Home / ಕವನ / ಕವಿತೆ / ಅದೇ ಕಥೆ

ಅದೇ ಕಥೆ

ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ,
ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ
ಸತ್ತ ಸುಖದ ಸ್ಮೃತಿಯ.
ಕಣ್ಣಿಂದ ದಳದಳ ನೀರು
ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ
ಏಳುವುವು ನೂರು
ಜೇನುಗೂಡನು ಹಿಂಡಿಬಂದ ಅನುಭವ ಸಾಲು:
“ಅಯ್ಯೋ ದೇವರೆ ಆಗೆಲ್ಲ ಎಂಥ ಕಾಲ!
ಎಂಥ ಬಾಲ ಕಪ್ಪೆಗೆ, ಏನು ಕೋಡು ಕುದುರೆಗೆ
ಅರಳಿಯೆಲೆಯ ಕೆಂಪುಚಿಗುರೆ ಮೇವು ಹಂಸಪಕ್ಷಿಗೆ;
ಬೇಲಿಯಿರದ ಬೇಟ
ಕಾವಲಿರದ ತೋಟ
ದನಕಾಯುವ ದಡ್ಡ ಕೂಡ ತಪ್ಪಿ ಮೇಲೆ ಕೂತರೆ
ತಟಕ್ಕನೆಯೆ ಜೀವತುಂಬಿ ನುಡಿವ ಧರ್ಮಪೀಠ;
ಎಂಥ ಕೆಟ್ಟ ಹೆಣ್ಣಿಗೂ ಸರಸ್ವತಿಯ ಕಂಠ
ಅಪ್ಸರೆಯರ ಸೊಂಟ
ಗಂಡಸಾದರಂತು ಬಿಡು ಇಂದ್ರ ಅವನ ನೆಂಟ”.
ಹರಿಹರಿದಂತೆ ನೆರೆ ಬರುವುದು
ಕೊರಕಲಿನಲ್ಲಿ ಕಿಳಪಿಳ ಸರಿವ ಬಡಕಲು ತೊರೆಗೆ;
ಬಿಟ್ಟ ಬಾಯಾಗಿ
ನೆಟ್ಟ ಕಣ್ಣಾಗಿ
ಕೇಳುವುವು ಮಕ್ಕಳು
ಆತು ಅಜ್ಜಿ ಮೈಗೆ,
ಬೆರಗಾಗಿ ಕತ್ತಲಲ್ಲಿ ಕುರುಡ ಬಣ್ಣಿಸುತ್ತಿರುವ
ಬೆಳುದಿಂಗಳ ಕಥೆಗೆ.

ನಮಗೇನು ಗೊತ್ತು
ಹೋಮಧೂಮದಲಿ ಬುದ್ಧಪ್ರೇಮದಲಿ
ಅಶೋಕಧರ್ಮದ ಚಕ್ರಚಲನದಲಿ
ಗಾಡಿ ನಡೆದ ಗತ್ತು?
ಮನೆಯಿತ್ತು
ಮನೆಗೆ ಮಾಡಿತ್ತು;
ಹೆಂಚುದೋಣಿಗಳ ನಡುವೆ ಅಲ್ಲಲ್ಲಿ ತೂತೂ ಇತ್ತು;
ಹಗಲಲ್ಲಿ ಹೊನ್ನ ಸರಳು
ಇರುಳಲ್ಲಿ ಬೆಳುದಿಂಗಳ ಕೊರಳು
ದೇವರ ಮನೆಗೆ ಬೆಳಕ ಹಾಡಿತ್ತು.
ಮಳೆಗಾಲದಲ್ಲಿ ಮನೆ ಕೆರೆಯಾಗಿರಲಿಲ್ಲವೆ,
ಬೆಲ್ಲದ ವರ್ಣನೆಯಲ್ಲೇ ಬೇವಿನ ಮಾಹಿತಿ ಇಲ್ಲವೆ?
ಎದ್ದ ಕಲ್ಲು ಪೂಜಾರಿಯ ಲೆಕ್ಕಕ್ಕೆ ಜಮವಾಗಿ
ಜಾಗಟೆ ಮೊಳಗಿ
ಆರತಿ ಬೆಳಗಿ ಗುಡಿಯಲ್ಲಿ,
ಬಿದ್ದ ಕಲ್ಲುಗಳ ಪಾಡು
ಅಗಸನ ಬಟ್ಟೆಯ ಬಡಿತದ ತಾಳಕೆ ನುಡಿಸಿದ ಹಾಡು!

