Home / ಕವನ / ಕವಿತೆ / ಶಿಕ್ಷಕ ದಿನಾಚರಣೆ

ಶಿಕ್ಷಕ ದಿನಾಚರಣೆ

ರಾಜ ಮಕುಟಗಳು ತಿರುಕರಂತಿದ್ದ ಗುರುಪಾದವ ಚುಂಬಿಸುತ್ತಿದ್ದವು
ಹರಮುನಿದರೂ ಗುರುಕಾಯ್ವನೆಂಬ ಹಿರಿಮೆ ಇತ್ತು
ಅರಿವೇ ಗುರುವಾಗಿ ಜ್ಞಾನ ಪ್ರಭೆ ಹರಿದಿದ್ದುಂಟು ಈ ನೆಲದಲ್ಲಿ

ಹೋಗಲಿ ಬಿಡಿ! ಇದೆಲ್ಲ ಒಮ್ಮೆ ಇದ್ದ
ತುರುಬನ್ನು ಈಗಿನ ಬೋಳು ತಲೆಯಲ್ಲಿ ಮುಟ್ಟಿಕೊಂಡಂತಾದೀತು

ಕಂಡದ್ದಾಡಿದರೆ ಕೆಂಡವಾದೀರಿ ನೀವು,
ಗಂಡೆಂದರೆ ಪುಲ್ಲಿಂಗ, ಹೆಣ್ಣೆಂದರೆ ಸ್ತ್ರೀಲಿಂಗ
ಮೇಷ್ಟ್ರು ಎಂದರೆ ನಪುಂಸಕ ಲಿಂಗವಾಗಿದ್ದೇವೆ
ಅಣ್ಣಂದಿರಾ ನಾವು ದನಕಾಯುವವರಿಗೆ
ಕುರಿಕಾಯುವವರಿಗೆ ಸಮವಾಗಿದ್ದೇವಲ್ಲರೋ!

ಕಾಗೆಗಳಡವಿಯಲ್ಲಿ ಕೂಗುವ ದನಿಯಿಲ್ಲದ ಕೋಗಿಲೆಗಳು ನಾವು
ಮೂಲೆಯಲ್ಲಿ ಕೂಡಿಸಿದ ಮೂದೇವಿಗಳು
ಬಾಯಲ್ಲಷ್ಟು ತುರುಕಿ ಕೂಡಿಸಿದ ಅಳುವ ಕೂಸುಗಳು ನಾವು
ಬಡಗಂಡನ ಬಾಳಿಗೊಗ್ಗದೆ ಬಡಿವಾರಗಿತ್ತಿಯರ ವೇಷಗಳಿಗೆ
ಕರುಬುತ್ತಾ ಹೊಟ್ಟೆ ಉರಿದುಕೊಳ್ಳುತ್ತೇವೆ
ಗುರುತ್ವ ಪೀಠವನಲಂಕರಿಸಿದ ಮಹಾ ತಿರಸ್ಕೃತರು ನಾವು
ಆದರ್ಶಶಿಖರದಿ ಹೊನ್ನಶೂಲಕ್ಕೇರಿಸಿದ್ದರೂ
ನೋವ ನುಂಗಲಾರದೆ ಶೂಲಮೂಲವ ಕೀಳಲೂ ಆಗದೆ
ಪರಿತಪಿಸುತ್ತಿದ್ದೇವೆ
ಕೊಳಚೆ ಕಡಲ ತಿಳಿಹೊಳೆಯಿಂದ ತೊಳೆಯುವ
ಕಗ್ಗಲ್ಲ ಕಾಡ ಶಿಲ್ಪನಂದನವಾಗಿಸಲು ಹೂವಿಂದ ಕಟೆಯುವ
ವೃಥಾ ಸೆಣಸಾಟ ನಮ್ಮದು |
ವಾಸ್ತವ ಕುರೂಪ ಮೈಗೆ ಹೊಂದದ ಬಟ್ಟೆಗಳ ಹೊಲಿದು
ಬಹಳವೆಂದರೆ ಗಿಳಿಗಳ, ಪುಸ್ತಕ ಹುಳುಗಳ
ಸರ್ಟಿಫೀಕೇಟು ಶಿಖಂಡಿಗಳ ಉತ್ಪಾದಿಸುತ್ತೇವೆ
ರಾಜಕಾರಣ ಪರಮಾತ್ಮನ ಕೈಗೊಂಬೆಗಳು ನಾವು
ಈ ನೆಲದ ಅಸಂಖ್ಯರಂತೆ ಆತನ ಯಂತ್ರದ ಹಲ್ಲುಗಳಾಗಿ
ನುಚ್ಚು ಕೊಚ್ಚುತಾ ತೌಡು ಕುಟ್ಟುತ್ತಾ ಕೊಳೆಯುತ್ತಿದೇವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...