Home / ಕವನ / ಕವಿತೆ / ಅದೇ ಕಥೆ

ಅದೇ ಕಥೆ

ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ,
ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ
ಸತ್ತ ಸುಖದ ಸ್ಮೃತಿಯ.
ಕಣ್ಣಿಂದ ದಳದಳ ನೀರು
ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ
ಏಳುವುವು ನೂರು
ಜೇನುಗೂಡನು ಹಿಂಡಿಬಂದ ಅನುಭವ ಸಾಲು:
“ಅಯ್ಯೋ ದೇವರೆ ಆಗೆಲ್ಲ ಎಂಥ ಕಾಲ!
ಎಂಥ ಬಾಲ ಕಪ್ಪೆಗೆ, ಏನು ಕೋಡು ಕುದುರೆಗೆ
ಅರಳಿಯೆಲೆಯ ಕೆಂಪುಚಿಗುರೆ ಮೇವು ಹಂಸಪಕ್ಷಿಗೆ;
ಬೇಲಿಯಿರದ ಬೇಟ
ಕಾವಲಿರದ ತೋಟ
ದನಕಾಯುವ ದಡ್ಡ ಕೂಡ ತಪ್ಪಿ ಮೇಲೆ ಕೂತರೆ
ತಟಕ್ಕನೆಯೆ ಜೀವತುಂಬಿ ನುಡಿವ ಧರ್ಮಪೀಠ;
ಎಂಥ ಕೆಟ್ಟ ಹೆಣ್ಣಿಗೂ ಸರಸ್ವತಿಯ ಕಂಠ
ಅಪ್ಸರೆಯರ ಸೊಂಟ
ಗಂಡಸಾದರಂತು ಬಿಡು ಇಂದ್ರ ಅವನ ನೆಂಟ”.
ಹರಿಹರಿದಂತೆ ನೆರೆ ಬರುವುದು
ಕೊರಕಲಿನಲ್ಲಿ ಕಿಳಪಿಳ ಸರಿವ ಬಡಕಲು ತೊರೆಗೆ;
ಬಿಟ್ಟ ಬಾಯಾಗಿ
ನೆಟ್ಟ ಕಣ್ಣಾಗಿ
ಕೇಳುವುವು ಮಕ್ಕಳು
ಆತು ಅಜ್ಜಿ ಮೈಗೆ,
ಬೆರಗಾಗಿ ಕತ್ತಲಲ್ಲಿ ಕುರುಡ ಬಣ್ಣಿಸುತ್ತಿರುವ
ಬೆಳುದಿಂಗಳ ಕಥೆಗೆ.

ನಮಗೇನು ಗೊತ್ತು
ಹೋಮಧೂಮದಲಿ ಬುದ್ಧಪ್ರೇಮದಲಿ
ಅಶೋಕಧರ್ಮದ ಚಕ್ರಚಲನದಲಿ
ಗಾಡಿ ನಡೆದ ಗತ್ತು?
ಮನೆಯಿತ್ತು
ಮನೆಗೆ ಮಾಡಿತ್ತು;
ಹೆಂಚುದೋಣಿಗಳ ನಡುವೆ ಅಲ್ಲಲ್ಲಿ ತೂತೂ ಇತ್ತು;
ಹಗಲಲ್ಲಿ ಹೊನ್ನ ಸರಳು
ಇರುಳಲ್ಲಿ ಬೆಳುದಿಂಗಳ ಕೊರಳು
ದೇವರ ಮನೆಗೆ ಬೆಳಕ ಹಾಡಿತ್ತು.
ಮಳೆಗಾಲದಲ್ಲಿ ಮನೆ ಕೆರೆಯಾಗಿರಲಿಲ್ಲವೆ,
ಬೆಲ್ಲದ ವರ್ಣನೆಯಲ್ಲೇ ಬೇವಿನ ಮಾಹಿತಿ ಇಲ್ಲವೆ?
ಎದ್ದ ಕಲ್ಲು ಪೂಜಾರಿಯ ಲೆಕ್ಕಕ್ಕೆ ಜಮವಾಗಿ
ಜಾಗಟೆ ಮೊಳಗಿ
ಆರತಿ ಬೆಳಗಿ ಗುಡಿಯಲ್ಲಿ,
ಬಿದ್ದ ಕಲ್ಲುಗಳ ಪಾಡು
ಅಗಸನ ಬಟ್ಟೆಯ ಬಡಿತದ ತಾಳಕೆ ನುಡಿಸಿದ ಹಾಡು!

