Home / ಕವನ / ಕವಿತೆ / ಪ್ರಾರ್‍ಥನೆ

ಪ್ರಾರ್‍ಥನೆ

ಯಾರೋ ಬಂದರು ಯಾರೋ ಹೋದರು
ಗೋಡೆ ಮೇಲೆಲ್ಲ ನೆರಳು,
ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು
ಯಾರದೋ ನುಣುಪು ಬೆರಳು,
ಬಂದಿದ್ದರು, ನಿಂತಿದ್ದರು, ನುಡಿಸಲು
ಎಣಿಸಿದ್ದರು ಎಂಬ
ಭಾವವೊಂದೆ ಉಳಿದಿದೆ, ಕತ್ತೆತ್ತಲು
ಏನಿದೆ, ಬರಿಬಯಲು!

ಹೂ ಪರಿಮಳ ಹಾಯಾಗಿ ಹಬ್ಬುತಿದೆ
ಇಡಿಕೊಠಡಿಯ ತುಂಬ;
ಜರಿವಸ್ತ್ರದ ಸರಪರಸದ್ದಿನ್ನೂ
ನಿಂತಿದೆ ಕಿವಿತುಂಬ;
ತಾಯಿಕೈಯ ನೇವರಿಕೆಯೆ, ಆದರು
ತಲೆಯನೆತ್ತಲಿಲ್ಲ,
ಕರುಣೆ ತೋರಿ ಬಳಿ ಬಂದಿರೆ ದಿನವೂ
ನಮಿಸಿದ ಪ್ರತಿಬಿಂಬ.

ನೀವು ಬಂದಾಗ ಕರೆಯಲಿಲ್ಲೆಂದು
ಕೋಪವೇನು ನಿಮಗೆ?
ಕೊಡಿ ಎಂದು ನಯ ನುಡಿಯಲಿಲ್ಲ
ಬೇರಾಯಿತೆ ನಿಮ್ಮ ಬಗೆ?
ಏತರಲೋ ಹೂತಿತ್ತು ಮನಸು, ಬರಿ
ಕಾತರ ಕನವರಿಕೆ;
ಮಂಕು ಮುಚ್ಚಿ ತಪ್ಪಿದೆ ನಿಜ, ಅಷ್ಟಕೆ
ಹೊರಟೇ ಬಿಡುವುದೆ ಹೊರಕೆ?

ಬನ್ನಿ ಕಾದಿರುವ ನಿಮ್ಮದೇ ಧ್ಯಾನ
ಶಬರಿಯ ಹಂಬಲಿಕೆ,
ಲೌಕಿಕದಲಿ ಬಗೆದೈವವ ಮರೆತೆನು
ಶಪಿಸಬೇಡಿ ಅದಕೆ.
ಸ್ವಪ್ನಚಿತ್ತರನು ಯಾರು ದೂರುವರು
ಕಂಡರು ಕಾಣದಕೆ?
ತಿಳಿಯದೆ ತಪ್ಪಿದರದೆ ಕಾರಣವೆ
ಬಂದುದು ಬಾರದಕೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...