Home / ಕವನ / ಕವಿತೆ / ಅನಂತಮೂರ್ತಿಗೆ

ಅನಂತಮೂರ್ತಿಗೆ

ರೀ ಅನಂತಮೂರ್ತಿ
ನೀವು ಅದೆಷ್ಟು ಸ್ವಾರ್ಥಿ!
ಯಾರಿಗೂ ಬಿಡದೆ ಒಬ್ಬರೇ
ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ?

ಏನೆಲ್ಲ ಕಾಡಿದುವಪ್ಟ ನಿಮ್ಮನ್ನ !
ಹೆಣ್ಣು, ಹೆಸರು, ಹಾಗೇ
ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು;
ಗಾಂಧೀ, ಲೋಹಿಯಾ, ಹಾಗೇ
ಧಗಧಗಿಸುವ ಸೃಷ್ಟಿಕಾರಕ ಬಸಿರು;
ನೇರ ಮಠದಿಂದಲೇ ಬಂದರೂ
ಗುಂಡು, ಚಾಕಣದ ತುಂಡು, ಜೊತೆಗೇ
ಕೇಳುಗರೆದೆ ಜುಮ್ಮೆನಿಸುವ ಮಾತಿನ ತೊಂಡು;
ಹಿಮಾಲಯದಂಥ ಅಡಿಗ, ಜೊತೆಗೇ
ಪತ್ರಿಕೆದೊಣ್ಣೆಯ ಬೀಸುವ
ಸ್ನೇಹಾಸೂಯೆಯ ಬಡಿಗ.
ಇಲ್ಲವೆಂದಲ್ಲ ಮನಸ್ಸಿನ ತಳಾತಳದಲ್ಲಿ
ಮಿಣ್ಣನೆ ಧೂರ್ತ,
ಆದರೆ ಅಲ್ಲೇ ಇದ್ದಾನೆ ಅವನನ್ನು
ನಿಯಂತ್ರಿಸುವ ಕುಶಲಿ ಪಾರ್ಥ.
ಜೀರ್ಣಿಸಿಕೊಂಡಿರಿ ಎಲ್ಲಾ
ಪ್ರೀತಿಯ ಬಲದಲ್ಲಿ
ಜೀರ್ಣಿಸಿಕೊಂಡಿರಿ ಬರೆದು ಮನಸಾಕ್ಷಿಯ ಸಹಿಯಲ್ಲಿ;
ಒಳಗಿನ ಕೌಶಿಕನನ್ನೇ
ಅರಣಿ ಸಮಿತ್ತು ಮಾಡಿ
ಸತ್ಯಕ್ಕೆ ಆಹುತಿ ನೀಡಿ
ಶೂದ್ರ ಋಷಿಯಾದಿರಿ ಗಾಯತ್ರಿಯ ಹಾಡಿ.
ಸದ್ದುಗದ್ದಲವಿರದೆ ಏನೆಲ್ಲ ಗೆದ್ದಿದ್ದೀರಿ!
ಶರಣರ ವಚನ ಜ್ಯೋತಿಯ
ಆಯೋವಾದಲ್ಲಿ ಮುಡಿಸಿ,
ಪುರಂದರ ಕೃತಿ ಹೂರಣವ
ಪ್ಯಾರಿಸ್ಸಿನಲ್ಲಿ ಬಡಿಸಿ,
ಕನ್ನಡ ಸಂಸ್ಕೃತಿ ಕೇದಗೆ
ಕಡಲಾಚೆಗೂ ಕಳಿಸಿ,
ಅರಿಯದಂತೆ ಇದ್ದೀರಿ
ಸಾಮಾನ್ಯರ ಥರ ನಟಿಸಿ.

ಇದೆ ನಿಮ್ಮ ತೆಕ್ಕೆಯಲ್ಲಿ ಘನವಾದದ್ದೆಲ್ಲ:
ಅಡಿಗರ ಪದ್ಯ, ಲಂಕೇಶರ ಗದ್ಯ
ಕುವೆಂಪು ಕಥಾಲೊಕ,
ಎಮರ್ಜನ್ಸಿಗೆ ಬಲಿಯಾದ ಸ್ನೇಹಲತಾ ಕುರಿತ ಶೋಕ,
ಬೇಂದ್ರೆಯ ಮಾಯಾಸೃಷ್ಟಿ,
ಕಾರಂತರ ಎವೆಹೊಳಚದ ನಿಷ್ಠುರದೃಷ್ಟಿ,
ಕ್ರಿಸ್ತನ ಮಗಳು ಎಸ್ತರಳ ಪ್ರೇಮ,
ಸಾವಿರ ಕನಸುಗಳ ಶಿಖರಸ್ತೋಮ.
ಇನ್ನೂ ಏನೇನೋ-
ಹೇಳಲು ಸೋತೆ, ತೋಚುತ್ತಿಲ್ಲ ಮಾತೇ
ಸಡಿಲಿಸಿ ಕೊಂಚ ತೋಳು,
ಒಳಕ್ಕೆ ನುಸುಳಲಿ ಈ ಭಟ್ಟನದೂ
ಒಂದೆರಡು ಸಾಲು!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...