ಬಂದಿರುವನೆ ಶ್ಯಾಮ ಸಖೀ
ಇಂದು ರಾಧೆ ಮನೆಗೆ
ಬಂದಿರುವನು ಚಂದ್ರಮನೇ
ಬಾನ ತೊರೆದು ಇಳೆಗೆ.
ಹುದುಗಿಸಿಹಳು ರಾಧೆ ನಾಚಿ
ಹರಿಯೆದೆಯಲಿ ಮುಖವ
ಮಲ್ಲಿಗೆ ಹೂದಂಡೆ ಮೂಸಿ
ಹರಿ ಮೆಲ್ಲಗೆ ನಗುವ!
ಸುರಿಯಲಿ ಮಳೆ ಎಷ್ಟಾದರು
ಬೀಳಲಿ ನಭ ನೆಲಕೆ
ತೋಳೊಳಗೆ ಇರುವ ಹರಿ
ಇನ್ನು ಯಾವ ಅರಕೆ?
ರಾಧೆಗೆಲ್ಲಿ ನಿದ್ದೆಯಿತ್ತು
ಹರಿ ಇರದಿರುವಾಗ?
ರಾಧೆಗಿನ್ನು ನಿದ್ದೆಯೆಲ್ಲಿ
ಹರಿ ಜೊತೆಗಿರುವಾಗ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.