Home / ಕವನ / ಕವಿತೆ / ಅಮ್ಮ ಹೇಳಿದ್ದು

ಅಮ್ಮ ಹೇಳಿದ್ದು

ಇದು ನನ್ನ ಕಲ್ಪನೆಯ
ಕಥೆಯಲ್ಲ ಮಗಳೇ
ನನ್ನಮ್ಮ ನನಗೆ ಹೇಳಿದ್ದು
ಅವಳಮ್ಮ ನನ್ನಮ್ಮನಿಗೆ ಹೇಳಿದ್ದಂತೆ
ಈಗ ನಾ ನಿನಗೆ ಹೇಳಿದಂತೆ
ನಾಳೆ ನೀ ನಿನ್ನ ಮಗಳಿಗೆ ಹೇಳುವಂತೆ
ಇದೊಂದು ರೀತಿ ಚಕ್ರದಂತೆ!

ಇದು ಕಥೆಯ ಮೂಲರೂಪವೂ
ಅಲ್ಲ ಮಗಳೇ
ನನ್ನಮ್ಮ, ಅವರಮ್ಮ,
ಅವರಮ್ಮ, ಅವರಮ್ಮನಮ್ಮನ
… … … … … …
… … … … … …
ಬಾಯ್ಗೆ ಹರಿದು
ಮೂಲರೂಪ ಹೇಗಿತ್ತೋ
ಸೃಷ್ಟಿಕರ್ತನಿಗೇ ಗೊತ್ತು!
*
“ಅಳಬೇಡ ಕಂದಮ್ಮ
ನಿನ ಪುಣ್ಯ ಇಲ್ಲಿ ರಾಕ್ಷಸನಿಲ್ಲ!”
ಏಳು ಸಮುದ್ರದಾಚೆ
ಅವನಿರುವುದೆಲ್ಲಾ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ!
ಬಿಡು ಮಗಳೇ
ನಾವೂ ಅಲ್ಲಿಗೆ ಹೋಗುವುದಿಲ್ಲವಲ್ಲಾ!
*
ಅವನು ಕುಡಿಯುವುದು
ನನ್ನ – ನಿನ್ನಂತೆ
ಹಾಲು ಕಾಫಿಯಲ್ಲ
ಬೆಳಗು – ಬೈಗು
ಹಸಿ – ಹಸಿ ನೆತ್ತರೇ ಬೇಕಂತಲ್ಲಾ?
ನಿನ್ನಂತವರ ಕಣ್ಣೀರೆಂದರೆ
ಅವನಿಗೆ ಸಿಹಿ ತಿಂಡಿಯ ತರಹ!
ಅವ ತಿನ್ನುವುದೂ
ಸೊಪ್ಪು ಸದೆ ಹಣ್ಣಲ್ಲ
ನನ್ನ-ನಿನ್ನಂತವರೇ ಆಹಾರ
“ಅಳದಿರು ಬಂಗಾರಿ
ರಾಕ್ಷಸ ಇಲ್ಲಿಲ್ಲ!”
*
“ಹುಷ್ ಸುಮ್ಮನಿರೆ ನನ್ನ ಚಿನ್ನ”
ಅವನಂತವರೂ ಇಲ್ಲಿಲ್ಲ
ದೈತ್ಯ ಪರ್ವತವೇ
ಅವನ ಆಕೃತಿಯಂತಲ್ಲಾ!
ಅವನ ಘರ್ಜನೆಗೆ
ಏಳೇಳು ಸಮುದ್ರವೇ ನಡುಗಿ
ಅಲೆಗಳೇಳುವುದಂತಲ್ಲ
ಸಮುದ್ರದಲಿ ಅಲೆಗಳಿರುವವರೆಗೂ
ಅವನಿಗೋ ಸಾವಿಲ್ಲ!
*
ಆದರೂ ಅವನ ಪ್ರಾಣ
ಅವನ ಹೃದಯದಲಿಲ್ಲ!
“ಅಯ್ಯೋ ಹೀಗ್ಯಾಕಳುವೆ ನನ್ನ ಜೀವವೇ?”
ಏಳು ಕಾಡನು ದಾಟಿ ಮತ್ತೇಳೂ ಕಡಲನು ಮೀಟಿ
ಕೊಟ್ಟ ಕೊನೆಯ ಗುಹೆಯೊಳಗಿನ
ಗಿಣಿಯೊಳಗೇ ಇದೆಯಂತೆ ಆ
ರಾಕ್ಷಸನೆಂಬುವನ ಪ್ರಾಣ!
*
“ನನ ಮುದ್ದು ಮಗುವೇ ಅಳಬೇಡ”
ರಾಕ್ಷಸನಿಗೋ ಸಾವಿಲ್ಲ
ಅಮ್ಮ ಹೇಳಿದ್ದಳಲ್ಲಾ
ಅವ ನಿನ್ನ ಕದ್ದರೆ
ಕಾಪಾಡಲು ಯಾವ
ರಾಜಕುಮಾರನೂ ಬರುವುದಿಲ್ಲ
ಏಕೆಂದರೆ ಇಲ್ಲಿ ರಾಜಕುಮಾರ ಇಲ್ಲ!
ಅದಕೆಂದೇ ಮಗಳೇ ನೀ ಅಳಬೇಡ
*
ಹೀಗೇ… ಹೀಗೇ…
ನಗಬೇಕು ಕಂದಮ್ಮ
ಎಂದೆಂದೂ ಇಲ್ಲಿ ರಾಕ್ಷಸನಿಲ್ಲ
ನೀ ಅಳದಿದ್ದರೆ
ಅವನಿಲ್ಲಿಗೆ ಬರುವುದೂ ಇಲ್ಲ
ಬಿಡು ನಾವು ಜಾಣರು
ಅವನ ಬಾಯಿಗೆ
ಹೋಗುವುದೂ ಇಲ್ಲ!
*
ಅತ್ತವರಿಗಷ್ಟೇ ನನ್ನ ರನ್ನ
ರಾಕ್ಷಸನ ಹೆದರಿಕೆ
ಅಳುನುಂಗಿ ನಗುವವರಿಗೆ
ರಾಕ್ಷಸನ ಕಥೆಯೇಕೆ?
ಹೀಗೇ ಏನನ್ನೂ ಪ್ರಶ್ನಿಸದೇ
ನಗುನಗುತ್ತಿದ್ದರೆ ಬೇರೆ ಮಾತೇಕೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...