ಬೇಗನೆ ಬಾ ಚೈತ್ರನೇ
ಕಾದಿರುವೆವು ನಿನಗೆ
ತೋರೋ ಶ್ರೀಮುಖವ
ಮಾಗಿ ಕೊರೆದ ಇಳೆಗೆ
ಮರಮರವೂ ಬರೆಸಿದೆ
ಸನ್ಮಾನದ ಪತ್ರ,
ಹೂ ತುಂಬಿದ ಕೊಂಬೆಗಳೋ
ಹಕ್ಕಿಗಳಿಗೆ ಛತ್ರ;
ಕೂಗುತ್ತಿವೆ ಕೋಗಿಲೆ
ಓಲಗದನಿಯಾಗಿ,
ಕಾಯುತ್ತಿದೆ ಬರವನು
ಜಗವೇ ತಲೆಬಾಗಿ.
ನಿನ್ನ ಹಜ್ಜೆ ಸೋಕಿತೋ
ಮರಮರಕೂ ಉಸಿರು,
ಉಸಿರಾಡುತ ಓಲಾಡುವ
ಪ್ರತಿರೆಂಬೆಯು ಹಸಿರು,
ತುಂಬುವುದೋ ಮಕರಂದ
ಹೂವಿನ ದೊನ್ನೆಯಲಿ,
ಕುಡಿದ ದುಂಬಿ ಹರಸುವುವೊ
ಫಲವ ಮರದ ತುಂಬ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.