ಇತ್ತು ಆಗಲೂ ಎಲ್ಲ ಇತ್ತು
ಅಜ್ಜಿಯ ಹಾಡಿನ ಮಲ್ಲಿಗೆ ಜಾಡಿನ ತಳದ ಕೆದಕಿನಲಿ
ಮೂಳೆ ಮಜ್ಜೆಗಳ ನಾರುವ ಗೊಬ್ಬರವಿತ್ತು
ಕರ್ಣನ ಶೌರ್ಯ
ಧರ್ಮನ ಧೈರ್ಯ
ಅಂಬೆಯ ಪ್ರೀತಿ
ಭೀಷ್ಮನ ನೀತಿ
ಎಲ್ಲಕು ಕೂಡಿಯೆ
ಕಾಲಜ್ಞಾನದ ಕತ್ತಲ ಕೊಳದಲಿ ಕಾಲುಜಾರಿತ್ತು.

ಆ ವನದಿಂದಲೆ ತಂದುದು ಈ ಆಲದ ಸಸಿಯ
ಬಳಿಯಬಹುದೆ ನಾವು ಪರಂಪರೆಯ ಮುಖಕೆ ಮಸಿಯ?
ಅಳಿಸಬಹುದೆ ನಿನ್ನೆಯಿಂದ ಇಂದು ಬಂದ ನನ್ನಿಯ?
ಹಾಗೆಂದೇ ಇಂದು ಕೂಡ
ಮಕ್ಕಳಿರುವ ಮನೆನೆತ್ತಿಯ ಮೇಲೆ ಗೂಬೆ ಕೂಗಿದೆ
ತೆಂಗುಗರಿಯ ಮೇಲೆ ಮಂಗ ಕುಣಿದು ಲಾಗ ಹಾಕಿದೆ
ಕಣಜದಲ್ಲೆ ಹೆಗ್ಗಣ
ಅಡಿಗೆಮನೆ ಮದ್ದಿನ
ದೀಪಾವಳಿ ಷಾಪಾಗಿದೆ, ಹೊಂಚುತ್ತಿದೆ ದುರ್ದಿನ?

ಬಿದ್ದಮನೆ ಗುರುತಲ್ಲೆ ಹೊಸಮನೆಗೆ ಅಡಿಪಾಯ
ಆಗೆಯುತ್ತಿದ್ದೇವೆ;
ಹುತ್ತ ಕಂಡೊಡನೆಯೇ ಹಾವಾಗಿ
ನೀರು ಕಂಡೊಡನೆಯೇ ಹೊಳೆಯಾಗಿ
ಎತ್ತಿಟ್ಟಕಾಲ ಮುತ್ತಿಟ್ಟದರ ಮೆಟ್ಟಾಗಿ
ಹೊಟ್ಟಾಗಿ ಈ ಕೆಟ್ಟ ಹೊಟ್ಟೆ ಹೊರೆದಿದ್ದೇವೆ;
ತಿದ್ದ ಬಂದವರನ್ನು ಗುದ್ದಿ ತೆಗೆದಿದ್ದೇವೆ
ಪ್ರತಿಕ್ಷಣವು ಅದಕೆ ಕೊರಗುತ್ತಲೂ ಇದ್ದೇವೆ;
ಕಷ್ಟ ಉಳಿದರು ಕಡೆಗೆ ನಾವು ಮುಗಿಯುವೆವೆಂದು
ಕತ್ತಲೆಯನೇ ನೆಮ್ಮಿ
ನಡೆಯುತ್ತಿದ್ದೇವೆ
ನಡೆಯುತ್ತಿರುತ್ತೇವೆ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...