Home / ಕವನ / ಕವಿತೆ / ಅನಂತಮೂರ್ತಿಗೆ

ಅನಂತಮೂರ್ತಿಗೆ

ರೀ ಅನಂತಮೂರ್ತಿ
ನೀವು ಅದೆಷ್ಟು ಸ್ವಾರ್ಥಿ!
ಯಾರಿಗೂ ಬಿಡದೆ ಒಬ್ಬರೇ
ದೋಚಿಕೊಳ್ಳುವುದೇ ಎಲ್ಲಾ ಕೀರ್ತಿ ?

ಏನೆಲ್ಲ ಕಾಡಿದುವಪ್ಟ ನಿಮ್ಮನ್ನ !
ಹೆಣ್ಣು, ಹೆಸರು, ಹಾಗೇ
ಮಣ್ಣಿನ ಮಕ್ಕಳ ಮೂಕ ನಿಟ್ಟುಸಿರು;
ಗಾಂಧೀ, ಲೋಹಿಯಾ, ಹಾಗೇ
ಧಗಧಗಿಸುವ ಸೃಷ್ಟಿಕಾರಕ ಬಸಿರು;
ನೇರ ಮಠದಿಂದಲೇ ಬಂದರೂ
ಗುಂಡು, ಚಾಕಣದ ತುಂಡು, ಜೊತೆಗೇ
ಕೇಳುಗರೆದೆ ಜುಮ್ಮೆನಿಸುವ ಮಾತಿನ ತೊಂಡು;
ಹಿಮಾಲಯದಂಥ ಅಡಿಗ, ಜೊತೆಗೇ
ಪತ್ರಿಕೆದೊಣ್ಣೆಯ ಬೀಸುವ
ಸ್ನೇಹಾಸೂಯೆಯ ಬಡಿಗ.
ಇಲ್ಲವೆಂದಲ್ಲ ಮನಸ್ಸಿನ ತಳಾತಳದಲ್ಲಿ
ಮಿಣ್ಣನೆ ಧೂರ್ತ,
ಆದರೆ ಅಲ್ಲೇ ಇದ್ದಾನೆ ಅವನನ್ನು
ನಿಯಂತ್ರಿಸುವ ಕುಶಲಿ ಪಾರ್ಥ.
ಜೀರ್ಣಿಸಿಕೊಂಡಿರಿ ಎಲ್ಲಾ
ಪ್ರೀತಿಯ ಬಲದಲ್ಲಿ
ಜೀರ್ಣಿಸಿಕೊಂಡಿರಿ ಬರೆದು ಮನಸಾಕ್ಷಿಯ ಸಹಿಯಲ್ಲಿ;
ಒಳಗಿನ ಕೌಶಿಕನನ್ನೇ
ಅರಣಿ ಸಮಿತ್ತು ಮಾಡಿ
ಸತ್ಯಕ್ಕೆ ಆಹುತಿ ನೀಡಿ
ಶೂದ್ರ ಋಷಿಯಾದಿರಿ ಗಾಯತ್ರಿಯ ಹಾಡಿ.
ಸದ್ದುಗದ್ದಲವಿರದೆ ಏನೆಲ್ಲ ಗೆದ್ದಿದ್ದೀರಿ!
ಶರಣರ ವಚನ ಜ್ಯೋತಿಯ
ಆಯೋವಾದಲ್ಲಿ ಮುಡಿಸಿ,
ಪುರಂದರ ಕೃತಿ ಹೂರಣವ
ಪ್ಯಾರಿಸ್ಸಿನಲ್ಲಿ ಬಡಿಸಿ,
ಕನ್ನಡ ಸಂಸ್ಕೃತಿ ಕೇದಗೆ
ಕಡಲಾಚೆಗೂ ಕಳಿಸಿ,
ಅರಿಯದಂತೆ ಇದ್ದೀರಿ
ಸಾಮಾನ್ಯರ ಥರ ನಟಿಸಿ.

ಇದೆ ನಿಮ್ಮ ತೆಕ್ಕೆಯಲ್ಲಿ ಘನವಾದದ್ದೆಲ್ಲ:
ಅಡಿಗರ ಪದ್ಯ, ಲಂಕೇಶರ ಗದ್ಯ
ಕುವೆಂಪು ಕಥಾಲೊಕ,
ಎಮರ್ಜನ್ಸಿಗೆ ಬಲಿಯಾದ ಸ್ನೇಹಲತಾ ಕುರಿತ ಶೋಕ,
ಬೇಂದ್ರೆಯ ಮಾಯಾಸೃಷ್ಟಿ,
ಕಾರಂತರ ಎವೆಹೊಳಚದ ನಿಷ್ಠುರದೃಷ್ಟಿ,
ಕ್ರಿಸ್ತನ ಮಗಳು ಎಸ್ತರಳ ಪ್ರೇಮ,
ಸಾವಿರ ಕನಸುಗಳ ಶಿಖರಸ್ತೋಮ.
ಇನ್ನೂ ಏನೇನೋ-
ಹೇಳಲು ಸೋತೆ, ತೋಚುತ್ತಿಲ್ಲ ಮಾತೇ
ಸಡಿಲಿಸಿ ಕೊಂಚ ತೋಳು,
ಒಳಕ್ಕೆ ನುಸುಳಲಿ ಈ ಭಟ್ಟನದೂ
ಒಂದೆರಡು ಸಾಲು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...