Home / ಕವನ / ಕವಿತೆ / ಭಾರತ ಭವಿಷ್ಯವನು ಬರೆವನಾರು?

ಭಾರತ ಭವಿಷ್ಯವನು ಬರೆವನಾರು?

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು
ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು
ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು
ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ

ಭಾರತ ಭವಿಷ್ಯವನು ಬರೆವನವನು
ನೆಲತಾಯ ನಲ್ಗುವರ-ಬಡ ರೈತನು.

ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ-
ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ
ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ
ಮೌನವೇ ಮಸಿಯಾಗೆ ಗೈಮೆ ಲೇಖನಿಯಾಗೆ

ಭಾರತ ಭವಿಷ್ಯವನು ಬರೆವನವನು
ಕರ್ಮಯೋಗಕೆ ಕಲಶವಿಡುವ ಕಾರ್ಮಿಕನು

ಇತ್ತ ನಿರುಕಿಸು! ಶಸ್ತ್ರಸನ್ನದ್ಧನಾಗಿಯುಂ
ತಾನಹಿಂಸಾ ಸತ್ಯ ತತ್ತ್ವಕ್ಕೆ ತಲೆಬಾಗಿ
ಹೆರರ ನೆಲಕಾಶಿಸದೆ ತಾಯ್ ನೆಲಕೆ ಮುಡಿಪಾಗಿ
ತನ್ನ ಬಾಳನ್ನಿರಿಸಿ, ಇಳೆ ಮೆಚ್ಚುವದಟಿನಿಂ

ಭಾರತ ಭವಿಷ್ಯವನು ಬರೆವನವನು
ಧರ್ಮಯುದ್ಧಕ್ಕಳುಕದಿಹ ವೀರಭಟನು.

ಮೇಣದೋ! ವಿಜ್ಞಾನಶಾಲೆಯಲಿ ಭೇದಿಸುತ
ಪ್ರಕೃತಿಯ ರಹಸ್ಯವನು, ಸತ್ಯವನು ಶೋಧಿಸುತ,
ನಾಡ ಮಣ್ಣನು ಚಿನ್ನ ಮಾಳ್ಪ ಕಲೆ ಸಾಧಿಸುತ
ವಿಜ್ಞಾನಸಿದ್ಧಿಯನು ಯುದ್ಧಕೆ ನಿರೋಧಿಸುತ

ಭಾರತ ಭವಿಷ್ಯವನು ಬರೆವನವನು
ಸತ್ಯ-ಪರಮೇಶ್ವರನ ಭಕ್ತ, ವಿಜ್ಞಾನಿ.

ಮೇಣಿದೋ! ಜನರೊಡನೆ ನಲವಿನಿಂ ಬೆರೆಯುತ್ತ
ಅನ್ಯಾಯವಸಮತೆ ಅಧರ್ಮಗಳ ಜರೆಯುತ್ತ
ಕಾವ್ಯ ಕಹಳೆಯನೂದಿ ಜನರನೆಚ್ಚರಿಸುತ್ತ
ಸತ್ಯ ಸೌಂದರ್ಯಗಳ ಮಂತ್ರವುಚ್ಚರಿಸುತ್ತ

ಭಾರತ ಭವಿಷ್ಯವನು ಬರೆವನವನು
ಭಾರತಿಯ ವರಪುತ್ರ ಕವಿವರ್‍ಯನು.

ಅದೊ! ವಿಶಾಲಪ್ರಪಂಚಕೆ ಭಾರತದ ಕೀರ್ತಿ
ಹರಡಿ, ಮೇಣ್ ಗಳಿಸುತ್ತ ಹೊರದೇಶಗಳ ಅರ್ತಿ.
ದೇಶ ದೇಶಕೆ ನಂಟುನೇಹಗಳ ಬಲಿಸುತ್ತ
ಯುದ್ಧವನು ನಿಲಿಸಿ ಶಾಂತಿ ಧ್ವಜವ ನಿಲಿಸುತ್ತ

ಭಾರತ ಭವಿಷ್ಯವನು ಬರೆವರವರು
ಸ್ವಾತಂತ್ರ್‍ಯ ಪಡೆದ ಭಾರತದ ನಾಯಕರು.

ಆಹ! ನೋಡು! ಕೊಂಡಾಡು ಭಕ್ತಿಯಿಂ ಪೊಡಮಡು
ಸತ್ಯ ಧರ್ಮ ಅಹಿಂಸೆಗಳಿಗಾಗಿ ಜೀವವನು
ಮುಡಿಪಿರಿಸಿ, ಬುದ್ಧದೇವನ ಧರ್ಮ ಚಕ್ರವನು
ಅಂತು ಚರಕವಗೈದು ನಡೆನುಡಿಯ ನೂಲಿನಿಂ

ಭಾರತ ಭವಿಷ್ಯವನು ಬರೆದು ಬರೆಯುತಲಿಹನು
ಜನತಾ ಜನಾರ್ದನನ ಭಕ್ತ ಗಾಂಧಿ ಮಹಾತ್ಮ
ಕ್ರಿಸ್ತ ಬುದ್ಧರ ಪಂತಿಯೊಳು ನಿಲುವ ಪೂತಾತ್ಮ
ಪ್ರತ್ಯಕ್ಷದೈವ ಪಾಮರರ ಪರಮಾತ್ಮ!
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...