಿಸಿ
ಮಣ್ಣಲ್ಲಿ ಮೋಡಗಳ ಬಣ್ಣ ಕಲೆಸಿ
ಮಾತ ಮರ್ಜಿಗೆ ಸಿಗದ ಉರಿಯ ಚಿಗುರುಗಳನ್ನ
ಕಣ್ಣಲ್ಲಿ ನಿಲಿಸಿ
ಬೊಗಸೆ ಮುಖದಲಿ ಮನಸ ಮೊಗೆದು ಸುರಿವ
ನೀನು ಯಾರೆ ಚೆಲುವೆ,
ನೀನು ಯಾರೆ?
ನೀ ಬಂದು ನಿಂತೆಯೋ ಎದುರು
ಹಾರಿಹೋಗುವುದಲ್ಲ ಪರಿವೆ.

ಬಿದ್ದ ದೇವಾಲಯದ ನವರಂಗ ಮಂಟಪಕೆ
ಮತ್ತೆ ಜೀರ್ಣೋದ್ಧಾರ ನಡೆಸಿದವಳೆ,
ಈ ಕಾಡಲ್ಲಿ
ದಾರಿ ಹುಡುಕಿದೆ ಹೇಗೆ ಚದುರೆ?

ದಾರಿ ಹುಡುಕಿದೆ ಹೇಗೆ ಚದುರೆ ಈ ಕಾಡಲ್ಲಿ
ನೂರು ನೋವು ಕಾಲ ಕಚ್ಚುವಲ್ಲಿ?
ಇಷ್ಟು ನಡೆದರು ದಾರಿ ಹುಡುಕಿ ಬಂದೀ ಗುಡಿಗೆ
ಬರಲೊಲ್ಲೆ ನಿಂತಿರುವೆ ಬಾಗಿಲಲ್ಲಿ.

ಮತ್ತೆ ಬೆಳಗಿದ ದೀಪ, ಮುಖವನೆತ್ತಿದ ಶಿಲ್ಪ
ಪೂಜೆ ಆರತಿ ಶಂಖ ಜಾಗಟೆದನಿ
ನಲಿವು ಮಡುಗಟ್ಟಿ ನಿಂತಿದೆ ಗರ್ಭಗುಡಿಯಲ್ಲಿ,
ನೀನೊ ನಾಲ್ಕಡಿ ಆಚೆ ದೂರದಲ್ಲಿ.

ಕರೆದೀತು ಹೇಗೆ ಕಲ್ಲದೇವರು ಬಳಿಗೆ?
ಕರೆದಿರೂ ನೀ ಹೋಗುವವಳಲ್ಲ ಒಳಗೆ,
ಸತ್ತ ಬದುಕನ್ನೆತ್ತಿ ನಿಲ್ಲಿಸಿದ ಒಲವಿಗೆ
ಮೌನದಲ್ಲೆ ಎಲ್ಲ ಕೃತಜ್ಞತೆ ಕಡೆಗೆ.
*****
ದೀಪಿಕಾ ಕವನಗುಚ್ಛ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...