ಕವಿಗೋಷ್ಠಿಯಲ್ಲಿ….

ಢಣಢಣ ಗಂಟೆ ಬಾರಿಸಿತು
ಎಲ್ಲರೂ ಸಾಲಾಗಿ ಕುಳಿತರು
ಬಣ್ಣ ಬಣ್ಣದ ಕವಿತೆಗಳು
ಒಂದೊಂದಾಗಿ ವೇದಿಕೆಗೆ ಬಂದವು.

ಕೆಲವು ಕವಿತೆಗಳು
ಹೂಗಳಂತೆ ಅರಳಿದರೆ
ಮತ್ತೆ ಕೆಲವು
ನದಿಗಳಂತೆ ಹರಿದವು.

ಕೆಲವು ಕವಿತೆಗಳು
ನಕ್ಷತ್ರಗಳಂತೆ ಮಿನುಗಿದರೆ
ಮತ್ತೆ ಕೆಲವು
ಉಲ್ಕೆಗಳಂತೆ ಉರಿದು
ಬೂದಿಯಾದವು.

ಕೆಲವು ಕವಿತೆಗಳು
ಕಲ್ಲುಸಕ್ಕರೆ ತಿನ್ನಿಸಿದರೆ
ಮತ್ತೆ ಕೆಲವು
ಕಷಾಯ ಕುಡಿಸಿದವು.

ಕೆಲವು ಕವಿತೆಗಳು
ಬೆಂಕಿ ಉಗುಳಿದರೆ
ಮತ್ತೆ ಕೆಲವು
ರಕ್ತ ಕಾರಿದವು.
ಕೆಲವು ಕವಿತೆಗಳು
ಬಿಕ್ಕಳಿಸಿ ಅತ್ತರೆ
ಮತ್ತೆ ಕೆಲವು
ಮುಕ್ಕಳಿಸಿ ನಕ್ಕವು

ಕೆಲವು ಕವಿತೆಗಳು
ತೊಂಡು ದನಗಳಂತೆ
ಕಂಡದ್ದನ್ನೆಲ್ಲ ಹೊಸಕಿಹಾಕಿದರೆ
ಮತ್ತೆ ಕೆಲವು ತಾಯಿಯಂತೆ
ಅವನ್ನೆತ್ತಿಕೊಂಡು ಸಂತೈಸಿದವು.

ಕೊನೆಗೆ ಬಂದದ್ದು
ಪ್ರೇಮಿಯಂತಹ ಕವಿತೆ
ನೆಲ ನೀರು ಆಕಾಶದಂತ ಕವಿತೆ
ಅದು ಕಡಲಿನ ಹಾಗೆ ಮೊರೆಯುತ್ತಿತ್ತು
ನೆಲದ ಹಾಗೆ ಪರಿಮಳಿಸುತ್ತಿತ್ತು.
ಅದು ಆಕಾಶದಂತೆ
ಎಲ್ಲವನ್ನೂ ತಬ್ಬಿಕೊಂಡು
ಮೈ ಮರೆಯಿತು, ಮೈ ಮರೆಸಿತು.

(ಕವಿಗೋಷ್ಠಿಯೊಂದರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಕೇಳಿ)


Previous post ವಿನಯ
Next post ಜೀರುಂಡೆ ಸಾಲು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…