ಎದೆಯೊಳು ಮೊರೆದಿದೆ ಒಂದೇ ಸಮನೆ
ಅತಲ ಜಲದ ಗಾನ
ಮನವಿದು ಯಾಕೋ ನಿಲ್ಲದು ಮನೆಯಲಿ
ತುಯ್ಯುತಲಿದೆ ಪ್ರಾಣ
ತೂರಿಬಿಡಲೆ ಈ ಬಾಳನ್ನೇ
ದುಡುಕುವ ನೆರೆಯಲ್ಲಿ
ಬಾಳಿನ ಹಾಹಾಕಾರವನು
ನುಂಗುವ ಮೋದದಲಿ?
ನದಿಯೊಳು ಅಲೆ ಸಾಲೇಳಂತಿದೆ,
ನನ್ನೀ ಎದೆಯೊಳಗೂ;
ಏನೋ ವ್ಯಾಕುಲ ಮುಗಿಲಲ್ಲಿ,
ಕೂಗುವ ಗಾಳಿಯೊಳೂ
ಪ್ರಮದೆ ಅಪ್ಸರೆಯ ಸ್ಪರ್ಶಕ್ಕೆ
ಮನ ಝಲ್ಲೆನುವಂತೆ
ದೂರದಿ ಯಾರದೊ ಗೆಜ್ಜೆ ದನಿ
ಸಂಭ್ರಮಿಸುತ ನಿಂತೆ.
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.