Home / ಕವನ / ಕವಿತೆ / ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು
ಬೆರಳುಗಳ ಕೊರಳ ಆಲಿಸಿ
ಗೆರೆಯನೆಳೆಯಿತು.

ಪುಟ್ಟ ಮನೆಯೊಂದ ಕಟ್ಟಿ
ಮನೆಯ ಮುಂದೊಂದು ಮರವ ನೆಟ್ಟು
ರೆಂಬೆ ಕೊಂಬೆಗೆ ಎಲೆಯನಿಟ್ಟು
ಎಲೆಯ ನಡುವೆ ಹೂವನರಳಿಸಿ
ಹೂವಿನ ಜೊತೆಗೆ ಹಣ್ಣನಿರಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ನಡೆ ನೋಡಿ
ಗೆರೆಯನೆಳೆಯಿತು.

ಮನೆಯ ಹಿಂದೊಂದು ಗುಡ್ಡವ ಕರೆದು
ಗುಡ್ಡದ ಮೇಲೊಬ್ಬ ಸೂರ್‍ಯನ ಉರಿಸಿ
ಸಾಲಾಗಿ ಹಕ್ಕಿಗಳು ರೆಕ್ಕೆ ಬೀಸಲು
ಬುಡದಲ್ಲೊಂದು ನದಿಯ ಹರಿಸಿ
ನದಿಯಲ್ಲೊಂದು ದೋಣಿಯ ತೇಲಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ಭಾವ ಭ್ರಮಿಸಿ
ಗೆರೆಯನೆಳೆಯಿತು.

ಗಿರಗಿರ ಬುಗುರಿ ತಿರುಗಿಸಿ
ಹುಲ್ಲುಹಾಸಿನ ಮೇಲೆ
ಗಾಲಿ, ಗೋಲಿಯನುರುಳಿಸಿ
ಕುದುರೆಗೂ ಕೊಂಬು ಮೂಡಿಸಿ
ಮಣ್ಣಿಗೂ ಕಣ್ಣು ಬರೆದು
ಹಿಗ್ಗಿ ನಲಿಯಿತು.


ಅವ್ವ….
ಘಮ್ಮೆಂದಿದೆ ಹೂ ಮೂಸಿ ನೋಡು
ಸಿಹಿಯಾಗಿದೆ ಮಾವು ಕಿತ್ತುಕೊಡು
ಝಳಝಳ ನದಿಯಿದೆ ಹಾಡು
ಸುಡುವುದಿಲ್ಲ ಈ ಸೂರ್‍ಯ ಮುಟ್ಟಿಬಿಡು
ಎಂದೆಲ್ಲಾ ನುಡಿನುಡಿದು

ಅವ್ವ…..
ಇದು ನಾನು
ಇಗೋ ಇದು ಮನೆಯ ಮುಂದಿನ ದಾರಿ
ಇದು ನನ್ನ ದಾರಿ
ನಾ ನಡೆವ ದಾರಿ ಎಂದೆಲ್ಲಾ ನುಡಿದು
ಪುಟ್ಟಪುಟ್ಟ ಹೆಜ್ಜೆ ಹಾಕಿ
ಹೋದ ಮಗು ಮರಳಲಿಲ್ಲ….

ನಿಮಿಷಗಳು ವರುಷಗಳು
ಮರಳಲಿಲ್ಲ.


ಕಾದು ಕಾದು ಮರುಗಿದಳಾ ತಾಯಿ
ಕಾದು ಕಾದು ಒರಗಿದಳಾ ತಾಯಿ
ಕಾದು ಕಾದು ಕರಗಿದಳಾ ತಾಯಿ
ಒರಗಿದಲ್ಲೆ ಕರಗಿದರೆ ಅವಳೆಂಥಾ ತಾಯಿ?
ಮತ್ತೆ ಕತ್ತೆತ್ತಿದಳು ಗಿಡವಾಗಿ

ಗಿಡದೊಳಗೆ ಹೂವಾಗಿ
ಹೂವರಳಿ ಪರಿಮಳಿಸಿ
ಗಾಳಿಗುದುರೆಯನೇರಿ ದಿಕ್ಕು ದಿಕ್ಕಿಗೆ ಹಾರಿ
ಹುಡುಕಿದಳಾ ತಾಯಿ-

ಮತ್ತೆ ಕತ್ತೆತ್ತಿದಳು ಗಿಡವಾಗಿ
ಹೂವಾಗಿ, ಹತ್ತಿಯಾಗಿ, ಬತ್ತಿಯಾಗಿ
ಮನೆಮನೆಗೂ ತಿರುಗಿ
ಒಳಗೂ ಹೊರಗೂ ಬೆಳಗಿ
ಹುಡುಕಿದಳಾ ತಾಯಿ….

ಮಮತೆಯ ಮಗ್ಗದೊಳಗೆ
ಮಗ್ಗುಲಾಗಿ ಮಗ್ಗುಲಾಗಿ
ಹಾಯಿಯಾಗಿ ಹಡಗನೇರಿ
ಯಾವುದೋ ದೇಶದಲ್ಲಿ
ಯಾವುದೋ ವೇಷದಲ್ಲಿ
ಹುಡುಕಿದಳಾ ತಾಯಿ….


ಅದೊಂದು ದಿನ ಚಿಗುರು ಮೀಸೆಯ
ಹುಡುಗ ಹತ್ತಿದನಾ ಹಡಗ
ಕಂಬಕ್ಕೊರಗಿ ಕಣ್ಮುಚ್ಚಲು
ಯಾವುದೋ ನೆನಪೊಂದಿಗೆ ತೇಲಿ
ಜೋ ಜೋ ಜೋ ಜೋ
ಎಂದು ತೂಗಿತು ಜೋಕಾಲಿ.

ಮೊಗ್ಗಾಯಿತು ಹೀಚಾಯಿತು ಕಾಯಿ
ತೊದಲಿತು ಬೀಜರೂಪಿ ಬಾಯಿ
ಮಾಯಿ! ಮಾಯಿ! ಮಾಯಿ!
ಪಟಗುಟ್ಟಿ ಮುನ್ನಡೆಸಿತು ಹಾಯಿ
ಕೈ ಹಿಡಿದಳು ಕಂದನಾ ತಾಯಿ
ಕೈ ಬೀಸಿ ಕರೆಯಿತು ದಾರಿ
ಅದೇ ದಾರಿ….
ಚಿತ್ರದೊಳಗಿನ ದಾರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...