Home / ಕವನ / ಕವಿತೆ / ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು
ಬೆರಳುಗಳ ಕೊರಳ ಆಲಿಸಿ
ಗೆರೆಯನೆಳೆಯಿತು.

ಪುಟ್ಟ ಮನೆಯೊಂದ ಕಟ್ಟಿ
ಮನೆಯ ಮುಂದೊಂದು ಮರವ ನೆಟ್ಟು
ರೆಂಬೆ ಕೊಂಬೆಗೆ ಎಲೆಯನಿಟ್ಟು
ಎಲೆಯ ನಡುವೆ ಹೂವನರಳಿಸಿ
ಹೂವಿನ ಜೊತೆಗೆ ಹಣ್ಣನಿರಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ನಡೆ ನೋಡಿ
ಗೆರೆಯನೆಳೆಯಿತು.

ಮನೆಯ ಹಿಂದೊಂದು ಗುಡ್ಡವ ಕರೆದು
ಗುಡ್ಡದ ಮೇಲೊಬ್ಬ ಸೂರ್‍ಯನ ಉರಿಸಿ
ಸಾಲಾಗಿ ಹಕ್ಕಿಗಳು ರೆಕ್ಕೆ ಬೀಸಲು
ಬುಡದಲ್ಲೊಂದು ನದಿಯ ಹರಿಸಿ
ನದಿಯಲ್ಲೊಂದು ದೋಣಿಯ ತೇಲಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ಭಾವ ಭ್ರಮಿಸಿ
ಗೆರೆಯನೆಳೆಯಿತು.

ಗಿರಗಿರ ಬುಗುರಿ ತಿರುಗಿಸಿ
ಹುಲ್ಲುಹಾಸಿನ ಮೇಲೆ
ಗಾಲಿ, ಗೋಲಿಯನುರುಳಿಸಿ
ಕುದುರೆಗೂ ಕೊಂಬು ಮೂಡಿಸಿ
ಮಣ್ಣಿಗೂ ಕಣ್ಣು ಬರೆದು
ಹಿಗ್ಗಿ ನಲಿಯಿತು.


ಅವ್ವ….
ಘಮ್ಮೆಂದಿದೆ ಹೂ ಮೂಸಿ ನೋಡು
ಸಿಹಿಯಾಗಿದೆ ಮಾವು ಕಿತ್ತುಕೊಡು
ಝಳಝಳ ನದಿಯಿದೆ ಹಾಡು
ಸುಡುವುದಿಲ್ಲ ಈ ಸೂರ್‍ಯ ಮುಟ್ಟಿಬಿಡು
ಎಂದೆಲ್ಲಾ ನುಡಿನುಡಿದು

ಅವ್ವ…..
ಇದು ನಾನು
ಇಗೋ ಇದು ಮನೆಯ ಮುಂದಿನ ದಾರಿ
ಇದು ನನ್ನ ದಾರಿ
ನಾ ನಡೆವ ದಾರಿ ಎಂದೆಲ್ಲಾ ನುಡಿದು
ಪುಟ್ಟಪುಟ್ಟ ಹೆಜ್ಜೆ ಹಾಕಿ
ಹೋದ ಮಗು ಮರಳಲಿಲ್ಲ….

ನಿಮಿಷಗಳು ವರುಷಗಳು
ಮರಳಲಿಲ್ಲ.


ಕಾದು ಕಾದು ಮರುಗಿದಳಾ ತಾಯಿ
ಕಾದು ಕಾದು ಒರಗಿದಳಾ ತಾಯಿ
ಕಾದು ಕಾದು ಕರಗಿದಳಾ ತಾಯಿ
ಒರಗಿದಲ್ಲೆ ಕರಗಿದರೆ ಅವಳೆಂಥಾ ತಾಯಿ?
ಮತ್ತೆ ಕತ್ತೆತ್ತಿದಳು ಗಿಡವಾಗಿ

ಗಿಡದೊಳಗೆ ಹೂವಾಗಿ
ಹೂವರಳಿ ಪರಿಮಳಿಸಿ
ಗಾಳಿಗುದುರೆಯನೇರಿ ದಿಕ್ಕು ದಿಕ್ಕಿಗೆ ಹಾರಿ
ಹುಡುಕಿದಳಾ ತಾಯಿ-

ಮತ್ತೆ ಕತ್ತೆತ್ತಿದಳು ಗಿಡವಾಗಿ
ಹೂವಾಗಿ, ಹತ್ತಿಯಾಗಿ, ಬತ್ತಿಯಾಗಿ
ಮನೆಮನೆಗೂ ತಿರುಗಿ
ಒಳಗೂ ಹೊರಗೂ ಬೆಳಗಿ
ಹುಡುಕಿದಳಾ ತಾಯಿ….

ಮಮತೆಯ ಮಗ್ಗದೊಳಗೆ
ಮಗ್ಗುಲಾಗಿ ಮಗ್ಗುಲಾಗಿ
ಹಾಯಿಯಾಗಿ ಹಡಗನೇರಿ
ಯಾವುದೋ ದೇಶದಲ್ಲಿ
ಯಾವುದೋ ವೇಷದಲ್ಲಿ
ಹುಡುಕಿದಳಾ ತಾಯಿ….


ಅದೊಂದು ದಿನ ಚಿಗುರು ಮೀಸೆಯ
ಹುಡುಗ ಹತ್ತಿದನಾ ಹಡಗ
ಕಂಬಕ್ಕೊರಗಿ ಕಣ್ಮುಚ್ಚಲು
ಯಾವುದೋ ನೆನಪೊಂದಿಗೆ ತೇಲಿ
ಜೋ ಜೋ ಜೋ ಜೋ
ಎಂದು ತೂಗಿತು ಜೋಕಾಲಿ.

ಮೊಗ್ಗಾಯಿತು ಹೀಚಾಯಿತು ಕಾಯಿ
ತೊದಲಿತು ಬೀಜರೂಪಿ ಬಾಯಿ
ಮಾಯಿ! ಮಾಯಿ! ಮಾಯಿ!
ಪಟಗುಟ್ಟಿ ಮುನ್ನಡೆಸಿತು ಹಾಯಿ
ಕೈ ಹಿಡಿದಳು ಕಂದನಾ ತಾಯಿ
ಕೈ ಬೀಸಿ ಕರೆಯಿತು ದಾರಿ
ಅದೇ ದಾರಿ….
ಚಿತ್ರದೊಳಗಿನ ದಾರಿ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...