Home / ಲೇಖನ / ಇತರೆ / ಪುಸ್ತಕ ಪ್ರೀತಿ

ಪುಸ್ತಕ ಪ್ರೀತಿ

ಚಿತ್ರ: ಅಲೆಕ್ಸಾಂಡರ್‍ ಸ್ಟಾಕ್ಮಾರ್‍

ಪ್ರಿಯ ಸಖಿ,

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದು. ನಿಜವೇ ಆದರೆ ಚಿಂತನಶೀಲತೆ ಬೆಳೆಯುವುದು ಪುಸ್ತಕಗಳ ಸಂಪರ್ಕದಿಂದ. ಆದ್ದರಿಂದ ಪುಸ್ತಕಗಳ ಪ್ರಯೋಜನವು ಅಂತರಂಗ ಚೈತನ್ಯದ ಸಾಧನೆಗೆ ಮೊದಲ ಮೆಟ್ಟಿಲು ಎನ್ನಬಹುದು.

ಪುಸ್ತಕಗಳು ಹಲವಾರು ಮಹಾತ್ಮರ ಜೀವನವನ್ನು ರೂಪಿಸಿವೆ. ಹಲವರ ಬದುಕಿನಲ್ಲಿ ಪ್ರಭಾವ ಬೀರಿವೆ. ಕ್ರಾಂತಿಯುಂಟು ಮಾಡಿವೆ. ಬದಲಾವಣೆ ತಂದಿವೆ. ಹೊಸ ವಿಚಾರಗಳನ್ನು ಮೊಳೆಸಿವೆ, ಬೆಳೆಸಿವೆ. ಉತ್ತಮ ಪುಸ್ತಕವನ್ನು ಓದುವವರು ಇರುವವರೆಗೂ
ಈ ಪ್ರಕ್ರಿಯೆಗಳು ಸಾಗುತ್ತಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುಸ್ತಕಗಳನ್ನು ಓದುತ್ತಿರುವವರು ಕಡಿಮೆಯಾಗುತ್ತಿದ್ದಾರೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಬದಲಾದ ನಮ್ಮ ಜೀವನ ಶೈಲಿಯಿಂದ ಅವಸರದ ಈ ಯುಗದಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಾಗೇ ದೃಶ್ಯ ಮಾಧ್ಯಮಗಳ ಹಾವಳಿಯೂ ಈ ಹವ್ಯಾಸಕ್ಕೆ ನೇರ ಪೆಟ್ಟು ಕೊಟ್ಟಿದೆ. ಹಣವನ್ನು ಮಾಡುವುದೇ ಜೀವನದ ಪ್ರಮುಖ ಗುರಿಯೆಂಬ ಭೂತ ಮಿದುಳನ್ನು ಹೊಕ್ಕಂದಿನಿಂದ ಯಾವ ಹವ್ಯಾಸಗಳಿಗೂ ಈಗ ಜನರಿಗೆ ಬಿಡುವಿಲ್ಲ. ಫ್ಯಾಷನ್, ಐಷಾರಾಮದ ಬದುಕು, ಪಂಚತಾರಾ ಸಂಸ್ಕೃತಿಯೆಡೆಗೆ ಹೆಚ್ಚು ವಾಲುತ್ತಿರುವ ನಮಗೆ ಓದುವುದು, ಗಂಭೀರವಾಗಿ ಯೋಚಿಸುವುದು, ಚಿಂತಿಸುವುದು, ಓದಿದ್ದನ್ನು ಮನನ ಮಾಡುವುದು ಎಲ್ಲವೂ ಬೋರ್ ಎನ್ನಿಸುತ್ತದೆ.

ಪ್ರಿಯ ಸಖಿ, ಆದರೆ ಬೇರೆ ಯಾವ ಮಾಧ್ಯಮವೂ ನೀಡಲಾಗದಂತಹ ಸಂತೋಷವನ್ನು, ಆತ್ಮ ತೃಪ್ತಿಯನ್ನು ಪುಸ್ತಕದ ಓದು ನೀಡುತ್ತದೆ. ಉತ್ತಮ ಪುಸ್ತಕದ ಓದಿನಿಂದ ಮನಸ್ಸು ಅರಳುತ್ತದೆ. ಇದೇ ಓದಿನಿಂದ ನಮಗೆ ದೊರೆಯುವ ಪ್ರತಿಫಲ. ಹಾಗೇ ಎಲ್ಲ ಮಾಧ್ಯಮಗಳಿಗೂ ಮೂಲ ಪುಸ್ತಕಗಳೇ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಧ್ಯಾತ್ಮ, ಧಾರ್ಮಿಕ, ತಾತ್ವಿಕ, ಸಾಮಾಜಿಕ, ನೈತಿಕ, ಕೌಟುಂಬಿಕ,
ರಾಜಕೀಯ ಹೀಗೆ ಯಾವುದೇ ವಿಭಾಗದ ಪುಸ್ತಕವಿರಲಿ ಆ ಅಭಿರುಚಿಯಿರುವ ಓದುಗನಿಗೆ ನೆಮ್ಮದಿಯನ್ನು ನೀಡುತ್ತದೆ. ಹೊಸ ಬೆಳಕನ್ನು ಮೂಡಿಸುತ್ತದೆ.

ಸಖಿ, ಪುಸ್ತಕಕ್ಕೆ ಒಂದು ಜನಾಂಗದ ಕಣ್ಣು ತೆರೆಸುವ ಶಕ್ತಿಯಿದೆ. ಆದ್ದರಿಂದಲೇ ನಮ್ಮಲ್ಲಿ ಪುಸ್ತಕ ಪ್ರೀತಿ ಎಷ್ಟು ಬೇಗ ಮೊಳೆಯುತ್ತದೋ ಅಷ್ಟೂ ಒಳ್ಳೆಯದು. ಆ ಪ್ರೀತಿಯಿಂದ ನಾವು ಹೆಚ್ಚು ಹೆಚ್ಚು ಓದುವಂತಾಗಲಿ, ತಿಳಿಯುವಂತಾಗಲಿ, ಆರಳುವಂತಾಗಲಿ, ನೆಮ್ಮದಿ ಕಾಣುವಂತಾಗಲಿ.


Tagged:

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...