Home / ಕವನ / ಕವಿತೆ / ಓನಮಿ

ಓನಮಿ

(ಝೆನ್ ಕಥೆಯ ಆಧಾರ- ಜಾಪಾನಿ ಭಾಷೆಯಲ್ಲಿ ಮಹಾಸಾಗರದಲ್ಲಿ ಏಳುವ ಭಾರಿ ಅಲೆಗಳಿಗೆ ಓನಮಿ ಎನ್ನುತ್ತಾರೆ)

ಒಂದೂರಿನಲ್ಲಿ ಓನಮಿ
ಎಂಬ ಮಲ್ಲನಿದ್ದ.
ಕಣಕ್ಕಿಳಿಯಲು ಆತ ಸದಾ ಸಿದ್ಧ.

ಒಬ್ಬಿಬ್ಬರೆದುರಲ್ಲಿ
ಎಲ್ಲರ ಒದ್ದು ಕೆಡವುತ್ತಿದ್ದ.
ಒಟ್ಟಿನಲ್ಲಿ, ಗುಟ್ಟಿನಲಿ
ಈತ ಗುರು ಮೀರುವ ಶೂರ
ಮಂದಿಯೆಂದರೆ ಮಾತ್ರ
ಕಂದಿಹೋಗುವ ಮೋರೆ
ಜನ ನೆರೆದರೆಂದರೆ ಇನ್ನೂ ತೊಂದರೆ
ಬಾಲರೆದುರೂ ಈತ ಅಧೀರ.

ಹಲವು ಹತ್ತು ಸಲ ಕಾಳಗದಲ್ಲಿ
ಎದುರಾಳಿಗಳಿಗೆ ಒಪ್ಪಿಸಿದ ಕಡಗ
ನಗೆಪಾಟಲಿಗೀಡಾದ ಹುಡುಗ.
ಇನ್ನಿಲ್ಲದಷ್ಟು ಸೋಲುಂಟು
ಏನಾದರೂ ಮಾಡಲೇಬೇಕೆಂದು
ಅಂದುಕೊಂಡು
ಕಿರೀಟವ ಕನಸುತ್ತ ಹೊರಟ.

ಹೀಗಿರುವಾಗ-
ರೋಗದ ಭಾಗ್ಯವೋ, ಓನಮಿಯ
ಯೋಗವೋ
ಕಡಲತಡಿಯೊಳಗೆ ಪುಟ್ಟ ಗುಡಿಯೊಳಗೆ
ಭಿಕ್ಷುವೊಬ್ಬ ಬಂದಿಳಿದ
ಓನಮಿ ಓಡೋಡಿ ಬಂದು
ನೀನೇ ಗತಿಯೆಂದು ಅಂದು
ತನ್ನ ದುಃಖವನ್ನೆಲ್ಲ ತೋಡಿಕೊಂಡ.

ಭಿಕ್ಷು ನುಡಿದ-
ಓನಮಿಯಲ್ಲವೆ ನಿನ್ನ ಹೆಸರು?
ಹೋಗು ಅಲೆಗಳನ್ನು ಆಲಿಸು
ನೀನೇ ಅಲೆಗಳೆಂದು ಭಾವಿಸು
ನಿನ್ನ ಕಿವಿಗಳನ್ನು ಅಲೆಗಳಲ್ಲಿ ಇಡು
ನಿನ್ನನ್ನೇ ಅಲೆಗಳಲ್ಲಿ ಇಡು
ನೀನೀಗ ಮಲ್ಲನಲ್ಲ
ಮರೆತುಬಿಡು ಹಿಂದಿನದೆಲ್ಲ.

ಆಕಾಶದೆತ್ತರ ಎದ್ದು
ಎದುರಿಗಿರುವುದನ್ನೆಲ್ಲ ಒದ್ದು
ನೀನಾಗು
ಎಲ್ಲವನ್ನು ನಿನ್ನೊಳಗಿರಿಸಿಕೊಂಡು
ನೀನು ಅದೇ ಆಗು
ಅಲೆಗಳನ್ನು ಲಾಲಿಸು
ಅಲೆಗಳನ್ನು ಪಾಲಿಸು
ಹೋಗು ಹಿಂಬಾಲಿಸು.

ಓನಮಿ ಅಲೆಗಳಿಗೆ
ಗಾಳ ಹಾಕಿ ಕುಳಿತ
ಯೋಚನೆಗಳ ಬಲೆ ಬೀಸಿ
ಇವನನ್ನೆ ಹಿಡಿದವು.

ಓನಮಿ
ಅಲೆಗಳನ್ನು ನೋಡಿದ
ಅದರ ಹಿಂದೆ ಓಡಿದ
ಅಲೆಗಳನ್ನು ಕರೆದ.
ಗೋಗರೆದ.
ಅಲೆಗಳು ಇವನನ್ನೆ ನೋಡಿದವು
ಹಿಂದೆ ಹಿಂದೆ ಓಡಿದವು
ಇವನನ್ನು ಧಿಕ್ಕರಿಸಿದವು.

ಚುಕ್ಕಿಗಳು ಹೊಳೆದವು
ರಾತ್ರಿಗಳು ಸವೆದವು
ಹಗಲುಗಳು ಉರಿದವು
ಮುಂಗಾರುಗಳು ಮುದುರಿದವು
ಹಿಂಗಾರುಗಳು ಹಾರಿದವು
ಋತುಗಳು ಬಾಡಿದವು
ಮೋಡಗಳ ಹಿಂಡುಗಳು
ಓನಮಿಯನ್ನೆ ನೋಡಿದವು
ತಿರುಗಿ ತಿರುಗಿ ನೋಡಿದವು
ನೋಡಿಯೇ ನೋಡಿದವು.

ಓನಮಿ
ಅಲೆಗಳನ್ನು ಧ್ಯಾನಿಸಿದ
ಧ್ಯಾನಿಸಿದ, ಧ್ಯಾನಿಸಿದ….
ಅಲೆಯ ಹಾಗೆ ನಡುಗಿದ
ಅಲೆಯೊಳಗೆ ಅಡಗಿದ
ಅಲೆಗಳಿಗೆ ಕೊರಳಾದ
ಅಲೆಗಳ ಬೆರಳಾದ
ಕಣ್ಣಾದ, ಕಿವಿಯಾದ
ಮೈಯಾದ, ಮನವಾದ
ಅಲೆಯಲ್ಲೊಂದು ಅಲೆಯಾದ

ಮತ್ತೊಂದು, ಮಗದೊಂದು
ಇನ್ನೊಂದು ಅಲೆಯಾದ
ಅಲೆಯಂತೆ ಕುಣಿದ
ಆಕಾಶಕ್ಕೆ ನೆಗೆದ.
ದೇವಾಲಯ ಮುಚ್ಚಿ ಹೋಯ್ತು
ಬುದ್ಧನ ಪ್ರತಿಮೆ ಕೊಚ್ಚಿ ಹೋಯ್ತು
ಒಬ್ಬ ಸೂರ್ಯ ಕಡಲಲ್ಲಿದ್ದ
ಮತ್ತೊಬ್ಬ ದಡದಲ್ಲಿದ್ದ

ಓನಮಿ ದಡದಲ್ಲಿದ್ದ
ಓನಮಿ ಧ್ಯಾನದಲ್ಲಿದ್ದ
ಆ ದಿನವೆ ಓನಮಿ
ಅಲ್ಲಿಂದ ಹೊರಟ
ಕಣ್ಣೊಳಗೆ ಕಡಲಿತ್ತು
ಬೆಳಕಿನದೆ ಮಾಟ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...