Home / ಕವನ / ಕವಿತೆ / ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು
ಬೆರಳುಗಳ ಕೊರಳ ಆಲಿಸಿ
ಗೆರೆಯನೆಳೆಯಿತು.

ಪುಟ್ಟ ಮನೆಯೊಂದ ಕಟ್ಟಿ
ಮನೆಯ ಮುಂದೊಂದು ಮರವ ನೆಟ್ಟು
ರೆಂಬೆ ಕೊಂಬೆಗೆ ಎಲೆಯನಿಟ್ಟು
ಎಲೆಯ ನಡುವೆ ಹೂವನರಳಿಸಿ
ಹೂವಿನ ಜೊತೆಗೆ ಹಣ್ಣನಿರಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ನಡೆ ನೋಡಿ
ಗೆರೆಯನೆಳೆಯಿತು.

ಮನೆಯ ಹಿಂದೊಂದು ಗುಡ್ಡವ ಕರೆದು
ಗುಡ್ಡದ ಮೇಲೊಬ್ಬ ಸೂರ್‍ಯನ ಉರಿಸಿ
ಸಾಲಾಗಿ ಹಕ್ಕಿಗಳು ರೆಕ್ಕೆ ಬೀಸಲು
ಬುಡದಲ್ಲೊಂದು ನದಿಯ ಹರಿಸಿ
ನದಿಯಲ್ಲೊಂದು ದೋಣಿಯ ತೇಲಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ಭಾವ ಭ್ರಮಿಸಿ
ಗೆರೆಯನೆಳೆಯಿತು.

ಗಿರಗಿರ ಬುಗುರಿ ತಿರುಗಿಸಿ
ಹುಲ್ಲುಹಾಸಿನ ಮೇಲೆ
ಗಾಲಿ, ಗೋಲಿಯನುರುಳಿಸಿ
ಕುದುರೆಗೂ ಕೊಂಬು ಮೂಡಿಸಿ
ಮಣ್ಣಿಗೂ ಕಣ್ಣು ಬರೆದು
ಹಿಗ್ಗಿ ನಲಿಯಿತು.


ಅವ್ವ….
ಘಮ್ಮೆಂದಿದೆ ಹೂ ಮೂಸಿ ನೋಡು
ಸಿಹಿಯಾಗಿದೆ ಮಾವು ಕಿತ್ತುಕೊಡು
ಝಳಝಳ ನದಿಯಿದೆ ಹಾಡು
ಸುಡುವುದಿಲ್ಲ ಈ ಸೂರ್‍ಯ ಮುಟ್ಟಿಬಿಡು
ಎಂದೆಲ್ಲಾ ನುಡಿನುಡಿದು

ಅವ್ವ…..
ಇದು ನಾನು
ಇಗೋ ಇದು ಮನೆಯ ಮುಂದಿನ ದಾರಿ
ಇದು ನನ್ನ ದಾರಿ
ನಾ ನಡೆವ ದಾರಿ ಎಂದೆಲ್ಲಾ ನುಡಿದು
ಪುಟ್ಟಪುಟ್ಟ ಹೆಜ್ಜೆ ಹಾಕಿ
ಹೋದ ಮಗು ಮರಳಲಿಲ್ಲ….

ನಿಮಿಷಗಳು ವರುಷಗಳು
ಮರಳಲಿಲ್ಲ.


ಕಾದು ಕಾದು ಮರುಗಿದಳಾ ತಾಯಿ
ಕಾದು ಕಾದು ಒರಗಿದಳಾ ತಾಯಿ
ಕಾದು ಕಾದು ಕರಗಿದಳಾ ತಾಯಿ
ಒರಗಿದಲ್ಲೆ ಕರಗಿದರೆ ಅವಳೆಂಥಾ ತಾಯಿ?
ಮತ್ತೆ ಕತ್ತೆತ್ತಿದಳು ಗಿಡವಾಗಿ

ಗಿಡದೊಳಗೆ ಹೂವಾಗಿ
ಹೂವರಳಿ ಪರಿಮಳಿಸಿ
ಗಾಳಿಗುದುರೆಯನೇರಿ ದಿಕ್ಕು ದಿಕ್ಕಿಗೆ ಹಾರಿ
ಹುಡುಕಿದಳಾ ತಾಯಿ-

ಮತ್ತೆ ಕತ್ತೆತ್ತಿದಳು ಗಿಡವಾಗಿ
ಹೂವಾಗಿ, ಹತ್ತಿಯಾಗಿ, ಬತ್ತಿಯಾಗಿ
ಮನೆಮನೆಗೂ ತಿರುಗಿ
ಒಳಗೂ ಹೊರಗೂ ಬೆಳಗಿ
ಹುಡುಕಿದಳಾ ತಾಯಿ….

ಮಮತೆಯ ಮಗ್ಗದೊಳಗೆ
ಮಗ್ಗುಲಾಗಿ ಮಗ್ಗುಲಾಗಿ
ಹಾಯಿಯಾಗಿ ಹಡಗನೇರಿ
ಯಾವುದೋ ದೇಶದಲ್ಲಿ
ಯಾವುದೋ ವೇಷದಲ್ಲಿ
ಹುಡುಕಿದಳಾ ತಾಯಿ….


ಅದೊಂದು ದಿನ ಚಿಗುರು ಮೀಸೆಯ
ಹುಡುಗ ಹತ್ತಿದನಾ ಹಡಗ
ಕಂಬಕ್ಕೊರಗಿ ಕಣ್ಮುಚ್ಚಲು
ಯಾವುದೋ ನೆನಪೊಂದಿಗೆ ತೇಲಿ
ಜೋ ಜೋ ಜೋ ಜೋ
ಎಂದು ತೂಗಿತು ಜೋಕಾಲಿ.

ಮೊಗ್ಗಾಯಿತು ಹೀಚಾಯಿತು ಕಾಯಿ
ತೊದಲಿತು ಬೀಜರೂಪಿ ಬಾಯಿ
ಮಾಯಿ! ಮಾಯಿ! ಮಾಯಿ!
ಪಟಗುಟ್ಟಿ ಮುನ್ನಡೆಸಿತು ಹಾಯಿ
ಕೈ ಹಿಡಿದಳು ಕಂದನಾ ತಾಯಿ
ಕೈ ಬೀಸಿ ಕರೆಯಿತು ದಾರಿ
ಅದೇ ದಾರಿ….
ಚಿತ್ರದೊಳಗಿನ ದಾರಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...