Home / ಕವನ / ಕವಿತೆ / ಮನೆಯು ಪಾಲಾಯ್ತು

ಮನೆಯು ಪಾಲಾಯ್ತು

“ಮನೆಯು ಪಾಲಾಯ್ತು
ಒರ್‌ಬಾಳ್ವೆ ಹೋಳಾಯ್ತು
ಕರುಳೆರಡು ಸೀಳಾಯ್ತು
ಅಯ್ಯೊ! ಅಕಟಕಟಾ!
ಎರಡಾಯ್ತು ಬಾವುಟ”
ಎಂದು ಗೋಳಾಡದಿರು
ಓ, ಗೆಳೆಯನೇ!

ಕಲಹ ಪಾಲಿಗೆ ಮೊದಲು:
ಹೊಗೆಯಿತಸಮಾಧಾನ,
ಉರಿಯಿತು ದುರಭಿಮಾನ.
ತಮ್ಮ, ಪಸುಗೆಯ ಬಯಸಿ
ಕೈಮಾಡಿದನು, ಮುನಿದು;
ಒಬ್ಬಣ್ಣ ಸುಮ್ಮನಿರೆ
ಉಳಿದರಂತಿಹರೆ?

ಹೊಡೆತಕ್ಕೆ ಮರುಹೊಡೆತ;
ಮತದ ಮದ್ದಿನ ಸಿಡಿತ!
ಮಾರಿಗಾಯ್ತೌತಣ;
ನಾಡೆಲ್ಲ ರಣ ರಣ!

ತಡವೆ ರೋಗನಿದಾನ!
ಒಳಗೆಲ್ಲೊ ವಿಷದ ಸೆಲೆ
ಉಪಚಾರ ಮೇಲ್ಮೇಲೆ!
ಅರಿವು ಮೂಡಿದ ಮೇಲೆ
ನಿಜದ ಸಂಧಾನ.
ನಮ್ಮ ಮನೆ ಪಾಲಾಗೆ
ಬೇಕಾಯ್ತು ಕಡೆಗೆಮಗೆ
ಹೆರರ ತೀರ್ಮಾನ!

ಎಲ್ಲವೂ ಆಯ್ತು, ದಿಟ!
ಪಾಲಾಯ್ತು ಮನೆ ಮಠ,
ಹಣಕಾಸು ಆಳು ಭಟ;
ಒಂದೆಸೆದ ಬಾವುಟ!
ಗೆದ್ದಿತೆಲ್ಲರ ಹಟ!
ಇನ್ನೇತಕಾ ಗೋಳು?

ನೋಡು ನಾಳಿನ ಬಾಳು:
ನಗುತಿರಲಿ ಆ ಮನೆ,
ನಗುತಿರಲಿ ಈ ಮನೆ!
ಅವರ ಬಾವುಟವವರು
ನಮ್ಮ ಬಾವುಟ ನಾವು
ಏರಿಸುವ! ಹಾರಿಸುವ!
ಒಲುಮೆ ತೋರಿಸುವ!
ನಮ್ಮ ಕರುಳಿನ ನಂಟು
ಬಿಡಿಸಲಾಗದ ಗಂಟು:
ಈ ನಂಬಿಕೆಯ ಬೆಳಕೆ
ಒಡೆದ ಮನಕಂಟು!

ಬೇರೆಯಿಹ ಕೈಗಳನು
ಮುಗಿದು ವಂದಿಸಿದಂತೆ;
ಎರಡು ಕಣ್ಣಿನ ಕವಲು-
ನೋಟ ಸಂಧಿಸಿದಂತೆ;
ಇಬ್ಬಗೆಯ ಹೂಗಳನು
ಹಾರಕೊಂದಿಸಿದಂತೆ;
ಗಂಡು ಹೆಣ್ಣಿನ ಬಾಳ-
ನೊಲುಮೆ ಬಂಧಿಸಿದಂತೆ;
ಕವಲೊಡೆದ ಕಾವೇರಿ
ಮತ್ತೆ ಕೂಡಿದ ತೆರದಿ;
ಬೇಡನಾವನೊ ಬಂದು
ಎರಡು ಗೂಡಿನಲಿಟ್ಟ
ಜೊತೆಯ ಹಕ್ಕಿಗೆ ಕಟ್ಟ-
ಕಡೆಗೆ ಬಿಡುಗಡೆ ದೊರೆಯೆ
ಅವು ಹಾರಿ ನೆರೆವಂತೆ;
ಹುಟ್ಟು ಧರಿಸಿದ ಆತ್ಮ
ಪರಮಾತ್ಮನಲಿ ಕಡೆಗೆ
ಬೆರೆತೈಕ್ಯವಪ್ಪಂತೆ;
ನಾವು ಸೋದರರಿಂದು
ಬೇರಾದರೇನಂತೆ,-
ಮನವೊಡೆಯದಂತೆ
ಮನೆಯೊಡೆಯದಂತೆ
ಮತ್ತೆ ಬೆರೆಯೋಣ,
ಹೊಸ ಬಾಳ ತೆರೆಯೋಣ,
ಶಾಂತಿ ಸೌಹಾರ್ದಗಳ
ಅಮೃತವರ್ಷದ ಧಾರೆ
ಇಳೆಗೆಲ್ಲ ಕರೆಯೋಣ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...