Home / ಕವನ / ಕವಿತೆ / ಇಲ್ಲ

ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು
ಒಂದೊಂದೇ ಪದರ ಕಳಚಿ
ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ
ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ
ಬಟ್ಟ ಬಯಲಾಗಲಿಲ್ಲ
ಬರೀ ಕಲ್ಲು ಕೆಸರುಗಳೇ ತುಂಬಿದ
ಸರೋವರದ ತಳದಲ್ಲಿ ರತ್ನ ಮುತ್ತುಗಳು
ಹೊಳೆಯಲೆ ಇಲ್ಲ
ಕತ್ತರಿ ಕೋಲುಗಳಿಗೆ ಸಿಕ್ಕಿ ಮೋಟಾದ
ಇವನ ಜೀವವೃಕ್ಷಕ್ಕೆ
ಚೈತನ್ಯದ ಕೊಂಬೆರೆಂಬೆಗಳೊಡೆಯಲೆ ಇಲ್ಲ
ಚೆಲುವಿನೆಲೆ ಹೂ ಹಣ್ಣುರಸ ಚಿಮ್ಮಲೇ ಇಲ್ಲ
ಆ ಹೂಗಳಿಗೆರಗುವ ದುಂಬಿಗಳಿಲ್ಲ
ಆ ಹಣ್ಣ ಕುಕ್ಕಿ ಸವಿಯೀಂಟುವ ಹಕ್ಕಿಗಳಿಲ್ಲ
ಆ ಕೊಂಬೆಗಳಲ್ಲಿ ಗೂಡು ಕಟ್ಟಿ ಕಲಕಲನಾದ ಹೊಮ್ಮಲೆ ಇಲ
ಕತ್ತಲ ಮೆತ್ತಿದೀ ಚಿತ್ರದಾಗಸದಲ್ಲಿ
ಚಿತ್ತಾರ ತಾರಗೆಗಳು ಮಿನುಗಲೆ ಇಲ್ಲ
ತಂಗದಿರ ಚಂದಿರನು ಆಡಲೆ ಇಲ್ಲ
ಬಲವಂತ ಬಾಯಿ ಹೊಲಿದ ಮೌನದಿಂದ
ಹಿಗ್ಗಿನ ಹಾಡೊಂದೂ ಸೆಲೆಯೊಡೆಯಲಿಲ್ಲ
ಮುಖ ಮುಚ್ಚಿದ ಮಬ್ಬು ಮೋಡದಂಚಿಗೆ
ತಿಳಿನಗೆಯ ತೆರೆಮಿಂಚು ಸುಳಿಯಲೆ ಇಲ್ಲ
ಬಗೆ ಮೊಗ್ಗು ಗಾಳಿಗೆದೆಯೊಡ್ಡಲರಳಲೆ ಇಲ್ಲ
ನುಸಿವಿಡಿದ ಮತಿಯಲ್ಲಿ ಚಿಕ್ಕೆ ಮೊಗ್ಗೆಯ ಸಾಲು
ಥಳಥಳಿಸಿ ಕಸವನ್ನು ಕಳೆಯಲೆ ಇಲ್ಲ
ಕುಳಿತು ಕೈಕಾಲು ಸೇದಿಹೋದ ಇವನ ನಡೆ
ನೂರಾರು ನರ್ತನ ಲೀಲೆಗಳ ಮೆರೆಯಲಿಲ್ಲ
ಮನಸಿನೊಳ ಮಂದಾರ ತಳ ಬಿಟ್ಟು ಮೇಲೆ ಬಂದು
ನೀರ ಮೇಲಲೆಗಳನು ಚುಂಬಿಸಲೆ ಇಲ್ಲ
ಬೆಳೆಯುತ್ತಲೇ ಬರದಾದ ಕೊರಡು ಕೈಗಳು
ಯಾವ ಕೋಮಲತೆಯನೂ ತಬ್ಬಲಿಲ್ಲ ತಬ್ಬಿ ಉಬ್ಬಲಿಲ್ಲ
ಹಿಮದಂಥ ಬಿಗಿದ ತುಟಿಯು
ಯಾವ ಮಧುವನು ಹೀರಿ ಸವಿಯಲೆ ಇಲ್ಲ
ಬರೀ ಕರಿಮೋಡವಾದಿವನ ಒಡಲಿಂದ
ಹೆಪ್ಪಮುರಿವ ಹೆಬ್ಬಯಕೆ ಧಾರೆಯಾಗಿಳಿಯಲೆ ಇಲ್ಲ
ಇಳಿದರೂ ಯಾವ ಬೀಜವೂ ಬಾಯ್ದೆರೆದು ಮೃತ್ಯುವನಣಕಿಸಲಿಲ್ಲ
ಮರುಭೂಮಿಯ ಒಣಮರಳಿನಲ್ಲಿ
ಯಾವ ಹಸಿಮಣ್ಣು ಉಸಿರಾಡಿ ಚಿಗುರಲೆ ಇಲ್ಲ
ಅಲೆದಾಡಿದರೂ ಯಾವ ಕಣ್ಣಬಟ್ಟಲೂ ತುಂಬಿ ಹನಿಸಲೆ ಇಲ್ಲ
ಯಾವ ಗಂಟಲು ತುಂಬಿ ತಿನಿಸಲೆ ಇಲ್ಲ
ಯಾವ ಹಕ್ಕಿಯು ಹಾಡಿ ಹರಸಲೆ ಇಲ್ಲ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...