ಚಂಡೆಮದ್ಡಳೆ ತಾಳ ಜಾಗಟೆ ಕೊಂಬು ಕಹಳೆ
ಕೊಟ್ಟು ಕುಳಿತಲ್ಲೆ ಒಡ್ಡೋಲಗ
ಕಟ್ಟಿ ಅಭೇದ್ಯ ಕೋಟೆ ದಾಟಿ ಸಮುದ್ರವನಿರುಳೆ
ಉಸಿರು ಬಿಗಿಹಿಡಿದು ಗೆದ್ದ ಕಾಳಗ
ಇನ್ನಿಲ್ಲವೆಂಬ ಅಶ್ವಮೇಧ ಯಾಗ
ಎಲ್ಲ ಮುಗಿಯಿತೆಂದರೆ ಮತ್ತಿದೇನಾರ್ಭಟ
ಅದೇನು ಭಗ್ಗನೆ ಉರಿವ ಪಂಜು ?
ಮಹಾ ರಕ್ಕಸನೆ ಸರಿ ಇವನು ಅಂಥ ಕರಾಳ ನೋಟ
ಲೆಕ್ಕಿಸದೆ ಮುಂಜಾವದ ಮಂಜು
ಕಾರುತಿರುವನು ಎಲ್ಲರ ಮೇಲೆ ನಂಜು
ಮುಗಿಯಿತೆಂದರೆ ಮುಗಿಯುವುದು ಹೇಗೆ ಒಂದು
ಜನಾಂಗವನ್ನೆ ಹುಚ್ಚೆಬ್ಬಿಸಿದ ಪುರಾಣ
ಮಗಧ ದೇಶದ ಅರಸನಿವನು ಹೆಸರು ಮಾಗಧನೆಂದು
ಸದೆಬಡಿಯಲಾರವು ಬಿಲ್ಲು ಬಾಣ
ಇವನಿಗೆ ಅನೇಕ ಆನೆಗಳ ತ್ರಾಣ
ಇವನ ಪ್ರಾಣದ ರಹಸ್ಯವೇನೂ ಹೊಸತಲ್ಲ ನಮಗೆ
ಆದರೂ ತಿಳಿವಂತೆ ಹೊಸ ಗುಟ್ಟು
ಕಾದಿರುವೆವು ವರುಷವರುಷವೂ ಆತಂಕಗೊಂಡು ಬಗೆ
ನಮ್ಮ ತಲ್ಲಣದಲ್ಲಿ ನಿಮ್ಮ ಮಟ್ಟು
ಯುಗದಾಚೆಗೆ ಕಾಲನಿಟ್ಟು
*****
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
Latest posts by ತಿರುಮಲೇಶ್ ಕೆ ವಿ
(see all)