ಮನೆಯು ಪಾಲಾಯ್ತು

“ಮನೆಯು ಪಾಲಾಯ್ತು
ಒರ್‌ಬಾಳ್ವೆ ಹೋಳಾಯ್ತು
ಕರುಳೆರಡು ಸೀಳಾಯ್ತು
ಅಯ್ಯೊ! ಅಕಟಕಟಾ!
ಎರಡಾಯ್ತು ಬಾವುಟ”
ಎಂದು ಗೋಳಾಡದಿರು
ಓ, ಗೆಳೆಯನೇ!

ಕಲಹ ಪಾಲಿಗೆ ಮೊದಲು:
ಹೊಗೆಯಿತಸಮಾಧಾನ,
ಉರಿಯಿತು ದುರಭಿಮಾನ.
ತಮ್ಮ, ಪಸುಗೆಯ ಬಯಸಿ
ಕೈಮಾಡಿದನು, ಮುನಿದು;
ಒಬ್ಬಣ್ಣ ಸುಮ್ಮನಿರೆ
ಉಳಿದರಂತಿಹರೆ?

ಹೊಡೆತಕ್ಕೆ ಮರುಹೊಡೆತ;
ಮತದ ಮದ್ದಿನ ಸಿಡಿತ!
ಮಾರಿಗಾಯ್ತೌತಣ;
ನಾಡೆಲ್ಲ ರಣ ರಣ!

ತಡವೆ ರೋಗನಿದಾನ!
ಒಳಗೆಲ್ಲೊ ವಿಷದ ಸೆಲೆ
ಉಪಚಾರ ಮೇಲ್ಮೇಲೆ!
ಅರಿವು ಮೂಡಿದ ಮೇಲೆ
ನಿಜದ ಸಂಧಾನ.
ನಮ್ಮ ಮನೆ ಪಾಲಾಗೆ
ಬೇಕಾಯ್ತು ಕಡೆಗೆಮಗೆ
ಹೆರರ ತೀರ್ಮಾನ!

ಎಲ್ಲವೂ ಆಯ್ತು, ದಿಟ!
ಪಾಲಾಯ್ತು ಮನೆ ಮಠ,
ಹಣಕಾಸು ಆಳು ಭಟ;
ಒಂದೆಸೆದ ಬಾವುಟ!
ಗೆದ್ದಿತೆಲ್ಲರ ಹಟ!
ಇನ್ನೇತಕಾ ಗೋಳು?

ನೋಡು ನಾಳಿನ ಬಾಳು:
ನಗುತಿರಲಿ ಆ ಮನೆ,
ನಗುತಿರಲಿ ಈ ಮನೆ!
ಅವರ ಬಾವುಟವವರು
ನಮ್ಮ ಬಾವುಟ ನಾವು
ಏರಿಸುವ! ಹಾರಿಸುವ!
ಒಲುಮೆ ತೋರಿಸುವ!
ನಮ್ಮ ಕರುಳಿನ ನಂಟು
ಬಿಡಿಸಲಾಗದ ಗಂಟು:
ಈ ನಂಬಿಕೆಯ ಬೆಳಕೆ
ಒಡೆದ ಮನಕಂಟು!

ಬೇರೆಯಿಹ ಕೈಗಳನು
ಮುಗಿದು ವಂದಿಸಿದಂತೆ;
ಎರಡು ಕಣ್ಣಿನ ಕವಲು-
ನೋಟ ಸಂಧಿಸಿದಂತೆ;
ಇಬ್ಬಗೆಯ ಹೂಗಳನು
ಹಾರಕೊಂದಿಸಿದಂತೆ;
ಗಂಡು ಹೆಣ್ಣಿನ ಬಾಳ-
ನೊಲುಮೆ ಬಂಧಿಸಿದಂತೆ;
ಕವಲೊಡೆದ ಕಾವೇರಿ
ಮತ್ತೆ ಕೂಡಿದ ತೆರದಿ;
ಬೇಡನಾವನೊ ಬಂದು
ಎರಡು ಗೂಡಿನಲಿಟ್ಟ
ಜೊತೆಯ ಹಕ್ಕಿಗೆ ಕಟ್ಟ-
ಕಡೆಗೆ ಬಿಡುಗಡೆ ದೊರೆಯೆ
ಅವು ಹಾರಿ ನೆರೆವಂತೆ;
ಹುಟ್ಟು ಧರಿಸಿದ ಆತ್ಮ
ಪರಮಾತ್ಮನಲಿ ಕಡೆಗೆ
ಬೆರೆತೈಕ್ಯವಪ್ಪಂತೆ;
ನಾವು ಸೋದರರಿಂದು
ಬೇರಾದರೇನಂತೆ,-
ಮನವೊಡೆಯದಂತೆ
ಮನೆಯೊಡೆಯದಂತೆ
ಮತ್ತೆ ಬೆರೆಯೋಣ,
ಹೊಸ ಬಾಳ ತೆರೆಯೋಣ,
ಶಾಂತಿ ಸೌಹಾರ್ದಗಳ
ಅಮೃತವರ್ಷದ ಧಾರೆ
ಇಳೆಗೆಲ್ಲ ಕರೆಯೋಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂತುರು ಮಳೆ
Next post ಇಳಾ – ೧೩

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…