Home / ಕವನ / ಕವಿತೆ / ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಗಿಡ ಮರ ಹೂಗಳಿಲ್ಲ.
ಹಕ್ಕಿ ಹಾಡು, ಗೂಡುಗಳಿಲ್ಲ.
ಕತ್ತಲ ತೊಡೆಯುವ ಸೂರ್‍ಯ
ಕಲ್ಮಶಗಳನ್ನು ತೊಳೆಯುವ ನದಿ
ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ
ಜಗತ್ತೆ ನಕ್ಕಂತೆ ಕಾಣಿಸುವ
ಬೆಳದಿಂಗಳು, ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮೆಟ್ಟಿದರೂ ಮಿಡುಕದ ನೆಲ
ಮಿಂಚಿ ಮಳೆಗರೆವ ಮುಗಿಲು
ತಗ್ಗದ, ಬಗ್ಗದ, ಜಗ್ಗದ
ಬೆಟ್ಟಗಳ ಸಾಲು
ಝೇಂಕರಿಸುವ ದುಂಬಿ
ನಿಟ್ಟುಸಿರಿಡುವ ಗಾಳಿ
ಹರ್‍ಷ ತುಂಬಿದ ಹಗಲು
ವಿಷಾದ ಸೂಸುವ ಇರುಳು
ಯಾವುವೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಪಂಜಗಳಿದ್ದೂ ಪಂಜರದೊಳಗೆ
ಬಂದಿಯಾದ ಸಿಂಹ
ನರ್‍ತನವೆಂದರೇನು ಎಂದು
ಕೇಳುವ ನವಿಲು
ಕಾಡಿನ ಜಾಡರಿಯದ ಜಿಂಕೆ
ಹಾರಲು ಹಿಂಜರಿಯುವ ಹಕ್ಕಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಚಿಂದಿ ಆಯುವ ಹುಡುಗ
ಹೂಮಾರುವ ಹುಡುಗಿ
ಕಳ್ಳ, ಕದೀಮ, ಕಲಾವಿದ,
ಠೇಂಕರಿಸುವ ರಾಜಕಾರಣಿ
ಹೂಂಕರಿಸುವ ಉಗ್ರಗಾಮಿ
ಯಾರ್‍ಯಾರೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೇಣಿಗೇರಿದ ನಿರುದ್ಯೋಗಿ
ಪ್ರೀತಿಸಿ ಕೈಕೊಟ್ಟ ಪ್ರೇಮಿ
ಹೆತ್ತು ಬಿಸಾಡಿಹೋದ ತಾಯಿ
ವರದಕ್ಷಿಣೆ, ಸೀಮೆಎಣ್ಣೆ,
ಕೋರ್‍ಟು, ಕಛೇರಿ,
ಜಾಮೀನೂ ಜೈಲು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೀರಿಲ್ಲದ ನಲ್ಲಿ
ಕೈಕೊಡುವ ಕರೆಂಟು
ವೋಟು, ಬಜೆಟು,
ಸ್ಲಮ್ಮು, ಸ್ಲೋಗನ್ನು
ಸಾರಾಯಿ, ತುರಾಯಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮಸೀದಿ, ಮಠ, ಮುಷ್ಕರ
ಮೆರವಣಿಗೆಗಳಿಲ್ಲ.
ಭಾಷಣ, ಭರವಸೆ
ಪ್ರಣಾಳಿಕೆಗಳಿಲ್ಲ.
ಗಡಿ, ಗನ್ನು,
ಅಪಘಾತ, ಅಣುಬಾಂಬು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ದುಃಖ, ದುಗುಡ, ದುಮ್ಮಾನವಿಲ್ಲ.
ಆಸೆ, ಅಕ್ಕರೆ, ಅಹಂಕಾರಗಳಿಲ್ಲ.
ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ.
ಧ್ಯಾನ, ಮೋಕ್ಷ, ಮರಣ,
ಸಮಾಧಿ, ಸ್ಮಾರಕಗಳಿಲ್ಲ.
ಅಣುವೂ ಇಲ್ಲ
ಬ್ರಹ್ಮಾಂಡವೂ ಇಲ್ಲ.

ಇಲ್ಲಿ….
ನಾನು-ನೀನು
ಏನೇನೂ ಅಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...