Home / ಕವನ / ಕವಿತೆ / ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು

ಮಗು ಚಿತ್ರ ಬರೆಯಿತು
ಬೆರಳುಗಳ ಕೊರಳ ಆಲಿಸಿ
ಗೆರೆಯನೆಳೆಯಿತು.

ಪುಟ್ಟ ಮನೆಯೊಂದ ಕಟ್ಟಿ
ಮನೆಯ ಮುಂದೊಂದು ಮರವ ನೆಟ್ಟು
ರೆಂಬೆ ಕೊಂಬೆಗೆ ಎಲೆಯನಿಟ್ಟು
ಎಲೆಯ ನಡುವೆ ಹೂವನರಳಿಸಿ
ಹೂವಿನ ಜೊತೆಗೆ ಹಣ್ಣನಿರಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ನಡೆ ನೋಡಿ
ಗೆರೆಯನೆಳೆಯಿತು.

ಮನೆಯ ಹಿಂದೊಂದು ಗುಡ್ಡವ ಕರೆದು
ಗುಡ್ಡದ ಮೇಲೊಬ್ಬ ಸೂರ್‍ಯನ ಉರಿಸಿ
ಸಾಲಾಗಿ ಹಕ್ಕಿಗಳು ರೆಕ್ಕೆ ಬೀಸಲು
ಬುಡದಲ್ಲೊಂದು ನದಿಯ ಹರಿಸಿ
ನದಿಯಲ್ಲೊಂದು ದೋಣಿಯ ತೇಲಿಸಿ
ಹಿಗ್ಗಿ ನಲಿಯಿತು.

ಮಗು ಚಿತ್ರ ಬರೆಯಿತು
ಬೆರಳುಗಳ ಭಾವ ಭ್ರಮಿಸಿ
ಗೆರೆಯನೆಳೆಯಿತು.

ಗಿರಗಿರ ಬುಗುರಿ ತಿರುಗಿಸಿ
ಹುಲ್ಲುಹಾಸಿನ ಮೇಲೆ
ಗಾಲಿ, ಗೋಲಿಯನುರುಳಿಸಿ
ಕುದುರೆಗೂ ಕೊಂಬು ಮೂಡಿಸಿ
ಮಣ್ಣಿಗೂ ಕಣ್ಣು ಬರೆದು
ಹಿಗ್ಗಿ ನಲಿಯಿತು.


ಅವ್ವ….
ಘಮ್ಮೆಂದಿದೆ ಹೂ ಮೂಸಿ ನೋಡು
ಸಿಹಿಯಾಗಿದೆ ಮಾವು ಕಿತ್ತುಕೊಡು
ಝಳಝಳ ನದಿಯಿದೆ ಹಾಡು
ಸುಡುವುದಿಲ್ಲ ಈ ಸೂರ್‍ಯ ಮುಟ್ಟಿಬಿಡು
ಎಂದೆಲ್ಲಾ ನುಡಿನುಡಿದು

ಅವ್ವ…..
ಇದು ನಾನು
ಇಗೋ ಇದು ಮನೆಯ ಮುಂದಿನ ದಾರಿ
ಇದು ನನ್ನ ದಾರಿ
ನಾ ನಡೆವ ದಾರಿ ಎಂದೆಲ್ಲಾ ನುಡಿದು
ಪುಟ್ಟಪುಟ್ಟ ಹೆಜ್ಜೆ ಹಾಕಿ
ಹೋದ ಮಗು ಮರಳಲಿಲ್ಲ….

ನಿಮಿಷಗಳು ವರುಷಗಳು
ಮರಳಲಿಲ್ಲ.


ಕಾದು ಕಾದು ಮರುಗಿದಳಾ ತಾಯಿ
ಕಾದು ಕಾದು ಒರಗಿದಳಾ ತಾಯಿ
ಕಾದು ಕಾದು ಕರಗಿದಳಾ ತಾಯಿ
ಒರಗಿದಲ್ಲೆ ಕರಗಿದರೆ ಅವಳೆಂಥಾ ತಾಯಿ?
ಮತ್ತೆ ಕತ್ತೆತ್ತಿದಳು ಗಿಡವಾಗಿ

ಗಿಡದೊಳಗೆ ಹೂವಾಗಿ
ಹೂವರಳಿ ಪರಿಮಳಿಸಿ
ಗಾಳಿಗುದುರೆಯನೇರಿ ದಿಕ್ಕು ದಿಕ್ಕಿಗೆ ಹಾರಿ
ಹುಡುಕಿದಳಾ ತಾಯಿ-

ಮತ್ತೆ ಕತ್ತೆತ್ತಿದಳು ಗಿಡವಾಗಿ
ಹೂವಾಗಿ, ಹತ್ತಿಯಾಗಿ, ಬತ್ತಿಯಾಗಿ
ಮನೆಮನೆಗೂ ತಿರುಗಿ
ಒಳಗೂ ಹೊರಗೂ ಬೆಳಗಿ
ಹುಡುಕಿದಳಾ ತಾಯಿ….

ಮಮತೆಯ ಮಗ್ಗದೊಳಗೆ
ಮಗ್ಗುಲಾಗಿ ಮಗ್ಗುಲಾಗಿ
ಹಾಯಿಯಾಗಿ ಹಡಗನೇರಿ
ಯಾವುದೋ ದೇಶದಲ್ಲಿ
ಯಾವುದೋ ವೇಷದಲ್ಲಿ
ಹುಡುಕಿದಳಾ ತಾಯಿ….


ಅದೊಂದು ದಿನ ಚಿಗುರು ಮೀಸೆಯ
ಹುಡುಗ ಹತ್ತಿದನಾ ಹಡಗ
ಕಂಬಕ್ಕೊರಗಿ ಕಣ್ಮುಚ್ಚಲು
ಯಾವುದೋ ನೆನಪೊಂದಿಗೆ ತೇಲಿ
ಜೋ ಜೋ ಜೋ ಜೋ
ಎಂದು ತೂಗಿತು ಜೋಕಾಲಿ.

ಮೊಗ್ಗಾಯಿತು ಹೀಚಾಯಿತು ಕಾಯಿ
ತೊದಲಿತು ಬೀಜರೂಪಿ ಬಾಯಿ
ಮಾಯಿ! ಮಾಯಿ! ಮಾಯಿ!
ಪಟಗುಟ್ಟಿ ಮುನ್ನಡೆಸಿತು ಹಾಯಿ
ಕೈ ಹಿಡಿದಳು ಕಂದನಾ ತಾಯಿ
ಕೈ ಬೀಸಿ ಕರೆಯಿತು ದಾರಿ
ಅದೇ ದಾರಿ….
ಚಿತ್ರದೊಳಗಿನ ದಾರಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...