Home / ಕವನ / ಕವಿತೆ / ಅಹಾ! ನೀರೆ! – ೧

ಅಹಾ! ನೀರೆ! – ೧

ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು!
ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು!
ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು!
ಮುಗಿಲನಣಕಿಸುವ ದಟ್ಟನೀಲಿಯಾದ ನೀರು!
ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ!
ನಿನ್ನ ಚಿರಜೀವಿಪಟ್ಟವೇ ಪಟ್ಟ!

ತಬ್ಬುತಿರುವಿ ಬ್ರಹ್ಮಾಂಡವನೆಲ್ಲ ಸುತ್ತಿ!
ನಿನ್ನ ತೊಳ್‌ತಕ್ಕೆಗೆ ಸಿಕ್ಕಿ ಪುಡಿಪುಡಿಯಾದವು ಖಂಡಖಂಡಗಳು!
ಇಂದ್ರನು ಬಂದಿಲ್ಲಿ ಮಳೆಗರೆಯಲಾರ:
ಮಳೆಯ ಮೂಲಮಂತ್ರವನು ಕಲಿಯುವನಿಲ್ಲಿ ಬಂದು!
ವಾಯುವು ಬಂದಿಲ್ಲಿ ಬೀಸಲಾರ,-
ಈಸಬಹುದು ಬೇಕಾದರೆ ಮನಬಂದತ್ತ!
ಅಹಾ! ನೀರೆ! ಅಂತಪಾರವಿಲ್ಲದ ನೀರೆ!
ದೇವರು ನಿನ್ನಳಿಯ! ದೇವತೆಗಳು ನಿನ್ನಣುಗುರು!
ಸರಿಯಿಲ್ಲ ನಿನ್ನ ವೈಭವಕೆ! ಸಾಟಿಯಿಲ್ಲ ನಿನ್ನ ಮೈಸಿರಿಗೆ!

ಅಹಾ! ನೀರೆ! ದಿಕ್ಕಿಲ್ಲದ ಮಿಕ್ಕಿಲ್ಲದ ನೀರೆ!
ಯಾರಲ್ಲಿ ನಿಂತಿತು ನಿನ್ನ ನೀರು?
ಯಾರೆದೆಯನ್ನು ಹರಿಸಲಿಲ್ಲ ನೀರು ನೀರಾಗಿ?
ಸಾವಿಲ್ಲ ನೋವಿಲ್ಲ ನಿನಗೆ,-
ಮರಣದಂಧ ಹರಣಗಳು ಚರಿಸುತಿಹವು
ನಿನ್ನ ತಿಮಿಂಗಿಲ ತಿಮಿರೋದಕದಲ್ಲಿ,
ಪ್ರಳಯಕಾಲದಿ ಎದ್ದೇಳುವವು!
ಲಾಲನೆ-ಪಾಲನೆಯಿಲ್ಲ ನಿನಗೆ,-
ನಿನ್ನ ಕ್ಷಾರೋದಕದಲ್ಲಿ ಪವಡಿಸಿದ ಕೀರಸಾಗರಶಾಯಿ,-
ಸೃಷ್ಟಿಪಾಲಕ ತಾನು!
ಹುಟ್ಟಿಲ್ಲ ಮುಟ್ಟಿಲ್ಲ ನಿನಗೆ,-
ಮತ್ಸ್ಯಕೂರ್ಮಗಳಾಗಿ ನಿನ್ನ ತೊಡೆಯಲಾಡಿದ ದೇವ-
ಸೃಷ್ಟಿ ಕರ್ತನು ತಾನು!
ತ್ರಿಪುಟಿರಹಿತನಾಗಿರುವೆ, ಓ! ಸಮುದ್ರರಾಜ!
ಓ! ಸ್ವಯಂಭೂ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...