ಮನೆಯು ಪಾಲಾಯ್ತು

“ಮನೆಯು ಪಾಲಾಯ್ತು
ಒರ್‌ಬಾಳ್ವೆ ಹೋಳಾಯ್ತು
ಕರುಳೆರಡು ಸೀಳಾಯ್ತು
ಅಯ್ಯೊ! ಅಕಟಕಟಾ!
ಎರಡಾಯ್ತು ಬಾವುಟ”
ಎಂದು ಗೋಳಾಡದಿರು
ಓ, ಗೆಳೆಯನೇ!

ಕಲಹ ಪಾಲಿಗೆ ಮೊದಲು:
ಹೊಗೆಯಿತಸಮಾಧಾನ,
ಉರಿಯಿತು ದುರಭಿಮಾನ.
ತಮ್ಮ, ಪಸುಗೆಯ ಬಯಸಿ
ಕೈಮಾಡಿದನು, ಮುನಿದು;
ಒಬ್ಬಣ್ಣ ಸುಮ್ಮನಿರೆ
ಉಳಿದರಂತಿಹರೆ?

ಹೊಡೆತಕ್ಕೆ ಮರುಹೊಡೆತ;
ಮತದ ಮದ್ದಿನ ಸಿಡಿತ!
ಮಾರಿಗಾಯ್ತೌತಣ;
ನಾಡೆಲ್ಲ ರಣ ರಣ!

ತಡವೆ ರೋಗನಿದಾನ!
ಒಳಗೆಲ್ಲೊ ವಿಷದ ಸೆಲೆ
ಉಪಚಾರ ಮೇಲ್ಮೇಲೆ!
ಅರಿವು ಮೂಡಿದ ಮೇಲೆ
ನಿಜದ ಸಂಧಾನ.
ನಮ್ಮ ಮನೆ ಪಾಲಾಗೆ
ಬೇಕಾಯ್ತು ಕಡೆಗೆಮಗೆ
ಹೆರರ ತೀರ್ಮಾನ!

ಎಲ್ಲವೂ ಆಯ್ತು, ದಿಟ!
ಪಾಲಾಯ್ತು ಮನೆ ಮಠ,
ಹಣಕಾಸು ಆಳು ಭಟ;
ಒಂದೆಸೆದ ಬಾವುಟ!
ಗೆದ್ದಿತೆಲ್ಲರ ಹಟ!
ಇನ್ನೇತಕಾ ಗೋಳು?

ನೋಡು ನಾಳಿನ ಬಾಳು:
ನಗುತಿರಲಿ ಆ ಮನೆ,
ನಗುತಿರಲಿ ಈ ಮನೆ!
ಅವರ ಬಾವುಟವವರು
ನಮ್ಮ ಬಾವುಟ ನಾವು
ಏರಿಸುವ! ಹಾರಿಸುವ!
ಒಲುಮೆ ತೋರಿಸುವ!
ನಮ್ಮ ಕರುಳಿನ ನಂಟು
ಬಿಡಿಸಲಾಗದ ಗಂಟು:
ಈ ನಂಬಿಕೆಯ ಬೆಳಕೆ
ಒಡೆದ ಮನಕಂಟು!

ಬೇರೆಯಿಹ ಕೈಗಳನು
ಮುಗಿದು ವಂದಿಸಿದಂತೆ;
ಎರಡು ಕಣ್ಣಿನ ಕವಲು-
ನೋಟ ಸಂಧಿಸಿದಂತೆ;
ಇಬ್ಬಗೆಯ ಹೂಗಳನು
ಹಾರಕೊಂದಿಸಿದಂತೆ;
ಗಂಡು ಹೆಣ್ಣಿನ ಬಾಳ-
ನೊಲುಮೆ ಬಂಧಿಸಿದಂತೆ;
ಕವಲೊಡೆದ ಕಾವೇರಿ
ಮತ್ತೆ ಕೂಡಿದ ತೆರದಿ;
ಬೇಡನಾವನೊ ಬಂದು
ಎರಡು ಗೂಡಿನಲಿಟ್ಟ
ಜೊತೆಯ ಹಕ್ಕಿಗೆ ಕಟ್ಟ-
ಕಡೆಗೆ ಬಿಡುಗಡೆ ದೊರೆಯೆ
ಅವು ಹಾರಿ ನೆರೆವಂತೆ;
ಹುಟ್ಟು ಧರಿಸಿದ ಆತ್ಮ
ಪರಮಾತ್ಮನಲಿ ಕಡೆಗೆ
ಬೆರೆತೈಕ್ಯವಪ್ಪಂತೆ;
ನಾವು ಸೋದರರಿಂದು
ಬೇರಾದರೇನಂತೆ,-
ಮನವೊಡೆಯದಂತೆ
ಮನೆಯೊಡೆಯದಂತೆ
ಮತ್ತೆ ಬೆರೆಯೋಣ,
ಹೊಸ ಬಾಳ ತೆರೆಯೋಣ,
ಶಾಂತಿ ಸೌಹಾರ್ದಗಳ
ಅಮೃತವರ್ಷದ ಧಾರೆ
ಇಳೆಗೆಲ್ಲ ಕರೆಯೋಣ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂತುರು ಮಳೆ
Next post ಇಳಾ – ೧೩

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…