ಭಾರತ ಭವಿಷ್ಯವನು ಬರೆವನಾರು?

ಅದೊ ನೋಡು! ಹೊಲದಲ್ಲಿ ನೇಗಿಲನು ಬಲ್ವಿಡಿದು
ಮೈಬೆವರಿನಿಂದುತ್ತ ಮಣ್ ನೆನೆವರಂ ದುಡಿದು
ಹೆರವರಿಗೆ ಹೊನ್ ಬೆಳೆಯ ತೆಗೆಯೆ ಜೀವವ ತೇದು
ನೇಗಿಲಿನ ರೇಖೆಯಿಂ ದುಡಿವ ಬಾಳ್ ನೆತ್ತರಿಂ

ಭಾರತ ಭವಿಷ್ಯವನು ಬರೆವನವನು
ನೆಲತಾಯ ನಲ್ಗುವರ-ಬಡ ರೈತನು.

ಮತ್ತದೋ ನೋಡಲ್ಲಿ! ಯಂತ್ರಶಾಲೆಗಳಲ್ಲಿ-
ಯಂತ್ರಗಳ ನಡುವೆ ತಾನೊಂದು ಯಂತ್ರವೆ ಆಗಿ
ಹೆರರ ಸೌಖ್ಯಕೆ ತನ್ನ ಬಾಳ ಸವಿಯನೆ ನೀಗಿ
ಮೌನವೇ ಮಸಿಯಾಗೆ ಗೈಮೆ ಲೇಖನಿಯಾಗೆ

ಭಾರತ ಭವಿಷ್ಯವನು ಬರೆವನವನು
ಕರ್ಮಯೋಗಕೆ ಕಲಶವಿಡುವ ಕಾರ್ಮಿಕನು

ಇತ್ತ ನಿರುಕಿಸು! ಶಸ್ತ್ರಸನ್ನದ್ಧನಾಗಿಯುಂ
ತಾನಹಿಂಸಾ ಸತ್ಯ ತತ್ತ್ವಕ್ಕೆ ತಲೆಬಾಗಿ
ಹೆರರ ನೆಲಕಾಶಿಸದೆ ತಾಯ್ ನೆಲಕೆ ಮುಡಿಪಾಗಿ
ತನ್ನ ಬಾಳನ್ನಿರಿಸಿ, ಇಳೆ ಮೆಚ್ಚುವದಟಿನಿಂ

ಭಾರತ ಭವಿಷ್ಯವನು ಬರೆವನವನು
ಧರ್ಮಯುದ್ಧಕ್ಕಳುಕದಿಹ ವೀರಭಟನು.

ಮೇಣದೋ! ವಿಜ್ಞಾನಶಾಲೆಯಲಿ ಭೇದಿಸುತ
ಪ್ರಕೃತಿಯ ರಹಸ್ಯವನು, ಸತ್ಯವನು ಶೋಧಿಸುತ,
ನಾಡ ಮಣ್ಣನು ಚಿನ್ನ ಮಾಳ್ಪ ಕಲೆ ಸಾಧಿಸುತ
ವಿಜ್ಞಾನಸಿದ್ಧಿಯನು ಯುದ್ಧಕೆ ನಿರೋಧಿಸುತ

ಭಾರತ ಭವಿಷ್ಯವನು ಬರೆವನವನು
ಸತ್ಯ-ಪರಮೇಶ್ವರನ ಭಕ್ತ, ವಿಜ್ಞಾನಿ.

ಮೇಣಿದೋ! ಜನರೊಡನೆ ನಲವಿನಿಂ ಬೆರೆಯುತ್ತ
ಅನ್ಯಾಯವಸಮತೆ ಅಧರ್ಮಗಳ ಜರೆಯುತ್ತ
ಕಾವ್ಯ ಕಹಳೆಯನೂದಿ ಜನರನೆಚ್ಚರಿಸುತ್ತ
ಸತ್ಯ ಸೌಂದರ್ಯಗಳ ಮಂತ್ರವುಚ್ಚರಿಸುತ್ತ

ಭಾರತ ಭವಿಷ್ಯವನು ಬರೆವನವನು
ಭಾರತಿಯ ವರಪುತ್ರ ಕವಿವರ್‍ಯನು.

ಅದೊ! ವಿಶಾಲಪ್ರಪಂಚಕೆ ಭಾರತದ ಕೀರ್ತಿ
ಹರಡಿ, ಮೇಣ್ ಗಳಿಸುತ್ತ ಹೊರದೇಶಗಳ ಅರ್ತಿ.
ದೇಶ ದೇಶಕೆ ನಂಟುನೇಹಗಳ ಬಲಿಸುತ್ತ
ಯುದ್ಧವನು ನಿಲಿಸಿ ಶಾಂತಿ ಧ್ವಜವ ನಿಲಿಸುತ್ತ

ಭಾರತ ಭವಿಷ್ಯವನು ಬರೆವರವರು
ಸ್ವಾತಂತ್ರ್‍ಯ ಪಡೆದ ಭಾರತದ ನಾಯಕರು.

ಆಹ! ನೋಡು! ಕೊಂಡಾಡು ಭಕ್ತಿಯಿಂ ಪೊಡಮಡು
ಸತ್ಯ ಧರ್ಮ ಅಹಿಂಸೆಗಳಿಗಾಗಿ ಜೀವವನು
ಮುಡಿಪಿರಿಸಿ, ಬುದ್ಧದೇವನ ಧರ್ಮ ಚಕ್ರವನು
ಅಂತು ಚರಕವಗೈದು ನಡೆನುಡಿಯ ನೂಲಿನಿಂ

ಭಾರತ ಭವಿಷ್ಯವನು ಬರೆದು ಬರೆಯುತಲಿಹನು
ಜನತಾ ಜನಾರ್ದನನ ಭಕ್ತ ಗಾಂಧಿ ಮಹಾತ್ಮ
ಕ್ರಿಸ್ತ ಬುದ್ಧರ ಪಂತಿಯೊಳು ನಿಲುವ ಪೂತಾತ್ಮ
ಪ್ರತ್ಯಕ್ಷದೈವ ಪಾಮರರ ಪರಮಾತ್ಮ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೋಡ
Next post ಇಳಾ – ೧೫

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…