ಇತ್ತು ಆಗಲೂ ಎಲ್ಲ ಇತ್ತು
ಅಜ್ಜಿಯ ಹಾಡಿನ ಮಲ್ಲಿಗೆ ಜಾಡಿನ ತಳದ ಕೆದಕಿನಲಿ
ಮೂಳೆ ಮಜ್ಜೆಗಳ ನಾರುವ ಗೊಬ್ಬರವಿತ್ತು
ಕರ್ಣನ ಶೌರ್ಯ
ಧರ್ಮನ ಧೈರ್ಯ
ಅಂಬೆಯ ಪ್ರೀತಿ
ಭೀಷ್ಮನ ನೀತಿ
ಎಲ್ಲಕು ಕೂಡಿಯೆ
ಕಾಲಜ್ಞಾನದ ಕತ್ತಲ ಕೊಳದಲಿ ಕಾಲುಜಾರಿತ್ತು.

ಆ ವನದಿಂದಲೆ ತಂದುದು ಈ ಆಲದ ಸಸಿಯ
ಬಳಿಯಬಹುದೆ ನಾವು ಪರಂಪರೆಯ ಮುಖಕೆ ಮಸಿಯ?
ಅಳಿಸಬಹುದೆ ನಿನ್ನೆಯಿಂದ ಇಂದು ಬಂದ ನನ್ನಿಯ?
ಹಾಗೆಂದೇ ಇಂದು ಕೂಡ
ಮಕ್ಕಳಿರುವ ಮನೆನೆತ್ತಿಯ ಮೇಲೆ ಗೂಬೆ ಕೂಗಿದೆ
ತೆಂಗುಗರಿಯ ಮೇಲೆ ಮಂಗ ಕುಣಿದು ಲಾಗ ಹಾಕಿದೆ
ಕಣಜದಲ್ಲೆ ಹೆಗ್ಗಣ
ಅಡಿಗೆಮನೆ ಮದ್ದಿನ
ದೀಪಾವಳಿ ಷಾಪಾಗಿದೆ, ಹೊಂಚುತ್ತಿದೆ ದುರ್ದಿನ?

ಬಿದ್ದಮನೆ ಗುರುತಲ್ಲೆ ಹೊಸಮನೆಗೆ ಅಡಿಪಾಯ
ಆಗೆಯುತ್ತಿದ್ದೇವೆ;
ಹುತ್ತ ಕಂಡೊಡನೆಯೇ ಹಾವಾಗಿ
ನೀರು ಕಂಡೊಡನೆಯೇ ಹೊಳೆಯಾಗಿ
ಎತ್ತಿಟ್ಟಕಾಲ ಮುತ್ತಿಟ್ಟದರ ಮೆಟ್ಟಾಗಿ
ಹೊಟ್ಟಾಗಿ ಈ ಕೆಟ್ಟ ಹೊಟ್ಟೆ ಹೊರೆದಿದ್ದೇವೆ;
ತಿದ್ದ ಬಂದವರನ್ನು ಗುದ್ದಿ ತೆಗೆದಿದ್ದೇವೆ
ಪ್ರತಿಕ್ಷಣವು ಅದಕೆ ಕೊರಗುತ್ತಲೂ ಇದ್ದೇವೆ;
ಕಷ್ಟ ಉಳಿದರು ಕಡೆಗೆ ನಾವು ಮುಗಿಯುವೆವೆಂದು
ಕತ್ತಲೆಯನೇ ನೆಮ್ಮಿ
ನಡೆಯುತ್ತಿದ್ದೇವೆ
ನಡೆಯುತ್ತಿರುತ್ತೇವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...