Home / ಕವನ / ಕವಿತೆ / ಚಂದ್ರನನ್ನು ಕರೆಯಿರಿ ಭೂಮಿಗೆ

ಚಂದ್ರನನ್ನು ಕರೆಯಿರಿ ಭೂಮಿಗೆ

ಪುಟ್ಟ ಮಕ್ಕಳು ಚಂದ್ರನನ್ನು
ಕರೆಯುತ್ತಿದ್ದಾರೆ ಭೂಮಿಗೆ.

ನಾನೂ ಮಗುವಾಗಿದ್ದಾಗ
ಮೊಗ್ಗಿನಂತಹ ಬೆರಳುಗಳನ್ನು
ಮಡಿಸಿ ಅರಳಿಸಿ
ಚಂದ್ರನನ್ನು ಕರೆದಿದ್ದೆ ಭೂಮಿಗೆ.

ನನ್ನ ತಮ್ಮಂದಿರು, ತಂಗಿ
ಗೆಳೆಯ ಗೆಳೆತಿಯರು
ಯಾರೆಲ್ಲ ಕರೆದಿದ್ದರು
ಭೂಮಿಗೆ.

ಗೂಡಲ್ಲಿ ಕಣ್ಣರಳಿಸಿ
ಕೂತಿರುವ ಮರಿಹಕ್ಕಿ
ನದಿಯೊಳಗೆ ಈಸುತ್ತಿರುವ
ಮರಿ ಮೀನು, ಯಾರೆಲ್ಲ
ಕರೆದಿದ್ದರು ಚಂದ್ರನನ್ನು ಭೂಮಿಗೆ.

ಅಂದು ತೊದಲು ನುಡಿಯುತ್ತಿದ್ದ
ಮರಿಕೋಗಿಲೆ ಇಂದು
ಪಂಚಮದಲ್ಲಿ ಹಾಡಿದೆ.

ಅಂದು ನದಿಯೊಳಗೆ ಈಸುತ್ತಿದ್ದ
ಮರಿ ಮೀನು ಇಂದು
ಸಮುದ್ರವ ಸೇರಿದೆ.

ಅಂದು ಚಂದ್ರನನ್ನು ಕರೆಯುತ್ತಿದ್ದ
ನನ್ನ ಬೆರಳುಗಳು ಇಂದು
ಭೂಗೋಳ, ವಿಜ್ಞಾನ ಪುಸ್ತಕಗಳ
ಪುಟ ತಿರುವಿ ಒರಟಾಗಿವೆ.

ಮುಗಿಲು ಮುಟ್ಟಿ ನಿಂತಿರುವ ಹೆಮ್ಮರ
ಮೊಳೆಕೆಯೊಡೆದ ದಿನಗಳನ್ನು
ಮೆಲುಕು ಹಾಕುವ ಹಾಗೆ
ನಾನೊಮ್ಮೆ ಹಿಂದಿರುಗಿ ನೋಡಲೆ?

ಆಸೆ, ದುಃಖ, ಹರ್‍ಷ, ವಿಷಾದದ
ಎಲೆಗಳನ್ನು ಕಳಚಿಕೊಂಡು
ಧ್ಯಾನದಲ್ಲಿರುವಂತಿದೆ ಮರ
ನೋಡಿಯೂ ಸುಮ್ಮನಿರಲೆ?

ಕಂದಮ್ಮಗಳೆ….
ಕೇಕೆ ಹಾಕಿ ಕುಣಿಕುಣಿದು
ಕರೆಯಿರಿ ಚಂದ್ರನನ್ನು ಭೂಮಿಗೆ
ಹೂವಿನ ಹಾಗೆ ಬೆರಳುಗಳನ್ನು
ಅರಳಿಸಿ ನೀವೇ
ಕರೆಯಿರಿ ಚಂದ್ರನನ್ನು ಭೂಮಿಗೆ.

ನಾನು ನಾನಿರುವಂತೆಯೇ
ನೋಡುವೆ ಒಂದು ಘಳಿಗೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...