Home / ಕವನ / ಕವಿತೆ / ಕಾಳಗ

ಕಾಳಗ

ಇರಿಯಲೆಂದೆ ಕಟ್ಟಿದ ಚಾಕು
ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು
ಇರಿದು ತಣಿಯಬೇಕು
ರಕ್ತದ ಮಡುವಿನಲ್ಲಿ
ಮನುಕುಲದ ರೋಷ ಕಾಯಿಸಿದ ಉಕ್ಕು

ಹತ್ತು ಹೇಂಟೆಗಳರಸ
ಇನ್ನೆಷ್ಟೋ ಮರಿಗಳ ಮೂಲಪುರುಷ
ಇಡಿಯ ಬಯಲನ್ನೆ ಅವಲೋಕಿಸಿ
ನಿಂತಿದೆ ಹೇಗೆ ಕತ್ತೆತ್ತಿ ಕಣ್ಣ ಹೊರಳಿಸಿ
ತನ್ನ ಎತ್ತರಕ್ಕಿಂತಲು ಉತ್ತರ ನಟಿಸಿ
ಕಾಲ ಕೆರೆಯುತ್ತ ಕೂಗಿ ಕರೆಯುತ್ತ
ಅದೆಂಥ ಹಸಿವೊ ಕಾಮವೊ
ಮರಣದ ಛಲವೊ!

ಕಲ್ಲಿಸಂಕದ ಪೂಂಜರೇನು ಮಾಡುತ್ತಿದ್ದಾರೆ ಇಲ್ಲಿ?
ತಮ್ಮ ಹುಂಜದ ಘಾಯ ಹೊಲಿಯುತ್ತಿದ್ದಾರೆ
ತುಂಬುತ್ತಿದ್ದಾರೆ ಅದಕ್ಕೆ ಪ್ರಾಣವಾಯು
ಕಿವಿಯಲೇನೋ ಹೇಳುತ್ತಿದ್ದಾರೆ
ಕೆರಳಿಸುತ್ತಿದ್ದಾರೆ ಇತಿಹಾಸಪೂರ್ವದ ನೆನಪುಗಳ
ಕೊನೆಗೂ ಧರೆಯಲ್ಲಿ ಮಲಗುವ ತನಕ
ಪ್ರತಿಯೊಂದು ಘಳಿಗೆಯೂ ಪುಳಕ

ಕೆರೆಯೇರಿಯಲ್ಲಿ ಹಾದು ಗುಡ್ಡಗಳ ದಾಟಿ
ಬಯಲುಗಳ ನಡೆದು ಬಂದವರು ಇವರು
ಸಂಜೆ ಮರಳುವರು
ಬಂದ ಹಾದಿಯಲಿ
ಬಟ್ಟೆಬರೆ ರಕ್ತಮಯ

ಪ್ರತಿಯೊಂದು ಸಂಕ್ರಾಂತಿಯೂ ದಿಗ್ವಿಜಯ
ತುಂಡಾದ ರೆಕ್ಕೆಪುಕ್ಕ ಯಾವ ಲೆಕ್ಕ?
ಒಂದೊಂದು ಕಂಕುಳಲ್ಲೂ
ಒಂದೊಂದು ಹಿಟ್ಟಿನ ಹುಂಜ
ಆಹ! ಕೂಗಿತೆ ಮೂರು ಬಾರಿ?
ಇಲ್ಲ, ಇದು ಕತ್ತಲೆಯ ದಾರಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...