ಭಾರತ ಭವಿಷ್ಯವನು ಬರೆವನಾರು?

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು
ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು
ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು
ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ

ಭಾರತ ಭವಿಷ್ಯವನು ಬರೆವನವನು
ನೆಲತಾಯ ನಲ್ಗುವರ-ಬಡ ರೈತನು.

ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ-
ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ
ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ
ಮೌನವೇ ಮಸಿಯಾಗೆ ಗೈಮೆ ಲೇಖನಿಯಾಗೆ

ಭಾರತ ಭವಿಷ್ಯವನು ಬರೆವನವನು
ಕರ್ಮಯೋಗಕೆ ಕಲಶವಿಡುವ ಕಾರ್ಮಿಕನು

ಇತ್ತ ನಿರುಕಿಸು! ಶಸ್ತ್ರಸನ್ನದ್ಧನಾಗಿಯುಂ
ತಾನಹಿಂಸಾ ಸತ್ಯ ತತ್ತ್ವಕ್ಕೆ ತಲೆಬಾಗಿ
ಹೆರರ ನೆಲಕಾಶಿಸದೆ ತಾಯ್ ನೆಲಕೆ ಮುಡಿಪಾಗಿ
ತನ್ನ ಬಾಳನ್ನಿರಿಸಿ, ಇಳೆ ಮೆಚ್ಚುವದಟಿನಿಂ

ಭಾರತ ಭವಿಷ್ಯವನು ಬರೆವನವನು
ಧರ್ಮಯುದ್ಧಕ್ಕಳುಕದಿಹ ವೀರಭಟನು.

ಮೇಣದೋ! ವಿಜ್ಞಾನಶಾಲೆಯಲಿ ಭೇದಿಸುತ
ಪ್ರಕೃತಿಯ ರಹಸ್ಯವನು, ಸತ್ಯವನು ಶೋಧಿಸುತ,
ನಾಡ ಮಣ್ಣನು ಚಿನ್ನ ಮಾಳ್ಪ ಕಲೆ ಸಾಧಿಸುತ
ವಿಜ್ಞಾನಸಿದ್ಧಿಯನು ಯುದ್ಧಕೆ ನಿರೋಧಿಸುತ

ಭಾರತ ಭವಿಷ್ಯವನು ಬರೆವನವನು
ಸತ್ಯ-ಪರಮೇಶ್ವರನ ಭಕ್ತ, ವಿಜ್ಞಾನಿ.

ಮೇಣಿದೋ! ಜನರೊಡನೆ ನಲವಿನಿಂ ಬೆರೆಯುತ್ತ
ಅನ್ಯಾಯವಸಮತೆ ಅಧರ್ಮಗಳ ಜರೆಯುತ್ತ
ಕಾವ್ಯ ಕಹಳೆಯನೂದಿ ಜನರನೆಚ್ಚರಿಸುತ್ತ
ಸತ್ಯ ಸೌಂದರ್ಯಗಳ ಮಂತ್ರವುಚ್ಚರಿಸುತ್ತ

ಭಾರತ ಭವಿಷ್ಯವನು ಬರೆವನವನು
ಭಾರತಿಯ ವರಪುತ್ರ ಕವಿವರ್‍ಯನು.

ಅದೊ! ವಿಶಾಲಪ್ರಪಂಚಕೆ ಭಾರತದ ಕೀರ್ತಿ
ಹರಡಿ, ಮೇಣ್ ಗಳಿಸುತ್ತ ಹೊರದೇಶಗಳ ಅರ್ತಿ.
ದೇಶ ದೇಶಕೆ ನಂಟುನೇಹಗಳ ಬಲಿಸುತ್ತ
ಯುದ್ಧವನು ನಿಲಿಸಿ ಶಾಂತಿ ಧ್ವಜವ ನಿಲಿಸುತ್ತ

ಭಾರತ ಭವಿಷ್ಯವನು ಬರೆವರವರು
ಸ್ವಾತಂತ್ರ್‍ಯ ಪಡೆದ ಭಾರತದ ನಾಯಕರು.

ಆಹ! ನೋಡು! ಕೊಂಡಾಡು ಭಕ್ತಿಯಿಂ ಪೊಡಮಡು
ಸತ್ಯ ಧರ್ಮ ಅಹಿಂಸೆಗಳಿಗಾಗಿ ಜೀವವನು
ಮುಡಿಪಿರಿಸಿ, ಬುದ್ಧದೇವನ ಧರ್ಮ ಚಕ್ರವನು
ಅಂತು ಚರಕವಗೈದು ನಡೆನುಡಿಯ ನೂಲಿನಿಂ

ಭಾರತ ಭವಿಷ್ಯವನು ಬರೆದು ಬರೆಯುತಲಿಹನು
ಜನತಾ ಜನಾರ್ದನನ ಭಕ್ತ ಗಾಂಧಿ ಮಹಾತ್ಮ
ಕ್ರಿಸ್ತ ಬುದ್ಧರ ಪಂತಿಯೊಳು ನಿಲುವ ಪೂತಾತ್ಮ
ಪ್ರತ್ಯಕ್ಷದೈವ ಪಾಮರರ ಪರಮಾತ್ಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಡ
Next post ಇಳಾ – ೧೫

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys