Home / ಕವನ / ಕವಿತೆ / ಅನಂತಮೂರ್ತಿಗೆ

ಅನಂತಮೂರ್ತಿಗೆ

ರೀ ಅನಂತಮೂರ್ತಿ
ನೀವು ಅದೆಷ್ಟು ಸ್ವಾರ್ಥಿ!
ಯಾರಿಗೂ ಬಿಡದೆ ಒಬ್ಬರೇ
ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ?

ಏನೆಲ್ಲ ಕಾಡಿದುವಪ್ಟ ನಿಮ್ಮನ್ನ !
ಹೆಣ್ಣು, ಹೆಸರು, ಹಾಗೇ
ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು;
ಗಾಂಧೀ, ಲೋಹಿಯಾ, ಹಾಗೇ
ಧಗಧಗಿಸುವ ಸೃಷ್ಟಿಕಾರಕ ಬಸಿರು;
ನೇರ ಮಠದಿಂದಲೇ ಬಂದರೂ
ಗುಂಡು, ಚಾಕಣದ ತುಂಡು, ಜೊತೆಗೇ
ಕೇಳುಗರೆದೆ ಜುಮ್ಮೆನಿಸುವ ಮಾತಿನ ತೊಂಡು;
ಹಿಮಾಲಯದಂಥ ಅಡಿಗ, ಜೊತೆಗೇ
ಪತ್ರಿಕೆದೊಣ್ಣೆಯ ಬೀಸುವ
ಸ್ನೇಹಾಸೂಯೆಯ ಬಡಿಗ.
ಇಲ್ಲವೆಂದಲ್ಲ ಮನಸ್ಸಿನ ತಳಾತಳದಲ್ಲಿ
ಮಿಣ್ಣನೆ ಧೂರ್ತ,
ಆದರೆ ಅಲ್ಲೇ ಇದ್ದಾನೆ ಅವನನ್ನು
ನಿಯಂತ್ರಿಸುವ ಕುಶಲಿ ಪಾರ್ಥ.
ಜೀರ್ಣಿಸಿಕೊಂಡಿರಿ ಎಲ್ಲಾ
ಪ್ರೀತಿಯ ಬಲದಲ್ಲಿ
ಜೀರ್ಣಿಸಿಕೊಂಡಿರಿ ಬರೆದು ಮನಸಾಕ್ಷಿಯ ಸಹಿಯಲ್ಲಿ;
ಒಳಗಿನ ಕೌಶಿಕನನ್ನೇ
ಅರಣಿ ಸಮಿತ್ತು ಮಾಡಿ
ಸತ್ಯಕ್ಕೆ ಆಹುತಿ ನೀಡಿ
ಶೂದ್ರ ಋಷಿಯಾದಿರಿ ಗಾಯತ್ರಿಯ ಹಾಡಿ.
ಸದ್ದುಗದ್ದಲವಿರದೆ ಏನೆಲ್ಲ ಗೆದ್ದಿದ್ದೀರಿ!
ಶರಣರ ವಚನ ಜ್ಯೋತಿಯ
ಆಯೋವಾದಲ್ಲಿ ಮುಡಿಸಿ,
ಪುರಂದರ ಕೃತಿ ಹೂರಣವ
ಪ್ಯಾರಿಸ್ಸಿನಲ್ಲಿ ಬಡಿಸಿ,
ಕನ್ನಡ ಸಂಸ್ಕೃತಿ ಕೇದಗೆ
ಕಡಲಾಚೆಗೂ ಕಳಿಸಿ,
ಅರಿಯದಂತೆ ಇದ್ದೀರಿ
ಸಾಮಾನ್ಯರ ಥರ ನಟಿಸಿ.

ಇದೆ ನಿಮ್ಮ ತೆಕ್ಕೆಯಲ್ಲಿ ಘನವಾದದ್ದೆಲ್ಲ:
ಅಡಿಗರ ಪದ್ಯ, ಲಂಕೇಶರ ಗದ್ಯ
ಕುವೆಂಪು ಕಥಾಲೊಕ,
ಎಮರ್ಜನ್ಸಿಗೆ ಬಲಿಯಾದ ಸ್ನೇಹಲತಾ ಕುರಿತ ಶೋಕ,
ಬೇಂದ್ರೆಯ ಮಾಯಾಸೃಷ್ಟಿ,
ಕಾರಂತರ ಎವೆಹೊಳಚದ ನಿಷ್ಠುರದೃಷ್ಟಿ,
ಕ್ರಿಸ್ತನ ಮಗಳು ಎಸ್ತರಳ ಪ್ರೇಮ,
ಸಾವಿರ ಕನಸುಗಳ ಶಿಖರಸ್ತೋಮ.
ಇನ್ನೂ ಏನೇನೋ-
ಹೇಳಲು ಸೋತೆ, ತೋಚುತ್ತಿಲ್ಲ ಮಾತೇ
ಸಡಿಲಿಸಿ ಕೊಂಚ ತೋಳು,
ಒಳಕ್ಕೆ ನುಸುಳಲಿ ಈ ಭಟ್ಟನದೂ
ಒಂದೆರಡು ಸಾಲು!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...