Home / ಕವನ / ಕವಿತೆ / ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಗಿಡ ಮರ ಹೂಗಳಿಲ್ಲ.
ಹಕ್ಕಿ ಹಾಡು, ಗೂಡುಗಳಿಲ್ಲ.
ಕತ್ತಲ ತೊಡೆಯುವ ಸೂರ್‍ಯ
ಕಲ್ಮಶಗಳನ್ನು ತೊಳೆಯುವ ನದಿ
ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ
ಜಗತ್ತೆ ನಕ್ಕಂತೆ ಕಾಣಿಸುವ
ಬೆಳದಿಂಗಳು, ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮೆಟ್ಟಿದರೂ ಮಿಡುಕದ ನೆಲ
ಮಿಂಚಿ ಮಳೆಗರೆವ ಮುಗಿಲು
ತಗ್ಗದ, ಬಗ್ಗದ, ಜಗ್ಗದ
ಬೆಟ್ಟಗಳ ಸಾಲು
ಝೇಂಕರಿಸುವ ದುಂಬಿ
ನಿಟ್ಟುಸಿರಿಡುವ ಗಾಳಿ
ಹರ್‍ಷ ತುಂಬಿದ ಹಗಲು
ವಿಷಾದ ಸೂಸುವ ಇರುಳು
ಯಾವುವೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಪಂಜಗಳಿದ್ದೂ ಪಂಜರದೊಳಗೆ
ಬಂದಿಯಾದ ಸಿಂಹ
ನರ್‍ತನವೆಂದರೇನು ಎಂದು
ಕೇಳುವ ನವಿಲು
ಕಾಡಿನ ಜಾಡರಿಯದ ಜಿಂಕೆ
ಹಾರಲು ಹಿಂಜರಿಯುವ ಹಕ್ಕಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಚಿಂದಿ ಆಯುವ ಹುಡುಗ
ಹೂಮಾರುವ ಹುಡುಗಿ
ಕಳ್ಳ, ಕದೀಮ, ಕಲಾವಿದ,
ಠೇಂಕರಿಸುವ ರಾಜಕಾರಣಿ
ಹೂಂಕರಿಸುವ ಉಗ್ರಗಾಮಿ
ಯಾರ್‍ಯಾರೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೇಣಿಗೇರಿದ ನಿರುದ್ಯೋಗಿ
ಪ್ರೀತಿಸಿ ಕೈಕೊಟ್ಟ ಪ್ರೇಮಿ
ಹೆತ್ತು ಬಿಸಾಡಿಹೋದ ತಾಯಿ
ವರದಕ್ಷಿಣೆ, ಸೀಮೆಎಣ್ಣೆ,
ಕೋರ್‍ಟು, ಕಛೇರಿ,
ಜಾಮೀನೂ ಜೈಲು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೀರಿಲ್ಲದ ನಲ್ಲಿ
ಕೈಕೊಡುವ ಕರೆಂಟು
ವೋಟು, ಬಜೆಟು,
ಸ್ಲಮ್ಮು, ಸ್ಲೋಗನ್ನು
ಸಾರಾಯಿ, ತುರಾಯಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮಸೀದಿ, ಮಠ, ಮುಷ್ಕರ
ಮೆರವಣಿಗೆಗಳಿಲ್ಲ.
ಭಾಷಣ, ಭರವಸೆ
ಪ್ರಣಾಳಿಕೆಗಳಿಲ್ಲ.
ಗಡಿ, ಗನ್ನು,
ಅಪಘಾತ, ಅಣುಬಾಂಬು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ದುಃಖ, ದುಗುಡ, ದುಮ್ಮಾನವಿಲ್ಲ.
ಆಸೆ, ಅಕ್ಕರೆ, ಅಹಂಕಾರಗಳಿಲ್ಲ.
ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ.
ಧ್ಯಾನ, ಮೋಕ್ಷ, ಮರಣ,
ಸಮಾಧಿ, ಸ್ಮಾರಕಗಳಿಲ್ಲ.
ಅಣುವೂ ಇಲ್ಲ
ಬ್ರಹ್ಮಾಂಡವೂ ಇಲ್ಲ.

ಇಲ್ಲಿ….
ನಾನು-ನೀನು
ಏನೇನೂ ಅಲ್ಲ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...