Home / ಕವನ / ಕವಿತೆ / ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ…. ನಾನೆಂಬುದೂ ಇಲ್ಲ

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಗಿಡ ಮರ ಹೂಗಳಿಲ್ಲ.
ಹಕ್ಕಿ ಹಾಡು, ಗೂಡುಗಳಿಲ್ಲ.
ಕತ್ತಲ ತೊಡೆಯುವ ಸೂರ್‍ಯ
ಕಲ್ಮಶಗಳನ್ನು ತೊಳೆಯುವ ನದಿ
ಜಗತ್ತೆ ಅತ್ತಂತೆ ಕಾಣಿಸಿಸುವ ಮಳೆ
ಜಗತ್ತೆ ನಕ್ಕಂತೆ ಕಾಣಿಸುವ
ಬೆಳದಿಂಗಳು, ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮೆಟ್ಟಿದರೂ ಮಿಡುಕದ ನೆಲ
ಮಿಂಚಿ ಮಳೆಗರೆವ ಮುಗಿಲು
ತಗ್ಗದ, ಬಗ್ಗದ, ಜಗ್ಗದ
ಬೆಟ್ಟಗಳ ಸಾಲು
ಝೇಂಕರಿಸುವ ದುಂಬಿ
ನಿಟ್ಟುಸಿರಿಡುವ ಗಾಳಿ
ಹರ್‍ಷ ತುಂಬಿದ ಹಗಲು
ವಿಷಾದ ಸೂಸುವ ಇರುಳು
ಯಾವುವೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಪಂಜಗಳಿದ್ದೂ ಪಂಜರದೊಳಗೆ
ಬಂದಿಯಾದ ಸಿಂಹ
ನರ್‍ತನವೆಂದರೇನು ಎಂದು
ಕೇಳುವ ನವಿಲು
ಕಾಡಿನ ಜಾಡರಿಯದ ಜಿಂಕೆ
ಹಾರಲು ಹಿಂಜರಿಯುವ ಹಕ್ಕಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಚಿಂದಿ ಆಯುವ ಹುಡುಗ
ಹೂಮಾರುವ ಹುಡುಗಿ
ಕಳ್ಳ, ಕದೀಮ, ಕಲಾವಿದ,
ಠೇಂಕರಿಸುವ ರಾಜಕಾರಣಿ
ಹೂಂಕರಿಸುವ ಉಗ್ರಗಾಮಿ
ಯಾರ್‍ಯಾರೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೇಣಿಗೇರಿದ ನಿರುದ್ಯೋಗಿ
ಪ್ರೀತಿಸಿ ಕೈಕೊಟ್ಟ ಪ್ರೇಮಿ
ಹೆತ್ತು ಬಿಸಾಡಿಹೋದ ತಾಯಿ
ವರದಕ್ಷಿಣೆ, ಸೀಮೆಎಣ್ಣೆ,
ಕೋರ್‍ಟು, ಕಛೇರಿ,
ಜಾಮೀನೂ ಜೈಲು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ನೀರಿಲ್ಲದ ನಲ್ಲಿ
ಕೈಕೊಡುವ ಕರೆಂಟು
ವೋಟು, ಬಜೆಟು,
ಸ್ಲಮ್ಮು, ಸ್ಲೋಗನ್ನು
ಸಾರಾಯಿ, ತುರಾಯಿ
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ಮಸೀದಿ, ಮಠ, ಮುಷ್ಕರ
ಮೆರವಣಿಗೆಗಳಿಲ್ಲ.
ಭಾಷಣ, ಭರವಸೆ
ಪ್ರಣಾಳಿಕೆಗಳಿಲ್ಲ.
ಗಡಿ, ಗನ್ನು,
ಅಪಘಾತ, ಅಣುಬಾಂಬು
ಯಾವುದೂ ಇಲ್ಲ.

ನೀನೆಂಬುದಿಲ್ಲದಿದ್ದರೆ
ನಾನೆಂಬುದೂ ಇಲ್ಲ.
ದುಃಖ, ದುಗುಡ, ದುಮ್ಮಾನವಿಲ್ಲ.
ಆಸೆ, ಅಕ್ಕರೆ, ಅಹಂಕಾರಗಳಿಲ್ಲ.
ಆತ್ಮನೂ ಇಲ್ಲ, ಪರಮಾತ್ಮನೂ ಇಲ್ಲ.
ಧ್ಯಾನ, ಮೋಕ್ಷ, ಮರಣ,
ಸಮಾಧಿ, ಸ್ಮಾರಕಗಳಿಲ್ಲ.
ಅಣುವೂ ಇಲ್ಲ
ಬ್ರಹ್ಮಾಂಡವೂ ಇಲ್ಲ.

ಇಲ್ಲಿ….
ನಾನು-ನೀನು
ಏನೇನೂ ಅಲ್ಲ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...